ನಿವೃತ್ತ ಜೀವನದ ಬಗ್ಗೆ ಯೋಚನೆಯೇ ಮಾಡದ ಭಾರತೀಯರು, ಇಲ್ಲಿದೆ ಲೆಕ್ಕಾಚಾರ
100ಕ್ಕೆ 33 ಮಂದಿ ಭಾರತೀಯರು ಮಾತ್ರ ತಮ್ಮ ನಿವೃತ್ತ ಜೀವನಕ್ಕೆ ಬೇಕಾದಷ್ಟು ಉಳಿತಾಯ ಮಾಡುವ ಬಗ್ಗೆ ಯೋಚನೆ ಮಾಡುತ್ತಾರಂತೆ. ಈಗ ನಿಮ್ಮನ್ನು ನೀವು ಕೇಳಿಕೊಳ್ಳಿ: ಯಾವ ಕಡೆಗೆ ನೀವಿದ್ದೀರಿ? ಇಂಥದ್ದೊಂದು ವರದಿ ನೀಡಿರುವುದು ಜಾಗತಿಕ ಮಟ್ಟದಲ್ಲಿ ಸಮೀಕ್ಷೆ ನಡೆಸಿದ ನಂತರ. ಸಮೀಕ್ಷೆ ನಡೆಸಿರುವುದು ಎಚ್ ಎಸ್ ಬಿಸಿಯಿಂದ.
ನಿವೃತ್ತಿ ನಂತರ ಎಷ್ಟು ಹಣ ಬೇಕಾಗುತ್ತದೆ ಎಂಬ ಬಗ್ಗೆ ತಿಳಿವಳಿಕೆ ಕೊರತೆ ಇರುವುದರಿಂದ ಹೀಗಾಗುತ್ತದೆ. ಜತೆಗೆ ವರ್ತಮಾನದ ಖರ್ಚುಗಳನ್ನು ಆದ್ಯತೆ ಆಧಾರದ ಮೇಲೆ ವಿಂಗಡಿಸದೆ ಹಾಗೂ ವಯಸ್ಸಾದ ನಂತರ ಆರ್ಥಿಕ ಸ್ಥಿತಿ ಹೇಗಿರಬಹುದು ಎಂಬ ಅಂದಾಜು ಇರದ ಕಾರಣಕ್ಕೆ ಹೀಗಾಗುತ್ತದೆ ಎಂದು ಹೇಳಲಾಗಿದೆ.
ಭವಿಷ್ಯ ನಿಧಿ(EPFO) ಬಡ್ಡಿದರ ಶೇ 8.65 ರಿಂದ ಶೇ 8.55ಕ್ಕೆ ಇಳಿಕೆ
ಎಚ್ ಎಸ್ ಬಿಸಿಯಿಂದ ಆ ವರದಿಯನ್ನು 'ಫ್ಯೂಚರ್ ಆಫ್ ರಿಟೈರ್ ಮೆಂಟ್: ಬ್ರಿಡ್ಜಿಂಗ್ ದ ಗ್ಯಾಪ್' ಎಂದು ಕರೆಯಲಾಗಿದೆ. ಹಲವರು ಈಗಲೂ ಯೋಚಿಸುವುದು ಹೇಗೆಂದರೆ, ನಿವೃತ್ತಿ ಅಂದರೆ ಜೀವನದ ಅಂತ್ಯವಲ್ಲ. ತುಂಬ ಕಡಿಮೆ ಅವಧಿಯ ಭವಿಷ್ಯ ಅಂತಲೂ ಅಲ್ಲ. ಯಾವುದೇ ವ್ಯಕ್ತಿಯ ಜೀವನದಲ್ಲಿ ತಾವು ಅಂದುಕೊಂಡಿದ್ದನ್ನು ಪ್ರಯತ್ನಿಸಲು ಸಿಗುವ ಅವಕಾಶ.
ಆಯಾ ವಯಸ್ಸಿನ ಅಗತ್ಯವನ್ನು ವಿಂಗಡಿಸಲು ಸಾಧ್ಯವಿಲ್ಲ
ಆದರೆ, ಆಯಾ ವಯಸ್ಸಿಗೆ ಆದ್ಯತೆ ಬದಲಾಗುತ್ತದೆ. 65ರ ಜತೆಗೆ 75ನೇ ವಯಸ್ಸನ್ನು ಮತ್ತು ಆ ನಂತರ 85ರ ವಯಸ್ಸಿನ ಪ್ರಾಮುಖ್ಯವನ್ನು ಹೋಲಿಸಲು ಸಾಧ್ಯವಿಲ್ಲ ಎನ್ನುತ್ತಾರೆ ಎಚ್ ಎಸ್ ಬಿಸಿ ಇಂಡಿಯಾದ ರೀಟೇಲ್ ಬ್ಯಾಂಕಿಂಗ್ ಮತ್ತು ವೆಲ್ತ್ ಮ್ಯಾನೇಜ್ ಮೆಂಟ್ ನ ಮುಖ್ಯಸ್ಥರಾದ ಎಸ್. ರಾಮಕೃಷ್ಣ.
ಹದಿನಾರು ಮಾರುಕಟ್ಟೆಗಳಲ್ಲಿ ನಡೆದ ಸಮೀಕ್ಷೆ
ಆಸ್ಟ್ರೇಲಿಯಾ, ಅರ್ಜೆಂಟೀನಾ, ಕೆನಡಾ, ಚೀನಾ, ಮಲೇಶಿಯಾ, ಮೆಕ್ಸಿಕೋ, ಸಿಂಗಾಪುರ್, ತೈವಾನ್, ಫ್ರಾನ್ಸ್, ಹಾಂಕಾಂಗ್, ಭಾರತ ಇಂಡೋನೇಷ್ಯಾ, ಟರ್ಕಿ, ಯುಎಇ, ಯುಕೆ ಮತ್ತು ಯುಎಸ್ ಎನಲ್ಲಿ ಆನ್ ಲೈನ್ ಮೂಲಕ ಸಂಶೋಧನೆ ನಡೆಸಿ, ಈ ವರದಿ ನೀಡಲಾಗಿದೆ. ಎಚ್ ಎಸ್ ಬಿಸಿ ಪರವಾಗಿ ಐಪಿಎಸ್ ಒಎಸ್ ನಿಂದ ಈ ಸಂಶೋಧನೆ ನಡೆಸಿದ್ದು, ಹದಿನಾರು ಸಾವಿರ ಮಂದಿ ಇದರಲ್ಲಿ ಪಾಲ್ಗೊಂಡಿದ್ದರು. ಸಮೀಕ್ಷೆ ಪಾಲ್ಗೊಂಡ ಪೈಕಿ ಶೇ 19ರಷ್ಟು ಮಂದಿ ಮಾತ್ರ ಭವಿಷ್ಯದ ಆರೋಗ್ಯ-ಚಿಕಿತ್ಸೆ ಶುಲ್ಕಕ್ಕಾಗಿ ಉಳಿತಾಯ ಮಾಡುವುದಾಗಿ ಹೇಳಿದ್ದರೆ, ಶೇ 51ರಷ್ಟು ಮಂದಿ ಸ್ವಂತ ಮನೆಗಾಗಿ ಹಣ ಉಳಿಸಿಕೊಳ್ಳಬೇಕು ಎಂಬ ಉದ್ದೇಶ ಇದೆ.
ಆಯಾ ದಿನದ ಅಗತ್ಯದ ಬಗ್ಗೆಯೇ ಹೆಚ್ಚು ಯೋಚಿಸುತ್ತಾರೆ
ಈಗ ಉದ್ಯೋಗ ಮಾಡುತ್ತಿರುವ ಶೇ 56ರಷ್ಟು ಆಯಾ ದಿನದ ಖರ್ಚಿನ ಬಗ್ಗೆ ಹೆಚ್ಚು ಯೋಚನೆ ಮಾಡುವವರಾಗಿದ್ದರೆ, ಶೇ 53ರಷ್ಟು ಮಂದಿ ತಮ್ಮ ಅಲ್ಪಕಾಲೀನ ಗುರಿಯನ್ನು ತಲುಪುವ ಉದ್ದೇಶದಿಂದ ಎಲ್ಲೋ ಸ್ವಲ್ಪ ಹಣವನ್ನು ಉಳಿಸುತ್ತಾರಂತೆ. ಇವತ್ತು ತಿಂದುಂಡು, ಮಜಾ ಮಾಡಿದರೆ ಸಾಕು. ಭವಿಷ್ಯದ ಬಗ್ಗೆ ಯಾಕೆ ಯೋಚನೆ ಮಾಡಬೇಕು ಎಂದು ಶೇ 45ರಷ್ಟು ಮಂದಿ ಬಿಂದಾಸ್ ಉತ್ತರ ನೀಡಿದ್ದಾರೆ.
ನಿವೃತ್ತರಾಗುವ ಯೋಚನೆಯೇ ಇಲ್ಲದವರು
ಮೂರನೇ ಎರಡು ಭಾಗದಷ್ಟು ಜನರಿಗೆ ತಾವು ನಿವೃತ್ತರಾಗುವ ಬಗ್ಗೆ ಆಲೋಚನೆಯೇ ಇಲ್ಲ. ಅರ್ಧಕ್ಕಿಂತ ಹೆಚ್ಚಿನ ಪ್ರಮಾಣದವರಿಗೆ ನಿವೃತ್ತರಾದ ಮೇಲೆ ಹೊಸ ಉದ್ಯಮ ಅಥವಾ ವ್ಯವಹಾರ ಆರಂಭಿಸುವ ಇರಾದೆ. ಆದರೆ ಜಾಗತಿಕ ಮಟ್ಟದಲ್ಲಿ ಗಮನಿಸುವಾಗ ನಿವೃತ್ತಿ ನಂತರ ಖರ್ಚಿಗೆ ಎಷ್ಟು ಹಣ ಬೇಕಾಗುತ್ತದೆ ಎಂದು ನಮಗೆ ಗೊತ್ತಿದೆ ಎಂದವರ ಸಂಖ್ಯೆ ಹೆಚ್ಚಿದೆ. ಇದನ್ನು ಸಕಾರಾತ್ಮಕ ಬೆಳವಣಿಗೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಿವೃತ್ತರಾದ ಮೇಲೆ ಸ್ವಾತಂತ್ರ್ಯಕ್ಕೆ ಕಡಿವಾಣ ಬೀಳುತ್ತದೆ, ಹೊಸ ಹವ್ಯಾಸ ಹಾಗೂ ಆಸಕ್ತಿ ರೂಢಿಸಿಕೊಳ್ಳಲು ಅವಕಾಶ ಸಿಗುತ್ತದೆ, ಆರೋಗ್ಯವನ್ನು ಚೆನ್ನಾಗಿಟ್ಟುಕೊಳ್ಳಲು ಸಮಯ ಸಿಕ್ಕಂತಾಗುತ್ತದೆ ಎಂಬುದು ಬಹಳ ಸಾಮಾನ್ಯವಾಗಿ ಕೇಳಿಬಂದಿರುವ ಉತ್ತರಗಳು.