ಉಪಮುಖ್ಯಮಂತ್ರಿಗಳೇ, ಇತ್ತ ನೋಡಿ..ಗೆದ್ದಲು ತಿಂದ ಪೊಲೀಸ್ ಠಾಣೆಯಾ!?
ಚಾಮರಾಜನಗರ, ಡಿಸೆಂಬರ್ 08: ಇಲ್ಲೊಂದು ಪುಟ್ಟ ಠಾಣೆಯಿದೆ. ಈ ಠಾಣೆಗೆ ಸ್ವಂತ ನೆಲೆಯೂ ಇಲ್ಲ, ಕಟ್ಟಡವೂ ಇಲ್ಲ. ಗೆದ್ದಲು ಬಂದಿದೆ. ಗೋಡೆಗಳು ಮುರಿದು ಕಳಚುತ್ತಿದೆ. ಇದನ್ನು ನೋಡಲು ಕೆಲವರು ಕಣ್ಣಿದ್ದು ಕುರುಡರಾಗಿದ್ದಾರೆ.
ಹೌದು, ಇದು ಚಾಮರಾಜನಗರ ಪಟ್ಟಣ ಠಾಣೆಯ ದುಸ್ಥಿತಿ. ಜೀವ ಕಾಪಾಡೋ ಜೀವಗಳು ಜೀವ ಹಿಡಿದು ಕೆಲಸ ಮಾಡ್ತಾರೆ. ಈ ಕಟ್ಟಡ ಬೇರೆಡೆಗೆ ವರ್ಗಾವಣೆ ಮಾಡಿ ಅಂತ ನೂರಾರು ಪತ್ರ ವ್ಯವಹಾರಗಳೇ ನಡೆದು ಹೋಗಿದೆ. ಶಾಸಕರು, ಸಚಿವರು ಭೇಟಿ ಕೊಟ್ಟಿದ್ದಾರೆ ಆದರೆ ಯಾವುದೂ ಕೂಡ ಸಫಲವಾಗದೇ ವಿಫಲವಾಗಿದೆ.
ಪ್ರತಿನಿತ್ಯ ನೂರಾರು ಸಮಸ್ಯೆಗಳನ್ನು ಹೊತ್ತು ತರುವ ಜನರು ಇದರ ಕೆಳಗಡೆ ಕೂರಲು ಹಿಂಜರಿಯಬೇಕು. ಇದನ್ನ ಬೇರೆಡೆಗೆ ವರ್ಗಾಯಿಸಬೇಕೆಂದು ಜಿಲ್ಲಾಡಳಿತ ಭವನದಲ್ಲಿ ಸಾಮಾಜಿಕ ಕಾರ್ಯಕರ್ತ ಎಸ್.ವೀರಭದ್ರಸ್ವಾಮಿ ಅವರು ಪ್ರತಿಭಟಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.
ಮನವಿ ಸ್ವೀಕರಿಸಿದ ಜಿಲ್ಲಾಡಳಿತ ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೂ ಪತ್ರ ವ್ಯವಹಾರ ಮಾಡಿ ಅಂಚೆ ಇಲಾಖೆಯ ಕೆಲಸ ಮಾಡಿ ಕೈ ತೊಳೆದುಕೊಂಡಿತು. ಅಧಿಕೃತ ಹಾಗೂ ಅನಧಿಕೃತ ಭೇಟಿ ಸೇರಿದಂತೆ ಶಾಸಕ ಹಾಗೂ ಸಚಿವರಾದ ಪುಟ್ಟರಂಗಶೆಟ್ಟಿ ಅವರು ಎಂಟು ಭಾರಿ ಬೇಟಿ ನೀಡಿದರೂ ಫಲಪ್ರದವಾಗಲೇ ಇಲ್ಲ.

ಸಾವಿನಿಂದ ಫಲಪ್ರದವಾಗುವುದೋ ಏನೋ?
ಬಹುಶಃ ಭಾರಿ ಮಳೆಗೆ ಗೋಡೆಗಳು ಶಿಥಿಲವಾಗಿ ಕುಸಿದು ಸಾವನ್ನಪ್ಪಿದಾಗ ಆ ಸಾವಿನಿಂದಲೋ ಫಲಪ್ರದವಾಗುವುದೋ ಏನೋ ಗೊತ್ತಾಗುತ್ತಿಲ್ಲ. ಇದ್ದಾಗ ಯೋಗಕ್ಷೇಮ ವಿಚಾರಿಸಿದವರು ಸತ್ತಾಗ ಕುಟುಂಬದವರು ಕುಶೋಲೋಪಚಾರ ಕೇಳಿದರೆ ವ್ಯರ್ಥವಾಗಲಿದೆ.

ಪ್ರಶ್ನೆಗೆ ಮೌನವೇ ಉತ್ತರ
ಎಸ್ಪಿ ಧರ್ಮೆಂದರ್ ಕುಮಾರ್ ಮೀನಾ ಅವರು ಇದರ ಬಗ್ಗೆ ಅರಿವಿದೆ. ಕ್ರಮವಹಿಸಿದ್ದೇವೆ ಎನ್ನುತ್ತಿದ್ದಾರೆ. ಇವರ ಕೆಲಸದಂತೆ ಠಾಣೆ ವೀಕ್ಷಣೆಗೆ ಹೋದಾಗ ಕಟ್ಟಡ ,ದಾಖಲೆಗಳನ್ನು ಸುಸ್ಥಿತಿಯಲ್ಲಿ ಇಡಬೇಕು. ಇಲ್ಲದಿದ್ದರೆ ಅದೀನ ಸಿಬ್ಬಂದಿಗಳ ಮೇಲೆ ಕ್ರಮಜರುಗಿಸುವ ಇವರು ಉತ್ತಮ ಕಟ್ಟಡದಲ್ಲಿ ಠಾಣಾ ಸ್ಥಳಾಂತರಕ್ಕೆ ತ್ವರಿತವಾಗಿ ಯಾಕೆ ಕ್ರಮವಹಿಸುತ್ತಿಲ್ಲ ಎಂಬ ಪ್ರಶ್ನೆಗೆ ಮೌನ ಉತ್ತರವಾಗಿದೆ.

ಮುದುಕಿಗೆ ರೇಷ್ಮೆ ಸೀರೆ ತೊಡಿಸಿದಂತೆ
ಇತ್ತೀಚೆಗಷ್ಟೇ ಪಟ್ಟಣ ಠಾಣೆಗೆ ವರ್ಗಾವಣೆಯಾಗಿ ಬಂದ ಇನ್ಸ್ ಪೆಕ್ಟರ್ ನಾಗೇಗೌಡ ಎಂಬುವವರು ಹತ್ತು ಹದಿನೈದು ವರ್ಷಗಳ ಧೂಳು ತೆಗೆದು ಹೊರಗಡೆ ಸುಂದರವಾಗಿಸಿಕೊಂಡಿದ್ದಾರೆ. ಆ ಸುಂದರ ಸಾಯುವ ಮುದುಕಿಗೆ ರೇಷ್ಮೆ ಸೀರೆ ತೊಡಿಸಿದಂತೆ ಕಂಡರೂ ಆಯಸ್ಸು ಮಾತ್ರ ಇಲ್ಲ ಎಂಬುದಷ್ಟೆ ಅರಿಯಬೇಕು.

ಅನಾಹುತ ಸಂಭವಿಸಿದರೆ ಯಾರು ಹೊಣೆ?
ಚಾಮರಾಜನಗರ ಪಟ್ಟಣಕ್ಕೆ ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಅವರು ಪ್ರವಾಸ ಕೈಗೊಂಡಿದ್ದು, ಈ ಠಾಣೆಯನ್ನು ಇವರು ನೋಡಬೇಕಿದೆ. ಚಾಮರಾಜನಗರ ಜಿಲ್ಲೆಯಲ್ಲಿನ ಯಡಪುರ ಗ್ರಾಮದ ಯಡಬೆಟ್ಟದಲ್ಲಿ ನಳಂದ ಜ್ಞಾನ ಮತ್ತು ಅಧ್ಯಯನ ಕೇಂದ್ರ ಹಾಗೂ ನಳಂದ ಬೌದ್ಧ ವಿಶ್ವವಿದ್ಯಾಲಯದ ಭೂಮಿ ಪೂಜೆ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ನಂತರ ಅನತಿ ದೂರದಲ್ಲಿರುವ ಇದಕ್ಕೂ ನಿಮ್ಮ ದರ್ಶನ ಕಾಯಕಲ್ಪ ಅಗತ್ಯವಿದೆ.
ಇಲ್ಲವಾದರೆ ಮುಂದಾಗುವ ಅನಾಹುತಗಳಿಗೆ ಬೆಂಗಳೂರಲ್ಲೇ ಕುಳಿತು ಸತ್ತ ಪೊಲೀಸ್ ಸಿಬ್ಬಂದಿಗಳಿಗೆ ಸಂತಾಪ ಸೂಚಿಸಬೇಕಾಗುತ್ತದೆ.












Click it and Unblock the Notifications