ಪೆಟ್ರೋಲ್, ಡೀಸೆಲ್ ಜಿಎಸ್ಟಿ ವ್ಯಾಪ್ತಿಗೆ ತರಲು ಕೇಂದ್ರ ಚಿಂತನೆ: ತೈಲ ಸಚಿವ
ನವದೆಹಲಿ, ನವೆಂಬರ್ 14: ಪೆಟ್ರೋಲ್ ಮತ್ತು ಡೀಸೆಲ್ ತೈಲ ಮಾರಾಟ ಜಿಎಸ್ಟಿ ತೆರಿಗೆ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ. ಕೇಂದ್ರ ಸರ್ಕಾರವು ಈಗಾಗಲೇ ಈ ಕುರಿತು ಚಿಂತನೆ ನಡೆಸಿದೆ. ಹೌದು, ಪೆಟ್ರೋಲ್ ಮತ್ತು ಡೀಸೆಲ್ ಮಾರಾಟದಲ್ಲಿ ಸರಕು ಮತ್ತು ಸೇವಾ ತೆರಿಗೆ (ಜಿಎಸ್ಟಿ) ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರ ಸಿದ್ಧವಿದೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಸೋಮವಾರ ತಿಳಿಸಿದ್ದಾರೆ.
ಆದರೆ ಪಟ್ರೋಲ್ ಮತ್ತು ಡೀಸೆಲ್ ತೈಲ ಮಾರಟವನ್ನು ಜಿಎಸ್ಟಿ ವ್ಯಾಪ್ತಿಗೆ ಜಾರಿಗೆ ತರಲು ರಾಜ್ಯಗಳು ಇದನ್ನು ಒಪ್ಪುವ ಸಾಧ್ಯತೆ ಕಡಿಮೆ ಇದೆ. ಪೆಟ್ರೋಲ್-ಡೀಸೆಲ್ ಸರಕನ್ನು ಜಿಎಸ್ಟಿ ವ್ಯಾಪ್ತಿಗೆ ತರಲು ರಾಜ್ಯಗಳ ಒಪ್ಪಿಗೆ ಅಗತ್ಯವಾಗಿದ್ದು, ಈ ದಿಸೆಯಲ್ಲಿ ರಾಜ್ಯಗಳು ಮುತುವರ್ಜಿ ವಹಿಸಿಬೇಕಾಗಿದೆ ಕೇಂದ್ರವೂ ಈ ಚಿಂತನೆಗೆ ಸಿದ್ಧವಾಗಿದೆ ಎಂದು ಸಚಿವ ಹರ್ದೀಪ್ ಸಿಂಗ್ ಪುರಿ ಶ್ರೀನಗರದಲ್ಲಿ ತಿಳಿಸಿದರು ಎಂದು ಪಿಟಿಐ ವರದಿ ಮಾಡಿದೆ.
ಇದಕ್ಕಾಗಿ ನಾವು ಈಗಾಗಲೇ ಸಿದ್ಧತೆ ನಡೆಸಿದ್ದೇವೆ ಎಂದ ಸಚಿವರು ಆದರೆ, ಹೇಗೆ ಕಾರ್ಯಗತಗೊಳಿಸಬೇಕು ಎಂಬುದು ಎರಡನೇ ಸಮಸ್ಯೆಯಾಗಿದೆ. ಈ ಪ್ರಶ್ನೆಯನ್ನು ಹಣಕಾಸು ಸಚಿವರ ಬಳಿ ಕೇಳಬೇಕು. ಪೆಟ್ರೋಲ್ ಮತ್ತು ಡೀಸೆಲ್ನ್ನು ಜಿಎಸ್ಟಿ ವ್ಯಾಪ್ತಿಗೆ ತರಬೇಕೆಂಬ ಬಹುದಿನಗಳ ಬೇಡಿಕೆಯ ನಡುವೆ ರಾಜ್ಯಗಳ ನಡುವೆ ಒಪ್ಪಂದಕ್ಕೆ ಬರುವ ಸಾಧ್ಯತೆ ಕಡಿಮೆ ಇದೆ ಎಂದು ವಿಚಾರವನ್ನು ಪೆಟ್ರೋಲಿಯಂ ಸಚಿವರು ಒಪ್ಪಿಕೊಂಡರು.
ಪೆಟ್ರೋಲಿಯಂ ತೆರಿಗೆ ರಾಜ್ಯಗಳ ಆದಾಯ
ರಾಜ್ಯಗಳ ಆದಾಯದ ಮುಖ್ಯ ಮೂಲವೆಂದರೆ ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ವಿಧಿಸುವ ತೆರಿಗೆಯಾಗಿದೆ ಎಂದು ಕೇಂದ್ರ ಸಚಿವರು ಹೇಳಿದರು. ಇವುಗಳಿಂದ ರಾಜ್ಯಗಳು ಆದಾಯ ಪಡೆಯುತ್ತವೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಕಷ್ಟವೇನಲ್ಲ ಎಂದು ಪುರಿ ಹೇಳಿದರು. ಆದಾಯ ಸ್ವೀಕರಿಸುವವರು ಅದನ್ನು ಏಕೆ ಬಿಡಲು ಬಯಸುತ್ತಾರೆ? ಹಣದುಬ್ಬರ ಮತ್ತಿತರ ವಿಷಯಗಳ ಬಗ್ಗೆ ಕೇಂದ್ರ ಸರ್ಕಾರ ಮಾತ್ರ ಚಿಂತಿಸುತ್ತಿದೆ.
ಕೇರಳ ಹೈಕೋರ್ಟ್ನ ತೀರ್ಪನ್ನು ಉಲ್ಲೇಖಿಸಿದ ಸಚಿವ ಪುರಿ, ಜಿಎಸ್ಟಿ ಕೌನ್ಸಿಲ್ನಲ್ಲಿ ಈ ವಿಷಯವನ್ನು ಕೈಗೆತ್ತಿಕೊಳ್ಳಲು ಸೂಚಿಸಲಾಗಿದೆ. ಆದರೆ ರಾಜ್ಯಗಳ ಹಣಕಾಸು ಮಂತ್ರಿಗಳು ಅದನ್ನು ಒಪ್ಪಲಿಲ್ಲ ಎಂದು ಹೇಳಿದರು. ಜಿಎಸ್ಟಿಗೆ ಸಂಬಂಧಿಸಿದಂತೆ ನಮ್ಮ ಅಥವಾ ನಿಮ್ಮ ಆಶಯಗಳು ಜಾರಿಯಲ್ಲಿರುತ್ತವೆ. ಕೇಂದ್ರವು ಸಹಕಾರಿ ಒಕ್ಕೂಟ ವ್ಯವಸ್ಥೆಯ ಭಾಗವಾಗಿದ್ದೇವೆ ಎಂದು ಅವರು ಹೇಳಿದರು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕುಸಿತ
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುವ ಸಾಧ್ಯತೆಯ ಬಗ್ಗೆ ಕೇಳಿದಾಗ, ಪುರಿ, ನಿಮ್ಮ ಪ್ರಶ್ನೆಯಿಂದ ನನಗೆ ಆಶ್ಚರ್ಯವಾಗಿದೆ. ಕಳೆದ ಒಂದು ವರ್ಷದಲ್ಲಿ ತೈಲ ಬೆಲೆಯಲ್ಲಿ ಕಡಿಮೆ ಏರಿಕೆ ಬಹುಶಃ ಭಾರತದಲ್ಲಿ ಮಾತ್ರ ಸಂಭವಿಸಿದೆ. ಮೋರ್ಗನ್ ಸ್ಟಾನ್ಲಿ ಕೂಡ ಭಾರತವು ವಿಶ್ವದ ಅತ್ಯುತ್ತಮ ಸ್ಥಾನಗಳಲ್ಲಿ ಒಂದಾಗಿದೆ ಎಂದು ಹೇಳುತ್ತಿದ್ದಾರೆ. ಅಬಕಾರಿ ಸುಂಕ ಕಡಿತದಂತಹ ಕ್ರಮಗಳನ್ನು ಕೈಗೊಳ್ಳುವ ಮೂಲಕ ಭಾರತವು ಕಚ್ಚಾ ತೈಲ ಬೆಲೆ ಏರಿಕೆಯ ಪ್ರಭಾವದಿಂದ ತನ್ನನ್ನು ತಾನು ರಕ್ಷಿಸಿಕೊಂಡಿದೆ ಎಂದು ಹೇಳಿದರು.