ಬೊಮ್ಮನಹಳ್ಳಿ-ಅರಕಲವಾಡಿ ರಸ್ತೆ ಕಾಮಗಾರಿ ಮುಗಿಯುವುದು ಯಾವಾಗ?
ಚಾಮರಾಜನಗರ, ಜನವರಿ 20: ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಿಸಿ ಎಂಟು ತಿಂಗಳಾದರೂ ಮುಗಿಯದ ಕಾರಣ ರಸ್ತೆಯಲ್ಲಿ ಸಂಚರಿಸುವವರು ಹಿಡಿಶಾಪ ಹಾಕುತ್ತಾ ಸಾಗುವುದು ತಾಲೂಕಿನ ಬೊಮ್ಮನಹಳ್ಳಿ-ಅರಕಲವಾಡಿ ರಸ್ತೆಯಲ್ಲಿ ಕಂಡು ಬಂದಿದೆ. ಆಮೆನಡಿಗೆಯ ಕಾಮಗಾರಿಯಿಂದ ಬೇಸತ್ತ ಜನ ಪ್ರತಿಭಟನೆ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ.
ಚಾಮರಾಜನಗರ ತಾಲೂಕಿನ ಬೊಮ್ಮನಹಳ್ಳಿ- ಅರಕಲವಾಡಿ ಗ್ರಾಮದ ಸಂಪರ್ಕ ರಸ್ತೆ ಗುಂಡ್ಲುಪೇಟೆ ಮತ್ತು ಚಾಮರಾಜನಗರಕ್ಕೆ ಸಂಪರ್ಕ ಕಲ್ಪಿಸುತ್ತಿದ್ದು ಎಂಟು ತಿಂಗಳಹಿಂದೆ ಅಭಿವೃದ್ಧಿ ಕಾಮಗಾರಿ ಕೈಗೊಂಡಾಗ ಸ್ಥಳೀಯರು ಸಂತಸಗೊಂಡಿದ್ದರು. ಈಗ ಈ ಮಾರ್ಗದಲ್ಲಿ ದಿನಕ್ಕೆ 20ಕ್ಕೂ ಹೆಚ್ಚಿನ ಬಸ್ಸುಗಳು ಹಾಗೂ ನೂರಾರು, ನಾಲ್ಕುಚಕ್ರ, ದ್ವಿಚಕ್ರವಾಹನಗಳು ಸಂಚರಿಸುತ್ತವೆ. ಹೀಗಿರುವಾಗ ಕಾಮಗಾರಿಯನ್ನು ಆದಷ್ಟು ಬೇಗ ಮುಗಿಸುವ ಬಗ್ಗೆ ಕ್ರಮ ಕೈಗೊಳ್ಳಬೇಕಿತ್ತು. ಆದರೆ ಗುತ್ತಿಗೆದಾರನ ನಿರ್ಲಕ್ಷ್ಯವೋ, ಅಧಿಕಾರಿಗಳ ಅಸಡ್ಡೆಯೋ ಕಾಮಗಾರಿ ಮಾತ್ರ ಕುಂಟುತ್ತಲೇ ಸಾಗುತ್ತಿದೆ.[ಅಗುಂಬೆ ಘಾಟಿ ರಸ್ತೆ ಕಾಮಗಾರಿ ಪೂರ್ಣ, ಜ.1ರಿಂದ ಸಂಚಾರ ಆರಂಭ]
ರಸ್ತೆ ಕಾಮಗಾರಿ ಆರಂಭಿಸಿ ಮೊದಲಿದ್ದ ಡಾಂಬರನ್ನು ತೆಗೆಯುವ ಕಾರ್ಯ ಶುರು ಮಾಡಲಾಯಿತಾದರೂ ಅದನ್ನು ತಿಂಗಳಾನುಗಟ್ಟಲೆ ಮಾಡಲಾಯಿತು. ಬಳಿಕ ಜಲ್ಲಿ ಕಲ್ಲು ಸುರಿದು ಮೆಟ್ಲಿಂಗ್ ಮಾಡಲಾಗಿದೆ. ಇದರ ಮೇಲೆ ಎಂಸ್ಯಾಂಡ್ ಸುರಿದು ತೆಪ್ಪಗಾಗಿದ್ದಾರೆ. ಪ್ರತಿನಿತ್ಯ ನೀರು ಸುರಿದು ಹದಗೊಳಿಸ ಬೇಕಾಗಿದೆಯಾದರೂ ಅದನ್ನು ಮಾಡದ ಕಾರಣದಿಂದ ವಾಹನಗಳು ಅದರ ಮೇಲೆ ಚಲಿಸುವಾಗ ಧೂಳೆದ್ದು, ಜಲ್ಲಿಕಲ್ಲುಗಳು ಕಿತ್ತು ಬಂದು ರಾಶಿ ಬೀಳುತ್ತಿದೆ.
ಈ ರಸ್ತೆಯಲ್ಲಿಯೇ ವಾಹನಗಳು ಕೂಡ ಚಲಿಸುವುದರಿಂದಾಗಿ ಪರದಾಡುವಂತಾಗಿದೆ. ವಾಹನಗಳು ಸಂಚರಿಸುವಾಗ ರಸ್ತೆ ಬದಿಯಲ್ಲಿ ಚಲಿಸುವ ಪಾದಚಾರಿಯ ಗೋಳು ಹೇಳತೀರದ್ದಾಗಿದೆ. ರಸ್ತೆಯ ಎರಡು ಬದಿಯನ್ನು ಸಮತಟ್ಟುಗೊಳಿಸದ ಕಾರಣದಿಂದ ವಾಹನಗಳು ಒಂದಕ್ಕೊಂದು ರಸ್ತೆ ಬಿಟ್ಟುಕೊಡಲು ಜಾಗವಿಲ್ಲದೆ ಪರದಾಡುವಂತಾಗಿದೆ.
ರಸ್ತೆ ಅಭಿವೃದ್ಧಿಗೆ ಸಂತಸ ವ್ಯಕ್ತ ಪಡಿಸಿದ್ದ ಜನ ಈಗ ಕಾಮಗಾರಿಯ ಅವ್ಯವಸ್ಥೆ ಕಂಡು ಬೇಸರಗೊಂಡಿದ್ದಾರೆ.ಮೊದಲಿದ್ದ ರಸ್ತೆಯೇ ಸಾಕಾಗಿತ್ತು ಎನ್ನುತ್ತಿದ್ದಾರೆ. ಆಮೆನಡಿಗೆಯ ಕಾಮಗಾರಿ ಯಾವಾಗ ಚುರುಕುಗೊಂಡು ಮುಗಿಯುತ್ತದೆ ಎಂಬುದನ್ನು ಸಾರ್ವಜನಿಕರು ಎದುರು ನೋಡುತ್ತಿದ್ದಾರೆ.