ಅಧ್ಯಕ್ಷ ಸ್ಥಾನದಿಂದ ಸೈರಸ್ ಮಿಸ್ತ್ರಿ ವಜಾ: ಸುಪ್ರೀಂಕೋರ್ಟ್ನಲ್ಲಿ ಟಾಟಾ ಸಮೂಹಕ್ಕೆ ಜಯ
ನವದೆಹಲಿ, ಮಾರ್ಚ್ 26: ಸೈರಸ್ ಮಿಸ್ತ್ರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಕಿತ್ತುಹಾಕಿದ ಪ್ರಕರಣದಲ್ಲಿ ಟಾಟಾ ಸನ್ಸ್ಗೆ ಸುಪ್ರೀಂಕೋರ್ಟ್ನಲ್ಲಿ ದೊಡ್ಡ ಗೆಲುವು ಸಿಕ್ಕಿದೆ. ಟಾಟಾ ಸನ್ಸ್ ಅಧ್ಯಕ್ಷರಾಗಿ ಸೈರಸ್ ಮಿಸ್ತ್ರಿ ಅವರನ್ನು ಪುನಃ ನೇಮಕ ಮಾಡುವಂತೆ ರಾಷ್ಟ್ರೀಯ ಕಂಪೆನಿ ಕಾನೂನು ಮೇಲ್ಮನವಿ ನ್ಯಾಯಾಧಿಕರಣ 2019ರ ಡಿ. 17ರಂದು ನೀಡಿದ್ದ ಆದೇಶವನ್ನು ಸುಪ್ರೀಂಕೋರ್ಟ್ ಶುಕ್ರವಾರ ಪಕ್ಕಕ್ಕಿರಿಸಿದೆ.
ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕಿದ ಕ್ರಮ ಸರಿಯಾಗಿದೆ. ಕಾನೂನಿನ ಎಲ್ಲ ಪ್ರಶ್ನೆಯೂ ಟಾಟಾ ಸಮೂಹದ ಪರವಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಎಸ್ಎ ಬೋಬ್ಡೆ ನೇತೃತ್ವದ ನ್ಯಾಯಪೀಠ ಹೇಳಿತು.
ಟಾಟಾದ ಉಪ್ಪಿನಿಂದ ಹಿಡಿದು ತಂತ್ರಜ್ಞಾನ ಸಂಸ್ಥೆಗಳವರೆಗಿನ ಸುಮಾರು 100 ಬಿಲಿಯನ್ ಡಾಲರ್ಗಳ ಮೌಲ್ಯದ ವಿಭಾಗಗಳ ಸಮೂಹಕ್ಕೆ ಕಾರ್ಯನಿರ್ವಾಹಕ ಅಧ್ಯಕ್ಷರನ್ನಾಗಿ ಮಿಸ್ತ್ರಿ ಅವರನ್ನು ಎನ್ಸಿಎಲ್ಎಟಿ ಪುನಃ ನೇಮಿಸಿ ಆದೇಶ ನೀಡಿತ್ತು. ಈ ಆದೇಶಕ್ಕೆ ಕಳೆದ ವರ್ಷದ ಜನವರಿ 20ರಂದು ಸುಪ್ರೀಂಕೋರ್ಟ್ ತಡೆ ನೀಡಿತ್ತು. ಡಿಸೆಂಬರ್ 17ರಂದು ಅಂತಿಮ ತೀರ್ಪನ್ನು ಕಾಯ್ದಿರಿಸಲಾಗಿತ್ತು.

2016ರ ಅಕ್ಟೋಬರ್ ತಿಂಗಳಲ್ಲಿ ನಡೆದ ಬೇಟೆಯ ಆಕ್ರಮಣ ಮತ್ತು ಹೊಂಚು ಮಾಡಿದ ದಾಳಿ ಸ್ವರೂಪದ ಮಂಡಳಿ ಸಭೆಯಲ್ಲಿ ಸೈರಸ್ ಮಿಸ್ತ್ರಿ ಅವರನ್ನು ತೆಗೆದುಹಾಕಲಾಗಿದೆ. ಇದು ಕಾರ್ಪೊರೇಟ್ ಆಡಳಿತ ತತ್ವಗಳು ಮತ್ತು ಸಂಸ್ಥೆಗಳ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಶಪೂರ್ಜಿ ಪಲ್ಲೊಂಜಿ ಸಮೂಹ ಸುಪ್ರೀಂಕೋರ್ಟ್ನಲ್ಲಿ ಹೇಳಿತ್ತು.
ಮಿಸ್ತ್ರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ತೆಗೆದುಹಾಕುವುದನ್ನು ಮಂಡಳಿಯು ತನ್ನ ಹಕ್ಕುಗಳ ಅಡಿಯಲ್ಲಿಯೇ ಮಾಡಿದೆ ಎಂದು ವಾದಿಸಿದ್ದ ಟಾಟಾ ಸಮೂಹ, ತನ್ನ ಮೇಲಿನ ಆರೋಪಗಳನ್ನು ನಿರಾಕರಿಸಿತ್ತು.
2012ರಲ್ಲಿ ರತನ್ ಟಾಟಾ ಅವರ ಸ್ಥಾನಕ್ಕೆ ಮಿಸ್ತ್ರಿ ಅಧ್ಯಕ್ಷರಾಗಿ ನೇಮಕವಾಗಿದ್ದರು. ಆದರೆ ನಾಲ್ಕು ವರ್ಷಗಳ ಬಳಿಕ ನಾಟಕೀಯ ಪ್ರಕ್ರಿಯೆಯಲ್ಲಿ ಅವರನ್ನು ವಜಾಗೊಳಿಸಲಾಗಿತ್ತು.












Click it and Unblock the Notifications