Loan Moratorium: ಕಾಮತ್ ಸಮಿತಿಯ ವರದಿಗಳನ್ನು ಸಲ್ಲಿಸಲು ಕೇಂದ್ರ, ಆರ್ಬಿಐಗೆ ಸುಪ್ರೀಂ ಸೂಚನೆ
ನವದೆಹಲಿ, ಅಕ್ಟೋಬರ್ 05: ವಿವಿಧ ಕ್ಷೇತ್ರಗಳ ಮೇಲಿನ ಕೋವಿಡ್-19 ಸಂಬಂಧಿತ ಒತ್ತಡ ಮತ್ತು ಸಾಲದ ನಿಷೇಧದ ಕುರಿತು ಇದುವರೆಗೆ ಹೊರಡಿಸಲಾದ ಅಧಿಸೂಚನೆಗಳು ಮತ್ತು ಸುತ್ತೋಲೆಗಳನ್ನು ಗಮನದಲ್ಲಿಟ್ಟುಕೊಂಡು ಸಾಲ ಪುನರ್ರಚನೆ ಕುರಿತು ಕೆ. ವಿ ಕಾಮತ್ ಸಮಿತಿಯ ಶಿಫಾರಸುಗಳನ್ನು ದಾಖಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಂದ್ರ ಮತ್ತು ಆರ್ಬಿಐಗೆ ಸೂಚಿಸಿದೆ.
ಸಣ್ಣ ಸಾಲಗಾರರ ಚಕ್ರಬಡ್ಡಿ (ಬಡ್ಡಿ ಮೇಲಿನ ಬಡ್ಡಿ) ಮನ್ನಾ ಮಾಡಲು ಶಿಫಾರಸುಗಳ ಜಾರಿಗೆ ಸಂಬಂಧಿಸಿದಂತೆ ಯಾವ ರೀತಿಯ ಕ್ರಮಕೈಗೊಳ್ಳಲಾಗುತ್ತದೆ ಎಂಬುದನ್ನು ತಿಳಿಸಲು ವಿಸ್ತೃತ ಅಫಿಡವಿಟ್ ಸಲ್ಲಿಕೆಗೆ ಕೇಂದ್ರ ಸರ್ಕಾರ ಮತ್ತು ಆರ್ಬಿಗೆ ಕಾಲಾವಕಾಶ ನೀಡಲಾಗಿದೆ.

2 ಕೋಟಿ ವರೆಗಿನ ಸಾಲದ ಮೇಲೆ ವಿಧಿಸಲಾಗುವ ಚಕ್ರಬಡ್ಡಿ ಮನ್ನಾ?
ಆರು ತಿಂಗಳ ನಿಷೇಧದ ಅವಧಿಗೆ 2 ಕೋಟಿ ರುಪಾಯಿವರೆಗಿನ ಸಾಲದ ಮೇಲೆ ವಿಧಿಸಲಾಗುವ ಚಕ್ರಬಡ್ಡಿ (ಬಡ್ಡಿ ಮೇಲಿನ ಬಡ್ಡಿ) ಮನ್ನಾ ಮಾಡಲು ಒಪ್ಪುವ ಮೂಲಕ ವೈಯಕ್ತಿಕ ಸಾಲಗಾರರಿಗೆ ಮತ್ತು ಮಧ್ಯಮ ಮತ್ತು ಸಣ್ಣ ಕೈಗಾರಿಕೆಗಳಿಗೆ ಪರಿಹಾರ ನೀಡುವ ಹಣಕಾಸು ಸಚಿವಾಲಯದ ತೀರ್ಪಿನ ನಂತರ ಸುಪ್ರೀಂ ಕೋರ್ಟ್ನ ಈ ನಿರ್ದೇಶನ ಬಂದಿದೆ.
2 ಕೋಟಿ ವರೆಗಿನ ಸಣ್ಣ ಪಾಲ ಪಡೆದವರಿಗೆ ಸಾಲ ಮರುಪಾವತಿ ಮುಂದೂಡಿಕೆ ಸೌಲಭ್ಯ (ಮೊರಟೊರಿಯಂ) ಪಡೆದಿರುವ ಅವಧಿಯಲ್ಲಿ ವಿಧಿಸಲಾಗಿರುವ ಚಕ್ರಬಡ್ಡಿ ಮನ್ನಾ ಮಾಡಲು ನಿರ್ಧರಿಸುವುದಾಗಿ ಕೇಂದ್ರ ಸರ್ಕಾರ ಈಚೆಗೆ ಅಫಿಡವಿಟ್ ಸಲ್ಲಿಸಿದ ಹಿನ್ನೆಲೆಯಲ್ಲಿ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳಲಾಗಿತ್ತು.

ವಲಯವಾರು ಪರಿಹಾರದ ಕ್ರಮವನ್ನು ಬಹಿರಂಗಪಡಿಸಲು ಸುಪ್ರೀಂ ಆದೇಶ
ನ್ಯಾಯಮೂರ್ತಿಗಳಾದ ಅಶೋಕ್ ಭೂಷನ್, ಆರ್. ಸುಭಾಷ್ ರೆಡ್ಡಿ ಮತ್ತು ಎಂ.ಆರ್ ಶಾ ನೇತೃತ್ವದ ತ್ರಿಸದಸ್ಯ ಪೀಠವು ಅರ್ಜಿದಾರರಾದ ರಿಯಲ್ ಎಸ್ಟೇಟ್ ಸಂಸ್ಥೆಗಳು ಮತ್ತು ವಿದ್ಯುತ್ ಉತ್ಪಾದಕರು ವ್ಯಕ್ತಪಡಿಸಿರುವ ಆತಂಕಗಳಿಗೆ ಸಂಬಂಧಿಸಿದಂತೆ ವಲಯವಾರು ಪರಿಹಾರಕ್ಕಾಗಿ ಆರ್ಬಿಐ ಮತ್ತು ಕೇಂದ್ರ ಸರ್ಕಾರ ಕೈಗೊಳ್ಳಲಿರುವ ಕ್ರಮ ಬಹಿರಂಗಪಡಿಸುವಂತೆ ಆದೇಶಿಸಿದ್ದು, ಅಕ್ಟೋಬರ್ 13ಕ್ಕೆ ವಿಚಾರಣೆ ಮುಂದೂಡಿದೆ.

ಕೇಂದ್ರ ಸರ್ಕಾರ ಎಲ್ಲಾ ವಲಯಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ?
ಅಕ್ಟೋಬರ್ 2ರಂದು ಸಲ್ಲಿಸಲಾಗಿರುವ ಕೇಂದ್ರ ಸರ್ಕಾರದ ಅಫಿಡವಿಟ್ನಲ್ಲಿ ರಿಯಲ್ ಎಸ್ಟೇಟ್ ಒಕ್ಕೂಟ ಮತ್ತು ವಿದ್ಯುತ್ ಉತ್ಪಾದಕರನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ಹಿರಿಯ ವಕೀಲ ಆರ್ಯಮಾ ಸುಂದರಂ ನ್ಯಾಯಾಲಯದ ಗಮನಸೆಳೆದರು.
ಕಾಮತ್ ಸಮಿತಿಯ ವರದಿಯನ್ನು ದಾಖಲೆಯ ರೂಪದಲ್ಲಿ ಸಲ್ಲಿಸಲಾಗಿಲ್ಲ. ಸಾಲ ಮರುಪಾವತಿ ಮುಂದೂಡಿಕೆ (ಮೊರಟೊರಿಯಂ) ಅವಧಿಯಲ್ಲಿ ಬಡ್ಡಿ ಮನ್ನಾ ವಿಚಾರಕ್ಕೆ ಸಂಬಂಧಿಸಿದಂತೆ ಆರ್ಬಿಐ ಸಮಿತಿ ರಚಿಸಿದ್ದು, ಸಮಿತಿಯು ವಿವಿಧ ವಲಯಗಳು ಮತ್ತು ಅವರ ಸಮಸ್ಯೆಗಳನ್ನು ದಾಖಲಿಸಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯವು ವರದಿಯನ್ನು ದಾಖಲೆಯ ರೂಪದಲ್ಲಿ ಸಲ್ಲಿಸುವಂತೆ ಆರ್ಬಿಐ ಮತ್ತು ಕೇಂದ್ರ ಸರ್ಕಾರಕ್ಕೆ ಸೂಚಿಸಿತು. ವರದಿ ಸಲ್ಲಿಸಲಾಗುವುದು ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಮತ್ತು ಹಿರಿಯ ವಕೀಲ ವಿ ಗಿರಿ ತಿಳಿಸಿದರು.
ಕೇಂದ್ರ ಸರ್ಕಾರದ ಅಫಿಡವಿಟ್ಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ದಾಖಲಿಸಲು ಪ್ರತಿವಾದಿಗಳಿಗೆ ಕಾಲಾವಕಾಶ ನೀಡಲಾಗಿದ್ದು, ಹೆಚ್ಚುವರಿ ಅಫಿಡವಿಟ್ ಸಲ್ಲಿಸುವಂತೆ ಕೇಂದ್ರ ಹಾಗೂ ಆರ್ಬಿಐಗೆ ಸೂಚಿಸಲಾಗಿದೆ.

26 ಕ್ಷೇತ್ರಗಳಿಗೆ ಕಾಮತ್ ಸಮಿತಿ ಶಿಫಾರಸು
ಸಾಲ ನಿರ್ಣಯ ಯೋಜನೆಗಳನ್ನು ಅಂತಿಮಗೊಳಿಸುವಾಗ ಸಾಲ ನೀಡುವ ಸಂಸ್ಥೆಗಳಿಂದ ಅಪವರ್ತನೀಯವಾಗಬಹುದಾದ 26 ಕ್ಷೇತ್ರಗಳಿಗೆ ಕಾಮತ್ ಸಮಿತಿ ಶಿಫಾರಸುಗಳನ್ನು ನೀಡಿತ್ತು ಮತ್ತು ಬ್ಯಾಂಕುಗಳು ಕೊರೊನಾವೈರಸ್ ಸಾಂಕ್ರಾಮಿಕದ ತೀವ್ರತೆಯ ಆಧಾರದ ಮೇಲೆ ಒಂದು ವಲಯದ ಮೇಲೆ ಶ್ರೇಣೀಕೃತ ವಿಧಾನವನ್ನು ಅಳವಡಿಸಿಕೊಳ್ಳಬಹುದು ಎಂದು ಹೇಳಿದ್ದರು.
ವಿಳಂಬ ಮಾಡಿದಷ್ಟೂ ಬ್ಯಾಂಕ್ಗಳಿಗೆ ತೊಂದರೆಯಾಗುತ್ತದೆ ಎಂದಿರುವ ಭಾರತೀಯ ಬ್ಯಾಂಕ್ ಗಳ ಒಕ್ಕೂಟ (ಐಬಿಎ) ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಕೇಂದ್ರವು ಪರಿಹಾರದ ವಿಚಾರದಲ್ಲಿ ಎರಡು ಬಗೆಯ ವಿಧಾನವನ್ನು ಅಳವಡಿಸಿಕೊಂಡಿದ್ದು, ಸಣ್ಣ ಸಾಲಗಾರರಿಗೆ ಪರಿಹಾರದ ವಿಧಾನ ಒಂದಾದರೆ, ಕಾಮತ್ ಸಮಿತಿಯು ವಲಯವಾರು ಗಮನಹರಿಸಿರುವ ವಿಧಾನ ಮತ್ತೊಂದಿದೆ ಎಂದು ಪೀಠಕ್ಕೆ ತಿಳಿಸಿದರು.












Click it and Unblock the Notifications