ಬಂಡೀಪುರದಲ್ಲಿ ಸಫಾರಿ ಟಿಕೆಟ್ ಸಮಯ, ಜಾಗ ಎರಡೂ ಬದಲು
ಚಾಮರಾಜನಗರ, ಜೂನ್ 3 : ಬಂಡೀಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಇದುವರೆಗೆ ನಡೆಯುತ್ತಿದ್ದ ಸಫಾರಿಯನ್ನು ಕೇಂದ್ರ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ಬಂಡೀಪುರದ ಕೋರ್ ಜೋನ್ನಿಂದ ಬಫರ್ ಜೋನ್ಗೆ ವರ್ಗಾಯಿಸಲಾಗಿದ್ದು, ಅದರಂತೆ ಇದೀಗ ನೂತನ ಸ್ಥಳದಲ್ಲಿ ಸಫಾರಿ ಆರಂಭವಾಗಿದೆ. ಸಫಾರಿ ಟಿಕೆಟ್ ಕೌಂಟರ್ ಅನ್ನು ಮೇಲುಕಾಮನಹಳ್ಳಿ ಎಸ್ಟಿಪಿಎಫ್ ಕ್ವಾಟ್ರಸ್ ಗೆ ಸ್ಥಳಾಂತರಿಸಲಾಗಿದೆ.
ಬಂಡೀಪುರದಲ್ಲಿ ವಾಹನ ದಟ್ಟಣೆಯನ್ನು ತಡೆಯುವ ಉದ್ದೇಶದಿಂದ ವರ್ಷದ ಹಿಂದೆಯೇ ಈ ಜಾಗದಲ್ಲಿ ಸಫಾರಿ ಕೌಂಟರ್ ತೆರೆಯಲು ಅಂದಿನ ಅರಣ್ಯ ಸಂರಕ್ಷಣಾಧಿಕಾರಿ ಅಂಬಾಡಿ ಮಾಧವ್ ಅವರು ಮುಂದಾಗಿದ್ದರು. ಈ ಜಾಗದಲ್ಲಿ ಬೆಳೆದಿದ್ದ ನೀಲಗಿರಿ, ಕಗ್ಗಲಿ ಇತರೆ ಜಾತಿಯ ಮರಗಳನ್ನು ಕಡಿಯಲಾಗಿತ್ತು. ಬಳಿಕ, ಕಾಮಗಾರಿ ವಿಳಂಬವಾಗಿತ್ತು. ಫೆಬ್ರುವರಿಯಲ್ಲಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದ ಬಾಲಚಂದ್ರ ಅವರು ಈ ಕಾಮಗಾರಿಗಳು ವೇಗವಾಗಿ ನಡೆಯುವಂತೆ ನೋಡಿಕೊಂಡರು.
ಬಂಡೀಪುರ ರಾಷ್ಟ್ರೀಯ ಉದ್ಯಾನವನವನ್ನು ಸೂಕ್ಷ್ಮ ಪರಿಸರ ವಲಯವೆಂದು ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ವನ್ಯಪ್ರಾಣಿಗಳು ಮತ್ತು ಅರಣ್ಯ ಸಂಪತ್ತನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹತ್ತು ಹಲವು ಕಠಿಣ ನಿಯಮಗಳನ್ನು ಜಾರಿ ಮಾಡಲಾಗಿದೆ. ಕೃಷಿ ಮತ್ತು ಅರಣ್ಯ ಚಹರೆ ಇರುವ ಉದ್ಯಾನದಂಚಿನ ಪ್ರದೇಶಗಳಲ್ಲಿ ರೆಸಾರ್ಟ್ ತೆರೆಯುವುದು ಮತ್ತು ಸೂಕ್ಷ್ಮ ಪರಿಸರ ವಲಯ ಘೋಷಣೆಗೆ ವಿರುದ್ಧವಾಗಿ ಯಾವುದೇ ಕಾಮಗಾರಿ ಕೈಗೊಳ್ಳಲು ಅವಕಾಶವಿಲ್ಲ. ಜೊತೆಗೆ ವಾಹನ ಮತ್ತು ಜನಸಂಚಾರ ದಟ್ಟಣೆ ತಡೆಯಲು ಸಫಾರಿ ಕೌಂಟರ್ ಹಾಗೂ ಸಫಾರಿ ಹೊರಡುವ ಜಾಗವನ್ನು ಬೇರೆಡೆಗೆ ಸ್ಥಳಾಂತರಿಸಲು ನಿರ್ಧರಿಸಲಾಗಿತ್ತು.

ಇನ್ನು ಮುಂದೆ ಸಫಾರಿ ವಾಹನಗಳು ಅರಣ್ಯದ ಪ್ರವೇಶ ದ್ವಾರದಿಂದ ಹೊರಡಲಿವೆ. ಅರಣ್ಯ ಪ್ರವೇಶ ದ್ವಾರದಿಂದ ಸಫಾರಿ ಆರಂಭವಾಗುವ ಜಾಗಕ್ಕೆ ತಲುಪಲು 15 ನಿಮಿಷ ಹಾಗೂ ಅಲ್ಲಿ ವಾಪಸ್ಸಾಗಲು 15 ನಿಮಿಷ ಬೇಕಾಗುತ್ತದೆ. ಅಂತೆಯೆ ಸಫಾರಿ ಸಮಯಕ್ಕೆ 30 ನಿಮಿಷವನ್ನು ಸೇರ್ಪಡೆಗೊಳಿಸಲಾಗಿದೆ. ಇದಲ್ಲದೆ ಹೊಸದಾಗಿ ಸಫಾರಿ ವಾಹನಗಳಿಗೆ ಜಿಪಿಎಸ್ ಅಳವಡಿಸಲಾಗಿದ್ದು, ನಿಗದಿತ ದಾರಿ, ಸಮಯವನ್ನು ಮೀರಿ ಸಂಚರಿಸದಂತೆ ಕಡಿವಾಣ ಹಾಕಲಾಗಿದೆ.
ಬೆಳಗ್ಗೆ ಸಫಾರಿ-ಬಸ್-ಬೆ. 6.15 ರಿಂದ ಬೆ. 7.45, ಬೆ. 7.45 ರಿಂದ ಬೆ. 9.30, ಜಿಪ್ಸಿ-ಬೆ.6.15 ರಿಂದ ಬೆ. 8, ಬೆ. 8 ರಿಂದ 9.45 ವರೆಗೆ, ಮಧ್ಯಾಹ್ನದ ಸಫಾರಿ : ಬಸ್-ಮ. 2.30 ರಿಂದ ಸಂ. 4, ಸಂ. 4 ರಿಂದ ಸಂ.5.30 ವರೆಗೆ , ಜಿಪ್ಸಿ-ಮ. 2.30 ರಿಂದ ಸಂ. 4.30, ಸಂ. 4.30 ರಿಂದ ಸಂ. 6.30ರವರೆಗೆ ಚಲಿಸಲಿದೆ.












Click it and Unblock the Notifications