6 ವರ್ಷಗಳ ಬಳಿಕ ಆಷಾಢದಲ್ಲಿ ಚಾಮರಾಜೇಶ್ವರ ರಥೋತ್ಸವ
ಚಾಮರಾಜನಗರ, ಜುಲೈ 8: ಕಳೆದ ಐದಾರು ವರ್ಷಗಳಿಂದ ನಡೆಯದಿದ್ದ ಚಾಮರಾಜನಗರದ ಶ್ರೀ ಚಾಮರಾಜೇಶ್ವರ ಕೆಂಪನಂಜಾಂಬ ಸಮೇತ ಶ್ರೀ ಚಾಮರಾಜೇಶ್ವರಸ್ವಾಮಿಯವರ ಮಹಾರಥೋತ್ಸವವನ್ನು ಈ ಬಾರಿ ನಡೆಸಲು ತೀರ್ಮಾನಿಸಲಾಗಿದ್ದು, ಜುಲೈ 13ರಂದು ಜಾತ್ರೆ ನಡೆಯಲಿದ್ದು, ಇದು ಭಕ್ತರಲ್ಲಿ ಹರ್ಷ ಮೂಡಿಸಿದೆ.
ಹಿಂದಿನ ಕಾಲದಿಂದಲೂ ಸಂಪ್ರದಾಯಬದ್ಧವಾಗಿ ನಡೆದುಕೊಂಡು ಬರುತ್ತಿದ್ದ ಜಿಲ್ಲೆಯ ಚಾಮರಾಜೇಶ್ವರ ಸ್ವಾಮಿ ರಥೋತ್ಸವ ರಥವಿಲ್ಲದೇ ಸ್ಥಗಿತಗೊಂಡಿವೆ. ಇದೀಗ ರಥ ನಿರ್ಮಾಣವಾಗಿದ್ದರಿಂದ ಈ ಬಾರಿ ರಥೋತ್ಸವ ನಡೆಯುತ್ತಿದ್ದು, ಉತ್ಸವಕ್ಕೆ ಸಂಬಂಧಿಸಿದ ಕೈಂಕರ್ಯಗಳು ಆರಂಭಗೊಂಡಿದೆ.
ಹಾಗೆ ನೋಡಿದರೆ ಆಷಾಢ ತಿಂಗಳಲ್ಲಿ ನಡೆಯುವ ಚಾಮರಾಜೇಶ್ವರ ಸ್ವಾಮಿ ರಥೋತ್ಸವಕ್ಕೆ ಜಿಲ್ಲೆಯ ಭಕ್ತರು ಮಾತ್ರವಲ್ಲದೆ, ಹೊರಗಿನ ಸಹಸ್ರಾರು ಭಕ್ತರು ಪಾಲ್ಗೊಂಡು ತಮ್ಮ ಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿಕೊಳ್ಳುತ್ತಿದ್ದರು. ಅದರಲ್ಲೂ ನವ ವಿವಾಹಿತರು ರಥೋತ್ಸವದಲ್ಲಿ ಭಾಗವಹಿಸಿ ರಥಕ್ಕೆ ಹಣ್ಣು, ಧವಸ ಎಸೆದು ಪ್ರಾರ್ಥಿಸುವುದು ವಿಶೇಷವಾಗಿತ್ತು. ಕಳೆದ ಐದಾರು ವರ್ಷಗಳಿಂದ ಈ ಸಂಭ್ರಮವನ್ನು ಜನ ಮರೆತಿದ್ದರು.
ಚಾಮರಾಜೇಶ್ವರ ಸ್ವಾಮಿಯ ರಥಕ್ಕೆ ದುಷ್ಕರ್ಮಿಯೊಬ್ಬ ಬೆಂಕಿ ಹಚ್ಚಿದ್ದರಿಂದ ಅದು ಸುಟ್ಟು ಹೋಗಿತ್ತು. ಹೀಗಾಗಿ ಹೊಸ ರಥ ನಿರ್ಮಾಣ ಮಾಡಿ ರಥೋತ್ಸವ ನಡೆಸಲು ಆರು ವರ್ಷಗಳೇ ಬೇಕಾಯಿತು. ಇದರ ನಡುವೆ ಕೊರೊನಾ ಆರ್ಭಟ ಯಾವುದೇ ಜಾತ್ರೆಗಳು ನಡೆಯದಂತೆ ಮಾಡಿತ್ತು. ಇದೀಗ ಸುಸಜ್ಜಿತವಾದ ನೂತನ ರಥವು ತಯಾರುಗೊಂಡಿದ್ದು, ಈಗಾಗಲೇ ದೇವಸ್ಥಾನದ ಆವರಣದಲ್ಲಿದೆ.

ಒಂದು ಕೋಟಿ ವೆಚ್ಚದಲ್ಲಿ ತಯಾರಾಗಿರುವ ರಥ
ಇನ್ನು ಹೊಸ ರಥ ಹೇಗಿದೆ? ಎನ್ನುವುದನ್ನು ನೋಡಿದ್ದೇ ಆದರೆ ಇದನ್ನು ಸುಮಾರು ಒಂದು ಕೋಟಿ ವೆಚ್ಚದಲ್ಲಿ ತಯಾರು ಮಾಡಲಾಗಿದ್ದು, ಬೆಂಗಳೂರಿನ ರಥಶಿಲ್ಪಿ ಬಿ. ಎಸ್. ಬಡಿಗೇರ ಅಂಡ್ ಸನ್ಸ್ ಅವರು ಬ್ರಹ್ಮರಥವನ್ನು ನಿರ್ಮಿಸಿದ್ದಾರೆ. ಸುಮಾರು 16 ಅಡಿ ಎತ್ತರವಿದೆ. ರಥವನ್ನು ತೇಗದ ಮರದಿಂದಲೇ ನಿರ್ಮಿಸಲಾಗಿದ್ದು ವಿವಿಧ ಶಿಲ್ಪಗಳು ಕುಸುರಿ ಕಲೆಗಳನ್ನು ಹೊಂದಿದೆ.

ಆಷಾಡದಲ್ಲಿ ನಡೆಯುವ ರಥೋತ್ಸವ
ಇದೀಗ ಮಹಾರಥೋತ್ಸವ ನಡೆಯುತ್ತಿರುವ ಸುದ್ದಿ ಭಕ್ತರಲ್ಲಿ ಹರ್ಷ ಮೂಡಿಸಿದೆ. ಆಷಾಢದಲ್ಲಿ ನಡೆಯುವ ಈ ರಥೋತ್ಸವಕ್ಕೆ ಜಿಲ್ಲೆಯ ಜನರು ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ, ರಾಜ್ಯದ ಜನರು ಆಗಮಿಸುವುದು ವಿಶೇಷ. ಅದರಲ್ಲೂ ನೂತನವಾಗಿ ವಿವಾಹವಾದ ನವದಂಪತಿಗಳು ರಥಕ್ಕೆ ಹಣ್ಣುಧವನ ಎಸೆಯುವುದು ವಿಶೇಷವಾಗಿದೆ.

ಜುಲೈ 6ರಿಂದಲೇ ಜಾತ್ರೆ ಆರಂಭ
ರಥೋತ್ಸವದ ಅಂಗವಾಗಿ ಚಾಮರಾಜೇಶ್ವರಸ್ವಾಮಿ ದೇಗುಲದಲ್ಲಿ ಜುಲೈ 6 ರಿಂದಲೇ ದೈವ ಕೈಂಕರ್ಯಗಳು ಆರಂಭಗೊಂಡಿದ್ದು 17ರವರೆಗೆ ವಿಶೇಷ ಪೂಜೆ ಸೇರಿದಂತೆ ವಿವಿಧ ಕಾರ್ಯಗಳು ನಡೆಯಲಿವೆ. ಜುಲೈ 6ರಂದು ಅಂಕುರಾರ್ಪಣ ಪೂರ್ವಕ ವೃಷಭಾಧಿವಾಸ ನಡೆದಿದ್ದು 7ರಂದು ಬೆಳಿಗ್ಗೆ 11.30ರಿಂದ 12ಗಂಟೆಗೆ ಕನ್ಯಾ ಲಗ್ನ ಮುಹೂರ್ತದಲ್ಲಿ ಧ್ವಜಾರೋಹಣ ಪೂರ್ವಕ ಬೇರಿತಾಡನಾ ನಂತರ ಶಿಭಿಕಾರೋಹಣೋತ್ಸವ ನಡೆದಿದೆ. ಇನ್ನು ಜುಲೈ 8ರಂದು ಚಂದ್ರ ಮಂಡಲಾರೋಹಣೋತ್ಸವ, 9ರಂದು ಅನಂತ ಪೀಠಾರೋಹಣೋತ್ಸವ, 10ರಂದು ಪುಷ್ಪಮಂಟಪಾರೋಹಣೋತ್ಸವ, 11ರಂದು ವೃಷಭಾರೋಹಣೋತ್ಸವ, 12ರಂದು ವಸಂತೋತ್ಸವ ಪೂರ್ವಕ ಗಜವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಜುಲೈ 13ರಂದು ಪೂರ್ವಾಷಾಢ ನಕ್ಷತ್ರದಲ್ಲಿ ರಥಸ್ಥಂ ವೃಷಭಾರೂಢಂ ಚಂದ್ರನಾಲಿಪ್ತ ತಾಂಡವಂ, ಸೋಪಹಾರಂ ಶಿವಂದೃಷ್ಟ್ವಾ ಪುನರ್ಜನ್ಮನವಿದ್ಯತೆ ಎಂಬ ಸಿದ್ಧಾಂತರೀತ್ಯ ಪ್ರಾತಃಕಾಲ 11 ರಿಂದ 11.30ರ ಶುಭ ಕನ್ಯಾ ಲಗ್ನದಲ್ಲಿ ಶ್ರೀಮನ್ಮಹಾರಥಾರೋಹಣ ನಡೆಯಲಿದೆ. ಆ ನಂತರ ಹಂಸಾರೋಹಣಾನಂತರ ನಟೇಶೋತ್ಸವ ಜರುಗಲಿದೆ. ಇದೇ ವೇಳೆ ಚಾಮರಾಜೇಶ್ವರಸ್ವಾಮಿಯ ಮಹಾರಥೋತ್ಸವವು ಜರುಗಲಿದೆ.

ಜುಲೈ 17ಕ್ಕೆ ಚಾಮರಾಜೇಶ್ವರಸ್ವಾಮಿಯ ಮಹಾರಥೋತ್ಸವ
ಜುಲೈ 14ರಂದು ಮೃಗಾಯಾತ್ರಾ ಪೂರ್ವಕ ಅಶ್ವಾರೋಹಣಾನಂತರ ಮಹಭೂತಾರೋಹಣ, ದೇವಿ ಪ್ರಣಯಕಲಹ ಸಂಧಾನೋತ್ಸವ, 15ರಂದು ಹಗಲು ಚೂರ್ಣೋತ್ಸವ ಪೂರ್ವಕ ಅವಭೃತ ತೀರ್ಥಸ್ನಾನ ರಾತ್ರಿ ಧ್ವಜಾವರೋಹಣ, ಮೌನಬಲಿ, 16ರಂದು ಪುಷ್ಪಯಾಗ ಪೂರ್ವಕ ಕೈಲಾಸಯಾನಾ ರೋಹಣೋತ್ಸವ, 17ರಂದು ಮಹಾಸಂಪ್ರೋಕ್ಷಣ ಪೂರ್ವಕ ನಂದಿವಾಹನೋತ್ಸವ ಕಾರ್ಯಕ್ರಮಗಳು ನಡೆಯಲಿವೆ.
ಒಟ್ಟಾರೆಯಾಗಿ ಹೇಳಬೇಕೆಂದರೆ ಈ ಬಾರಿ ಆಷಾಢದ ಚಾಮರಾಜೇಶ್ವರ ಸ್ವಾಮಿ ಬ್ರಹ್ಮ ಮಹಾರಥೋತ್ಸವವು ಹೊಸ ರಥದಲ್ಲಿ ನಡೆಯಲಿದ್ದು, ಐದಾರು ವರ್ಷಗಳ ಬಳಿಕ ನಡೆಯುತ್ತಿರುವ ರಥೋತ್ಸವದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಲು ಭಕ್ತರು ಕಾಯುತ್ತಿದ್ದಾರೆ. ಜಿಲ್ಲಾಡಳಿತ ರಥೋತ್ಸವವನ್ನು ಸುಸೂತ್ರವಾಗಿ ನಡೆಸಲು ಬೇಕಾದ ತಯಾರಿ ಮಾಡಿಕೊಳ್ಳುತ್ತಿರುವುದು ಕಂಡು ಬರುತ್ತಿದೆ.
-
Rain: ಮುಂದಿನ 3 ಗಂಟೆಗಳಲ್ಲಿ ಕರ್ನಾಟಕದ 13 ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ: ಹವಾಮಾನ ಇಲಾಖೆ -
Gold Rate: ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಎಷ್ಟಿದೆ 22 ಕ್ಯಾರಟ್ ಚಿನ್ನದ ದರ? -
SSLC ವಿಜ್ಞಾನ ಪರೀಕ್ಷೆ ಮುಕ್ತಾಯ: ಪೇಪರ್ ಹೇಗಿತ್ತು? ತಜ್ಞರು ಹಾಗೂ ವಿದ್ಯಾರ್ಥಿಗಳು ಏನಂತಾರೆ? ಇಲ್ಲಿದೆ ವಿಶ್ಲೇಷಣೆ -
Bengaluru Second Airport: ಬೆಂಗಳೂರು ಎರಡನೇ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ: ಜಾಗ ಆಯ್ಕೆ ಕರ್ನಾಟಕಕ್ಕೆ ಬಿಟ್ಟ ಕೇಂದ್ರ -
Bengaluru Viral: ಆಟೋ ಚಾಲಕನ ಕ್ರಿಯೇಟಿವಿಟಿಗೆ ಬೆಂಗಳೂರು ನಿಜಕ್ಕೂ ಸೃಜನಶೀಲ ನಗರ ಎಂದ ನೆಟ್ಟಿಗರು -
Bengaluru Property: ಬೆಂಗಳೂರಿನ ಪ್ರಾಪರ್ಟಿ, ನಿರ್ಮಾಣ ಹಂತದ ಕಟ್ಟಡ - ರಿಯಲ್ ಎಸ್ಟೇಟ್ಗೆ ಏಕಾಏಕಿ ಪೆಟ್ಟು -
Gold Price: ಇಳಿಕೆಯತ್ತ ಚಿನ್ನ, ಬೆಳ್ಳಿ ಬೆಲೆ: ಇಂದಿನ ದರವೆಷ್ಟು? ಇಲ್ಲಿದೆ ಮಾಹಿತಿ -
Weekly Horoscope March 23-29: ಯಾರಿಗೆ ಲಾಭ, ಯಾರಿಗೆ ಸವಾಲು? ಸಂಪೂರ್ಣ ವಿವರ ಇಲ್ಲಿದೆ -
Bengaluru Property: ಬೆಂಗಳೂರಿನ ಆಸ್ತಿದಾರರೇ ನಿಮ್ಮ ಆಸ್ತಿ ಉಳಿಸಿಕೊಳ್ಳಲು ಕೊನೆಯ ಅವಕಾಶ: ಈ ಎಚ್ಚರಿಕೆ ಯಾರಿಗೆಲ್ಲ ಅನ್ವಯ -
SWR: ಶಿವಮೊಗ್ಗ, ಅರಸೀಕೆರೆ, ಮೈಸೂರು ರೈಲು ಪ್ರಯಾಣಿಕರೇ ಗಮನಿಸಿ: ರೈಲುಗಳ ಪುನರ್ ಸಂಚಾರ -
Love Mocktail 3: ಕ್ರಿಪ್ಟೋಮ್ನೇಶಿಯಾ ಯಾರದ್ದೋ ಕಥೆ ಯಾರದ್ದೋ ಹೆಸರು ರೂಪಾ ರಾವ್ ಬರಹ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD












Click it and Unblock the Notifications