ಇನ್ಫೋಸಿಸ್ ಕಂಪನಿ ಆರೋಪಕ್ಕೆ ನಾರಾಯಣ ಮೂರ್ತಿ ಪ್ರತಿಕ್ರಿಯೆ
ಬೆಂಗಳೂರು, ಆಗಸ್ಟ್ 18: "ನನ್ನ ಮಕ್ಕಳಿಗಾಗಿ ಯಾವುದೇ ಹಣ, ಹುದ್ದೆ ಕೇಳ್ತಿಲ್ಲ. ಅಥವಾ ಅಧಿಕಾರವನ್ನೂ ಕೇಳ್ತಿಲ್ಲ" ಎಂದು ಇನ್ಫೋಸಿಸ್ ನ ಸ್ಥಾಪಕರಲ್ಲಿ ಒಬ್ಬರಾದ ಎನ್.ಆರ್.ನಾರಾಯಣ ಮೂರ್ತಿ ಆಡಳಿತ ಮಂಡಳಿಗೆ ತಿರುಗೇಟು ನೀಡಿದ್ದಾರೆ. ಇನ್ಫೋಸಿಸ್ ಸಿಇಒ ಹಾಗೂ ಎಂ.ಡಿ.ವಿಶಾಲ್ ಸಿಕ್ಕಾ ರಾಜೀನಾಮೆ ನಂತರ ಅವರು ಪ್ರತಿಕ್ರಿಯಿಸಿದ್ದಾರೆ.
ಕೊಚ್ಚಿ ಹೋದ ಇನ್ಫಿ ಷೇರು ಮೌಲ್ಯದ 30 ಸಾವಿರ ಕೋಟಿ, ಇದು ಸಿಕ್ಕಾ ಎಫೆಕ್ಟ್
ನಾರಾಯಣ ಮೂರ್ತಿ ಅವರು ಸತತವಾಗಿ ದಾಳಿ ನಡೆಸಿದ್ದರಿಂದ ವಿಶಾಲ್ ಸಿಕ್ಕಾ ರಾಜೀನಾಮೆ ನೀಡಿದ್ದಾರೆ ಎಂಬ ಇನ್ಫೋಸಿಸ್ ಆಡಳಿತ ಮಂಡಳಿಯ ಆರೋಪಕ್ಕೆ ಖಾರವಾಗಿ ಉತ್ತರಿಸಿದ್ದಾರೆ. ಕಂಪನಿಯ ಆಡಳಿತ ಮಂಡಳಿ ಹಾಗೂ ಮೇಲ್ ಸ್ತರದ ಹುದ್ದೆಯಲ್ಲಿರುವವರ ಜತೆಗೆ ಕಳೆದ ಕೆಲ ಕಾಲದಿಂದ ಇನ್ಫಿ ಮೂರ್ತಿಯವರ ತಿಕ್ಕಾಟ ನಡೆದಿತ್ತು.
"ಈ ಆರೋಪಕ್ಕೆ ಸರಿಯಾದ ರೀತಿಯಲ್ಲಿ, ವೇದಿಕೆಯಲ್ಲಿ ಹಾಗೂ ಸೂಕ್ತ ಸಮಯದಲ್ಲಿ ಪ್ರತಿಕ್ರಿಯೆ ನೀಡುತ್ತೇನೆ" ಎಂದು ನಾರಾಯಣ ಮೂರ್ತಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸಿಕ್ಕಾ ಮಾಡಿದ ಆರೋಪಗಳು ಆಧಾರರಹಿತವಾದವು. ಅವುಗಳಿಗೆ ಪ್ರತಿಕ್ರಿಯೆ ನೀಡಿದರೆ ನನ್ನ ಗೌರವಕ್ಕೇ ಕುಂದಾಗುತ್ತದೆ ಎಂದು ಮೂರ್ತಿ ಹೇಳಿದ್ದಾರೆ.
ಇನ್ನು ಸಿಕ್ಕಾ ಬಗ್ಗೆ ಅವರು ಮಾತನಾಡಿದ್ದು, ವಿಶಾಲ್ ಸಿಕ್ಕಾ ಪದೇಪದೇ ಕೆಳಮಟ್ಟದ ಕಾರ್ಪೊರೇಟ್ ಗವರ್ನೆನ್ಸ್ ಅನ್ನು ಇನ್ಫೋಸಿಸ್ ಆಡಳಿತದೊಳಕ್ಕೆ ತಂದರು ಎಂದು ಹೇಳಿದ್ದಾರೆ.