ಹನೂರು: ಕಾಡಾನೆ ತುಳಿತಕ್ಕೆ ಗಿರಿಜನ ಯುವಕ ಬಲಿ
ಹನೂರು, ನವೆಂಬರ್ 6: ಕಾಡಂಚಿನ ಗ್ರಾಮದ ಜಮೀನಿನಲ್ಲಿ ಬೆಳೆ ನಾಶಪಡಿಸಿದ ಮಗಲಗಿದ್ದ ಗಿರಿಜನ ಯುವಕನ ಮೇಲೆ ಕಾಡಾನೆ ಮಧ್ಯರಾತ್ರಿ ದಾಳಿ ನಡೆಸಿ ಯುವಕನನ್ನು ತುಳಿದು ಕೊಂದಿರು ಘಟನೆ ಮಹದೇಶ್ವರ ಅರಣ್ಯ ವಲಯಕ್ಕೆ ಸೇರಿದ ಹೊಸಪಾಳ್ಯದಲ್ಲಿ ನಡೆದಿದೆ.
ಕೊಳ್ಳೇಗಾಲ ತಾಲ್ಲೂಕಿನ ಬಯಲೂರು ಗ್ರಾಮ ಪಂಚಾಯಿತಿಗೆ ಸೇರಿದ ಹೊಸ ಪಾಳ್ಯ ಗ್ರಾಮದ ಜಡೇಗೌಡ(23) ಎಂಬ ಗಿರಿಜನ ಯುವಕ ಮೃತಪಟ್ಟ ದುರ್ದೈವಿ.

ಜಡೇಗೌಡ ಎಂದಿನಂತೆ ಪ್ರತಿನಿತ್ಯ ತನ್ನ ಜಮೀನಿನಲ್ಲಿ ಬೆಳೆ ಕಾಯುವ ಸಲುವಾಗಿ ತನ್ನ ಸ್ನೇಹಿತರಿಬ್ಬರೊಂದಿಗೆ ಮಲಗಿದ್ದನು. ಈ ಸಂದರ್ಭ ಕಾಡಿನಿಂದ ಬಂದ ಕಾಡಾನೆಯೊಂದು ಜಮೀನಿನಲ್ಲಿ ಬೆಳೆದ ಮೆಕ್ಕೆ ಜೋಳವನ್ನು ತಿಂದು ಫಸಲನ್ನು ನಾಶ ಮಾಡಿದೆ.
ನಂತರ ಜಡೇಗೌಡನ ಮೇಲೆ ದಾಳಿ ಮಾಡಿ ತುಳಿದ ಪರಿಣಾಮ ಆತ ಸ್ಥಳದ್ಲಲೇ ಸಾವನ್ನಪ್ಪಿದ್ದಾನೆ. ಜಡೇಗೌಡನ ಜತೆಯಲ್ಲಿದ್ದ ಇನ್ನಿಬ್ಬರು ಕಾಡಾನೆ ದಾಳಿಯಿಂದ ತಪ್ಪಿಸಿಕೊಂಡು ಗ್ರಾಮಕ್ಕೆ ಬಂದು ಸುದ್ದಿ ಮುಟ್ಟಿಸಿದರು.
ವಿಷಯ ತಿಳಿದ ಜಡೇಗೌಡ ಕುಟುಂಬದವರು ಮತ್ತು ಗ್ರಾಮಸ್ಥರು ಸ್ಥಳಕ್ಕೆ ಆಗಮಿಸಿ ಮೃತನಾದ ಜಡೇಗೌಡನ ಶವ ಮುಂದೆ ರೋಧಿಸಿದರು. ಆನೆಗಳ ಉಪಟಳಕ್ಕೆ ಕೊನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ಕಾಡಾನೆ ತುಳಿತಕ್ಕೊಳಗಾಗಿರುವ ವಿಚಾರ ತಿಳಿದು ಸ್ಥಳಕ್ಕೆ ಅರಣ್ಯ ಇಲಾಖೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು. ಈ ಸಂದರ್ಭ ವಲಯ ಅರಣ್ಯಾಧಿಕಾರಿ ಅನುಪಮ ಅವರು ಮೃತನ ಕುಟುಂಬದವರನ್ನು ಸಂತೈಸುತ್ತಿದ್ದ ಸಂದರ್ಭ ಆಕ್ರೋಶಗೊಂಡ ಕೆಲವರು ಅವರ ಮೇಲೆ ಹಲ್ಲೆ ಮಾಡಿದ್ದಲ್ಲದೆ, ಕಾಡಿನೊಳಗೆ ಶವದ ಬಳಿ ಹೋಗಲು ಬಿಡಲಿಲ್ಲ ಇದರಿಂದ ಗ್ರಾಮದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಬಳಿಕ ಪೊಲೀಸರು ಮತ್ತು ಶಾಸಕ ಆರ್. ನರೇಂದ್ರರವರ ಸ್ಥಳಕ್ಕೆ ಆಗಮಿಸಿ ಜನರನ್ನು ಸಮಾಧಾನಪಡಿಸಿದ್ದರಿಂದ ಬಿಗುವಿನ ವಾತಾವರಣ ತಿಳಿಯಾಯಿತು.












Click it and Unblock the Notifications