ಕಿಸಾನ್ ವಿಕಾಸ್ ಪತ್ರ ಪಡೆಯಲು ಪ್ಯಾನ್ ಕಾರ್ಡ್ ಬೇಕಿಲ್ಲ!
ನವದೆಹಲಿ, ನ.18: ಶಾಶ್ವತ ಖಾತೆ ಸಂಖ್ಯೆ ಅಥವಾ ಪ್ಯಾನ್ ಕಾರ್ಡ್ ನಂಬರ್ ಇಲ್ಲದಿದ್ದರೂ 'ಕಿಸಾನ್ ವಿಕಾಸ್ ಪತ್ರ' ಪಡೆಯುವ ಮೂಲಕ ಸಣ್ಣ ಮಟ್ಟದ ಹೂಡಿಕೆಗೆ ಸರ್ಕಾರ ಅವಕಾಶ ಮಾಡಿಕೊಟ್ಟಿದೆ.
ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ವಾರ್ತಾ ಸಚಿವ ರವಿಶಂಕರ್ ಪ್ರಸಾದ್ ಅವರು ಈ ಬಗ್ಗೆ ಮಂಗಳವಾರ ಮಾತನಾಡಿ ಕಿಸಾನ್ ವಿಕಾಸ್ ಪತ್ರ ಪಡೆಯಲು ಇದ್ದ ಕೆಲವು ಅನನುಕೂಲಗಳನ್ನು ಸರಿಪಡಿಸಲಾಗಿದೆ ಎಂದಿದ್ದಾರೆ.
ಸಣ್ಣ ಉಳಿತಾಯ ಯೋಜನೆಗಳಿಗೆ ಪುಷ್ಟಿ ನೀಡಲು ನಿರ್ಧರಿಸಲಾಗಿದೆ. ಈ ಬಗ್ಗೆ ಬಜೆಟ್ ನಲ್ಲೇ ಘೋಷಿಸಲಾಗಿತ್ತು. ಅದರಂತೆ ಸಣ್ಣ ಹೂಡಿಕೆದಾರರ ನೆಚ್ಚಿನ ಯೋಜನೆಯಾದ ಕೆವಿಪಿಯಲ್ಲಿ ಹಣ ತೊಡಗಿಸಲು ಹೆಚ್ಚಿನ ಅವಕಾಶ ಲಭ್ಯವಿದ್ದು, ಹೂಡಿಕೆ ವಿಧಾನ ಈಗ ಸರಳೀಕೃತಗೊಂಡಿದೆ ಎಂದು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಕಿಸಾನ್ ವಿಕಾಸ್ ಪತ್ರ ಅಲ್ಲದೆ ಎಲ್ಲಾ ರಾಷ್ಟ್ರೀಯ ಉಳಿತಾಯ ಯೋಜನೆ(NSS) KYC ಬದಲಾದ ನಿಯಮಗಳು ಜನವರಿ 2012ರಿಂದ ಅನ್ವಯವಾಗುವಂತೆ ಅಂಚೆ ಕಚೇರಿ ಹಾಗೂ ಬ್ಯಾಂಕ್ ಗಳಲ್ಲಿ ಲಭ್ಯವಿದೆ ಎಂದಿದ್ದಾರೆ.

ಕೆವಿಪಿಯಲ್ಲಿ 1000, 5,000, 10,000 ಹಾಗೂ 50,000 ರು ತನಕ ಹೂಡಿಕೆ ಮಾಡಬಹುದಾಗಿದ್ದು, ಹೂಡಿಕೆ ಮಿತಿಯಲ್ಲಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದೆ. ಕೆವಿಪಿಗಳನ್ನು ಒಬ್ಬರ ಹೆಸರು ಅಥವಾ ಜಂಟಿ ಹೆಸರಿನಲ್ಲಿ ಪಡೆದುಕೊಳ್ಳಬಹುದಾಗಿದ್ದು ಎಲ್ಲವೂ ಒಬ್ಬರಿಂದ ಒಬ್ಬರಿಗೆ ವರ್ಗಾವಣೆ ಮಾಡಬಹುದಾಗಿದೆ.
ಒಂದು ಅಂಚೆ ಕಚೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ವರ್ಗಾಯಿಸಬಹುದಾಗಿದೆ. ಕೆವಿಪಿಗಳನ್ನು ಸೆಕ್ಯುರಿಟಿಯಾಗಿಟ್ಟು ಬ್ಯಾಂಕ್ ಗಳಿಂದ ಸಾಲ ಪಡೆಯಬಹುದಾಗಿದೆ. ಕೆವಿಪಿ ಮೆಚುರಿಟಿ ಅವಧಿ 8 ವರ್ಷ 4 ತಿಂಗಳಾಗಿರುತ್ತದೆ.












Click it and Unblock the Notifications