ಬಂಡೀಪುರದಲ್ಲಿ ಪ್ರಾಣಿಗಳ ಸಾವಿಗೆ ಕಾರಣವೇನು?
ಚಾಮರಾಜನಗರ, ಫೆಬ್ರವರಿ 1: ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನದ ವ್ಯಾಪ್ತಿಯಲ್ಲಿ ವನ್ಯಪ್ರಾಣಿಗಳು ಒಂದರ ಮೇಲೊಂದರಂತೆ ವಿಭಿನ್ನ ರೀತಿಯಲ್ಲಿ ಸಾವನ್ನಪ್ಪುತ್ತಿದ್ದು ಇದಕ್ಕೆ ಬೇಸಿಗೆ ಮುನ್ನವೇ ಅರಣ್ಯದಲ್ಲಿ ಮೇವು ಮತ್ತು ನೀರಿನ ಕೊರತೆ ಕಾಣಿಸಿಕೊಂಡಿರುವುದೇ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ.
ಕಳೆದ ಮುಂಗಾರಿನಲ್ಲಿ ವಾಡಿಕೆಯ ಮಳೆಯಾಗಿಲ್ಲ ಪರಿಣಾಮ ಅರಣ್ಯ ವಲಯ ಕೆರೆಕಟ್ಟೆಗಳಲ್ಲಿ ನೀರಿಲ್ಲ. ಕೆಲವೆಡೆ ನೀಡು ಕಲುಷಿತಗೊಂಡಿದೆ. ಜತೆಗೆ ಅಂತರ್ಜಲದ ಕೊರತೆ, ಬಿಸಿಲಿನ ತಾಪಕ್ಕೆ ಒಣಗಿದ ಅರಣ್ಯ ಇದೆಲ್ಲದರ ಕಾರಣದಿಂದ ಪ್ರಾಣಿಗಳು ನೀರು ಮತ್ತು ಆಹಾರಕ್ಕಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಅಡ್ಡಾಡುವಂತಾಗಿದೆ.[ಬಂಡೀಪುರ ಸಫಾರಿಗಾಗಿ ಬಂತು ಪರಿಸರ ಸ್ನೇಹಿ ಬಸ್!]
ಮಾಂಸಹಾರಿ ಪ್ರಾಣಿಗಳು ಜಿಂಕೆ ಸೇರಿದಂತೆ ಇನ್ನಿತರ ಪ್ರಾಣಿಗಳನ್ನು ಹಿಡಿದು ತಿನ್ನುತ್ತಿದ್ದರೆ, ಹಸಿರು ಮೇವು ತಿಂದು ಬದುಕಬೇಕಾದ ಜಿಂಕೆಗಳು ಹಸಿವಿನಿಂದ ಬಳಲಬೇಕಾಗಿದೆ. ಕಾಡಾನೆಗಳು ಅರಣ್ಯ ಬಿಟ್ಟು ನಾಡಿನತ್ತ ಬರುತ್ತಿದ್ದು, ಕೆಲವು ವಿದ್ಯುತ್ ತಂತಿಗೆ ಸಿಕ್ಕಿ ಸಾಯುತ್ತಿವೆ.
ಕಾಡಾನೆ, ಕಾಡು ಕೋಣಗಳು ಹಸಿರು ಮೇವನ್ನೇ ತಿಂದು ಬದುಕುವ ಪ್ರಾಣಿಗಳು. ಹೀಗಿರುವಾಗ ಅರಣ್ಯ ಒಣಗಿ ನಿಂತಿದ್ದು ಅವುಗಳಿಗೆ ಮೇವು ಸಿಗದಂತಾಗಿದೆ. ಹೀಗಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ಆಹಾರ ಹುಡುಕಿಕೊಂಡು ಅಲೆಯುತ್ತಿವೆ. ಅರಣ್ಯ ಇಲಾಖೆಗಳ ಮೂಲಗಳ ಪ್ರಕಾರ, ಬಂಡೀಪುರದ ಅರಣ್ಯದ ಪ್ರದೇಶದ 13 ವಲಯಗಳಲ್ಲಿ ಸುಮಾರು 12 ವಲಯಗಳಲ್ಲಿ ಭೀಕರ ಬರದ ಛಾಯೆಯಿದೆಯಂತೆ. ಇದರಿಂದಾಗಿ ಬಹಳಷ್ಟು ಪ್ರಾಣಿಗಳು ಆಹಾರ ಮತ್ತು ನೀರು ಹುಡುಕಿಕೊಂಡು ಕಬಿನಿ ಹಿನ್ನೀರು ಪ್ರದೇಶವಲ್ಲದೆ, ಕೇರಳದ ಮುತ್ತಂಗ ಮತ್ತು ತಮಿಳುನಾಡಿನ ಮಧುಮಲೈ ಅರಣ್ಯ ಪ್ರದೇಶದ ಕಡೆಗೆ ವಲಸೆ ಹೋಗಿವೆ ಎನ್ನಲಾಗಿದೆ.
ಇದುವರೆಗೆ ಬಂಡೀಪುರ ಉದ್ಯಾನ ವ್ಯಾಪ್ತಿಯಲ್ಲಿ ಎರಡು ಆನೆಗಳು ಕುಂದಕೆರೆ ವಲಯದಲ್ಲಿ ಮೃತಪಟ್ಟಿದ್ದರೆ, ಗೋಪಾಲಸ್ವಾಮಿಬೆಟ್ಟ ವಲಯದ ಹಿರಿಕರೆಯಲ್ಲಿ, ಸಫಾರಿ ವಲಯದ ಸಮೀಪ ಕೊಳಕಮಲ್ಲಿಕಟ್ಟೆ ಬಳಿ, ಮೂಲೆಹೊಳೆ, ಓಂಕಾರ, ಹೆಡಿಯಾಲದ ಒಡೆಯನಪುರ ಬಳಿ ತಲಾ ಒಂದೊಂದರಂತೆ ಸುಮಾರು ಆರು ಕಾಡಾನೆಗಳು ಬೇರೆ ಬೇರೆ ರೀತಿಯಲ್ಲಿ ಸಾವನ್ನಪ್ಪಿದ್ದರೂ ಇವು ಮೇವಿನ ಕೊರತೆಯಿಂದ ತಮ್ಮ ಸ್ಥಳ ಬಿಟ್ಟು ಹೊರಗೆ ಬಂದಿದ್ದರಿಂದ ಸಾವನ್ನಪ್ಪಿವೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ.
ಮದ್ದೂರು ಮೊಳೆಯೂರು ವಲಯದಲ್ಲಿ ಒಂದು ಹುಲಿ ಸಾವನ್ನಪ್ಪಿದೆ. ಅರಣ್ಯ ಕಚೇರಿ ಬಳಿಯೇ 2 ಕರಡಿಗಳು ನಾಲ್ಕು ದಿನಗಳ ಅಂತರದಲ್ಲಿ ಮೃತಪಟ್ಟಿವೆ. ಒಂದೆಡೆ ಅರಣ್ಯದಲ್ಲಿ ಮೇವು ಸಿಗದೆ ಕಾಡುಪ್ರಾಣಿಗಳು ಹೊರಗೆ ಬರುತ್ತಿದ್ದರೆ ಮತ್ತೊಂದೆಡೆ ಅರಣ್ಯದಂಚಿನ ರೈತರು ತಾವು ಬೆಳೆದ ಬೆಳೆಯನ್ನು ಈ ಕಾಡು ಪ್ರಾಣಿಗಳಿಂದ ರಕ್ಷಿಸಿಕೊಳ್ಳಲು ಹೆಣಗಾಡುತ್ತಿದ್ದಾನೆ. ಆತ ಕೆಲವೊಮ್ಮೆ ಅಕ್ರಮವಾಗಿ ವಿದ್ಯುತ್ ಹರಿಸಿ ಪ್ರಾಣಿಗಳ ಸಾವಿಗೂ ಕಾರಣನಾಗುತ್ತಿದ್ದಾನೆ. ಒಟ್ಟಾರೆ ಈ ಬಾರಿ ಮಾನವ ಮತ್ತು ವನ್ಯ ಪ್ರಾಣಿಗಳ ನಡುವೆ ಸಂಘರ್ಷ ಹೆಚ್ಚಾಗುವ ಸಾಧ್ಯತೆಯಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.