ಚಾಮರಾಜನಗರದಲ್ಲಿ ಮಳೆ ಆರ್ಭಟಕ್ಕೆ 47 ಗ್ರಾಮಗಳು ತತ್ತರ; ಆದರೂ 19 ಕೆರೆಗಳು ಖಾಲಿ-ಖಾಲಿ!
ಚಾಮರಾಜನಗರ, ಆಗಸ್ಟ್, 04: ಕಳೆದ ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ ಭಾರಿ ಮಳೆ ಸುರಿದಿದೆ. ಜಿಲ್ಲೆಯ ಕೆಲವು ಭಾಗಗಳಲ್ಲಿ ಅತಿವೃಷ್ಟಿ ಸಂಭವಿಸಿದರೆ, ಮತ್ತೊಂದೆಡೆ ಅನಾವೃಷ್ಟಿಯ ರೀತಿಯಲ್ಲಿ ಕೆರೆಗಳು ಖಾಲಿ-ಖಾಲಿ ಹೊಡೆಯುತ್ತಿವೆ.
ಆ. 25ರಿಂದ ಸೆಪ್ಟೆಂಬರ್ 1ರವರೆಗೆ ಮಳೆ ಹಾನಿ
ಚಾಮರಾಜನಗರ ಜಿಲ್ಲಾದ್ಯಂತ ಆಗಸ್ಟ್ 25ರಿಂದ ಸೆಪ್ಟೆಂಬರ್ 1ರವರೆಗೆ ಸುರಿದ ಮಳೆಯಿಂದ ಯಳಂದೂರು, ಕೊಳ್ಳೇಗಾಲ ತಾಲ್ಲೂಕುಗಳ 47 ಗ್ರಾಮಗಳು ನಲುಗಿ ಹೋಗಿವೆ. ಆಗಸ್ಟ್ 25ರಿಂದ ಸೆಪ್ಟೆಂಬರ್ 1ರ ನಡುವಿನ ಅವಧಿಯಲ್ಲಿ ಜಿಲ್ಲೆಯಲ್ಲಿ 1.9 ಸೆ.ಮೀ. ವಾಡಿಕೆ ಮಳೆ ಆಗಿದ್ದು, ಈ ವರ್ಷ ಒಟ್ಟು 11.4 ಸೆ.ಮೀಟರ್ನಷ್ಟು ಮಳೆ ದಾಖಲಾಗಿದೆ.
ಮಲೆ ಮಹದೇಶ್ವರ ಬೆಟ್ಟಕ್ಕೆ ಭಾರಿ ವಾಹನಗಳ ಸಂಚಾರಕ್ಕೆ ನಿರ್ಬಂಧ
ಮಳೆರಾಯನ ಆರ್ಭಟಕ್ಕೆ ಜನರು ತತ್ತರ
ಏಳು ದಿನಗಳ ಅವಧಿಯಲ್ಲಿ 346 ಮನೆಗಳು ಭಾಗಶಃ ಹಾನಿಗೀಡಾಗಿವೆ. ಐದು ಮನೆಗಳು ಸಂಪೂರ್ಣವಾಗಿ ನಾಶ ಆಗಿವೆ. 9 ಜಾನುವಾರುಗಳು ಮೃತ ಪಟ್ಟಿವೆ. ಇನ್ನು ಗುಂಡ್ಲುಪೇಟೆ ತಾಲೂಕಿನಲ್ಲಿ 1,300 ಕೋಳಿ ಮರಿಗಳು ಅಸುನೀಗಿವೆ. ಮಳೆ ಹಾಗೂ ನೆರೆಯಿಂದಾಗಿ 143 ಕಿಲೋ ಮೀಟರ್ನಷ್ಟು ರಸ್ತೆ ಹಾಳಾಗಿದೆ. ಈಗಾಗಲೇ ಗ್ರಾಮೀಣ ರಸ್ತೆಗಳ ವಿವರವನ್ನು ಕಲೆ ಹಾಕಲು ಅಧಿಕಾರಿಗಳು ಮುಂದಾಗಿದ್ದಾರೆ. 1,731 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಬೆಳೆಗಳು ಜಲಾವೃತವಾಗಿವೆ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.
ತೋಟಗಾರಿಕೆ ಬೆಳೆಗಳು ಜಲಾವೃತ
350 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ತೋಟಗಾರಿಕಾ ಬೆಳೆಗಳು ಜಲಾವೃತವಾಗಿದ್ದು, 126 ಹೆಕ್ಟೇರ್ನಷ್ಟು ಬೆಳೆಗಳು ನಷ್ಟವಾಗಿದೆ. 16 ಸೇತುವೆ ಮತ್ತು ಮೋರಿಗಳು ಕುಸಿದಿವೆ. 35 ಅಂಗನವಾಡಿ ಕಟ್ಟಡಗಳು, 77 ಶಾಲೆಗಳು, 11 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾನಿಗೀಡಾಗಿವೆ. 31 ವಿದ್ಯುತ್ ಕಂಬಗಳು ಮುರಿದಿವೆ. ಎರಡು ವಿದ್ಯುತ್ ಪರಿವರ್ತಕಗಳು ಹಾಳಾಗಿವೆ. ಲೋಕೋಪಯೋಗಿ ಇಲಾಖೆಗೆ ಸೇರಿದ ಆರು ಕಟ್ಟಡಗಳು ಭಾಗಶಃ ಹಾನಿಗೀಡಾಗಿವೆ. ಯಳಂದೂರು ತಾಲೂಕಿನ ಕೆಸ್ತೂರು, ಗುಂಬಳ್ಳಿ, ಗಣಿಗನೂರು, ಯರಗಂಬಳ್ಳಿ ಕೆರೆಗಳು ಹಾಗೂ ಚಾಮರಾಜನಗರ ತಾಲೂಕಿನ ಮಂಗಲ ಗ್ರಾಮದ ಯಡಿಯೂರು ಹೊಸ ಕೆರೆಗೆ ಹಾನಿ ಆಗಿದೆ.
ಕರ್ನಾಟಕದಲ್ಲಿ ಮುಂದಿನ ಮೂರು ದಿನ ಭಾರಿ ಮಳೆ ನಿರೀಕ್ಷೆ!
ಮಳೆ ಬಂದರೂ ಬತ್ತಿಹೋದ 19 ಕೆರೆಗಳು
ಮಳೆಯಿಂದಾಗಿರುವ ಹಾನಿಯ ಬಗ್ಗೆ ಪ್ರಾಥಮಿಕ ಅಂದಾಜು ಮಾಡಲಾಗಿದ್ದು, ನಿಖರ ಮಾಹಿತಿಗಾಗಿ ಜಂಟಿ ಸಮೀಕ್ಷೆ ನಡೆಸಲಾಗುತ್ತಿದೆ.
ಕೆಲವು ಕಡೆ 20 ವರ್ಷಗಳ ಕೆರೆಕಟ್ಟೆಗಳ ಕೋಡಿ ಬಿದ್ದಿವೆ. ಮತ್ತೊಂದೆಡೆ 30 ವರ್ಷಗಳ ಬಳಿಕ ಕೆರೆಕಟ್ಟೆಗಳ ಕೋಡಿ ಬಿದ್ದಿವೆ. ಆದರೆ ಇನ್ನು ಕೂಡ ಜಿಲ್ಲೆಯ 19 ಕೆರೆಗಳು ಒಣಗಿವೆ ಎಂದು ಸಣ್ಣ ನೀರಾವರಿ ಇಲಾಖೆಯು ಮಾಹಿತಿ ನೀಡಿದೆ. ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಗೆ ಒಳಪಡುವ ಜಿಲ್ಲೆಯ 64 ಕೆರೆಗಳಲ್ಲಿ 27 ಕೆರೆಗಳು ಪೂರ್ಣವಾಗಿ ತುಂಬಿವೆ.
ಶೇಕಡಾ 30ರಷ್ಟು 6 ಕೆರೆಗಳು, ಶೇಕಡಾ 50ರಷ್ಟು 1 ಕೆರೆ, ಶೇಕಡಾ 50-99ರಷ್ಟು 11 ಕೆರೆಗಳು ಭರ್ತಿಯಾಗಿದ್ದು, 19 ಕೆರೆಗಳು ಹನಿ ನೀರಿಲ್ಲದೇ ಒಣಗಿವೆ. 19 ಕೆರೆಗಳಲ್ಲಿ ಗುಂಡ್ಲುಪೇಟೆ ತಾಲೂಕಿನಲ್ಲಿ 11, ಚಾಮರಾಜನಗರ, ಯಳಂದೂರಿನಲ್ಲಿ ತಲಾ 1 ಮತ್ತು ಹನೂರು ತಾಲೂಕಿನಲ್ಲಿ 6 ಕೆರೆಗಳು ಖಾಲಿ ಆಗಿವೆ ಎಂದು ನೀರಾವರಿ ಇಲಾಖೆ ಮಾಹಿತಿ ನೀಡಿದೆ.
ಅಧಿಕಾರಿಗಳಿಗೆ ಸಚಿವ ಸೋವಣ್ಣ ಹೇಳಿದ್ದೇನು?
ಜಿಲ್ಲೆಯಲ್ಲಿ ಮಳೆ ಹಾಗೂ ಪ್ರವಾಹದಿಂದ ಉಂಟಾದ ಹಾನಿಗೆ ಪರಿಹಾರ ಕ್ರಮ ಹಾಗೂ ಪುನರ್ವಸತಿ ಒದಸುವ ಕಾರ್ಯ ಆಗಬೇಕು ಎಂದು ಅಧಿಕಾರಿಗಳಿಗೆ ವಸತಿ ಸಚಿವ ವಿ. ಸೋಮಣ್ಣ ಸೂಚಿಸಿದರು. ಮಳೆಹಾನಿ ಹಾಗೂ ಪ್ರವಾಹದಿಂದ ಹಾನಿಗೊಳಗಾದ ಪ್ರದೇಶಗಳಲ್ಲಿ ಕೈಗೊಂಡ ಹಾಗೂ ಕೈಗೊಳ್ಳಬೇಕಿರುವ ಪರಿಹಾರ ಕ್ರಮಗಳ ಕುರಿತು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಆಗಿದೆ. ಪ್ರವಾಹ, ಪ್ರಕೃತಿ ವಿಕೋಪಗಳಿಂದ ಜನರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಸಾಕಷ್ಟು ತೊಂದರೆ ಆಗಿದೆ. ಬೆಳೆ, ಮನೆಗಳಿಗೆ ಸಾಕಷ್ಟು ಹಾನಿಯಾಗಿ ಜನರು ಆತಂಕದಲ್ಲಿದ್ದಾರೆ. ಶಾಲೆ, ರಸ್ತೆ ಮೂಲ ಸೌಕರ್ಯಗಳಿಗೂ ಧಕ್ಕೆ ಆಗಿದೆ. ನಷ್ಟದ ಕುರಿತು ವ್ಯಾಪಕವಾಗಿ ಸಮೀಕ್ಷೆ ಕೈಗೊಂಡು ನಿಖರ ಅಂಕಿ ಅಂಶಗಳನ್ನು ಒದಗಿಸಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಹಾನಿಗೀಡಾದ ಮನೆಗಳಿಗೆ, ಬೆಳೆಗಳನ್ನು ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಒದಗಿಸುವಾಗ ಮಾನವೀಯ ನೆಲೆಯಲ್ಲಿ ನೋಡಬೇಕು. ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಆಯಾ ಭಾಗದಲ್ಲಿ ಉಂಟಾಗಿರುವ ಹಾನಿಯ ಬಗ್ಗೆ ಹೆಚ್ಚು ಮಾಹಿತಿ ಇರುತ್ತದೆ. ವಿವಿಧ ಇಲಾಖೆಗಳ ಅಧಿಕಾರಿಗಳು ಸಹಕಾರ ಸಮನ್ವಯದಿಂದ ಸಮಗ್ರ ಮಾಹಿತಿ ಸಂಗ್ರಹಿಸಬೇಕು. ಹಾಗೂ ಖುದ್ದು ಪರಿಶೀಲಿಸಿ ಅರ್ಹರೆಲ್ಲರಿಗೂ ಪರಿಹಾರ ತಲುಪಿಸಬೇಕು ಎಂದು ಅಧಿಕಾರಿಗಳನ್ನು ಎಚ್ಚರಿಸಿದರು.