ಮಲೆ ಮಾದಪ್ಪನ ಬೆಟ್ಟದಲ್ಲಿ ಬಸ್ಗಳಿಗೆ ಬರ್ತ್ ಡೇ ಆಚರಣೆ, ವಿಡಿಯೋ ಭಾರೀ ವೈರಲ್
ಚಾಮರಾಜನಗರ, ಆಗಸ್ಟ್, 19: ಪ್ರಸಿದ್ಧ ಧಾರ್ಮಿಕ ಸ್ಥಳವಾದ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಬಸ್ಗಳಿಗೆ ಹುಟ್ಟು ಹಬ್ಬ ಆಚರಣೆ ಮಾಡಿದ ವಿಶೇಷ ಪ್ರಸಂಗ ನಡೆದಿದೆ. ಹಾಗಾದರೆ ಈ ವೇಳೆ ಯಾರೆಲ್ಲ ಭಾಗಿಯಾಗಿದ್ದರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ. ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ಕ್ಷೇತ್ರದಲ್ಲಿ ಪ್ರಾಧಿಕಾರದಿಂದ ಕಾರ್ಯಾಚರಣೆ ನಡೆಸುವ 4 ಬಸ್ಗಳಿಗೆ ಮೊದಲನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಲಾಗಿದೆ.
ಮಲೆ ಮಹದೇಶ್ವರ ಬೆಟ್ಟ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕಳೆದ ವರ್ಷ ನಾಲ್ಕು ನೂತನ ಬಸ್ಗಳ ಸೇವೆ ಪ್ರಾರಂಭಿಸಿತ್ತು.

4 ಬಸ್ಗಳ ಸೇವೆಗೆ ಒಂದು ವರ್ಷ ಪೂರ್ಣವಾದ ಹಿನ್ನೆಲೆ ಭಕ್ತರೇ ಬಸ್ಗಳಿಗೆ ಹುಟ್ಟುಹಬ್ಬ ಆಚರಿಸಿ, ಬಸ್ಗಳ ಮುಂದೆ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಇನ್ನು ಈ ವಿಡಿಯೋ ಭಾರೀ ವೈರಲ್ ಆಗುತ್ತಿದೆ.
ಗೋಪಾಲಸ್ವಾಮಿ ಬೆಟ್ಟಕ್ಕೆ ಹರಿದುಬಂದ ಭಕ್ತ ಸಾಗರ: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲ್ಲೂಕಿನ ಪ್ರಸಿದ್ದ ಧಾರ್ಮಿಕ ಸ್ಥಳ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ಶ್ರಾವಣ ಶನಿವಾರದ ಹಿನ್ನಲೆ ಭಕ್ತಾದಿಗಳ ದಂಡೆ ಹರಿದು ಬಂದಿತ್ತು. ಹಾಗಾದರೆ ಯಾವ್ಯಾವ ಭಾಗಗಳಿಂದ ಭಕ್ತರು ಬಂದಿದ್ದರು ಎನ್ನುವ ಮಾಹಿತಿಯನ್ನು ಇಲ್ಲಿ ತಿಳಿಯಿರಿ.
ಬೆಂಗಳೂರು, ಮೈಸೂರು, ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮದ ನೂರಾರು ಮಂದಿ ಭಕ್ತರು ಶ್ರಾವಣ ಮಾಸ ಪ್ರಯುಕ್ತ ಗೋಪಾಲಸ್ವಾಮಿ ಬೆಟ್ಟಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಬೆಳಗ್ಗೆ 12 ಗಂಟೆ ವೇಳೆ ಅಧಿಕ ಮಂದಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ ಹಿನ್ನೆಲೆ ಸರತಿ ಸಾಲಿನಲ್ಲಿ ನಿಂತು ಪೂಜೆ ಸಲ್ಲಿಕೆ ಮಾಡಿದರು. ಜೊತೆಗೆ ಗೋವಿಂದ, ಗೋಪಾಲ ಎಂಬ ಘೋಷಣೆ ಕೂಗಿ ದೇವರಿಗೆ ಭಕ್ತಿ ಸಮರ್ಪಿಸಿದರು.
ಶ್ರಾವಣ ಶನಿವಾರದ ಹಿನ್ನೆಲೆ ದೇವಸ್ಥಾನದ ಅರ್ಚಕ ಗೋಪಾಲಕೃಷ್ಣ ಭಟ್ ಗೋಪಾಲ ಸ್ವಾಮಿಗೆ ವಿವಿಧ ಬಗೆಯ ಅಭಿಷೇಕಗಳನ್ನು ನೆರವೇರಿಸಿ, ವಿಶೇಷ ಹೂವುಗಳಿಂದ ಅಲಂಕಾರ ಮಾಡಿ ಮಹಾ ಮಂಗಳಾರತಿ ಮಾಡಿದರು. ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ಪ್ರಸಾದ ವಿನಿಯೋಗವನ್ನು ಸಹ ಏರ್ಪಡಿಸಲಾಗಿತ್ತು.
ಗೋಪಾಲಸ್ವಾಮಿ ಬೆಟ್ಟಕ್ಕೆ ತೆರಳಲು ತಪ್ಪಲಿನಲ್ಲಿ ಕೆಎಸ್ಆರ್ಟಿಸಿ ವತಿಯಿಂದ 20ಕ್ಕೂ ಅಧಿಕ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಗೋಪಾಲಸ್ವಾಮಿ ದರ್ಶನ ಪಡೆಯಲು ತಮ್ಮ ಸ್ವಂತ ವಾಹನದಲ್ಲಿ ಆಗಮಿಸಿದ ಭಕ್ತಾದಿಗಳು ತಪ್ಪಲಿನ ಪಾರ್ಕಿಂಗ್ನಲ್ಲಿ ನಿಲ್ಲಿಸಿ ಬೆಟ್ಟಕ್ಕೆ ಸಾರಿಗೆ ಬಸ್ನಲ್ಲಿ ತೆರಳಿ ಪೂಜೆ ಸಲ್ಲಿಸಿದರು.












Click it and Unblock the Notifications