ಗುಂಡ್ಲುಪೇಟೆ ತಾಲೂಕಿನಲ್ಲಿ ಹಾವಳಿ ಶುರು ಮಾಡಿದ ಜಾಂಬವಂತ
ಚಾಮರಾಜನಗರ, ಜೂನ್, 05: ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆಯಲ್ಲಿ ಇತ್ತೀನ ದಿನಗಳಲ್ಲಿ ಕಾಡುಪ್ರಾಣಿಗಳು ರಸ್ತೆಗಿಳಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿವೆ. ಇದೀಗ ಇಂದು (ಜೂನ್ 05) ಬೆಳ್ಳಂಬೆಳಗ್ಗೆ ಊರಿನ ಸನಿಹದಲ್ಲೇ ಕರಡಿ ಓಡಾಡಿ ಜನರಲ್ಲಿ ಆತಂಕ ಮೂಡಿಸಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದಲ್ಲಿ ನಡೆದಿದೆ.
ಅಣ್ಣೂರು ಕೇರಿ ಗ್ರಾಮದ ಮಸೀದಿ ರಸ್ತೆಯಲ್ಲಿ ಕರಡಿ ಓಡಾಡಿದ್ದು, ಗ್ರಾಮಸ್ಥರು ದಾಳಿ ಭೀತಿಗೆ ಒಳಗಾಗಿದ್ದಾರೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಗುಂಡ್ಲುಪೇಟೆ ಬಫರ್ ವಲಯಕ್ಕೆ ಅಣ್ಣೂರು ಕೇರಿ ಒಳಪಡಲಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ಕೊಟ್ಟಿದ್ದಾರೆ.

ಆಹಾರ ಅರಸಿ ಕಾಡಿನಿಂದ ಹೊರಬಂದಿರುವ ಕರಡಿ ದಾರಿ ತಪ್ಪಿ ಅಲೆಯುತ್ತಿದೆ ಎನ್ನಲಾಗಿದ್ದು, ಅಣ್ಣೂರು ಕೇರಿ ಗ್ರಾಮದ ಜಮೀನಿನಲ್ಲಿ ಇರುವುದನ್ನು ಅರಣ್ಯ ಇಲಾಖೆ ಪತ್ತೆ ಹಚ್ಚಿ, ಸೆರೆ ಕಾರ್ಯಾಚರಣೆ ಕೈಗೊಂಡಿದೆ.
ಜಾಂಬವಂತ ಮತ್ತೇ ಕಾಡಿಗೆ: ಕಾಡಿನಿಂದ ದಾರಿ ತಪ್ಪಿ ನಾಡಿಗೆ ಬಂದಿದ್ದ ಸುಮಾರು 5-6 ವರ್ಷದ ಕರಡಿಯನ್ನು ಅರಣ್ಯಾಧಿಕಾರಿಗಳು ಗುಂಡ್ಲುಪೇಟೆ ತಾಲೂಕಿನ ಅಣ್ಣೂರುಕೇರಿ ಗ್ರಾಮದ ಖಾಸಗೀ ಜಮೀನಿನಲ್ಲಿ ಬುಧವಾರ ಸೆರೆ ಹಿಡಿದಿದ್ದಾರೆ.
ತಾಲೂಕಿನ ಅಣ್ಣೂರುಕೇರಿ ಗ್ರಾಮಕ್ಕೆ ಬುಧವಾರ ಬೆಳಂಬೆಳಗ್ಗೆ ದಾರಿತಪ್ಪಿ ಬಂದ ಕರಡಿಯನ್ನು ಕಂಡ ಜನರು ಆತಂಕಕ್ಕೀಡಾಗಿದ್ದರು. ಈ ವೇಳೆ ಜನರ ಕೂಗಾಟದಿಂದ ಗಾಭರಿಗೊಂಡ ಕರಡಿಯು ಜಮೀನಿನಲ್ಲಿ ಅತ್ತಿಂದಿತ್ತ ಓಡಾಡಿ ನಿತ್ರಾಣಗೊಂಡಿತ್ತು.
ನಂತರ ಸ್ಥಳೀಯ ರೈತರಿಂದ ಮಾಹಿತಿ ಅರಿತ ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯಾಧಿಕಾರಿಗಳು ಸ್ಥಳಕ್ಕಾಗಿಮಿಸಿ ಪರಿಶೀಲನೆ ನಡೆಸಿ, ಬಂಡೀಪುರ ಹುಲಿ ಯೋಜನೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್.ಪ್ರಭಾಕರನ್ ಮಾರ್ಗದರ್ಶನದಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಜಿ.ರವೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಬಲೆಯ ಮೂಲಕ ಕರಡಿಯನ್ನು ಸುರಕ್ಷಿತವಾಗಿ ಸೆರೆ ಹಿಡಿದಿದ್ದಾರೆ.
ಸೆರೆಯಾದ ಕರಡಿಗೆ ಇಲಾಖಾ ಪಶು ವೈಧ್ಯಾಧಿಕಾರಿ ಡಾ.ಮಿರ್ಜಾ ವಾಸೀಂ ಚಿಕಿತ್ಸೆ ನೀಡಿದ್ದು, ನಂತರ ಅರಣ್ಯ ಇಲಾಖೆ ಅಧಿಕಾರಿಗಳು ಮೂಲೆಹೊಳೆ ಅರಣ್ಯಕ್ಕೆ ಬಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ಗುಂಡ್ಲುಪೇಟೆ ಬಫರ್ ಜೋನ್ ವಲಯ ಅರಣ್ಯಾಧಿಕಾರಿ ಬಿ.ಎಂ.ಮಲ್ಲೇಶ್, ಕುಂದುಕೆರೆ ವಲಯ ಅರಣ್ಯಾಧಿಕಾರಿ ಎನ್.ಪಿ.ನವೀನ್ ಕುಮಾರ್ ಸೇರಿದಂತೆ ಸಿಬ್ಬಂದಿ ವರ್ಗದವರು ಹಾಗೂ ವಿಶೇಷ ಹುಲಿ ಸಂರಕ್ಷಣಾ ದಳದ ಸಿಬ್ಬಂದಿ ಭಾಗವಹಿಸಿದ್ದರು.












Click it and Unblock the Notifications