ಕಾಯ್ದಿರಿಸಿದ ದುಡ್ಡು ಕೊಡಲು ಸಾಧ್ಯವಿಲ್ಲ: ಕೇಂದ್ರಕ್ಕೆ ಊರ್ಜಿತ್ ಪಟೇಲ್ ಖಡಕ್ ಹೇಳಿಕೆ
ನವದೆಹಲಿ, ನವೆಂಬರ್ 28: ಅಂತಾರಾಷ್ಟ್ರೀಯ ಮಟ್ಟದಲ್ಲಿನ ಆರ್ಥಿಕತೆಯ ಚಂಚಲತೆಯನ್ನು ಗಮನದಲ್ಲಿಟ್ಟುಕೊಂಡು ಮತ್ತು ಉನ್ನತ ವಿಶ್ವಾಸಾರ್ಹತೆಯನ್ನು ಕಾಪಾಡಿಕೊಳ್ಳಲು ರಿಸರ್ವ್ ಬ್ಯಾಂಕ್ ತನ್ನ ಪ್ರಸ್ತುತದ ನಗದು ಸಂಗ್ರಹದ ಮಟ್ಟವನ್ನು ಉಳಿಸಿಕೊಳ್ಳುವುದು ಅತ್ಯಗತ್ಯ ಎಂದು ಗವರ್ನರ್ ಊರ್ಜಿತ್ ಪಟೇಲ್ ಸರ್ಕಾರಕ್ಕೆ ಮನವರಿಕೆ ಮಾಡಿದ್ದಾರೆ.
ಹಣಕಾಸು ಸ್ಥಾಯಿ ಸಮಿತಿಗೆ ಮಾಹಿತಿ ನೀಡಿದ ಊರ್ಜಿತ್ ಪಟೇಲ್, ಒತ್ತಡದ ಸಂದರ್ಭಗಳಲ್ಲಿ ಬಳಸಿಕೊಳ್ಳಲು ಆ ಹಣವನ್ನು ಕಾಯ್ದಿರಿಸಲಾಗಿದೆ. ಆರ್ಥಿಕ ಪರಿಸ್ಥಿತಿ ಸಹಜವಾಗಿರುವ ಸಂದರ್ಭಕ್ಕೆ ಅಲ್ಲ ಎನ್ನುವ ಮೂಲಕ ಅವರು ಸರ್ಕಾರಕ್ಕೆ ಹಣಕಾಸನ್ನು ಒದಗಿಸಲು ಸಾಧ್ಯವಾಗುವುದಿಲ್ಲ ಎಂಬ ಸಂದೇಶ ರವಾನಿಸಿದ್ದಾರೆ.
ಆರ್ ಬಿಐ ಮತ್ತು ಸರ್ಕಾರದ ನಡುವೆ ಮನಸ್ತಾಪ ಉಂಟಾದ ಸಂದರ್ಭದಿಂದ ಇದೇ ಮೊದಲ ಬಾರಿಗೆ ಊರ್ಜಿತ್ ಪಟೇಲ್ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ.

ಆರ್ ಬಿಐ ದೊಡ್ಡ ಪ್ರಮಾಣದಲ್ಲಿ ಹಣಕಾಸಿನ ಸಂಗ್ರಹವನ್ನು ಕಾಯ್ದಿರಿಸಿಕೊಂಡಿದ್ದು, ತನ್ನ ಒಟ್ಟಾರೆ ಆರ್ಥಿಕ ಮೌಲ್ಯದಲ್ಲಿ ಶೇ 28ರಷ್ಟು ಅಂದರೆ, 9.7 ಲಕ್ಷ ಕೋಟಿ ರೂ. ಇರಿಸಿಕೊಂಡಿದೆ.
ಮಂಗಳವಾರ ನಡೆದ ಸಮಿತಿ ಸಭೆಯಲ್ಲಿ ಅಪನಗದೀಕರಣದಿಂದ ಉಂಟಾದ ಪರಿಣಾಮಗಳ ಬಗ್ಗೆ ಚರ್ಚಿಸಲಾಯಿತು. ಡಿಜಿಟಲ್ ವ್ಯವಹಾರ ಮತ್ತು ಆರೋಗ್ಯಯುತ ಸಾಲ ಬೆಳವಣಿಗೆಯ ಮೂಲಕ ಏರುಪೇರನ್ನು ಸರಿದೂಗಿಸುವ ಕೆಲಸ ಪ್ರಮಾಣಿಕವಾಗಿ ನಡೆದಿದೆ ಎಂದು ಊರ್ಜಿತ್ ಪಟೇಲ್ ಸಭೆಯಲ್ಲಿ ತಿಳಿಸಿದರು.
ಸಮಿತಿಯಲ್ಲಿದ್ದ ಸಂಸದರು ಸರ್ಕಾರದೊಂದಿಗೆ ಇತ್ತೀಚೆಗೆ ನಡೆಸಿದ ಮಾತುಕತೆಯ ವಿವರಗಳನ್ನು ಬಹಿರಂಗಪಡಿಸುವಂತೆ ಆಗ್ರಹಿಸಿದು. ಇದಕ್ಕೆ ಊರ್ಜಿತ್, ಇನ್ನು ಎರಡು ವಾರಗಳಲ್ಲಿ ಲಿಖಿತವಾಗಿ ಅದನ್ನು ಸಲ್ಲಿಸುವುದಾಗಿ ತಿಳಿಸಿದರು.
ಕಾಂಗ್ರೆಸ್ ಮುಖಂಡ ವೀರಪ್ಪ ಮೊಯಿಲಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅನೇಕ ಸಂಸದರು ಮತ್ತು ಮಾಜಿ ಸಚಿವರು ಪಾಲ್ಗೊಂಡಿದ್ದರು.
ತೃಣಮೂಲ ಕಾಂಗ್ರೆಸ್ ನಾಯಕರಾದ ಸೌಗತಾ ದುಬೆ ಮತ್ತು ದಿನೇಶ್ ತ್ರಿವೇದಿ, ಕಾಂಗ್ರೆಸ್ನ ದಿಗ್ವಿಜಯ್ ಸಿಂಗ್ ಸೇರಿದಂತೆ ವಿರೋಧ ಪಕ್ಷಗಳ ಮುಖಂಡರು ಆರ್ ಬಿಐ ಸ್ವಾಯತ್ತತೆ ರಕ್ಷಣೆ ವಿಚಾರಲ್ಲಿ ಊರ್ಜಿತ್ ಪಟೇಲ್ ಅವರೆಡೆಗೆ ಹಲವು ಪ್ರಶ್ನೆಗಳನ್ನು ತೂರಿದರು. ಇವೆಲ್ಲದಕ್ಕೂ ಲಿಖಿತ ಉತ್ತರ ನೀಡುವುದಾಗಿ ಅವರು ಪ್ರತಿಕ್ರಿಯಿಸಿದರು.












Click it and Unblock the Notifications