Bandipura: ಬಂಡೀಪುರದ ವನ್ಯಪ್ರಾಣಿಗಳಿಗೆ ಜೀವಜಲ ನೀಡುವ ಮೂಲೆಹೊಳೆ
ಚಾಮರಾಜನಗರ, ನವೆಂಬರ್ 06: ಕೆರೆಕಟ್ಟೆಗಳು ತುಂಬಿ ಅರಣ್ಯದ ನಡುವೆ ಹಾದು ಹೋಗಿರುವ ಮೂಲೆಹೊಳೆಯಲ್ಲಿ ನೀರು ಜುಳು ಜುಳು ಸದ್ದು ಮಾಡುತ್ತಾ ಹರಿಯುತ್ತಿದೆ ಎಂದರೆ ಜಿಲ್ಲೆಯಲ್ಲಿರುವ ಸುಂದರ ಉದ್ಯಾನ ಸಮೃದ್ಧವಾಗಿದೆ ಎಂದರ್ಥ. ಈ ಬಾರಿ ಮುಂಗಾರು ಮತ್ತು ಹಿಂಗಾರಿನಲ್ಲಿ ಮಳೆ ಉತ್ತಮವಾಗಿ ಸುರಿದ ಕಾರಣದಿಂದಾಗಿ ಇಡೀ ಅರಣ್ಯ ಹಸಿರಿನಿಂದ ಕಂಗೊಳಿಸುತ್ತಿದೆ. ಈ ಸುಂದರ ದೃಶ್ಯವನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿಯೇ ಪ್ರವಾಸಿಗರ ದಂಡು ಇತ್ತ ಮುಖ ಮಾಡುತ್ತಿದೆ.
ಹಾಗೆನೋಡಿದರೆ ಕಳೆದ ವರ್ಷ ಹೆಚ್ಚು ಮಳೆ ಸುರಿದಿರಲಿಲ್ಲ. ಮುಂಗಾರು ಮತ್ತು ಹಿಂಗಾರು ದರ್ಬಲವಾಗಿತ್ತು. ಪರಿಣಾಮ ಬೇಸಿಗೆಯಲ್ಲಿ ಅರಣ್ಯದಲ್ಲಿ ಜೀವಜಲ ಬತ್ತಿಹೋಗಿ ವನ್ಯ ಪ್ರಾಣಿಗಳು ಕುಡಿಯುವ ನೀರಿಗಾಗಿ ಪರಿತಪಿಸುವಂತಾಗಿತ್ತು. ಈ ವೇಳೆ ನೀರಿಗಾಗಿ ವನ್ಯಪ್ರಾಣಿಗಳು ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಮೇ ವೇಳೆಗೆ ಸುರಿದ ಮಳೆ ಅರಣ್ಯಕ್ಕೆ ಮತ್ತು ಅರಣ್ಯದಲ್ಲಿರುವ ವನ್ಯ ಜೀವಿಗಳಿಗೆ ಜೀವ ತಂದಿತ್ತು.

ಇದೆಲ್ಲದರ ನಡುವೆ ಕಳೆದ ವರ್ಷ ಮಳೆ ಹೆಚ್ಚು ಸುರಿಯದ ಕಾರಣದಿಂದಾಗಿ ಅರಣ್ಯದ ನಡುವೆ ಹರಿಯುತ್ತಿದ್ದ ಮೂಲೆಹೊಳೆಯೂ ಬತ್ತಿಹೋಗಿತ್ತು. ನಿಜಹೇಳಬೇಕೆಂದರೆ ಮೂಲೆಹೊಳೆಯೇ ಬಂಡೀಪುರದ ಜಲಮೂಲಗಳಲ್ಲಿ ಒಂದಾಗಿದ್ದು ಇದನ್ನು ನಂಬಿಕೊಂಡು ಜಲಮೂಲ ಮಾತ್ರವಲ್ಲದೆ, ವನ್ಯಪ್ರಾಣಿಗಳು ಬದುಕುತ್ತಿವೆ. ಈ ಬಾರಿ ಕೇರಳದ ವೈನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಬಂಡೀಪುರದ ನಡುವೆ ಹರಿಯುವ ಮೂಲೆಹೊಳೆಗೆ ಜೀವ ಕಳೆ ಬಂದಿದ್ದು, ನದಿ ತುಂಬಿಕೊಂಡು ವಿಶಾಲವಾಗಿ ಹರಿಯುತ್ತಿದೆ.
ವನ್ಯ ಪ್ರಾಣಿಗಳಿಗೆ ಜೀವಜಲ ನೀಡುವ ಹೊಳೆ
ಉತ್ತಮ ಮುಂಗಾರು ಮತ್ತು ಹಿಂಗಾರಿನಿಂದಾಗಿ ಬಂಡೀಪುರ ಹಚ್ಚಹಸಿರಿನೊಂದಿಗೆ ಕಂಗೊಳಿಸುತ್ತಿದ್ದರೆ, ಅದರ ನಡುವೆ ಜೀವಸೆಲೆಯಾಗಿರುವ ಮೂಲೆಹೊಳೆಯೂ ಜುಳುಜುಳು ಗುಟ್ಟುತ್ತಾ ಹರಿಯುತ್ತಿದ್ದು ಇದು ಹುಲಿ ಸೇರಿದಂತೆ ವನ್ಯಪ್ರಾಣಿಗಳಿಗೆ ಹುಮ್ಮಸ್ಸು ತಂದಿದೆ. ಸಾಮಾನ್ಯವಾಗಿ ಈ ಹೊಳೆಯೇ ಇಲ್ಲಿನ ವನ್ಯಪ್ರಾಣಿಗಳಿಗೆ ಜೀವಜಲ ನೀಡುತ್ತದೆ. ಇಂತಹ ಹೊಳೆ ಕಳೆದ ವರ್ಷ ಬತ್ತಿಹೋಗಿತ್ತು. ಈ ವರ್ಷ ಇಲ್ಲಿವರೆಗೂ ಮಳೆ ಉತ್ತಮವಾಗಿ ಸುರಿಯುತ್ತಿರುವುದರಿಂದ ಮೂಲೆ ಹೊಳೆಗೆ ಮಾತ್ರವಲ್ಲದೆ ಬಂಡೀಪುರ ಅರಣ್ಯಕ್ಕೆ ಜೀವಕಳೆ ಬಂದಿದೆ.

ಬಂಡೀಪುರ ಅರಣ್ಯದಲ್ಲಿ ಹರಿಯುವ ಮೂಲೆಹೊಳೆಯ ಬಗ್ಗೆ ಹೇಳಬೇಕೆಂದರೆ ಇದು ಕೇರಳ ರಾಜ್ಯದ ಮೂಲಕ ಕರ್ನಾಟಕ ಗಡಿಭಾಗದ ಮಾರ್ಗವಾಗಿ ಕಬಿನಿ ಜಲಾಶಯಕ್ಕೆ ಸೇರ್ಪಡೆಯಾಗುತ್ತಿದ್ದು ಹರಿಯುವ ಮಾರ್ಗದಲ್ಲಿ ಹಲವು ರೀತಿಯಲ್ಲಿ ಆಸರೆಯಾಗಿದೆ. ಕೇರಳದಲ್ಲಿ ಉತ್ತಮ ಮಳೆಯಾಗಿ ಅಂತರ್ಜಲ ಹೆಚ್ಚಳವಾಗಿ ಜಲಹುಟ್ಟಿದರೆ ನೀರು ಬೇಸಿಗೆಯಲ್ಲೂ ಬತ್ತದೆ ಹರಿಯುತ್ತದೆ. ಬಂಡೀಪುರ ಅರಣ್ಯಕ್ಕಾಗಿ ಹರಿಯುವ ಮೂಲೆ ಹೊಳೆಯನ್ನೇ ನಂಬಿ ಕಾಡಂಚಿನ ಗ್ರಾಮಗಳಾದ ಮದ್ದೂರು, ಮೂಲೆಹೊಳೆ. ಗಿರಿಜನಕಾಲೋನಿಯ ಜನತೆಯಿದ್ದಾರೆ.
ನೀರು ಕುಡಿದು ವನ್ಯಪ್ರಾಣಿಗಳ ಸಂಭ್ರಮ
ಅವರು ಇದೇ ಹೊಳೆಯ ನೀರನ್ನು ಬಳಸುತ್ತಾರೆ. ಮೂಲೆಹೊಳೆಯಲ್ಲಿ ನೀರು ಕಡಿಮೆಯಾದರೆ ಎಷ್ಟೊಂದು ಸಮಸ್ಯೆಯಾಗುತ್ತದೆ ಎಂಬುದು ಈ ಹಿಂದೆಯೇ ಅನುಭವಕ್ಕೆ ಬಂದಿದೆ. ನೀರು ಬತ್ತಿದ್ದರಿಂದ ವನ್ಯಪ್ರಾಣಿಗಳು ನೀರು ಹುಡುಕಿಕೊಂಡು ಹೋಗಿದ್ದವು. ಬೇಸಿಗೆ ಸಮಯದಲ್ಲಿ ವೈನಾಡು ವ್ಯಾಪ್ತಿಯಲ್ಲಿ ಹೊಳೆಗೆ ಅಡ್ಡಲಾಗಿ ಕಟ್ಟೆ ಕಟ್ಟಿ ನೀರನ್ನು ಕೃಷಿಗೆ ಬಳಸಿಕೊಳ್ಳುವುದರಿಂದ ಹೊಳೆಯಲ್ಲಿ ನೀರು ಹರಿಯುವುದು ಕಡಿಮೆಯಾಗುವುದರಿಂದ ಸಮಸ್ಯೆಯಾಗುತ್ತಿತ್ತು. ಆದರೆ ಇತ್ತೀಚೆಗೆ ಆ ಸಮಸ್ಯೆ ಎದುರಾಗದ ಕಾರಣ ಪ್ರಾಣಿ ಪಕ್ಷಿಗಳು ಖುಷಿಯಾಗಿವೆ.
ಮಳೆಗಾಲ ಪ್ರಾರಂಭವಾದ ನಂತರ ಮೂಲೆಹೊಳೆ ವಲಯದಲ್ಲಿರುವ ಸುಮಾರು 32 ಕೆರೆಗಳಿಗೂ ನೀರು ಹರಿದುಬರುತ್ತಿದೆ. ಇದರಿಂದ ಮುಂದಿನ ವರ್ಷದ ಬೇಸಿಗೆಯಲ್ಲಿ ನೀರಿಗೆ ಯಾವುದೇ ಸಮಸ್ಯೆಯಾಗದು ಎಂಬುದು ಪ್ರಾಣಿಪ್ರಿಯರ ಅಭಿಪ್ರಾಯವಾಗಿದೆ. ನದಿ ಹರಿಯುವ ಪ್ರದೇಶಗಳಾದ ಬಂಡೀಪುರ ಅರಣ್ಯದ ಮದ್ದೂರಿನಿಂದ ಮೂಲೆಹೊಳೆ ದಾಟುವವರೆಗೆ ಆನೆಗಳ ಹಿಂಡು, ಜಿಂಕೆಗಳ ಗುಂಪು ಹಾಗೂ ಕಾಡುಕೋಣಗಳು ಕಾಣಸಿಗುತ್ತಿವೆ.












Click it and Unblock the Notifications