ಚಾಮರಾಜನಗರ: ದುಗ್ಗಹಟ್ಟಿಯಲ್ಲಿ ಶವಸಂಸ್ಕಾರ ಮಾಡೋದು ಬಲು ಕಷ್ಟ!
ಚಾಮರಾಜನಗರ, ಆಗಸ್ಟ್ 28: ಈ ಗ್ರಾಮದಲ್ಲಿ ಶವಸಂಸ್ಕಾರ ಮಾಡಲೂ ಜನರು ಒದ್ದಾಡಬೇಕು. ಮಸಣ ಮತ್ತು ಊರಿನ ಮಧ್ಯೆ ಹಾದು ಹೋಗಿರುವ ಕಬಿನಿ ನಾಲೆಯಿಂದಾಗಿ ಎದುರಾಗುತ್ತಿರುವ ತಾಪತ್ರಯಗಳು ಒಂದೆರಡಲ್ಲ.
ಕಬಿನಿ ನಾಲೆ ಹಾದು ಹೋಗಿದ್ದರಿಂದ ಜನರು ಶವ ಸಂಸ್ಕಾರಕ್ಕೆ ಶವ ಸಾಗಿಸಲು ಮರದ ದಿಮ್ಮಿಗಳನ್ನು ಅಡ್ಡಲಾಗಿ ಹಾಕಿ ಅದರ ಮೇಲೆ ತೆರಳಬೇಕಾದ ಅನಿವಾರ್ಯತೆ ಇದೆ. ಇದು ಚಾಮರಾಜನಗರ ತಾಲ್ಲೂಕಿನ ದುಗ್ಗಹಟ್ಟಿ ಗ್ರಾಮದ ಸ್ಥಿತಿ.
ತೂಕದ ಹೆಣವನ್ನು ಹೊತ್ತುಕೊಂಡು ತುಂಬಿ ಹರಿಯುವ ನಾಲೆ ದಾಟುವುದು ಕಷ್ಟ. ಬೇಸಿಗೆಯಲ್ಲಾದರೆ ನಾಲೆಯಲ್ಲಿ ನೀರಿರುವುದಿಲ್ಲ. ಅದನ್ನು ಹತ್ತಿ ಇಳಿದು ಹೇಗೋ ದಾಟಬಹುದು, ಆದರೆ ಈಗ ನೀರು ಹರಿಯುತ್ತಿದ್ದು, ಇದನ್ನು ದಾಟುವುದು ಸಾಧ್ಯವಾಗದ ಕಾರಣ ಜನರೇ ಮರದ ದಿಮ್ಮಿಯನ್ನು ಅಡ್ಡಲಾಗಿ ಇಟ್ಟು ತಾತ್ಕಾಲಿಕ ಸೇತುವೆ ನಿರ್ಮಿಸಿ ಅದರ ಮೂಲಕ ಶವಗಳನ್ನು ಮಸಣಕ್ಕೆ ಕೊಂಡೊಯ್ಯುತ್ತಿದ್ದಾರೆ.

ಈ ಗ್ರಾಮದಲ್ಲಿ ಹಿಂದುಳಿದ ಉಪ್ಪಾರ ಸಮುದಾಯಕ್ಕೆ ಸೇರಿದ ಸುಮಾರು 300ಕ್ಕೂ ಹೆಚ್ಚು ಕುಟುಂಬಗಳಿದ್ದು, ಇವರಿಗಾಗಿ ಗ್ರಾಮದ ಕೆರೆ ಬಳಿ 1 ಎಕರೆ ಪ್ರದೇಶವನ್ನು ಸನ್ಮಾನಕ್ಕಾಗಿ ಮೀಸಲಿರಿಸಲಾಗಿದೆ. ಗ್ರಾಮದಲ್ಲಿ ಯಾರೇ ಸತ್ತರೂ ಇಲ್ಲಿಯೇ ಅಂತ್ಯಕ್ರಿಯೆ ನಡೆಸಲಾಗುತ್ತದೆ. ಈ ಸ್ಮಶಾನದ ಪಕ್ಕದಲ್ಲಿಯೇ ಕಬಿನಿ ನಾಲೆ ಹಾದು ಹೋಗಿದ್ದು, ಇದನ್ನು ದಾಟುವುದೇ ಈಗ ಸಮಸ್ಯೆಯಾಗಿ ಪರಿಣಮಿಸಿದೆ.
ಇನ್ನು ಸ್ಮಶಾನದಲ್ಲಿ ಗಿಡಗಂಟಿಗಳು ಬೆಳೆದು ಇದನ್ನು ದಾಟಿಕೊಂಡು ಹೋಗುವುದು ತ್ರಾಸದಾಯಕವಾಗಿದೆ. ಜತೆಗೆ ಹಳ್ಳಕೊಳ್ಳವಿರುವುದರಿಂದಾಗಿ ಮಳೆ ಬಂದರೆ ಇಲ್ಲಿ ನೀರು ನಿಂತು ನಡೆದಾಡಲು ಕಷ್ಟವಾಗುತ್ತದೆ. ಶವವನ್ನು ನಾಲೆಯ ಮೂಲಕ ದಾಟಿಸುವುದು ಅಪಾಯಕಾರಿಯೂ ಹೌದು.
ಹಿಂದೆ ಒಮ್ಮೆ ನಾಲೆ ದಾಟುವಾಗ ನಾಲೆಗೆ ಅಡ್ಡಲಾಗಿ ಮರದ ದಿಮ್ಮಿ ಹಾಕಿ ನಿರ್ಮಿಸಿದ ತಾತ್ಕಾಲಿಕ ಸೇತುವೆ ಮುರಿದು ಬಿದ್ದು ಸಂಭವಿಸಬಹುದಾಗಿದ್ದ ಅನಾಹುತ ಸ್ವಲ್ಪದರಲ್ಲೇ ತಪ್ಪಿ ಹೋಗಿತ್ತು ಎಂದು ಗ್ರಾಮಸ್ಥರು ನೆನಪಿಸಿಕೊಳ್ಳುತ್ತಾರೆ.
ಜನಪ್ರತಿನಿಧಿಗಳು ಗಮನ ಹರಿಸಿ ನಾಲೆಗೊಂದು ಸೇತುವೆ ನಿರ್ಮಾಣ ಮಾಡುವ ಮೂಲಕ ಸುಸೂತ್ರವಾಗಿ ಶವಸಂಸ್ಕಾರ ಮಾಡಲು ಅನುಕೂಲ ಮಾಡಿಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.












Click it and Unblock the Notifications