ಸಾಲ ಮಾಡಿ ತುಪ್ಪ ತಿಂದವ್ರು ಮಲ್ಯ ಒಬ್ರೇ ಅಲ್ಲ ಸ್ವಾಮೀ!
ಬ್ಯಾಂಕುಗಳಿಗೆ ವಿಜಯ್ ಮಲ್ಯ ಅವರೊಬ್ಬರೇನಾ ಪಂಗನಾಮ ಹಾಕಿರುವುದು? ಅವರೊಬ್ಬರೇ ಅಲ್ಲ ಸ್ವಾಮಿ! ಅಂಥ ಭಾರೀ ಖದೀಮರ ಹೆಸರುಗಳನ್ನು ಸಿಬಿಲ್ (Credit Information Bureau (India) Ltd) ಬಿಡುಗಡೆ ಮಾಡಿದೆ.
'ನಾನೇನು ಕಳ್ಳನಂತೆ ಭಾರತ ಬಿಟ್ಟು ಪರಾರಿಯಾಗಿಲ್ಲ. ಒಂದಿಲ್ಲೊಂದಿನ ಬಂದೇ ಬರುತ್ತೇನೆ' ಎಂದು ಸಾಲಗಾರರ ಕಾಟ ತಾಳಲಾರದೆ, ಏಳು ಸಾವಿರ ಕೋಟಿ ಪಂಗನಾಮ ಹಾಕಿ, ಏಳು ಸೂಟ್ಕೇಸುಗಳೊಂದಿಗೆ ಲಂಡನ್ನಿಗೆ 'ಪರಾರಿ'ಯಾಗಿರುವ ಡಾ. ವಿಜಯ್ ಮಲ್ಯ ಅವರ ಮೇಲೆಯೇ ಎಲ್ಲರ ಕಣ್ಣು. ಅವರೇ ಚರ್ಚೆಗೆ ಹಾಟ್ ಸಬ್ಜೆಕ್ಟು. [Breaking News : ಲಂಡನ್ನಿನಲ್ಲಿ ವಿಜಯ್ ಮಲ್ಯ ಬಂಧನ]
ಬ್ಯಾಂಕುಗಳಿಗೆ ವಿಜಯ್ ಮಲ್ಯ ಅವರೊಬ್ಬರೇನಾ ಪಂಗನಾಮ ಹಾಕಿರುವುದು? ಅವರೊಬ್ಬರೇ ಅಲ್ಲ ಸ್ವಾಮಿ! ಅಂಥ ಭಾರೀ ಖದೀಮರ ಹೆಸರುಗಳನ್ನು ಸಿಬಿಲ್ (Credit Information Bureau (India) Ltd) ಬಿಡುಗಡೆ ಮಾಡಿದೆ. 5,275 ಭಾರೀ ಸಾಲಗಾರರಿಂದ 56,521 ಸಾವಿರ ಕೋಟಿ ರುಪಾಯಿ ಬ್ಯಾಂಕುಗಳಿಗೆ ಬರಬೇಕಿದೆ. [ರಾಯಲ್ ಚಾಲೆಂಜರ್ಸ್ ಗೆ ವಿಜಯ್ ಮಲ್ಯ ಗುಡ್ ಬೈ]
ಸಾಲ ಮರುಪಾವತಿಸುವ ತಾಕತ್ತಿದ್ದರೂ ಬೇಕಂತೆಲೇ ಬ್ಯಾಂಕುಗಳಿಗೆ ಹಣ ಕಟ್ಟದೆ ಚಳ್ಳೆಹಣ್ಣು ತಿನ್ನಿಸುತ್ತಿರುವವರಿಂದೆ ಬರಬೇಕಾದ ಹಣ, ಕಳೆದ 13 ವರ್ಷಗಳಲ್ಲಿ 9 ಪಟ್ಟು ಜಾಸ್ತಿಯಾಗಿದೆ. ಇದು ಕೇಂದ್ರ ಬಜೆಟ್ಟಿನಲ್ಲಿ ರೈತರ ಅಭ್ಯುದಯಕ್ಕಾಗಿ ನೀಡಲಾಗಿರುವ ಅನುದಾನಕ್ಕಿಂತ ಒಂದೂವರೆ ಪಟ್ಟು ಹೆಚ್ಚು. ವ್ಯಂಗ್ಯ ಹೇಗಿದೆ ನೋಡಿ! ಇಂಡಿಯಾಸ್ಪೆಂಡ್.ಕಾಂ ಈ ಬಗ್ಗೆ ಲೇಖನ ಪ್ರಕಟಿಸಿದೆ. [ವಿಜಯ್ ಮಲ್ಯ ಭಾರತದಲ್ಲಿಲ್ಲ, ಲಂಡನ್ನಿಗೆ ಪರಾರಿ!]

ಭಾರತದ ಟಾಪ್ 10 ವಿಲ್ಫುಲ್ ಡಿಫಾಲ್ಟರ್ಸ್
1) ವಿನ್ಸಮ್ ಡೈಮಂಡ್ಸ್ ಅಂಡ್ ಜುವೆಲ್ಲರಿ - 3263 ಕೋಟಿ ರು.
2) ಜೂಮ್ ಡೆವಲಪರ್ಸ್ - 1647 ಕೋಟಿ ರು.
3) ಕಿಂಗ್ಫಿಷರ್ ಏರ್ಲೈನ್ಸ್ - 1201 ಕೋಟಿ ರು.
4) ಬೀಟಾ ನಾಫ್ಥಾಲ್ - 951 ಕೋಟಿ ರು.
5) ರಾಝಾ ಟೆಕ್ಸ್ಟೈಲ್ಸ್ - 694 ಕೋಟಿ ರು.
6) Rank ಇಂಡಸ್ಟ್ರೀಸ್ - 551 ಕೋಟಿ ರು.
7) ಎಕ್ಸೆಲ್ ಎನರ್ಜಿ - 413 ಕೋಟಿ ರು.
8) ಡೆಕ್ಕನ್ ಕ್ರಾನಿಕಲ್ ಹೋಲ್ಡಿಂಗ್ಸ್ - 409 ಕೋಟಿ ರು.
9) ಎಲೆಕ್ಟ್ರಾಥರ್ಮ್ (ಇಂಡಿಯಾ) - 385 ಕೋಟಿ ರು.
10) ಜೈಲಾಗ್ ಸಿಸ್ಟಂಸ್ - 361 ಕೋಟಿ ರು.

ಈಮೇಲಿಗೂ ಉತ್ತರಿಸುತ್ತಿಲ್ಲ ಹಣವನ್ನೂ ನೀಡುತ್ತಿಲ್ಲ
ಇವುಗಳಲ್ಲಿ ವಿನ್ಸಂ ಡೈಮಂಡ್ಸ್ ಅಂಡ್ ಜುವೆಲ್ಲರಿ ಕಂಪನಿ ಹೊರತುಪಡಿಸಿ ಉಳಿದ ಕಂಪನಿಗಳು ಕದಮುಚ್ಚುವ ಹಂತದಲ್ಲಿವೆ ಎಂದು ಕಾರ್ಪೊರೇಟ್ ಅಫೇರ್ಸ್ ಮಂತ್ರಾಲಯದ ವೆಬ್ ಸೈಟ್ ಮಾಹಿತಿ ನೀಡಿದೆ. ಏಳು ಬ್ಯಾಂಕುಗಳಿಂದ ಸಾಲ ಪಡೆದಿರುವ ಡೈಮಂಡ್ಸ್ ಮತ್ತು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಭರ್ಜರಿ ನಾಮವಿಕ್ಕಿರುವ ಕಿಂಗ್ಫಿಷರ್ ಕಂಪನಿಗಳಿಗೆ ಈಮೇಲುಗಳಿಗೆ ಯಾವುದೇ ಉತ್ತರವನ್ನೂ ಕೊಡುತ್ತಿಲ್ಲ.

ಒಂಬತ್ತು ಪಟ್ಟು ಜಾಸ್ತಿಯಾದ ಸಾಲ
2002ರಲ್ಲಿ ಈ ಹೈ ಪ್ರೊಫೈಲ್ ಸಾಲಗಾರರಿಂದ ಬರಬೇಕಾಗಿದ್ದ ಮೊತ್ತ 6,291 ಕೋಟಿ ರು.ನಷ್ಟಿತ್ತು. ಮುಂದಿನ 13 ವರ್ಷಗಳಲ್ಲಿ ಇದು ಒಂಬತ್ತು ಪಟ್ಟು ಜಾಸ್ತಿಯಾಗಿದ್ದು, ಬ್ಯಾಂಕುಗಳಿಗೆ 56,521 ಕೋಟಿ ರು. ಬರಬೇಕಿದೆ. ಈ ಹಣ ಯಾವಾಗ ವಾಪಸ್ ಬರುತ್ತೋ, ದೇವರೂ ಹೇಳಲಾರ.

ಅನೈತಿಕ ಹೊಂದಾಣಿಕೆ
ಇದಕ್ಕೆಲ್ಲ ಕಾರಣ ಸಾರ್ವಜನಿಕ ಕ್ಷೇತ್ರಗಳ ಬ್ಯಾಂಕಿನ ಚೇರ್ಮನ್, ಆಡಿಟರುಗಳು, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬ್ಯಾಂಕುಗಳ ಮಂಡಳಿಯ ಅನೈತಿಕ ಹೊಂದಾಣಿಕೆಯಿಂದ ಭಾರತದ ಬ್ಯಾಂಕುಗಳಿಗೆ ಇಂಥ ಪರಿಸ್ಥಿತಿ ಬಂದೊದಗಿದೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಎಸ್ ನಾಗರಾಜನ್ ಅಭಿಪ್ರಾಯಪಟ್ಟಿದ್ದಾರೆ.

ದೊಡ್ಡಣ್ಣ ಮಹಾರಾಷ್ಟ್ರ ಆನ್ ಟಾಪ್
ಅತೀಹೆಚ್ಚಿನ ಸಾಲ ಮರುಪಾವತಿ ಆಗಬೇಕಿರುವುದು ಮಹಾರಾಷ್ಟ್ರದಲ್ಲಿ. 1,138 ಸಾಲಗಾರರು ಮಹಾರಾಷ್ಟ್ರದಲ್ಲಿದ್ದರೆ, ಮುಂದಿನೆರಡು ಸ್ಥಾನಗಳನ್ನು ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶ ಪಡೆದುಕೊಂಡಿವೆ. ಮಲ್ಯರಿಂದಾಗಿ ಕರ್ನಾಟಕಕ್ಕೆ 'ಕುಖ್ಯಾತಿ' ಬಂದಿದ್ದರೂ, ಮಲ್ಯರನ್ನು ಹೊರತುಪಡಿಸಿ, ಇಲ್ಲಿನ ಸಾಲಗಾರರು ಇದ್ದುದರಲ್ಲೇ ಉತ್ತಮ.

ಸುಸ್ತಿದಾರ ರಾಜಕಾರಣಿಗಳ 'ಅನೈತಿಕ ಸಂಬಂಧ'
ಸುಸ್ತಿದಾರ ಮತ್ತು ರಾಜಕಾರಣಿಗಳ 'ಅನೈತಿಕ ಸಂಬಂಧ'ದಿಂದಾಗಿ ಹಲವಾರು ಬ್ಯಾಂಕುಗಳು ಸಿಬಿಲ್ಗೆ ವರದಿ ನೀಡುವುದೇ ಇಲ್ಲ. ಈ ಕಾರಣದಿಂದಾಗಿಯೇ ಸಾಲಗಾರರಿಗೆ ಸರಕಾರಿ ಬ್ಯಾಂಕುಗಳಿಂದ ಸುಲಭವಾಗಿ ಸಾಲ ಸಿಕ್ಕುಬಿಡುತ್ತದೆ. ವಿಜಯ್ ಮಲ್ಯ ಅವರ ಹೆಸರು ಕೇಳಿಬಂದಿದ್ದು ಈ ಕಾರಣದಿಂದಾಗಿಯೇ.

ಸಾಲ ಮಾಡಿ ಈ ಕುಳಗಳು ಮಾಡಿದ್ದಾದರೂ ಏನು?
ಬ್ಯಾಂಕುಗಳಿಂದ ಪಡೆದ ಭಾರೀ ಹಣವನ್ನು ದುಬೈನಲ್ಲಿ ಡೈಮಂಡ್ ವ್ಯಾಪಾರ, ಅಮೆರಿಕದಲ್ಲಿ ರಿಯಲ್ ಎಸ್ಟೇಟ್, ಕ್ರಿಕೆಟ್ ತಂಡ ಖರೀದಿಸಲು ದುರ್ಬಳಕೆ ಮಾಡಿದ್ದಾರೆ. ವಿಜಯ್ ಮಲ್ಯ ಅವರ ಮೇಲೆ, ಎಸ್ಬಿಐ ನೀಡಿದ ಸಾಲವನ್ನು ಯುನೈಟೆಡ್ ಬ್ರವವರೀಸ್ಗೆ ಬಳಸಿದರೆಂದು ಆರೋಪ ಹೊರಿಸಲಾಗಿದೆ.

ತಪ್ಪು ಯಾರ ಮೇಲೆ ಹೊರೆಸುವುದು?
ವಿಜಯ್ ಮಲ್ಯ ಮತ್ತು ಅವರ ಕಿಂಗ್ಫಿಷರ್ ಪ್ರಕರಣದಿಂದಾಗಿ ಅನೇಕ ಹಗರಣಗಳು ಸುದ್ದಿಗೆ ಗ್ರಾಸವಾಗುತ್ತಿವೆ. ಡೆಟ್ ರಿಕವರಿ ಟ್ರಿಬ್ಯೂನಲ್(ಸಾಲ ವಸೂಲಿ ನ್ಯಾಯಾಧೀಕರಣ)ನಲ್ಲಿ ಸಾವಿರಾರು ಕೇಸುಗಳು ಧೂಳು ತಿನ್ನುತ್ತ ಬಿದ್ದಿವೆ. ಭಾರೀ ಸಾಲ ಮಾಡಿದವರು ತುಪ್ಪ ತಿಂದು ಮಜಾ ಉಡಾಯಿಸುತ್ತಿದ್ದಾರೆ. ತಪ್ಪು ಯಾರ ಮೇಲೆ ಹೊರೆಸುವುದು? ಸಾಲ ಪಡೆದವರ ಮೇಲೋ, ಬೇಕಾಬಿಟ್ಟಿ ಸಾಲ ನೀಡಿದ ಬ್ಯಾಂಕುಗಳ ಮೇಲೋ?












Click it and Unblock the Notifications