ಬ್ಯಾಂಕಿಂಗ್ ಹಗರಣ: ಆರ್ಬಿಐ ವಿರುದ್ಧ ಕಾನೂನು ಸಮರ ಸಾರಿದ ಸುಬ್ರಮಣಿಯನ್ ಸ್ವಾಮಿ
ನವದೆಹಲಿ, ಫೆಬ್ರವರಿ 3: ಭ್ರಷ್ಟಾಚಾರದ ಪ್ರಕರಣಗಳಿಗೆ ಸಂಬಂಧಿಸಿದಂತೆ ವಿವಿಧ ರಾಜಕಾರಣಿಗಳು, ರಾಜಕೀಯ ಪಕ್ಷಗಳು ಮತ್ತು ಸಂಸ್ಥೆಗಳ ವಿರುದ್ಧ ಕಾನೂನು ಸಮರ ನಡೆಸುತ್ತಿರುವ ಬಿಜೆಪಿ ಮುಖಂಡ ಸುಬ್ರಮಣಿಯನ್ ಸ್ವಾಮಿ ಅವರು ಭಾರತೀಯ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ನಡೆಸಿರುವ ಅಕ್ರಮಗಳ ವಿರುದ್ಧ ಸಿಬಿಐ ತನಿಖೆ ನಡೆಸಲು ಆದೇಶಿಸುವಂತೆ ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.
ಭಾರತದ ಅನೇಕ ಕಡೆಗಳಲ್ಲಿ ನಡೆದ ವಿವಿಧ ಬ್ಯಾಂಕಿಂಗ್/ಹಣಕಾಸು ಹಗರಣಗಳಿಗೆ ಆರ್ಬಿಐ ಅಧಿಕಾರಿಗಳು ನಡೆಸಿದ ಅಕ್ರಮಗಳೇ ಕಾರಣ ಎಂದು ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದು, ಈ ಬಗ್ಗೆ ಸಿಬಿಐ ತನಿಖೆಗೆ ಒತ್ತಾಯಿಸಿದ್ದಾರೆ.
ಈ ಹಗರಣಗಳು ಭಾರತದ ಆರ್ಥಿಕತೆಗೆ ಭಾರಿ ಪ್ರಮಾಣದಲ್ಲಿ ಹೊಡೆತ ನೀಡಿವೆ. ಆರ್ಬಿಐ ಅಧಿಕಾರಿಗಳು ತಮ್ಮ ಶಾಸನಬದ್ಧ ಕರ್ತವ್ಯಗಳನ್ನು ವ್ಯಾಪಕವಾಗಿ ಉಲ್ಲಂಘಿಸಿದ್ದಾರೆ ಮತ್ತು ಇವುಗಳಲ್ಲಿ ತಮ್ಮ ದಿವ್ಯ ನಿರ್ಲಕ್ಷ್ಯವನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಹಗರಣಗಳನ್ನು ತಡೆಯುವಲ್ಲಿ ವಿಫಲರಾಗಿದ್ದಾರೆ ಎಂದು ಸುಬ್ರಮಣಿಯನ್ ಸ್ವಾಮಿ ಮತ್ತು ವಕೀಲ ಸತ್ಯ ಸಭರವಾಲ್ ಆರೋಪಿಸಿದ್ದಾರೆ. ಮುಂದೆ ಓದಿ.

ಆರ್ಬಿಐ ಅಧಿಕಾರಿಗಳ ಪಾತ್ರ ಸ್ಪಷ್ಟ
'ಕಳೆದ ಕೆಲವು ವರ್ಷಗಳಲ್ಲಿ ವಿವಿಧ ಬ್ಯಾಂಕುಗಳಲ್ಲಿ ಹಗರಣಗಳ ಹಿಂದೆ ಹಗರಣಗಳು ವರದಿಯಾಗುತ್ತಿವೆ. ಇವುಗಳಲ್ಲಿ ಆರ್ಬಿಐ ಅಧಿಕಾರಿಗಳ ಪಾತ್ರ ಸ್ಪಷ್ಟವಾಗಿದೆ. ಆದರೆ ಅಚ್ಚರಿಯೆಂದರೆ, ಭಾರತದ ಎಲ್ಲ ಬ್ಯಾಂಕಿಂಗ್ ಸಂಸ್ಥೆಗಳ ಕಾರ್ಯಾಚರಣೆಯ ಮೇಲೆ ನಿಗಾ ವಹಿಸುವ, ನಿಯಂತ್ರಿಸುವ, ಮೇಲ್ವಿಚಾರಣೆ ನಡೆಸುವ, ಲೆಕ್ಕಪರಿಶೋಧನೆ ಮಾಡುವ ಮತ್ತು ನಿರ್ದೇಶಿಸುವ ತನ್ನ ಅಧಿಕಾರಿಗಳನ್ನು ಆರ್ಬಿಐ ಮರಳಿ ಪಡೆದುಕೊಂಡಿದ್ದರೂ ಇದುವರೆಗೂ ಒಬ್ಬನೇ ಒಬ್ಬ ಆರ್ಬಿಐ ಅಧಿಕಾರಿ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ' ಎಂದು ಅರ್ಜಿಯಲ್ಲಿ ದೂರಿದ್ದಾರೆ.

ಜನರು ನಂಬಿಕೆ ಕಳೆದುಕೊಂಡಿದ್ದಾರೆ
ತನ್ನ ಠೇವಣಿದಾರರು, ಹೂಡಿಕೆದಾರರು ಮತ್ತು ಷೇರುದಾರರು ಸೇರಿದಂತೆ ವಿವಿಧ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವಲ್ಲಿ ಆರ್ಬಿಐ ವಿಫಲವಾಗಿದೆ. ಇದರಿಂದ ಜನರು ಭಾರತೀಯ ಬ್ಯಾಂಕಿಂಗ್ ವ್ಯವಸ್ಥೆ ಮೇಲೆ ನಂಬಿಕೆ ಕಳೆದುಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ.

ಯಾರ ಮೇಲೆಯೂ ಕ್ರಮವಿಲ್ಲ
ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಯೋಜನೆಗಳ ಪ್ರಕಾರ ಬ್ಯಾಂಕ್ ನಿರ್ವಹಣೆಯಲ್ಲಿ ಆರ್ಬಿಐ ಹೊಣೆಗಾರನಾಗಿದೆ. ಅದರಲ್ಲಿಯೂ ಸಾರ್ವಜನಿಕ ವಲಯದ ಬ್ಯಾಂಕುಗಳಲ್ಲಿ ಅದರ ಜವಾಬ್ದಾರಿ ಜಾಸ್ತಿ. ಆದರೆ ಮೇಲ್ಮಟ್ಟದಲ್ಲಿ ಸೇರಿದಂತೆ ಇದುವರೆಗೂ ಅಧಿಕ ಮೌಲ್ಯದ ಬ್ಯಾಂಕಿಂಗ್ ಹಗರಣಗಳಲ್ಲಿ ಒಂದನ್ನೂ ಸಿಬಿಐ ತನಿಖೆಗೆ ಕೋರಿಲ್ಲ. ಯಾವುದೇ ಬ್ಯಾಂಕ್ನಲ್ಲಿ ವರದಿಯಾದ ವಂಚನೆಗೆ ಸಂಬಂಧಿಸಿದಂತೆ ಈವರೆಗೆ ಯಾವ ಅಧಿಕಾರಿಯನ್ನೂ ಕರ್ತವ್ಯ ಲೋಪದ ಜವಾಬ್ದಾರರನ್ನಾಗಿ ಮಾಡಿಲ್ಲ ಎಂದು ಆರ್ಬಿಐ ಬಹಿರಂಗಪಡಿಸಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಹತ್ತು ಪ್ರಕರಣ ಉಲ್ಲೇಖ
ಈ ಅರ್ಜಿಯಲ್ಲಿ ಮುಖ್ಯವಾಗಿ ಉಲ್ಲೇಖಿಸಲಾಗಿರುವ ಪ್ರಮುಖ ಹತ್ತು ಬೃಹತ್ ವಂಚನೆ ಪ್ರಕರಣಗಳು,
- ಕಿಂಗ್ಫಿಶರ್ ಹಗರಣ
- ಬ್ಯಾಂಕ್ ಆಫ್ ಮಹಾರಾಷ್ಟ್ರ ಹಗರಣ
- ಉತ್ತರ ಪ್ರದೇಶ ಮೂಲದ ಖಾಸಗಿ ಸಕ್ಕರೆ ಸಂಸ್ಥೆ ಹಗರಣ
- ನೀರವ್ ಮೋದಿ/ಪಿಎನ್ಬಿ ಹಗರಣ
- ಲಕ್ಷ್ಮಿ ವಿಲಾಸ ಬ್ಯಾಂಕ್ ಹಗರಣ
- ಐಎಲ್ & ಎಫ್ಎಸ್ ಹಗರಣ
- ಪಿಎಂಸಿ ಬ್ಯಾಂಕ್ ಹಗರಣ
- ಯೆಸ್ ಬ್ಯಾಂಕ್ ಲಿಮಿಟೆಡ್ ಹಗರಣ
- ಫಸ್ಟ್ ಲೀಸಿಂಗ್ ಕಂಪೆನಿ ಆಫ್ ಇಂಡಿಯಾ ಲಿಮಿಟೆಡ್ ಹಗರಣ












Click it and Unblock the Notifications