2 ದಶಕದಲ್ಲಿಯೇ ವಾಹನ ಉದ್ಯಮಕ್ಕೆ ಭಾರಿ ಸಂಕಷ್ಟ: ಕೆಲಸ ಕಳೆದುಕೊಂಡ 2.30 ಲಕ್ಷ ಮಂದಿ
ನವದೆಹಲಿ, ಆಗಸ್ಟ್ 13: ಭಾರತದ ವಾಹನ ಉದ್ಯಮ ಅಕ್ಷರಶಃ ತತ್ತರಿಸಿದೆ. ವಾಹನಗಳ ಮಾರಾಟ ಪ್ರಮಾಣ ಗಣನೀಯ ಮಟ್ಟದಲ್ಲಿ ಇಳಿಕೆಯಾಗಿದೆ. ಇದರ ಪರಿಣಾಮ ಕಂಪೆನಿಗಳು ನಷ್ಟಕ್ಕೆ ಸಿಲುಕಿವೆ. ವಾಹನ ಉದ್ಯಮವನ್ನೇ ನೆಚ್ಚಿಕೊಂಡಿರುವ ವಿವಿಧ ಹಂತದ ಉದ್ಯೋಗಸ್ಥರು ಕೆಲಸ ಕಳೆದುಕೊಳ್ಳುತ್ತಿದ್ದಾರೆ. ಇದು ದೊಡ್ಡ ಪ್ರಮಾಣದಲ್ಲಿ ಆಗುತ್ತಿರುವುದು ಆತಂಕ ಹೆಚ್ಚಿಸಿದೆ.
ಕಳೆದ ಎರಡು ದಶಕಗಳಲ್ಲಿಯೇ ಭಾರತದ ಆಟೊಮೊಬೈಲ್ ಉದ್ಯಮ ಅತ್ಯಂತ ಶೋಚನೀಯ ಸ್ಥಿತಿಗೆ ತಲುಪಿದೆ. ವಾಹನ ಉದ್ಯಮವನ್ನು ಪ್ರತಿನಿಧಿಸುವ ಪ್ರಮುಖ ಸಂಸ್ಥೆಯೊಂದು ಬಿಡುಗಡೆ ಮಾಡಿರುವ ಉದ್ಯೋಗ ಮತ್ತು ಉತ್ಪಾದನಾ ಅಂಕಿ ಅಂಶದ ಮಾಹಿತಿ ಪ್ರಕಾರ, ವಾಹನ ಮಾರಾಟ ಉದ್ಯಮದ ಬಿಕ್ಕಟ್ಟು ಭೀಕರ ಸ್ಥಿತಿಗೆ ತಲುಪಿದೆ.
ಪ್ರಯಾಣಿಕ ಕಾರುಗಳ ಮಾರಾಟ ಕಳೆದ ವರ್ಷದ 2019ರ ಜುಲೈ ತಿಂಗಳಿಗೆ ಹೋಲಿಸಿದರೆ ಶೇ 35ರಷ್ಟು ಕುಸಿದಿದೆ. ಜತೆಗೆ ಆಟೋ ಉದ್ಯಮದ ಸುಮಾರು 2.30 ಲಕ್ಷ ಜನರು ಉದ್ಯೋಗ ಕಳೆದುಕೊಂಡು ಕಂಗಾಲಾಗಿದ್ದಾರೆ ಎಂದು ಭಾರತೀಯ ಆಟೊಮೊಬೈಲ್ ಉತ್ಪಾದಕರ ಸಮಾಜ (ಎಸ್ಐಎಎಂ) ಬಿಡುಗಡೆ ಮಾಡಿರುವ ಮಾಹಿತಿ ತಿಳಿಸಿದೆ.
ಕಳೆದ 19 ವರ್ಷಗಳಲ್ಲಿಯೇ ಆಟೊಮೊಬೈಲ್ ಉದ್ಯಮ ಅತ್ಯಂತ ಹೀನಾಯ ಸ್ಥಿತಿ ಅನುಭವಿಸುತ್ತಿದೆ. 2000ದ ಡಿಸೆಂಬರ್ನಲ್ಲಿ ಇದೇ ರೀತಿ ಉದ್ಯಮ ತೀವ್ರ ಸಂಕಷ್ಟಕ್ಕೆ ಸಿಲುಕಿತ್ತು ಎಂದು ಎಸ್ಐಎಎಂನ ಪ್ರಧಾನ ನಿರ್ದೇಶಕ ವಿಷ್ಣು ಮಾಥುರ್ ಅವರು ಸುದ್ದಿಗಾರರಿಗೆ ತಿಳಿಸಿದರು.

ಬಾಗಿಲುಮುಚ್ಚಿದ ಡೀಲರ್ಶಿಪ್ಗಳು
ಇತ್ತೀಚಿನ ದಿನಗಳಲ್ಲಿ ಸುಮಾರು 300 ಡೀಲರ್ಶಿಪ್ಗಳು ಬಾಗಿಲುಮುಚ್ಚಿವೆ. ಆಟೋ ಬಿಡಿಭಾಗಗಳ ಉತ್ಪಾದನಾ ಘಟಕ ಉದ್ಯಮದಲ್ಲಿ ಸುಮಾರು ಹತ್ತು ಲಕ್ಷದಷ್ಟು ಉದ್ಯೋಗಕ್ಕೆ ಹೊಡೆತ ಬಿದ್ದಿದೆ ಎಂದು ಎಸ್ಐಎಎಂ ಡೇಟಾ ತಿಳಿಸಿದೆ. ಉತ್ಪಾದಕರು ತಮ್ಮ ಉತ್ಪಾದನೆಗೆ ಕಡಿವಾಣ ಹಾಕಲು ಮತ್ತು ಸ್ಥಗಿತಗೊಳಿಸಲು ನಿರ್ಧರಿಸುತ್ತಿರುವುದರಿಂದ ಭಾರಿ ಪ್ರಮಾಣದಲ್ಲಿ ಉದ್ಯೋಗ ಕಡಿತಕ್ಕೆ ಮುಂದಾಗಲಿದ್ದಾರೆ ಎಂದು ಸಂಸ್ಥೆ ಎಚ್ಚರಿಕೆ ನೀಡಿದೆ.

ಶೇ 18ರಷ್ಟು ಮಾರಾಟ ಕುಸಿತ
ಒಟ್ಟಾರೆಯಾಗಿ ವಾಹನ ಉದ್ಯಮವು 2019ರ ಜುಲೈನಲ್ಲಿ ಶೇ 18ರಷ್ಟು ಮಾರಾಟ ಕುಸಿತ ಎದುರಿಸಿದೆ. ಮುಖ್ಯವಾಗಿ ಪ್ರಯಾಣಿಕ ವಾಹನಗಳ ವಿಭಾಗದಲ್ಲಿ ಭಾರಿ ಹಿನ್ನಡೆಯುಂಟಾಗಿದೆ. ಈ ವಿಭಾಗದಲ್ಲಿ ಶೇ 35ರಷ್ಟು ಕುಸಿತ ಕಂಡಿದೆ. ವಾಣಿಜ್ಯ ಉದ್ಯಮಗಳ ಮಾರಾಟದಲ್ಲಿ ಶೇ 25ರಷ್ಟು ಹಿನ್ನಡೆಯಾಗಿದೆ. ಹಾಗೆಯೇ ಕಳೆದ ವರ್ಷದ ಜುಲೈಗೆ ಹೋಲಿಸಿದರೆ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಶೇ 16ರಷ್ಟು ಕುಸಿತ ಉಂಟಾಗಿದೆ. ಭಾರತೀಯ ವಾಹನ ವಲಯದಲ್ಲಿನ ತೀವ್ರ ಬಿಕ್ಕಟ್ಟಿನಲ್ಲಿ ತಾನೂ ಸಿಲುಕಿರುವುದಾಗಿ ಎಸ್ಐಎಎಂ ತಿಳಿಸಿದೆ.

ಹಣಕಾಸಿನ ಸೌಲಭ್ಯದ ಕೊರತೆ
ಕಾರು ಖರೀದಿದಾರರಿಗೆ ಸಾಲಸೌಲಭ್ಯದ ಕೊರತೆ ಎದುರಾಗಿರುವುದು ಮತ್ತು ಮುಂದಿನ ವಾಹನ ನೀತಿ ನಿಯಮಾವಳಿಗಳಲ್ಲಿನ ಅನಿಶ್ಚಿತತೆಗಳು ಆಟೋ ಉದ್ಯಮದಲ್ಲಿನ ಬೇಡಿಕೆ ತೀವ್ರಗತಿಯಲ್ಲಿ ಇಳಿಕೆಯಾಗಲು ಕಾರಣ ಎನ್ನಲಾಗಿದೆ. ಇದರ ಜತೆಗೆ ಹಣಕಾಸಿನ ಸವಲತ್ತಿನ ಕೊರತೆ ಕೂಡ ಉದ್ಯಮಕ್ಕೆ ಎರವಾಗಿದೆ.

ಪುನಶ್ಚೇತನ ಪ್ಯಾಕೇಜ್ ನಿರೀಕ್ಷೆ
ಆಟೋ ಉದ್ಯಮದ ಪುನಶ್ಚೇತನಕ್ಕೆ ಸರ್ಕಾರದಿಂದ ದೊಡ್ಡಮೊತ್ತದ ಪ್ಯಾಕೇಜ್ನ ಅಗತ್ಯವಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರೊಂದಿಗೆ ಆಟೋ ಉದ್ಯಮ ಇತ್ತೀಚೆಗೆ ಸಕಾರಾತ್ಮಕ ಮಾತುಕತೆ ನಡೆಸಿದೆ. ಕೇಂದ್ರ ಸರ್ಕಾರದಿಂದ ಶೀಘ್ರದಲ್ಲಿಯೇ ಪುನಶ್ಚೇತನ ಪ್ಯಾಕೇಜ್ ಬರಲಿದೆ ಎಂದು ಉದ್ಯಮ ಭರವಸೆ ಹೊಂದಿದೆ ಎಂಬುದಾಗಿ ವಿಷ್ಣು ಮಾಥುರ್ ತಿಳಿಸಿದರು.












Click it and Unblock the Notifications