ಚಾಮರಾಜನಗರ - ಮೆಟ್ಟುಪಾಳ್ಯಂ ರೈಲ್ವೆ ಮಾರ್ಗಕ್ಕೆ ಗ್ರೀನ್ ಸಿಗ್ನಲ್?
ಬಜೆಟ್ ನಲ್ಲಿ ಚಾಮರಾಜನಗರ - ಮೆಟ್ಟುಪಾಳ್ಯಂ ರೈಲ್ವೆ ಮಾರ್ಗಕ್ಕೆಸಿಗಲಿದೆಯೇ ಗ್ರೀನ್ ಸಿಗ್ನಲ್.....?
ಮೈಸೂರು, ಫೆಬ್ರವರಿ ೧ : ಬಹು ನಿರೀಕ್ಷಿತ ರೈಲ್ವೆ ಹಾಗೂ ಕೇಂದ್ರ ವಿತ್ತೀಯ ಬಜೆಟ್ ಈ ಬಾರಿ ಸಮ್ಮಿಳಿತವಾಗಿದ್ದು, ಬಜೆಟ್ ಮಂಡನೆಗೆ ಕ್ಷಣಗಣನೆ ಆರಂಭವಾಗಿದೆ.
ಕಪ್ಪುಕುಳಗಳನ್ನು ಹಣಿಯಲು ಕೇಂದ್ರದ ನೋಟು ಬ್ಯಾನ್ ನಂತರ ದೇಶದಲ್ಲಿ ಉಂಟಾದ ಆರ್ಥಿಕ ಮುಗ್ಗಟ್ಟು ಹಾಗೂ ಸಾಮಾನ್ಯರ ಪರದಾಟಕ್ಕೇ ಇಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್ ವಿರಾಮ ನೀಡಲಿದೆಯೇ ಅಥವಾ ಮತ್ತಷ್ಟು ಹೊರೆಯಾಗಲಿದೆಯೇ ಎನ್ನುವ ಪ್ರಶ್ನೆಗೆ ಉತ್ತರ ಕೆಲವೇ ಗಂಟೆಗಳಲ್ಲಿ ಸಿಗಲಿದೆ.
ಕೇಂದ್ರ ಬಜೆಟ್ನಲ್ಲಿ ಮೈಸೂರಿಗರು ಹಲವಾರು ನಿರೀಕ್ಷೆಯನ್ನಿಟ್ಟಿಕೊಂಡಿದ್ದಾರೆ, ನಗರಕ್ಕೆ ಪ್ಲೈ ಓವರ್, ಶಾಶ್ವತ ವಿಮಾನ ನಿಲ್ದಾಣ, ಚಾಮರಾಜನಗರದಿಂದ ತಮಿಳುನಾಡಿಗೆ ರೈಲ್ವೆ ಸಂಪರ್ಕ ಸೇರಿದಂತೆ ಸಾಂಸ್ಕೃತಿಕ ನಗರಿಯ ಅಭಿವೃದ್ಧಿಗೆ ಇನ್ನು ಮತ್ತಷ್ಟು ಯೋಜನೆಗಳ ನಿರೀಕ್ಷೆಗಳು ಮೈಸೂರಿಗರದೇ.[ಅಹ್ಮದ್ ಸಾವು ಪ್ರಕಟಣೆ ತಡವಾಗಿದ್ದು ಅಮಾನವೀಯ : ಖರ್ಗೆ]
ಶಾಶ್ವತ ವಿಮಾನ ಹಾರಾಟ : ದೇಶ- ವಿದೇಶಿಗಳಿಂದ ಆಗಮಿಸುವ ಪ್ರವಾಸಿಗರ ಅನುಕೂಲಕ್ಕೆ ಶಾಶ್ವತ ವಿಮಾನ ಹಾರಾಟಕ್ಕೆ ಅವಕಾಶ ಕಲ್ಪಿಸಬೇಕಿದೆ. ಕೇವಲ ಗಣ್ಯರ ವಿಮಾನಗಳಿಗಾಗಿರುವ ಮಂಡಕಳ್ಳಿ ವಿಮಾನ ನಿಲ್ದಾಣವನ್ನು ಅಂತಾರಾಷ್ಟ್ರೀಯ ಮಟ್ಟದ ದರ್ಜೆಗೇರಿಸಿ ದಿನಂಪ್ರತಿ ಶಾಶ್ವತ ವಿಮಾನ ಹಾರಾಟ ನಡೆಸಿದರೆ ಪ್ರವಾಸೋದ್ಯಮದಲ್ಲಿ ಮತ್ತಷ್ಟು ಅಭಿವೃದ್ಧಿ ನಿರೀಕ್ಷಿಸಬಹುದು.
ಚಾಮರಾಜನಗರ -ಮೆಟ್ಟುಪಾಳ್ಯಂ ರೈಲ್ವೇ ಮಾರ್ಗ : ರಾಜ್ಯ ಹಾಗೂ ತಮಿಳುನಾಡಿನ ಗಡಿ ಜಿಲ್ಲೆಗಳ ಸಂಪರ್ಕಕ್ಕೆ ಚಾಮರಾಜನಗರ - ಮೆಟ್ಟುಪಾಳ್ಯಂ ವಯಾ ಗುಂಡ್ಲುಪೇಟೆ ಮಾರ್ಗವಾಗಿ, ಹಾಗೆ ಮೈಸೂರು-ಕುಶಾಲನಗರ, ಕೊಡಗಿನಿಂದ ಕೇರಳದವರೆಗೆ ರೈಲ್ವೆ ಮಾರ್ಗದ ಅವಶ್ಯವು ಹೆಚ್ಚಿದ್ದು ಈ ಬಗ್ಗೆ ಕೇರಳ ರಾಜ್ಯ ಕೇಂದ್ರವನ್ನು ಒತ್ತಾಯಿಸಿದೆ.
ಕೇಂದ್ರವೂ ರಾಜ್ಯದ ಮಹದಾಸೆಗೆ ಯಾವ ರೀತಿ ಸ್ಪಂದಿಸುವುದು ಕಾದು ನೋಡಬೇಕಿದ್ದು, ಈ ಭಾಗದ ಬಹುಕಾಲದ ನಿರೀಕ್ಷೆಗಳಿಗೆ ಪ್ರಸ್ತುತ ಕೇಂದ್ರ ಬಜೆಟ್ನಲ್ಲಿ ಹಸಿರು ನಿಶಾನೆ ನಿರೀಕ್ಷಿಸಲಾಗುತ್ತಿದೆ.
ಕೇಂದ್ರೀಯ ವಿದ್ಯಾಲಯ : ಐಟಿ ಇಂಜಿನಿಯರಿಂಗ್ ಕಾಲೇಜ್ ಮೈಸೂರಿಗೆ ಕೈ ತಪ್ಪಿ ಹೋಗಿದ್ದು, ಕನಿಷ್ಠ ಕೇಂದ್ರೀಯ ವಿದ್ಯಾಲಯವಾದರೂ ಪ್ರಸ್ತುತ ಬಜೆಟ್ನಲ್ಲಿ ನಗರಕ್ಕೆ ಮಂಜೂರಾಗಲಿ ಎನ್ನುವುದು ಮೈಸೂರಿಗರ ನಿರೀಕ್ಷೆ. ನಗರಕ್ಕೆ ಕೇಂದ್ರಿಯ ವಿಶ್ವವಿದ್ಯಾಲಯ ಮಂಜೂರಾದರೆ ಐಟಿ ಕಾಲೇಜು ಕೈ ತಪ್ಪಿದ ನೋವನ್ನು ತಕ್ಕಮಟ್ಟಿಗೆ ಕಡಿಮೆಯಾಗುವ ಆಶಯ ಇಲ್ಲಿನ ಸಾರ್ವಜನಿಕರದ್ದು.