ಚಾಮರಾಜನಗರದ ಬೇಗೂರಲ್ಲಿ ಪೊಲೀಸ್ ಪೇದೆ ನೇಣಿಗೆ ಶರಣು
ಸೋಮವಾರ ಬೆಳಿಗ್ಗೆ 6 ಘಂಟೆ ಸಮಯದಲ್ಲಿ ಪೊಲೀಸ್ ಠಾಣೆಯ ಮುಂಭಾಗದಿಂದ ಪೊಲೀಸ್ ವಸತಿ ಗೃಹದವರೆಗೂ ಅಳುತ್ತಾ ತೆರಳಿದ್ದನ್ನು ನೋಡಿದವರಿದ್ದಾರೆ. ಏನಾಯಿತೆಂದು ವಿಚಾರಿಸುವ ಹೊತ್ತಿಗೇ ಆತ ನೇಣಿಗೆ ಶರಣಾಗಿದ್ದ.
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೇಗೂರಿನ ಪೊಲೀಸ್ ಪೇದೆಯೊಬ್ಬ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಪೊಲೀಸ್ ಇಲಾಖೆಯಲ್ಲಿ ಇಂಥ ಪ್ರಕರಣ ಹೆಚ್ಚಾಗಿದ್ದು, ಇದಕ್ಕೆ ಕಾರಣ ಮೇಲಧಿಕಾರಿಗಳ ಕಿರುಕುಳ ಎನ್ನಲಾಗುತ್ತಿದೆ.
ಮೂಲತಃ ತಾಲೂಕಿನ ಕಬ್ಬಹಳ್ಳಿ ಗ್ರಾಮದ ನಿವಾಸಿ ಪೇದೆ ಪ್ರಸಾದ್ (31) ನೇಣಿಗೆ ಶರಣಾದ ದುರ್ದೈವಿ. 2008ರಲ್ಲಿ ಪೊಲೀಸ್ ಇಲಾಖೆಗೆ ಸೇರ್ಪಡೆಯಾಗಿ ಯಳಂದೂರು ಠಾಣೆಯಲ್ಲಿ ಕಾರ್ಯ ನಿರ್ವಹಿಸಿದ ನಂತರ ಇತ್ತೀಚೆಗೆ ಬೇಗೂರು ಠಾಣೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಕಳೆದ 3 ತಿಂಗಳಿನಿಂದ ಬೇಗೂರು ಠಾಣೆಯಲ್ಲಿ ವಿಶೇಷ ಪೇದೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಇವರಿಗೆ ಒಬ್ಬ ಪುಟ್ಟ ಮಗಳಿದ್ದಾಳೆ.
ಭಾನುವಾರ ಸಂಜೆವರೆಗೂ ಎಲ್ಲರ ಜೊತೆ ಚೆನ್ನಾಗಿ ಮಾತನಾಡಿದ್ದ ಪ್ರಸಾದ್ ರಾತ್ರಿ ಫೋನ್ ಸ್ವಿಚ್ಆಫ್ ಮಾಡಿಕೊಂಡಿದ್ದ ಎನ್ನಲಾಗಿದೆ. ಸೋಮವಾರ ಬೆಳಿಗ್ಗೆ 6 ಘಂಟೆ ಸಮಯದಲ್ಲಿ ಪೊಲೀಸ್ ಠಾಣೆಯ ಮುಂಭಾಗದಿಂದ ಪೊಲೀಸ್ ವಸತಿ ಗೃಹದವರೆಗೂ ಅಳುತ್ತಾ ತೆರಳಿದ್ದನ್ನು ನೋಡಿದವರಿದ್ದಾರೆ. ಏನಾಯಿತೆಂದು ವಿಚಾರಿಸುವ ಹೊತ್ತಿಗೇ ಆತ ನೇಣಿಗೆ ಶರಣಾಗಿದ್ದ.
ಪ್ರಸಾದ್ ಸಾವಿಗೆ ಮೇಲಾಧಿಕಾರಿಗಳ ಕಿರುಕುಳವೇ ಕಾರಣ ಎನ್ನುವುದು ಸಂಬಂಧಿಕರ ಆರೋಪ. ಆತನ ಸಾವಿಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ರಸ್ತೆ ತಡೆ ಮತ್ತು ಪೊಲೀಸ್ ಠಾಣೆಯ ಆವರಣದಲ್ಲಿ ಶವವನ್ನಿಟ್ಟು ಪ್ರತಿಭಟನೆ ನಡೆಸಲಾಗಿದೆ.
ಕಳ್ಳಸಾಗಣೆ ತಡೆದಿದ್ದೇ ಜೀವಕ್ಕೆ ಮುಳುವಾಯ್ತಾ?
ಕಳೆದ ಸೋಮವಾರ ಕಸಾಯಿಖಾನೆಗೆ ಸಾಗಿಸುತ್ತಿದ್ದ 7 ಕರುಗಳನ್ನು ಪ್ರಸಾದ್ ಆಟೋ ಸಮೇತ ವಶಕ್ಕೆ ಪಡೆದು ಪ್ರಕರಣ ದಾಖಲಾಗಲು ಕಾರಣರಾಗಿದ್ದರು. ಈ ದಂಧೆಯಲ್ಲಿ ತೊಡಗಿರುವ ಕೆಲವರು ಪ್ರಸಾದ್ ಗೆ ದೂರವಾಣಿ ಮೂಲಕ ಧಮ್ಕಿ ಹಾಕಿದ್ದರು ಎನ್ನಲಾಗಿದೆ. ಮೇಲಧಿಕಾರಿಗಳ ಮೂಲಕ ಪ್ರಭಾವ ಬೀರಿ ಪ್ರಸಾದ್ ರನ್ನು ಹೆದರಿಸಲಾಗಿತ್ತಾ? ಇದೇ ಅವರ ಜೀವಕ್ಕೆ ಮುಳುವಾಯ್ತಾ ಎಂಬೆಲ್ಲ ಅನುಮಾನಗಳು ಅವರ ಸಅವಿನ ಸುತ್ತ ಎದ್ದಿವೆ.