ಚಾಮರಾಜನಗರ; ಪ್ರಧಾನಿ ಕಚೇರಿ ಅಧಿಕಾರಿ ಎಂದ ವ್ಯಕ್ತಿ ವಿರುದ್ಧ ಕೇಸ್
ಚಾಮರಾಜನಗರ, ಜೂ. 4: ಪ್ರಧಾನ ಮಂತ್ರಿ ಕಚೇರಿಯಲ್ಲಿ (ಪಿಎಂಒ) ಕಾರ್ಯನಿರ್ವಹಿಸುತ್ತಿರುವ ಗುಜರಾತ್ ಭಾರತೀಯ ಆಡಳಿತ ಸೇವೆಯ (ಐಎಎಸ್) ನಿವೃತ್ತ ಅಧಿಕಾರಿ ಎಂದು ಹೇಳಿಕೊಂಡು ಚಾಮರಾಜನಗರ ಜಿಲ್ಲೆಯಲ್ಲಿ ಪ್ರವಾಸಿ ಸೌಲಭ್ಯ ಪಡೆಯಲು ಯತ್ನಿಸಿದ ಅಪರಿಚಿತ ವ್ಯಕ್ತಿಯ ವಿರುದ್ದ ಪೊಲೀಸರು ದೂರು ದಾಖಲಿಸಿದ್ದಾರೆ.
ಚಾಮರಾಜನಗರ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಜೂನ್ 27 ರಂದು ಪಿಎಂಒನಿಂದ ರಾವ್ ಎಂದು ಗುರುತಿಸಿಕೊಂಡ ವ್ಯಕ್ತಿಯಿಂದ ಕರೆ ಸ್ವೀಕರಿಸಿದ ನಂತರ ಪೊಲೀಸ್ಗೆ ದೂರು ನೀಡಿದ್ದಾರೆ. ಜಿಲ್ಲೆಯ ಪ್ರವಾಸಿ ತಾಣಗಳಿಗೆ ಅವರ ಕುಟುಂಬ ಪ್ರಯಾಣಿಸಲು ವ್ಯವಸ್ಥೆ ಮಾಡುವಂತೆ ರಾವ್ ಎಂಬಾತ ಕೋರಿದ್ದ ಎಂಬ ಸುದ್ದಿ ಇದೆ.
ಪ್ರಧಾನಿ ಮೋದಿ ಕಚೇರಿಯಲ್ಲಿ ತಾನು ಕೆಲಸ ಮಾಡುತ್ತಿದ್ದೇನೆ ಎಂದು ಜಿಲ್ಲಾಧಿಕಾರಿ ಚಾರುಲತಾ ಅವರಿಗೆ ಕರೆ ಮಾಡಿ ಚಾಮರಾಜನಗರದ ಬಿಳಿಗಿರಿರಂಗನಬೆಟ್ಟದಲ್ಲಿ ದೇವರ ದರ್ಶನ, ಬಿಆರ್ಟಿಯಲ್ಲಿ ಸಂಪಿಗೆ ಮರ ವೀಕ್ಷಣೆ ಹಾಗೂ ಜಂಗಲ್ ಲಾಡ್ಜ್ಸ್ನಲ್ಲಿ ಕೊಠಡಿಗಳ ವ್ಯವಸ್ಥೆ ಮಾಡುವಂತೆ ಆತ ಸೂಚನೆ ನೀಡಿದ್ದನು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಹಿಂದೆ ತಾನು ಗುಜರಾತ್ ರಾಜ್ಯ ನಿವೃತ್ತ ಮುಖ್ಯ ಕಾರ್ಯದರ್ಶಿಯಾಗಿದ್ದು, ಈಗ ಪ್ರಧಾನಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೇನೆ ಎಂದು ಹೇಳಿಕೊಂಡ ರಾವ್ ಜುಲೈ 2ರಂದು ಜಿಲ್ಲೆಗೆ ಆಗಮಿಸಿಸುವುದಾಗಿ ತಿಳಿಸಿದ್ದನು. ತಮ್ಮ ಪೂರ್ಣ ಹೆಸರು ಹಾಗೂ ಹುದ್ದೆಯ ವಿವರಗಳನ್ನು ಡಿಸಿ ಕೇಳಿದಾಗ ಗೋಪ್ಯತೆಯ ಕಾರಣ ನೀಡಿ ಹೇಳಲು ಸಾಧ್ಯವಿಲ್ಲ ಎಂದು ತಪ್ಪಿಸಿಕೊಂಡಿದ್ದನು. ರಾವ್ನ ಮಾತಿನ ಶೈಲಿಯಿಂದ ಡಿಸಿ ಚಾರುಲತಾ ಅವರು ಅನುಮಾನ ವ್ಯಕ್ತಪಡಿಸಿ ಆತನ ಮೊಬೈಲ್ ವಿವರಗಳನ್ನು ಪರಿಶೀಲಿಸಿದಾಗ ಆತನ ನಕಲಿ ವ್ಯಕ್ತಿ ಎಂದು ಕಂಡು ಬಂದು ಸದರಿ ವ್ಯಕ್ತಿಯ ಬಗ್ಗೆ ದೂರು ನೀಡಿ ಕ್ರಮಕ್ಕೆ ಡಿಸಿ ಒತ್ತಾಯಿಸಿದ್ದರು.

ಪ್ರವಾಸಿ ಸೌಲಭ್ಯ ಕೇಳಿದ್ದ ರಾವ್ ಎಂಬ ವ್ಯಕ್ತಿ ಜುಲೈ 2ರಂದು ಬಿಳಿಗಿರಿರಂಗನ ಬೆಟ್ಟಕ್ಕೆ ಬಂದಿಲ್ಲ ಎಂದು ಕಂಡು ಬಂದಾಗ ಪೊಲೀಸರು ಜಾಗೃತರಾಗಿದ್ದರು. ಈ ಬಗ್ಗೆ ಎಸ್ಪಿ ಟಿ. ಪಿ ಶಿವಕುಮಾರ್ ಅವರು ಗುಜರಾತ್ ರಾಜ್ಯದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಂದು ಹೇಳಿಕೊಂಡಿದ್ದ ವ್ಯಕ್ತಿಯ ವಿರುದ್ಧ ದೂರು ದಾಖಲಾಗಿದೆ. ಆದರೆ ಇನ್ನೂ ಬಂಧಿಸಿಲ್ಲ. ಆತನ ಹಿತಿಯನ್ನು ಕಲೆಹಾಕಲಾಗುತ್ತಿದೆ. ಆತ ಮೈಸೂರು ಭಾಗದವನು ಎಂದು ಗೊತ್ತಾಗಿದ್ದು, ತನಿಖೆ ಮುಂದುವರಿದಿದೆ ಎಂದು ಹೇಳಿದ್ದಾರೆ.












Click it and Unblock the Notifications