ಚಾಮರಾಜನಗರದಿಂದ ಕಸಾಯಿಖಾನೆಗೆ ಜಾನುವಾರು ಸಾಗಾಟ!
ಚಾಮರಾಜನಗರ, ಡಿಸೆಂಬರ್ 12: ಸಂತೆಯಿಂದ ಜಾನುವಾರುಗಳನ್ನು ಖರೀದಿಸಿ ಕೇರಳದ ಕಸಾಯಿಖಾನೆಗೆ ಸಾಗಿಸುತ್ತಿರುವ ಜಾಲವೊಂದು ಗುಂಡ್ಲುಪೇಟೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂಬ ಆರೋಪಗಳು ಕೇಳಿ ಬಂದಿದೆ.
ಕಳೆದ ಕೆಲವು ವರ್ಷಗಳಿಂದ ಈ ವ್ಯಾಪ್ತಿಯಲ್ಲಿ ಬರ ಕಾಣಿಸಿಕೊಂಡಾಗ ರೈತರು ಜಾನುವಾರುಗಳನ್ನು ಸಾಕಲು ಸಾಧ್ಯವಾಗದೆ ಕಡಿಮೆ ಬೆಲೆಗೆ ಮಾರಾಟ ಮಾಡಲಾಗಿತ್ತು. ಕೇರಳದ ಕೆಲವರು ಈ ಜಾನುವಾರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಕಸಾಯಿಖಾನೆಗೆ ಸಾಗಿಸುತ್ತಿದ್ದರು. ಈ ವೇಳೆ ತಡೆಹಿಡಿದು ಜಾನುವಾರುಗಳನ್ನು ರಕ್ಷಿಸಿದ ಘಟನೆಗಳು ನಡೆದಿದ್ದವು.

ಆದರೆ ಈ ಬಾರಿ ಉತ್ತಮ ಮಳೆಯಾದ ಕಾರಣ ರೈತರು ಕೃಷಿಯತ್ತ ತೊಡಗಿಸಿಕೊಂಡಿದ್ದು, ಜಾನುವಾರುಗಳನ್ನು ಸಾಕುತ್ತಿದ್ದಾರೆ. ಜತೆಗೆ ತಮ್ಮ ಜಾನುವಾರುಗಳನ್ನು ಸಂತೆಗೆ ತಂದು ಮಾರಾಟ ಮಾಡುತ್ತಿದ್ದಾರೆ. ಈ ಸಂತೆಗೆ ಕೆಲವು ಮಧ್ಯವರ್ತಿಗಳು ಬಂದು ಜಾನುವಾರುಗಳನ್ನು ಕಡಿಮೆ ಬೆಲೆಗೆ ಖರೀದಿಸಿ ಬಳಿಕ ಕೇರಳಕ್ಕೆ ಸಾಗಿಸುತ್ತಿದ್ದಾರೆ. ಇದರಿಂದಾಗಿ ರೈತರಿಗೆ ಜಾನುವಾರು ಬೇಕೆಂದರೂ ಸಿಗದಂಥ ಪರಿಸ್ಥಿತಿ ಇದೆ.
ಪ್ರತಿ ಸೋಮವಾರ ಬೇಗೂರು ಗ್ರಾಮದಲ್ಲಿ ನಡೆಯುವ ಸಂತೆಗೆ ಎಚ್.ಡಿ.ಕೋಟೆ, ನಂಜನಗೂಡು ಹಾಗೂ ತಾಲೂಕಿನ ವಿವಿಧ ಗ್ರಾಮಗಳಿಂದ ಜಾನುವಾರುಗಳು ಮಾರಾಟಕ್ಕೆ ಬರುತ್ತಿವೆ. ಈ ಸಂತೆಯಲ್ಲಿ ರೈತರಿಂದ ಕಡಿಮೆ ಬೆಲೆಗೆ ಖರೀದಿಸಿ ಒಟ್ಟಾಗಿ ಸೇರಿಸಿ ಬಳಿಕ ಗೂಡ್ಸ್ ವಾಹನಗಳಲ್ಲಿ ತುಂಬಿ ಕೇರಳ ಹಾಗೂ ತಮಿಳುನಾಡಿನ ಕಸಾಯಿಖಾನೆಗಳಿಗೆ ಸಾಗಿಸಲಾಗುತ್ತಿದೆ.
ಇನ್ನಾದರೂ ಸಂಬಂಧಿಸಿದವರು ಇತ್ತ ಗಮನಹರಿಸಿ ಕಸಾಯಿಖಾನೆಗಳಿಗೆ ಸಾಗಾಟವಾಗುತ್ತಿರುವ ಜಾನುವಾರುಗಳನ್ನು ರಕ್ಷಿಸಬೇಕಿದೆ.












Click it and Unblock the Notifications