ಸಾಲದ ಅಸಲು ಶೇ 100ರಷ್ಟನ್ನು ಬ್ಯಾಂಕ್ ಗಳಿಗೆ ವಾಪಸ್ ಮಾಡ್ತೀನಿ: ಮಲ್ಯ
ಲಂಡನ್, ಡಿಸೆಂಬರ್ 5: ನಾನು ಪಡೆದ ಸಾಲದ ಮೊತ್ತವನ್ನು (ಅಸಲು) ಪೂರ್ತಿಯಾಗಿ, ಶೇ 100ರಷ್ಟನ್ನು ವಾಪಸ್ ಮಾಡುತ್ತೇನೆ ಎಂದು ಮದ್ಯದ ಉದ್ಯಮಿ, ದೇಶದ ತಲೆ ತಪ್ಪಿಸಿಕೊಂಡು ಲಂಡನ್ ನಲ್ಲಿ ನೆಲೆಸಿರುವ ವಿಜಯ್ ಮಲ್ಯ ಭಾರತದ ಬ್ಯಾಂಕ್ ಗಳಿಗೆ ಮನವಿ ಮಾಡಿದ್ದಾರೆ. ವಿಜಯ್ ಮಲ್ಯರನ್ನು ಭಾರತಕ್ಕೆ ಹಸ್ತಾಂತರ ಮಾಡಬೇಕು ಎಂಬ ವಿಚಾರಣೆಯು ಇನ್ನೇನು ಕೋರ್ಟ್ ಮುಂದೆ ಬರಲಿದ್ದು, ಈ ವೇಳೆ ಮನವಿ ಮಾಡಿದ್ದಾರೆ.
ಕಿಂಗ್ ಫಿಷರ್ ಏರ್ ಲೈನ್ಸ್ ನ ಮಾಜಿ ಮುಖ್ಯಸ್ಥ ವಿಜಯ್ ಮಲ್ಯಗೆ ಈಗ ಅರವತ್ತೆರಡು ವರ್ಷ ವಯಸ್ಸು. ಕಳೆದ ವರ್ಷದ ಏಪ್ರಿಲ್ ನಲ್ಲಿ ಯುನೈಟೆಡ್ ಕಿಂಗ್ ಡಮ್ ನಿಂದ ಮಲ್ಯ ಹಸ್ತಾಂತರದ ವಾರೆಂಟ್ ಹೊರಡಿಸಿ, ಬಂಧಿಸಿದ ನಂತರ ಅವರು ಜಾಮೀನಿನ ಮೇಲಿದ್ದಾರೆ. 9000 ಕೋಟಿ ರುಪಾಯಿ ಅಕ್ರಮ ಹಣ ವರ್ಗಾವಣೆ ಹಾಗೂ ವಂಚನೆ ಆರೋಪ ಅವರ ಮೇಲಿದೆ.
ತಮ್ಮ ನಿರ್ಧಾರದ ಬಗ್ಗೆ ಸಾಲಾಗಿ ಟ್ವೀಟ್ ಮಾಡಿರುವ ವಿಜಯ್ ಮಲ್ಯ, "ಏರ್ ಲೈನ್ಸ್ ನ ಆರ್ಥಿಕ ಸಮಸ್ಯೆಗೆ ಬಹುತೇಕವಾಗಿ ಕಾರಣವಾಗಿದ್ದು ದುಬಾರಿ ಎಟಿಎಫ್ ಬೆಲೆ. ಕಿಂಗ್ ಫಿಷರ್ ಏರ್ ಲೈನ್ಸ್ ಕಾರ್ಯ ನಿರ್ವಹಿಸುವ ವೇಲೆ ಬ್ಯಾರೆಲ್ ಕಚ್ಚಾ ತೈಲದ ಬೆಲೆ $ 140 ತಲುಪಿ, ವಿಪರೀತ ದುಬಾರಿ ಆಗಿತ್ತು. ನಾನೀಗ ಶೇ 100ರಷ್ಟು ಅಸಲು ಹಿಂತಿರುಗಿಸಲು ಸಿದ್ಧನಿದ್ದೇನೆ. ದಯವಿಟ್ಟು ತೆಗೆದುಕೊಳ್ಳಿ ಎಂದಿದ್ದಾರೆ.

ಅತ್ಯುತ್ತಮ ಏರ್ ಲೈನ್ಸ್ ನಷ್ಟಕ್ಕೆ ಈಡಾಯಿತು
ಸರಕಾರದ ಬೊಕ್ಕಸಕ್ಕೆ ಮದ್ಯ ಸಾಮ್ರಾಜ್ಯದ ಭಾಗವಾದ ಯುನೈಟೆಡ್ ಬ್ರಿವರೀಸ್ ಸಾಕಷ್ಟು ಕೊಡುಗೆ ನೀಡಿದೆ. ಅತ್ಯುತ್ತಮ ಏರ್ ಲೈನ್ಸ್ ನಷ್ಟಕ್ಕೆ ಈಡಾಯಿತು. ಆದರೂ ಬ್ಯಾಂಕ್ ಗಳಿಗೆ ಸಾಲ ಹಿಂತಿರುಗಿಸುವುದಾಗಿ ಹೇಳುತ್ತಿದ್ದೇನೆ. ಇದರಿಂದ ಏನೂ ನಷ್ಟವಿಲ್ಲ. ದಯವಿಟ್ಟು ತೆಗೆದುಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.

ನನ್ನನ್ನು ಯಾಕೆ ನ್ಯಾಯಸಮ್ಮತವಾಗಿ ನಡೆಸಿಕೊಳ್ಳಬಾರದು?
ನಾನೊಬ್ಬ ಸುಸ್ತಿದಾರ ಹಾಗೂ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಗಳ ಹಣವನ್ನು ತೆಗೆದುಕೊಂಡು ಓಡಿಹೋದವನು ಎಂದು ದೊಡ್ಡ ಧ್ವನಿಯಲ್ಲಿ ರಾಜಕಾರಣಿಗಳು ಹಾಗೂ ಮಾಧ್ಯಮದವರು ಸದ್ದು ಮಾಡಿದರು. ಇವೆಲ್ಲವೂ ಸುಳ್ಳು. ನನ್ನನ್ನು ಯಾಕೆ ನ್ಯಾಯಸಮ್ಮತವಾಗಿ ನಡೆಸಿಕೊಳ್ಳಬಾರದು? ನನ್ನ ಸಮಗ್ರ ಸೆಟ್ಲ್ ಮೆಂಟ್ ಆಫರ್ ಬಗ್ಗೆ ಕರ್ನಾಟಕ ಹೈಕೋರ್ಟ್ ಎದುರು ತಿಳಿಸಿರುವುದು ಕೂಡ ಅದೇ ರೀತಿಯಲ್ಲಿ ದೊಡ್ಡ ಧ್ವನಿಯಾಗಲಿ ಎಂದಿದ್ದಾರೆ.

ಹಸ್ತಾಂತರದ ಕಾನೂನು ಕ್ರಮ ಪ್ರತ್ಯೇಕವಾಗಿ ನಡೆಯುತ್ತದೆ
ನನ್ನ ಹಸ್ತಾಂತರದ ಬಗ್ಗೆ ಸುದ್ದಿಯನ್ನು ಬಹಳ ವೇಗವಾಗಿ ಮಾಧ್ಯಮಗಳಲ್ಲಿ ನೋಡಿದೆ. ಅದು ಪ್ರತ್ಯೇಕ ಮತ್ತು ಅದರದೇ ಕಾನೂನು ಕ್ರಮ ನಡೆಯುತ್ತದೆ. ಅತಿ ಮುಖ್ಯವಾದ ಅಂಶ ಏನೆಂದರೆ ಇದು ಸಾರ್ವಜನಿಕರ ಹಣ ಮತ್ತು ಶೇಕಡಾ ನೂರರಷ್ಟು ಅಸಲನ್ನು ವಾಪಸ್ ಮಾಡುತ್ತೇನೆ ಎನ್ನುತ್ತಿದ್ದೇನೆ. ಬ್ಯಾಂಕ್ ಗಳು ಹಾಗೂ ಸರಕಾರವನ್ನು ವಿನಯಪೂರ್ವಕವಾಗಿ ಕೇಳಿಕೊಳ್ಳುತ್ತಿದ್ದೇನೆ: ಇದನ್ನು ಸ್ವೀಕರಿಸಿ ಎಂದು ಹೇಳಿದ್ದಾರೆ.

ಹಸ್ತಾಂತರದ ಭಯ ಕಾಡುತ್ತಿದೆಯಾ?
ಅಗಸ್ಟಾ ವೆಸ್ಟ್ ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ನ ವ್ಯವಹಾರದಲ್ಲಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಖೆಲ್ ನನ್ನು ದುಬೈನಿಂದ ಭಾರತಕ್ಕೆ ಕರೆತಂದ ಕೆಲವೇ ಗಂಟೆಗಳಲ್ಲಿ ವಿಜಯ್ ಮಲ್ಯ ಟ್ವೀಟ್ ಮಾಡಿದ್ದಾರೆ. ಭಾರತ ಸರಕಾರದಿಂದ ಆದ ಮೊದಲ ಯಶಸ್ವಿ ಹಸ್ತಾಂತರ ಇದಾಗಿದೆ. ಇದೇ ರೀತಿಯ ಪ್ರಕ್ರಿಯೆಯು ಆರ್ಥಿಕ ಅಪರಾಧಿಗಳಾದ ವಿಜಯ್ ಮಲ್ಯ, ನೀರವ್ ಮೋದಿ ಹಾಗೂ ಮೆಹುಲ್ ಚೋಕ್ಸಿ ವಿರುದ್ಧ ಕೂಡ ಕೈಗೊಳ್ಳಲಾಗಿದೆ.












Click it and Unblock the Notifications