ಚಾಮರಾಜನಗರ: ಸರ್ಕಾರಿ ಆಸ್ಪತ್ರೆ ಚುಚ್ಚುಮದ್ದಿಗೆ ಕಂದಮ್ಮ ಬಲಿ.!
ಸರ್ಕಾರಿ ಆಸ್ಪತ್ರೆಯ ಅವ್ಯವಸ್ಥೆ ಹಿಡಿದ ಕನ್ನಡಿ ಎಂಬಂತೆ, ಆಸ್ಪತ್ರೆ ವೈದ್ಯರು ನೀಡಿದ ಲಸಿಕೆಗೆ ಒಂದೂವರೆ ತಿಂಗಳ ಹಸಿಗೂಸು ಸಾವನ್ನಪ್ಪಿರುವ ಘಟನೆ ಚಾಮರಾಜನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.
ಚಾಮರಾಜನಗರ, ನವೆಂಬರ್, 27: ಜಿಲ್ಲಾಸ್ಪತ್ರೆಯಲ್ಲಿ ಒಂದೂವರೆ ತಿಂಗಳ ಹಸುಗೂಸಿಗೆ ನೀಡಿದ ಚುಚ್ಚುಮದ್ದಿನ ಪರಿಣಾಮ ಮುದ್ದು ಕಂದಮ್ಮ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ತಾಲೂಕಿನ ಹೆಬ್ಬಸೂರು ಗ್ರಾಮದ ಮಹೇಶ್ ಮತ್ತು ಮಮತಾರವರಿಗೆ ಜನಿಸಿದ ಮಗುವಿಗೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಮಗುವಿನ ಜನನ ಬಳಿಕ ನೀಡುವ ಚುಚ್ಚುಮದ್ದುನಿಂದ ರಕ್ತ ಸಾವ್ರ ಅಧಿಕವಾಗಿ ಕೊನೆಯುಸಿರೆಳೆದಿದೆ.
ನ.21 ರಂದು ಮಗುವಿನೊಂದಿಗೆ ಹೆಬ್ಬಸೂರಿನಿಂದ ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಬಂದ ಮಮತಾ ಮತ್ತು ಮಹೇಶ್ ದಂಪತಿ ಮಗುವಿಗೆ ಚುಚ್ಚು ಮದ್ದು ಕೊಡಿಸಿದ್ದಾರೆ. ಆಗ ಮಗುವಿನ ಚುಚ್ಚು ಮದ್ದು ನೀಡಿದ ಸ್ಥಳದಲ್ಲಿ ರಕ್ತಸ್ರಾವವಾಯಿತು.

ಇದನ್ನು ಕಂಡ ಪೋಷಕರು ವಿಚಾರಿಸಿದಾಗ ಮಗುವಿಗೆ ಚುಚ್ಚು ಮದ್ದು ನೀಡಿದ ವೇಳೆ ರಕ್ತಸ್ರಾವವಾಗುತ್ತೆ ತಣ್ಣೀರಿನ ಬಟ್ಟೆ ಕಟ್ಟುತ್ತೇವೆ ರಕ್ತ ನಿಲ್ಲುತ್ತದೆ ಎಂದು ಬಟ್ಟೆ ಕಟ್ಟಿ ಕಳುಹಿಸಿದ್ದಾರೆ.
ಆದರೂ ಕೂಡ ಮಗುವಿಗೆ ರಕ್ತಸ್ರಾವ ನಿಲ್ಲಲಿಲ್ಲ. ಇದರಿಂದ ಗಾಬರಿಯಾದ ಹೆತ್ತವರು, ಸಮೀಪದ ಆಲೂರು ಸರ್ಕಾರಿ ಪ್ರಾಥಮಿಕ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆದ ಬಳಿಕ ನಂತರ ಜಿಲ್ಲಾಸ್ಪತ್ರೆಗೆ ದೌಡಾಯಿಸಿದರು. ಆಗ ಅಲ್ಲಿನ ವೈದ್ಯರು ಮಗುವಿನ ಪರಿಸ್ಥಿತಿ ಕಂಡು, ಕೂಡಲೇ ಮೈಸೂರಿನ ಕೆ.ಆರ್.ಆಸ್ಪತ್ರೆಯ ಚೆಲುವಾಂಬ ಆಸ್ಪತ್ರೆಗೆ ಕಳುಹಿಸಿ ಕೈ ತೊಳೆದುಕೊಂಡರು.
ಮೈಸೂರಿನ ಕೆ.ಆರ್. ಆಸ್ಪತ್ರೆಯ ಚೆಲುವಾಂಬ ಆಸ್ಪತ್ರೆಯಲ್ಲಿ ವೈದ್ಯರು ನೀಡಿದ ಚಿಕಿತ್ಸೆ ಫಲಕಾರಿಯಾಗದೆ ಒಂದೂವರೆ ತಿಂಗಳ ಹಸಗೂಸು ಸಾವನ್ನಪ್ಪಿದೆ. ಆದರೆ ಅಲ್ಲಿನ ವೈದ್ಯರು ಮಗುವಿಗೆ ಚಿಕಿತ್ಸೆ ನೀಡಿದ ವಿವರಗಳನ್ನು ಪೋಷಕರಿಗೆ ನೀಡದೆ ಇರುವುದು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಹೇಶ್ ಚಾಮರಾಜನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕುಲದೀಪ್ಕುಮಾರ್ ಆರ್.ಜೈನ್ರವರಿಗೆ ದೂರು ನೀಡಿ, ಮಗುವಿನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿ, ತಪ್ಪಿತಸ್ಥ ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೇಲೆ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.
ಈ ನಡುವೆ ಚಾಮರಾಜನಗರ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ರಘುರಾಮ್ ಪ್ರಕರಣಕ್ಕೆ ಸಂಭಂಧಿಸಿದಂತೆ ತನಿಖೆ ನಡೆಸಲು ಸಮತಿಯೊಂದನ್ನು ರಚಿಸಿ ತಪ್ಪಿತಸ್ಥರನ್ನು ಕಾನೂನಿನ ಪ್ರಕಾರ ಕ್ರಮವಹಿಸುವುದಾಗಿ ಪೋಷಕರಿಗೆ ಭರವಸೆ ನೀಡಿದ್ದಾರೆ.












Click it and Unblock the Notifications