ಆಲತ್ತೂರಿನಲ್ಲಿ ಕಾಡಾನೆ ದಾಳಿ: ಓರ್ವ ಮಹಿಳೆ ಬಲಿ, ಮೂವರು ಪಾರು
ಗುಂಡ್ಲುಪೇಟೆ, ಅಕ್ಟೋಬರ್.29: ಕಾಡಾನೆ ದಾಳಿ ಮಾಡಿದ ಪರಿಣಾಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಮಹಿಳೆ ಸಾವನ್ನಪ್ಪಿರುವ ಘಟನೆ ತಾಲೂಕಿನ ಆಲತ್ತೂರು ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ.
ಕಾರ್ಮಿಕ ಮಹಿಳೆ ಚಿಕ್ಕತಾಯಮ್ಮ (56) ಕಾಡಾನೆ ದಾಳಿಗೆ ಬಲಿಯಾದ ನತದೃಷ್ಟೆ. ಬಂಡೀಪುರ ಹುಲಿಯೋಜನೆಯ ಓಂಕಾರ್ ವಲಯದ ಕಾಡಂಚಿನ ಆಲತ್ತೂರು ಗ್ರಾಮದ ಕರಿಯಶೆಟ್ಟಿ ಎಂಬುವವರು ಬೆಳೆದಿದ್ದ ಹತ್ತಿ ಜಮೀನಿನಲ್ಲಿ ಚಿಕ್ಕತಾಯಮ್ಮ ಸೇರಿದಂತೆ ನಾಲ್ವರು ಮಹಿಳಾ ಕಾರ್ಮಿಕರು ಕೆಲಸ ಮಾಡುವಾಗ ಹಠಾತ್ ಆಗಿ ಕಾಡಾನೆ ಚಿಕ್ಕತಾಯಮ್ಮ ಅವರ ಮೇಲೆ ದಾಳಿ ಮಾಡಿದೆ.
ಈ ಸಂದರ್ಭದಲ್ಲಿ ಚಿಕ್ಕತಾಯಮ್ಮ ಗಂಭೀರ ಗಾಯಗೊಂಡು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಆದರೆ ಕಾಡಾನೆ ಬರುತ್ತಿದ್ದಂತೆಯೇ ಇತರೆ ಮೂವರು ಕಾರ್ಮಿಕ ಮಹಿಳೆಯರು ಓಡಿ ಹೋಗಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ರೈತರು ಹಾಗೂ ಗ್ರಾಮಸ್ಥರು ಆಗಮಿಸಿ ಅರಣ್ಯ ಇಲಾಖೆಯ ವಿರುದ್ಧ ತೀವ್ರ ಆಕ್ರೋಶವ್ಯಕ್ತಪಡಿದರು. ಕಾಡಂಚಿನಲ್ಲಿ ಅಳವಡಿಸಿದ್ದ ಸೋಲಾರ್ ಬೇಲಿ ಹಲವಾರು ವರ್ಷದ ಹಿಂದೆಯೇ ದುಸ್ಥಿತಿಗೀಡಾಗಿದ್ದು, ಇದರಿಂದ ಪ್ರತಿ ದಿನವೂ ವನ್ಯಜೀವಿಗಳು ಅರಣ್ಯದಿಂದ ಹೊರಬರುತ್ತಿವೆ.
ರೈತರ ಜಮೀನುಗಳಿಗೆ ದಾಳಿ ಮಾಡಿ ಕಷ್ಟಪಟ್ಟು ಬೆಳೆದ ಬೆಳೆಗಳನ್ನು ನಾಶಪಡಿಸುತ್ತಿವೆ. ಈ ಬಗ್ಗೆ ಹಲವಾರು ಬಾರಿ ಮನವಿ ಮಾಡಿದ್ದರೂ ಸೋಲಾರ್ ಬೇಲಿ ದುರಸ್ತಿ ಹಾಗೂ ಕಂದಕ ನಿರ್ಮಿಸಿಲ್ಲ ಎಂದು ಅರಣ್ಯ ಇಲಾಖೆ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದರು.

ಬೇಗೂರು ಠಾಣೆಯ ಪಿಎಸ್ಐ ಲೋಹಿತ್ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ತೆರಳಿ ಆಕ್ರೋಶಗೊಂಡ ಜನರನ್ನು ಸಮಾಧಾನಗೊಳಿಸಿದರು.












Click it and Unblock the Notifications