ರಿಲಯನ್ಸ್ ಸ್ವತಂತ್ರ ನಿರ್ದೇಶಕರಾಗಿ ಕುಂದಾಪುರ ಮೂಲದ ಕೆವಿ ಕಾಮತ್ ನೇಮಕ
ನವದೆಹಲಿ, ನ. 04: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಶುಕ್ರವಾರ ಕಂಪನಿ ಮಂಡಳಿಗೆ ಸ್ವತಂತ್ರ ನಿರ್ದೇಶಕರಾಗಿ ಅನುಭವಿ ಬ್ಯಾಂಕರ್ ಆದ ಕೆ. ವಿ. ಕಾಮತ್ ಅವರನ್ನು ನೇಮಕ ಮಾಡಿದೆ.
74 ವರ್ಷದ ಕಾಮತ್ ಅವರನ್ನು ಐದು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ ಎಂದು ಸಂಸ್ಥೆಯು ಷೇರು ವಿನಿಮಯ ಕೇಂದ್ರದಲ್ಲಿ ತಿಳಿಸಿದೆ. ಐಐಎಂ ಅಹಮದಾಬಾದ್ ಪದವೀಧರರಾದ ಕುಂದಾಪುರ ವಾಮನ್ ಕಾಮತ್ (ಕೆ.ವಿ. ಕಾಮತ್) ನಿಷ್ಣಾತ ಭಾರತೀಯ ಬ್ಯಾಂಕರ್ ಆಗಿದ್ದು, ಅವರು 1971ನೇ ಇಸವಿಯಲ್ಲಿ ಐಸಿಐಸಿಐ ಜತೆಗೆ ವೃತ್ತಿಜೀವನ ಪ್ರಾರಂಭಿಸಿದರು.
5G ನೆಟ್ವರ್ಕ್: 4G ಬಳಸುವ ಜನರು ನೆಟ್ವರ್ಕ್ ಸಮಸ್ಯೆ ಎದುರಿಸುತ್ತಿರುವುದು ಯಾಕೆ?
1988ರಲ್ಲಿ ಅವರು ಏಷ್ಯನ್ ಡೆವಲಪ್ಮೆಂಟ್ ಬ್ಯಾಂಕ್ (ADB)ಗೆ ತೆರಳಿದರು ಮತ್ತು 1996ರಲ್ಲಿ ಐಸಿಐಸಿಐಗೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಿಇಒ ಆಗಿ ಹಿಂತಿರುಗುವ ಮೊದಲು ಮತ್ತು ಐಸಿಐಸಿಐ ಬ್ಯಾಂಕ್ಗೆ ಅದರ ವಿಲೀನದ ನಂತರ ಆಗ್ನೇಯ ಏಷ್ಯಾದಲ್ಲಿ ಹಲವಾರು ವರ್ಷಗಳ ಕಾಲ ಕೆಲಸ ಮಾಡಿದರು. ಐಸಿಐಸಿಐ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿದ್ದರು.
"ಕೆವಿ ಕಾಮತ್ ಅವರ ನಾಯಕತ್ವದಲ್ಲಿ ಐಸಿಐಸಿಐ ಭಾರತದಲ್ಲಿ ಬ್ಯಾಂಕಿಂಗ್, ವಿಮೆ ಮತ್ತು ಆಸ್ತಿ ನಿರ್ವಹಣೆ ಮತ್ತು ಜಾಗತಿಕ ಅಸ್ತಿತ್ವದಾದ್ಯಂತ ವೈವಿಧ್ಯಮಯ, ತಂತ್ರಜ್ಞಾನ-ಚಾಲಿತ ಹಣಕಾಸು ಸೇವೆಗಳ ಗುಂಪಾಗಿ ರೂಪಾಂತರಗೊಂಡಿದೆ. ಅವರು 2009ರಲ್ಲಿ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಆಗಿ ನಿವೃತ್ತರಾದರು ಮತ್ತು 2015ರ ವರೆಗೆ ಐಸಿಐಸಿಐ ಬ್ಯಾಂಕ್ ಅಧ್ಯಕ್ಷರಾಗಿ ಮುಂದುವರಿದರು" ಎಂದು ಕಂಪನಿ ಹೇಳಿದೆ.
ರಿಲಯನ್ಸ್ನಲ್ಲಿ ಕಾಮತ್ ಜವಾಬ್ದಾರಿಗಳು ಏನು?
ಕಾಮತ್ ಅವರು ರಿಲಯನ್ಸ್ನ ಹಣಕಾಸು ಸೇವೆಗಳ ವಿಭಾಗ ರಿಲಯನ್ಸ್ ಸ್ಟ್ರಾಟೆಜಿಕ್ ಇನ್ವೆಸ್ಟ್ಮೆಂಟ್ಸ್ ಲಿಮಿಟೆಡ್ (RSIL) ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. "ಮೊದಲೇ ಸೂಚಿಸಿದಂತೆ, ಆರ್ಎಸ್ಐಎಲ್ ಅನ್ನು ಜಿಯೋ ಫೈನಾನ್ಷಿಯಲ್ ಸರ್ವೀಸಸ್ ಲಿಮಿಟೆಡ್ (ಜೆಎಫ್ಎಸ್ಎಲ್) ಎಂದು ಮರುನಾಮಕರಣ ಮಾಡಲಾಗುತ್ತದೆ. ಕಂಪನಿಯ ಹಣಕಾಸು ಸೇವೆಗಳ ವ್ಯವಹಾರವನ್ನು ಆರ್ಎಸ್ಐಎಲ್ಗೆ ವಿಭಜಿಸಲು ನಿರ್ದೇಶಕರ ಮಂಡಳಿಯಿಂದ ಅನುಮೋದಿಸಲಾದ ವಿಂಗಡಣೆಯ ಯೋಜನೆ ಪ್ರಕಾರ ಲಿಸ್ಟ್ ಮಾಡಲಾಗುತ್ತದೆ" ಎಂದು ರಿಲಯನ್ಸ್ ಫೈಲಿಂಗ್ನಲ್ಲಿ ತಿಳಿಸಿದೆ.
ಬ್ಯಾಂಕಿಂಗ್ ಕ್ಷೇತ್ರದ ದೈತ್ಯ ಕನ್ನಡಿಗ ಕೆವಿ ಕಾಮತ್
ಜೆಎಫ್ಎಸ್ಎಲ್ನ ವಿಂಗಡಣೆ ಮತ್ತು ಸ್ಟಾಕ್ ಎಕ್ಸ್ಚೇಂಜ್ಗಳಲ್ಲಿ ಜೆಎಫ್ಎಸ್ಎಲ್ನ ಲಿಸ್ಟಿಂಗ್ ಪೂರ್ಣಗೊಳಿಸಿದ ನಂತರ ಕಾಮತ್ ಅವರು ಸ್ವತಂತ್ರ ನಿರ್ದೇಶಕರಾಗಿ ಮತ್ತು ಕಾರ್ಯನಿರ್ವಾಹಕೇತರ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ.
ಐಸಿಐಸಿಐನಲ್ಲಿ ತಮ್ಮ ಅವಧಿ ಮುಗಿಸಿದ ನಂತರದಲ್ಲಿ ಕಾಮತ್ ಅವರು ಬ್ರಿಕ್ಸ್ ದೇಶಗಳ ನ್ಯೂ ಡೆವಲಪ್ಮೆಂಟ್ ಬ್ಯಾಂಕ್ನ ಮುಖ್ಯಸ್ಥರು, ಇನ್ಫೋಸಿಸ್ ಅಧ್ಯಕ್ಷರು ಮತ್ತು ರೂ. 20,000 ಕೋಟಿ ಅಭಿವೃದ್ಧಿ ಹಣಕಾಸು ಸಂಸ್ಥೆಯಾದ ನ್ಯಾಷನಲ್ ಬ್ಯಾಂಕ್ ಫಾರ್ ಫೈನಾನ್ಸಿಂಗ್ ಇನ್ಫ್ರಾಸ್ಟ್ರಕ್ಚರ್ ಅಂಡ್ ಡೆವಲಪ್ಮೆಂಟ್ (NaBFID) ಅಧ್ಯಕ್ಷ ಸ್ಥಾನ ಸೇರಿದಂತೆ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ಅಲಂಕರಿಸಿದ್ದಾರೆ.
ಹಲವು ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿರುವ ಕೆವಿ ಕಾಮತ್
ಅವರು 2010 ರಿಂದ ಹ್ಯೂಸ್ಟನ್ ಮೂಲದ ತೈಲ ಸೇವಾ ಕಂಪನಿ ಸ್ಕ್ಲಂಬರ್ಗರ್ ಮತ್ತು ಭಾರತೀಯ ಔಷಧೀಯ ತಯಾರಕ ಲುಪಿನ್ ಮಂಡಳಿಗಳಲ್ಲಿ ಸ್ವತಂತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದಾರೆ. ಪಂಡಿತ್ ದೀನದಯಾಳ್ ಪೆಟ್ರೋಲಿಯಂ ವಿಶ್ವವಿದ್ಯಾಲಯದ ಆಡಳಿತ ಮಂಡಳಿ ಸದಸ್ಯರೂ ಆಗಿದ್ದರು.
ಪದ್ಮಭೂಷಣ ಗೌರವ ಪುರಸ್ಕೃತರಾದ ಕಾಮತ್ ಅವರು ಇತ್ತೀಚೆಗೆ ನಿವೃತ್ತರಾದ ರಿಲಯನ್ಸ್ ಬೋರ್ಡ್ನಲ್ಲಿರುವ ಇಬ್ಬರು ಸ್ವತಂತ್ರ ನಿರ್ದೇಶಕರಲ್ಲಿ ಒಬ್ಬರ ಸ್ಥಾನಕ್ಕೆ ಬದಲಿಯಾಗಿ ಸೇರ್ಪಡೆ ಆಗಲಿದ್ದಾರೆ. ರಘುನಾಥ್ ಅನಂತ್ ಮಶೇಲ್ಕರ್ ಮತ್ತು ದೀಪಕ್ ಸಿ. ಜೈನ್ ರಿಲಯನ್ಸ್ ಮಂಡಳಿಯಲ್ಲಿ ತಮ್ಮ ಅವಧಿಯನ್ನು ಇತ್ತೀಚೆಗೆ ಪೂರ್ಣಗೊಳಿಸಿದ್ದಾರೆ.
5 ವರ್ಷಗಳ ಅವಧಿಗೆ ರಿಲಯನ್ಸ್ ಸ್ವತಂತ್ರ ನಿರ್ದೇಶಕ
"ಮಾನವ ಸಂಪನ್ಮೂಲ, ನಾಮನಿರ್ದೇಶನ ಮತ್ತು ಸಂಭಾವನೆ ಸಮಿತಿಯ ಶಿಫಾರಸಿನ ಆಧಾರದ ಮೇಲೆ ಶುಕ್ರವಾರ ನಡೆದ ಸಭೆಯಲ್ಲಿ ನಿರ್ದೇಶಕರ ಮಂಡಳಿಯು ಕಂಪನಿಯ ಸ್ವತಂತ್ರ ನಿರ್ದೇಶಕರಾಗಿ ಕೆ.ವಿ. ಕಾಮತ್ ಅವರನ್ನು ನೇಮಿಸಿದೆ.
"ಕೆವಿ ಕಾಮತ್ ಅವರು ಅಧಿಕಾರ ವಹಿಸಿಕೊಂಡ ದಿನಾಂಕದಿಂದ ಜಾರಿಗೆ ಬರುವಂತೆ ಸತತ 5 ವರ್ಷಗಳ ಅವಧಿಗೆ ನೇಮಕ ಮಾಡಲು ಷೇರುದಾರರಿಗೆ ಅನುಮೋದನೆಗಾಗಿ ಶಿಫಾರಸು ಮಾಡಿದೆ," ರಿಲಯನ್ಸ್ ಫೈಲಿಂಗ್ನಲ್ಲಿ ತಿಳಿಸಿದೆ.