ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಯಾರು, ಏನು ಹೇಳಿದರು?
ಗುರುವಾರದಂದು ಷೇರು ಮಾರುಕಟ್ಟೆಯಲ್ಲಿ ಸೆನ್ಸೆಕ್ಸ್ ಎಂಟು ನೂರು ಅಂಶಕ್ಕೂ ಹೆಚ್ಚು ಕುಸಿದಿದೆ. ಅದೇ ರೀತಿ ನಿಫ್ಟಿಯಲ್ಲೂ ಭಾರೀ ಇಳಿಕೆ ಆಗಿದೆ. ಡಾಲರ್ ಎದುರು ರುಪಾಯಿ ಮೌಲ್ಯ ದುರ್ಬಲವಾಗಿ ಸಾರ್ವಕಾಲಿಕ ಇಳಿಕೆ ದಾಖಲಿಸಿದೆ. ಇವೆಲ್ಲವೂ ಸೇರಿ ಒಟ್ಟಾರೆ ನೋಡಿದಾಗ ಕೇಂದ್ರ ಸರಕಾರ ಮೇಲಿನ ಜನ ಸಾಮಾನ್ಯರ ನಂಬಿಕೆ ಏನಿತ್ತೋ ಅದು ಕರಗುತ್ತಿದೆಯೇನೋ ಅನ್ನಿಸುತ್ತದೆ.
ಇನ್ನೇನು ಕಣ್ಣೆದುರಿಗೇ ವಿಧಾನಸಭೆ ಚುನಾವಣೆಗಳು, ಆ ನಂತರ ಲೋಕಸಭೆ ಚುನಾವಣೆಗಳೆಂಬ ಪರೀಕ್ಷೆಗಳಿವೆ. ಮಧ್ಯಪ್ರದೇಶ, ರಾಜಸ್ತಾನ, ಛತ್ತೀಸ್ ಗಢ ಹಾಗೂ ತೆಲಂಗಾಣದ ವಿಧಾನಸಭೆ ಚುನಾವಣೆ ಬಿಜೆಪಿ ಪಾಲಿಗೆ ಸಹಜವಾಗಿಯೇ ದೊಡ್ಡ ಪರೀಕ್ಷೆ. ಏಕೆಂದರೆ ಲೋಕಸಭೆ ಚುನಾವಣೆಗೆ ಮುನ್ನ ನಡೆಯುವ ಸಿದ್ಧತಾ ಪರೀಕ್ಷೆಯಂಥದ್ದು ಇದು.
ಪೆಟ್ರೋಲ್, ಡೀಸೆಲ್ ಬೆಲೆ ಕಡಿತಗೊಳಿಸುವುದಿಲ್ಲ : ಕುಮಾರಸ್ವಾಮಿ
ಇಂಥ ಸನ್ನಿವೇಶದಲ್ಲಿ ಕೇಂದ್ರ ಸರಕಾರದಿಂದ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಲೀಟರ್ ಗೆ ತಲಾ 2.50 ರುಪಾಯಿ ಇಳಿಕೆ ಮಾಡಲಾಗಿದೆ. ಆ ನಂತರ ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ 2.50 ರುಪಾಯಿ ಇಳಿಕೆ ಮಾಡಿ, ಒಟ್ಟಾರೆ ಲೀಟರ್ ಗೆ 5 ರುಪಾಯಿ ಬೆಲೆ ಇಳಿದಂತೆ ಆಗಿದೆ. ಈ ಕ್ರಮಕ್ಕೆ ಯಾರು, ಏನು ಪ್ರತಿಕ್ರಿಯೆ ನೀಡಿದರು ಎಂಬುದನ್ನು ಇಲ್ಲಿ ನೀಡಲಾಗಿದೆ.
ಡಿ.ರಾಜಾ, ಸಂಸದ (ಸಿಪಿಐ)
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್ ಗೆ ತಲಾ 2.50 ರುಪಾಯಿ ಕಡಿಮೆ ಮಾಡಿರುವುದು ಬಹಳ ಕಡಿಮೆ ಹಾಗೂ ಬಹಳ ತಡವಾಗಿದೆ.
ಗಿರಿರಾಜ್ ಸಿಂಗ್, ಸಂಸದ
ಸೂಕ್ಷ್ಮತೆ ಇರುವ ನಮೋ ಸರಕಾರ ಪೆಟ್ರೋಲ್/ ಡೀಸೆಲ್ ಲೀಟರ್ ಗೆ 2.50 ರುಪಾಯಿ ಕಡಿಮೆ ಮಾಡಿದೆ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳಲ್ಲೂ 2.50 ರುಪಾಯಿ ಕಡಿಮೆ ಮಾಡಿ, ಒಟ್ಟು 5 ರುಪಾಯಿ ಇಳಿಕೆ ಆಗಿದೆ. ಮಾನ್ಯ ಪ್ರಧಾನಿಗಳಿಗೆ ಧನ್ಯವಾದ.
ಸುಶೀಲ್ ಮೋದಿ, ಬಿಹಾರ ಉಪ ಮುಖ್ಯಮಂತ್ರಿ
ಜೇಟ್ಲಿ ಅವರಿಂದ ನಮಗೆ ಯಾವುದೇ ಪತ್ರ ಬಂದಿಲ್ಲ. ಮೊದಲಿಗೆ ನಾವು ಆದೇಶ ನೋಡ್ತೀವಿ. ಆ ನಂತರ ಪೆಟ್ರೋಲ್- ಡೀಸೆಲ್ ಗೆ ಸಂಬಂಧಿಸಿದಂತೆ ನಿರ್ಧಾರ ಮಾಡ್ತೀವಿ. ಪ್ರತಿ ರಾಜ್ಯಕ್ಕೂ ಅದರದೇ ಆದ ಸನ್ನಿವೇಶ ಇದೆ. ಮೊದಲಿಗೆ ಪತ್ರ ಬರಲಿ.
ಯಡಿಯೂರಪ್ಪ, ಕರ್ನಾಟಕ ಬಿಜೆಪಿ ರಾಜ್ಯಾಧ್ಯಕ್ಷ
ಪೆಟ್ರೋಲ್-ಡೀಸೆಲ್ ಬೆಲೆ ಇಳಿಸಿರುವ ಕೇಂದ್ರ ಸರಕಾರದ ಕ್ರಮ ಸ್ವಾಗತಾರ್ಹ. ಇದಕ್ಕೆ ಪೂರಕವಾಗಿ ಕರ್ನಾಟಕವೂ ಸ್ಪಂದಿಸಿ, ಆ ಹಾದಿಯಲ್ಲಿ ಸಾಗಬೇಕು. ಈಗಾಗಲೇ ಮಹಾರಾಷ್ಟ್ರ ಸರಕಾರ ಅನುಸರಿಸಿದೆ.
ರಾಜ್ ದೀಪ್ ಸರ್ದೇಸಾಯಿ, ಪತ್ರಕರ್ತ
ಗ್ರಾಹಕರ ಬಗ್ಗೆ ಕಾಳಜಿ ಇರೋದೇ ಆದರೆ ಎಲ್ಲ ರಾಜಕೀಯ ಪಕ್ಷಗಳು, ಕೇಂದ್ರ ಹಾಗೂ ರಾಜ್ಯ ಸರಕಾರ ಪೆಟ್ರೋಲ್/ಡೀಸೆಲ್ ಅನ್ನು ಜಿಎಸ್ ಟಿ ಅಡಿ ತರುವುದಕ್ಕೆ ಒಪ್ಪಬೇಕು. ತೈಲ ಮಾರುಕಟ್ಟೆ ಕಂಪನಿ ಪರವಾಗಿ ಹಣಕಾಸು ಸಚಿವರು ಬೆಲೆ ಕಡಿತ ಘೋಷಣೆ ಮಾಡುವ ಒತ್ತಡ ಸೃಷ್ಟಿ ಆಗಿದೆ ಅಂದರೆ ತೈಲ ಬೆಲೆ ಮೇಲೆ ಸರಕಾರದ ನಿಯಂತ್ರಣ ಬೇಡ ಅನ್ನೋದು ಎಂಥ ವಿಚಿತ್ರ ಆಲೋಚನೆಯೋ ಯೋಚನೆ ಮಾಡಿ.