ಸತ್ಯಮಂಗಲ ಅರಣ್ಯದ ರಸ್ತೆಯಲ್ಲಿ ಚಿರತೆಗಳ ಚಿನ್ನಾಟ!
ಚಾಮರಾಜನಗರ, ಜುಲೈ 22 : ಬಂಡೀಪುರ ಅರಣ್ಯದೊಳಗೆ ಹಾದು ಹೋಗಿರುವ ರಸ್ತೆಗಳ ಬಳಿ ಕಾಡಾನೆ, ಚಿರತೆ, ಹುಲಿ ಹೀಗೆ ಹಲವು ಪ್ರಾಣಿಗಳು ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ, ಚಾಮರಾಜನಗರ-ಸತ್ಯಮಂಗಲ ನಡುವಿನ ರಸ್ತೆಯಲ್ಲಿ ಎರಡು ಚಿರತೆಗಳು ವಾಹನ ಸವಾರರಲ್ಲಿ ಆತಂಕ ಮೂಡಿಸಿದ್ದವು.
ಚಾಮರಾಜನಗರ ಮತ್ತು ತಮಿಳುನಾಡಿನ ಸತ್ಯಮಂಗಲ ಅರಣ್ಯದ ನಡುವಿನ ಬಣ್ಣಾರಿ ಘಾಟ್ನ ರಾಷ್ಟ್ರೀಯ ಹೆದ್ದಾರಿ 209ರಲ್ಲಿ ಎರಡು ಚಿರತೆಗಳು ಚಿನ್ನಾಟವಾಡುತ್ತಾ ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ದೃಶ್ಯ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹಾಗೆ ನೋಡಿದರೆ ಬಣ್ಣಾರಿಘಾಟ್ ಹೆದ್ದಾರಿಯಲ್ಲಿ ಸಾಗುವುದು ಒಂದು ರೀತಿಯಲ್ಲಿ ಭಯ ಹುಟ್ಟಿಸುತ್ತದೆ. ಸುಮಾರು ಹದಿನೈದು ವರ್ಷದ ಹಿಂದೆ ಇಲ್ಲಿ ವೀರಪ್ಪನ್ ಭಯವಿತ್ತು. ಅದಾದ ನಂತರ ಕಳೆದೆರಡು ವರ್ಷಗಳ ಹಿಂದೆ ಚಿರತೆಗಳು ರಸ್ತೆಯಲ್ಲಿ ಸಾಗುತ್ತಿದ್ದವರ ಮೇಲೆ ದಾಳಿ ಮಾಡಿ ಇಬ್ಬರನ್ನು ಸಾಯಿಸಿದ್ದವು. ಇದೀಗ ಮತ್ತೆ ರಸ್ತೆ ನಡುವೆ ಪ್ರತ್ಯಕ್ಷವಾಗುವ ಮೂಲಕ ಭಯ ಹುಟ್ಟಿಸಿವೆ. ಚಿರತೆಗಳನ್ನು ನೋಡಿದ ಮೇಲೆ ಈ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳಲ್ಲಿ ಸಾಗುವವರು ಭಯಗೊಂಡಿದ್ದಾರೆ.

ಚಾಮರಾಜನಗರದಿಂದ ಸತ್ಯಮಂಗಲಕ್ಕೆ ತೆರಳುವಾಗ ಅರಣ್ಯದ ನಡುವೆ ಬಣ್ಣಾರಿ ಘಾಟ್ ಇದ್ದು, ಈ ಘಾಟ್ನಲ್ಲೇ ರಾಷ್ಟ್ರೀಯ ಹೆದ್ದಾರಿ 209 ಹಾದು ಹೋಗಿದೆ. ಈ ಹೆದ್ದಾರಿ ಅಪಾಯಕಾರಿ ತಿರುವುಗಳನ್ನು ಹೊಂದಿದ್ದು, ಘಾಟ್ನ 5ನೇ ತಿರುವಿನಲ್ಲಿ ಇತ್ತೀಚೆಗೆ ಸಂಜೆ ವೇಳೆ ರಸ್ತೆ ಮಧ್ಯದಲ್ಲೇ ಚಿರತೆಗಳು ಚಿನ್ನಾಟದಲ್ಲಿ ತೊಡಗಿದ್ದವು.
ಸಾಕಷ್ಟು ಹೊತ್ತು ರಸ್ತೆ ಬಿಟ್ಟು ಕದಲದ ಕಾರಣ ಮತ್ತು ಶಬ್ದ ಮಾಡಿದರೂ ಓಡದೆ ಇದ್ದುದರಿಂದ ವಾಹನ ಚಾಲಕರು ವಾಹನಗಳನ್ನು ನಿಲ್ಲಿಸಿಕೊಂಡು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಕೆಲವರು ಈ ದೃಶ್ಯವನ್ನು ಸೆರೆಹಿಡಿದಿದ್ದು ಅದು ಸಾಮಾಜಿಕಜಾಲ ತಾಣಗಳಲ್ಲಿ ವೈರಲ್ ಆಗಿದೆ.
ವಿಷಯ ತಿಳಿದ ತಮಿಳುನಾಡಿನ ಸತ್ಯಮಂಗಲ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಅವುಗಳನ್ನು ರಸ್ತೆಯಿಂದ ಅರಣ್ಯಕ್ಕೆ ಅಟ್ಟಿದ ಬಳಿಕ ವಾಹನಗಳ ಸಂಚಾರ ಆರಂಭವಾಗಿದೆ. ಈ ರಸ್ತೆಗಳಲ್ಲಿ ವಾಹನವನ್ನು ನಿಲ್ಲಿಸಬಾರದು ಎಂಬ ಸೂಚನೆಯಿದೆ. ಆದರೆ, ಕೆಲವರು ಮಾತು ಕೇಳದೆ ವಾಹನ ನಿಲ್ಲಿಸಿ ಮೊಬೈಲ್ನಲ್ಲಿ ಚಿತ್ರಗಳನ್ನು ತೆಗೆಯುವುದು ಮಾಡುತ್ತಾರೆ.
ಕೆಲವರು ಸೆಲ್ಫಿ ತೆಗೆದುಕೊಳ್ಳುತ್ತಾರೆ. ಇದು ಬಹಳ ಅಪಾಯಕಾರಿಯಾಗಿದೆ. ಏಕೆಂದರೆ ಈ ಹಿಂದೆ ಲಾರಿ ಚಾಲಕನೊಬ್ಬ, ಕೆಳಗಿಳಿದು ಮೂತ್ರ ವಿಸರ್ಜನೆ ಮಾಡುತ್ತಿದ್ದ ವೇಳೆ ಚಿರತೆ ದಾಳಿ ಮಾಡಿ ಸಾಯಿಸಿತ್ತು. ಆ ನಂತರ ಮತ್ತೊಬ್ಬನು ಚಿರತೆಗಳ ದಾಳಿಗೆ ಬಲಿಯಾಗಿದ್ದನು.
ಈ ಹೆದ್ದಾರಿಯಲ್ಲಿ ಕಾಡು ಪ್ರಾಣಿಗಳು ಆಗಾಗ್ಗೆ ಅಡ್ಡಾಡುವುದರಿಂದ ವಾಹನಗಳಲ್ಲಿ ತೆರಳುವವರು ತುಂಬಾ ಎಚ್ಚರಿಕೆಯಿಂದ ಸಾಗುವುದು ಒಳ್ಳೆಯದು. ಕಳೆದ ಕೆಲ ವರ್ಷಗಳಿಂದ ಕಾಣಿಸದೆ ಇದ್ದ ಚಿರತೆಗಳು ಮತ್ತೆ ರಸ್ತೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಅರಣ್ಯ ಇಲಾಖೆಗೆ ತಲೆನೋವಾಗಿದ್ದರೆ, ಪ್ರಯಾಣಿಕರಿಗೆ ಆತಂಕ ತಂದಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ.












Click it and Unblock the Notifications