ಸೆಬಿಯಿಂದ 'ಸತ್ಯಂ' ರಾಜುಗೆ 14 ವರ್ಷ ನಿಷೇಧ
ಮುಂಬೈ, ಜು.16:ದೇಶಕಂಡ ಅತಿದೊಡ್ಡ ಕಾರ್ಪೊರೇಟ್ ವಂಚನೆ ಪ್ರಕರಣವಾದ ಸತ್ಯಂ ಹಗರಣದ ತನಿಖೆ ಐದೂವರೆ ವರ್ಷಗಳ ನಂತರ ಮುಕ್ತಾಯ ಕಂಡಿದೆ. ಸತ್ಯಂ ಕಂಪ್ಯೂಟರ್ಸ್ ಸಂಸ್ಥಾಪಕ ರಾಮಲಿಂಗರಾಜು ಹಾಗೂ ಇತರೆ 4 ಜನರಿಗೆ ಷೇರು ಮಾರುಕಟ್ಟೆಯಿಂದ 14 ವರ್ಷಗಳ ಕಾಲ ನಿಷೇಧ ಹೇರಲಾಗಿದೆ.
ಮುಂದಿನ 14 ವರ್ಷಗಳ ಅವಧಿಯವರೆಗೆ ಸತ್ಯಂ ಕಂಪ್ಯೂಟರ್ ಸ್ಥಾಪಕ ಬಿ.ರಾಮಲಿಂಗ ರಾಜು ಹಾಗೂ ಇತರ ನಾಲ್ವರು ಷೇರು ಮಾರುಕಟ್ಟೆ ವ್ಯವಹಾರ ನಡೆಸುವಂತಿಲ್ಲ ಎಂದು ನಿರ್ಬಂಧ ವಿಧಿಸಿ ಭಾರತೀಯ ಷೇರು ವಿನಿಮಯ ನಿಯಂತ್ರಣ ಮಂಡಳಿ (ಸೆಬಿ) ತೀರ್ಪು ನೀಡಿದೆ. ಕಾನೂನುಬಾಹಿರವಾಗಿ ಸಂಪಾದಿಸಿದ್ದ 1,849 ಕೋಟಿ ರೂ.ಗಳ ಸ್ವತ್ತನ್ನು ಬಡ್ಡಿ ಸಹಿತವಾಗಿ ಹಿಂತಿರುಗಿಸುವಂತೆ ರಾಮಲಿಂಗರಾಜು ಅವರಿಗೆ ಸೂಚಿಸಲಾಗಿದೆ.
45 ದಿನಗಳ ಒಳಗೆ ಹಣವನ್ನು ಸೆಬಿಗೆ ಠೇವಣಿಯಿಡಬೇಕು ಹಾಗೂ 2009ರ ಜನವರಿ 7ರಿಂದ ಅನ್ವಯವಾಗುವಂತೆ ವಾರ್ಷಿಕ 12 ಶೇಕಡಾ ಬಡ್ಡಿಯನ್ನು ಸೆಬಿಗೆ ಸಂದಾಯ ಮಾಡಬೇಕು ಎಂದು ಆದೇಶಿಸಲಾಗಿದೆ. ಸುಮಾರು 65 ಪುಟಗಳ ಆದೇಶ ಪ್ರತಿಯಲ್ಲಿ ಹೇಳಲಾಗಿದೆ.

ಸತ್ಯಂ ಕಂಪೆನಿಯ ಅಂದಿನ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ರಾಜು ಅವರ ಸಹೋದರ ಬಿ.ರಾಮ ರಾಜು, ಮಾಜಿ ಸಿಎಫ್ಒ ವಡ್ಲಾಮನಿ ಶ್ರೀನಿವಾಸ್,ಮಾಜಿ ಉಪಾಧ್ಯಕ್ಷ ಜಿ.ರಾಮಕೃಷ್ಣ ಹಾಗೂ ಆಂತರಿಕ ಲೆಕ್ಕಪರಿಶೋಧನೆಯ ಮಾಜಿ ಮುಖ್ಯಸ್ಥ ವಿ.ಎಸ್.ಪ್ರಭಾಕರ ಷೇರು ಮಾರುಕಟ್ಟೆಯಿಂದ ನಿಷೇಧಕ್ಕೆ ಒಳಗಾಗಿದ್ದಾರೆ.
ವೈಯಕ್ತಿಕ ಲಾಭಗಳ ಉದ್ದೇಶದ ಹಾಗೂ ಕಂಪೆನಿಗೆ ಹಾಗೂ ಹೂಡಿಕೆದಾರ ಭದ್ರತೆಗಳಿಗೆ ಕೇಡನ್ನುಂಟುಮಾಡಿದ ಅತ್ಯಾಧುನಿಕ ಕಾರ್ಪೊರೇಟರ್ ಹಗರಣ ಇದಾಗಿದೆ. ಪೂರ್ವ ಮಧ್ಯಸ್ಥಿಕೆ, ಗಾಢವಾಗಿ ಆಲೋಚಿಸಿ ಯೋಜಿಸಿರುವ ಮತ್ತು ಉದ್ದೇಶಪೂರ್ವಕ ವಿನ್ಯಾಸದಲ್ಲಿ ರೂಪಿತವಾಗಿದ್ದ ಬೃಹತ್ ಹಗರಣದಲ್ಲಿ ಐವರು ಆರೋಪಿಗಳೂ ಶಾಮೀಲಾಗಿದ್ದಾರೆ ಎಂದು 65 ಪುಟಗಳ ಆದೇಶದಲ್ಲಿ ಸೆಬಿ ಹೇಳಿದೆ.
2009ರಲ್ಲಿ ಸೆಬಿಗೆ ರಾಮಲಿಂಗರಾಜು ಕಳಿಸಿದ್ದ ಇಮೇಲ್ ನಿಂದಾಗಿ ಇಡೀ ಪ್ರಕರಣ ಬೆಳಕಿಗೆ ಬಂದಿತ್ತು.ನಂತರ ಹೂಡಿಕೆದಾರರ ಹಿತಾಸಕ್ತಿ ಕಾಯ್ದುಕೊಳ್ಳಲು ಸರ್ಕಾರ ಕಂಪನಿಯನ್ನು ಹರಾಜು ಹಾಕಿತ್ತು. ಸತ್ಯಂ ಕಂಪ್ಯೂಟರ್ಸ್ ಸಂಸ್ಥೆಯನ್ನು ಟೆಕ್ ಮಹೀಂದ್ರಾಅ ಖರೀದಿಸಿತ್ತು.
ಸುಮಾರು 12,318 ಕೋಟಿ ರುಗೂ ಅಧಿಕ ಮೊತ್ತದ ಅವ್ಯವಹಾರ ನಡೆದಿದೆ ಎಂದು ಸೆಬಿ ಹೇಳಿದೆ. 4,783 ಕೋಟಿ ರು ಮೊತ್ತದ 7,561 ನಕಲಿ ಬಿಲ್ ಗಳು, ಬ್ಯಾಂಕಿನಲ್ಲಿ 3,308 ಕೋಟಿ ನಿಶ್ಚಿತ ಠೇವಣಿ ಮೊತ್ತ, 376 ಕೋಟಿ ರು ಮೌಲ್ಯದ ನಕಲಿ ಬಡ್ಡಿದರ ರಸೀತಿ ಸೃಷ್ಟಿಸಲಾಗಿತ್ತು ಎಂದು ಸೆಬಿ ಹೇಳಿದೆ. (ಪಿಟಿಐ)












Click it and Unblock the Notifications