ಬಿಜೆಪಿಗೆ ಹಿನ್ನಡೆಯಾದರೆ ಮಾರುಕಟ್ಟೆಯಲ್ಲಿ ತಲ್ಲಣ ಗ್ಯಾರಂಟಿ!?
ಈಗಾಗಲೇ ಚುನಾವಣೆ ಮುಗಿದಿರುವ ಐದು ರಾಜ್ಯಗಳಲ್ಲಿ ಪಂಜಾಬ್ ಹೊರತುಪಡಿಸಿ ಮಿಕ್ಕ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬ ವಿಚಾರ ಬಂಡವಾಳಗಾರರನ್ನು ಆಕರ್ಷಿಸಿದೆ ಎನ್ನಲಾಗುತ್ತಿದೆ.
ನವದೆಹಲಿ, ಮಾರ್ಚ್ 10: ಉತ್ತರ ಪ್ರದೇಶ ಸೇರಿದಂತೆ ಐದು ರಾಜ್ಯಗಳಲ್ಲಿ ಗುರುವಾರ ಮುಕ್ತಾಯವಾದ ಆಯಾ ರಾಜ್ಯಗಳ ವಿಧಾನಸಭೆ ಚುನಾವಣೆಗಳು ಮುಗಿದಿವೆ. ಅದರ ಬೆನ್ನಲ್ಲೇ ಚುನಾವಣೋತ್ತರ ಸಮೀಕ್ಷೆಗಳೂ ಬರುತ್ತಿವೆ. ಆದರೆ, ಈ ಚುನಾವಣಾ ಸಮೀಕ್ಷೆಗಳು ಸುಳ್ಳಾದರೆ ದೇಶದ ಷೇರು ಮಾರುಕಟ್ಟೆ ತಲ್ಲಣಗೊಳ್ಳಲಿದೆ ಎಂದು ಮೂಲಗಳು ಹೇಳಿವೆ.
ಉತ್ತರ ಪ್ರದೇಶ, ಉತ್ತರಾಖಾಂಡ, ಗೋವಾ, ಮಣಿಪುರ ಹಾಗೂ ಪಂಜಾಬ್ ಗಳಲ್ಲಿ ಚುನಾವಣೆ ನಡೆದಿದ್ದು, ಇವುಗಳಲ್ಲಿ ಪಂಜಾಬ್ ಬಿಟ್ಟು ಮಿಕ್ಕೆಲ್ಲಾ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ ಎಂಬುದು ಹಲವಾರು ಸಮೀಕ್ಷೆಗಳ ಅನಿಸಿಕೆಯಾಗಿದೆ.
ಆದರೆ, ಈ ಸಮೀಕ್ಷೆಗಳು ಕೊನೆ ಕ್ಷಣದಲ್ಲಿ ಉಲ್ಟಾ ಆಗಲೂಬಹುದು. ಅಥವಾ ಆ ಸಮೀಕ್ಷೆಗೆ ವ್ಯಕ್ತಿರಿಕ್ತವಾದ ರಾಜಕೀಯ ಬದಲಾವಣೆಗಳೂ ಆಗಬಹುದು.
ಉದಾಹರಣೆಗೆ, ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಸ್ಪಷ್ಟ ಬಹುಮತ ಸಿಕ್ಕಿದರೂ, ಸಮಾಜವಾದಿ ಹಾಗೂ ಕಾಂಗ್ರೆಸ್ ಸಹಯೋಗವು ಮಾಯಾವತಿ ನೇತೃತ್ವದ ಬಿಎಸ್ ಪಿ ಪಕ್ಷದ ಬೆಂಬಲ ಪಡೆದು ಸರ್ಕಾರ ರಚಿಸಿದರೆ ಅಚ್ಚರಿಯಿಲ್ಲ. ಆದರೆ, ಹಾಗೇನಾದರೂ ಆದರೆ, ಮಾರುಕಟ್ಟೆಯಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗುತ್ತದೆ ಎನ್ನುತ್ತಿದೆ ಇಲ್ಲೊಂದು ವರದಿ. ಅದು ಹೇಗೆ, ಏಕೆ... ಎಂಬಿತ್ಯಾದಿ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
ಮಾರುಕಟ್ಟೆಗೆ ವಸಂತ ಋತು ಕಾಲಿಟ್ಟಂತೆ?
ಚುನಾವಣೆ ಮುಗಿದಿರುವ ಐದು ರಾಜ್ಯಗಳಲ್ಲಿ ಕನಿಷ್ಠ ನಾಲ್ಕರಲ್ಲಿ ಬಿಜೆಪಿ ಅಧಿಕಾರಕ್ಕೇರುತ್ತದೆ ಎಂಬುದನ್ನು ಗಮನದಲ್ಲಿಟ್ಟುಕೊಂಡು ಹಲವಾರು ಕಂಪನಿಗಳು, ಬಂಡವಾಳ ಶಾಹಿಗಳು ಆಯಾ ರಾಜ್ಯಗಳಲ್ಲಿ ಬಂಡವಾಳ ಹೂಡಲು ತುದಿಗಾಲಲ್ಲಿ ನಿಂತಿವೆ. ಅಲ್ಲದೆ, ಬಂಡವಾಳಕ್ಕೆ ಸಂಬಂಧಪಟ್ಟಂತೆ ಸಮ್ಮಿಳಿತವಾಗಿರುವ ಹಲವಾರು ವಿಚಾರಗಳೂ ಬಿಜೆಪಿ ಅಧಿಕಾರಕ್ಕೆ ಬರುವುದನ್ನೇ ಕಾತುರದಿಂದ ಎದುರು ನೋಡುತ್ತಿವೆ. ಹಾಗಾಗಿ, ಬಿಜೆಪಿಗೆ ಹಿನ್ನಡೆಯಾದರೆ, ಷೇರು ಮಾರುಕಟ್ಟೆ ತಲ್ಲಣಗೊಳ್ಳಲಿದೆ ಎನ್ನುತ್ತಿವೆ ಮೂಲಗಳು.
ಬಿಜೆಪಿ ಬಂದರೆ ಹೆಚ್ಚು ಅನುಕೂಲ?
ಅತಿ ಹೆಚ್ಚು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ವಿದೇಶಿ ಬಂಡವಾಳವು ಗಣನೀಯ ಮಟ್ಟದಲ್ಲಿ ಹರಿದುಬರುತ್ತೆ ಎನ್ನಲಾಗುತ್ತಿದೆ. ಮೇಕ್ ಇನ್ ಇಂಡಿಯಾ ಯೋಜನೆಯಡಿ ಆಯಾ ರಾಜ್ಯಗಳಲ್ಲಿ ಬಂಡವಾಳ ಹೂಡಲು ಕಾತುರರಾಗಿರುವ ಕೆಲವಾರು ವಿದೇಶಿ ಕಂಪನಿಗಳು, ಬಿಜೆಪಿ ಬಂದರೆ ಹೆಚ್ಚು ಅನುಕೂಲ ಸಿಗುತ್ತದೆ ಎಂದು ನಂಬಿವೆ.
ಇನ್ನೂರು ಅಂಕದ ನಿರೀಕ್ಷೆ
ಗುರುವಾರ ಸಂಜೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಾಗ ನಿಫ್ಟಿ ಷೇರಿನ ಗತಿ ತಟಸ್ಥವಾಗಿತ್ತು. ನಿಜವಾಗಿಯೂ ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರ ಗದ್ದುಗೆ ಹಿಡಿದರೆ, ನಿಫ್ಟಿಯ ಗತಿ ಏನಿಲ್ಲವೆಂದರೂ 200 ಅಂಕಗಳಷ್ಟು ಏರಿಕೆ ಕಾಣಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಆದರೆ, ಮರುಕಳಿಸುತ್ತಾ ಚುರುಕು?
ಚುನಾವಣೋತ್ತರ ಸಮೀಕ್ಷೆಗಳು ಬಂದಾಗ ಮಾರುಕಟ್ಟೆ ಹುರುಪು ಕಳೆದುಕೊಂಡಿತ್ತು. ದಿನಾಂತ್ಯಕ್ಕೆ ಸೆನ್ಸೆಕ್ಸ್ 28,929 ಅಂಶಗಳಿಗೆ ಮುಕ್ತಾಯವಾದರೆ, ನಿಫ್ಟಿ 8,927 ಅಂಶಗಳಿಗೆ ದಿನ ಪೂರೈಸಿತ್ತು.
ನಾಲ್ಕು ನೂರಕ್ಕೂ ಹೆಚ್ಚು ಕೋಟಿ ಬಂಡವಾಳ?
ಆದರೆ, ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಅಧಿಕಾರ ಹಿಡಿಯಲಿದೆ ಎಂಬ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ, ವಿದೇಶಿ ಬಂಡವಾಳಗಾರರಲ್ಲಿ ಹೊಸ ಹುರುಪು ಕಾಣಿಸಿಕೊಂಡಿರುವುದು ಸ್ಪಷ್ಟವಾಗಿದೆ. ಸಮೀಕ್ಷೆಗಳು ಹೊರಬೀಳುತ್ತಿದ್ದಂತೆ ಸುಮಾರು 488 ಕೋಟಿ ರು.ನಷ್ಟು ಬಂಡವಾಳ ಷೇರು ಮಾರುಕಟ್ಟೆ ಹರಿದುಬಂದಿದೆ. ಇನ್ನು, ದೇಶೀಯ ಸಾಂಸ್ಥಿಕ ಹೂಡಿಕೆದಾರರು ಸುಮಾರು 10 ಕೋಟಿ ರು.ಗಳಷ್ಟು ಈಕ್ವಿಟಿಯನ್ನು ಮಾರಿಕೊಂಡಿದ್ದಾರೆಂದು ಹೇಳಲಾಗಿದೆ.