ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ನೀತಾ ಅಂಬಾನಿಗೆ ಗ್ಲೋಬಲ್ ಲೀಡರ್ಶಿಪ್ ಪ್ರಶಸ್ತಿ
ನವದೆಹಲಿ, ಅಕ್ಟೋಬರ್ 30: ರಿಲಯನ್ಸ್ ಫೌಂಡೇಷನ್ ಸಂಸ್ಥಾಪಕಿ ಮತ್ತು ಅಧ್ಯಕ್ಷೆ ನೀತಾ ಅಂಬಾನಿ ಅವರಿಗೆ ಗ್ಲೋಬಲ್ ಲೀಡರ್ಶಿಪ್ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ದೆಹಲಿಯಲ್ಲಿ ಯುಎಸ್ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಮ್ (ಯುಎಸ್ಐಎಸ್ಪಿಎಫ್) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫೋರಂ ಅಧ್ಯಕ್ಷರಾದ ಜಾನ್ ಚೇಂಬರ್ಸ್ ಅವರು ನೀತಾ ಅಂಬಾನಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಕಾರ್ಯಕ್ರಮದಲ್ಲಿ ಭಾರತ ಸರ್ಕಾರದ ಉನ್ನತ ಅಧಿಕಾರಿಗಳು ಮತ್ತು ಉದ್ಯಮದ ಮುಖಂಡರು ಭಾಗವಹಿಸಿದ್ದರು.

ನಂತರ ನೀತಾ ಅಂಬಾನಿ ಅವರು ಮಾತನಾಡಿ, "ಈ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವುದು ನನಗೆ ಅತ್ಯಂತ ಗೌರವದ ಸಂಗತಿಯಾಗಿದೆ. ರಿಲಯನ್ಸ್ ಫೌಂಡೇಷನ್ ಅನ್ನು ನಾನು ಪ್ರತಿನಿಧಿಸುತ್ತೇನೆ. ಅದರ ಮೂಲಕ ನಾವು 7 ಕೋಟಿ 10 ಲಕ್ಷಕ್ಕೂ ಹೆಚ್ಚು ಜನರ ಜೀವನವನ್ನು ಮುಟ್ಟಿದ್ದೇವೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿ ಜಾರಿ ಆಗುವುದಕ್ಕೆ ಬಹಳ ಹಿಂದೆಯೇ, ರಿಲಯನ್ಸ್ 'ಕಾರ್ಪೊರೇಟ್ ನೈತಿಕ ಹೊಣೆಗಾರಿಕೆಯನ್ನು ಪಾಲಿಸಿಕೊಂಡು ಬರುತ್ತಿದೆ," ಎಂದು ಹೇಳಿದರು.
ಯುಎಸ್ ಇಂಡಿಯಾ ಸ್ಟ್ರಾಟೆಜಿಕ್ ಪಾರ್ಟ್ನರ್ಶಿಪ್ ಫೋರಮ್ ಈ ಬಗ್ಗೆ ಹೇಳಿಕೆ ನೀಡಿದ್ದು, ನೀತಾ ಅಂಬಾನಿ ಅವರು ಸಾಮಾಜಿಕ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಉದ್ಯಮಿ ಆಗಿದ್ದಾರೆ. ಅವರ ನೇತೃತ್ವದಲ್ಲಿ ರಿಲಯನ್ಸ್ ಫೌಂಡೇಷನ್ ಶಿಕ್ಷಣ, ಕಲೆ, ಕ್ರೀಡೆ ಮತ್ತು ಆರೋಗ್ಯ ರಕ್ಷಣೆ ಮೂಲಕ ಲಕ್ಷಾಂತರ ಭಾರತೀಯರ ಜೀವನದ ಮೇಲೆ ಪ್ರಭಾವ ಬೀರಿದೆ ಎಂದರು.
ನೀತಾ ಅಂಬಾನಿ ಅವರ ಕೆಲಸ ವಿಶೇಷವಾಗಿ ಮಹಿಳಾ ಸಬಲೀಕರಣ ಮತ್ತು ಮಕ್ಕಳ ಹಿತಾಸಕ್ತಿಗಳಿಗಾಗಿ ಮೀಸಲಾಗಿದೆ. ಲಿಂಗ ವಿಭಜನೆಯನ್ನು ಕಡಿಮೆ ಮಾಡುವಲ್ಲಿ ಮತ್ತು ಭಾರತದ ಬೆಳೆಯುತ್ತಿರುವ ಆರ್ಥಿಕತೆಯಲ್ಲಿ ಮಹಿಳೆಯರ ಕೊಡುಗೆಯನ್ನು ಹೆಚ್ಚಿಸುವಲ್ಲಿ ನೀತಾ ಅಂಬಾನಿ ಅವರು ಪ್ರಮುಖ ಪಾತ್ರ ಹೊಂದಿದ್ದಾರೆ ಎಂದು ಹೇಳಿದರು.
ನ್ಯೂಯಾರ್ಕ್ನ ಮೆಟ್ರೋಪಾಲಿಟನ್ ಮ್ಯೂಸಿಯಂ ಆಫ್ ಆರ್ಟ್ನ ಮಂಡಳಿಗೆ ಗೌರವ ಟ್ರಸ್ಟಿಯಾಗಿ ಆಯ್ಕೆಯಾದಾಗ ನೀತಾ ಎಂ.ಅಂಬಾನಿ ಕಲೆ ಮತ್ತು ಸಂಸ್ಕೃತಿಗೆ ನೀಡಿದ ಮಹತ್ವದ ಕೊಡುಗೆಗಳನ್ನು ಇತ್ತೀಚೆಗೆ ಗುರುತಿಸಲಾಯಿತು. ಕಳೆದ ವರ್ಷ ಮುಂಬೈನಲ್ಲಿ ನೀತಾ ಮುಕೇಶ್ ಅಂಬಾನಿ ಸಾಂಸ್ಕೃತಿಕ ಕೇಂದ್ರ (ಎನ್ಎಂಎಸಿಸಿ) ತೆರೆಯಲಾಯಿತು. ಇದು ವ್ಯಾಪಕವಾದ ಮೆಚ್ಚುಗೆಯನ್ನು ಗಳಿಸಿತು. ಇನ್ನು ರಿಲಯನ್ಸ್ ಫೌಂಡೇಷನ್ ಕೂಡ ಬಡವರಿಗಾಗಿ ಅತ್ಯುತ್ತಮ ಕೆಲಸ ಮಾಡಿದೆ. ಈ ಪ್ರತಿಷ್ಠಾನವು ಭಾರತದ ಯುವ ಕ್ರೀಡಾಪಟುಗಳು ತಳಮಟ್ಟ ಹಾಗೂ ಜಾಗತಿಕ ಮಟ್ಟದಲ್ಲಿ ಮಿಂಚಲು ಸಹಾಯ ಮಾಡಿದೆ.
ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಗೆ (IOC) ಭಾರತದ ಪ್ರತಿನಿಧಿಯಾಗಿ, ನೀತಾ ಎಂ.ಅಂಬಾನಿ ಭಾರತೀಯ ನಿಯೋಗವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಇದು ನಾಲ್ಕು ದಶಕಗಳ ನಂತರ ಭಾರತದಲ್ಲಿ 141ನೇ ಐಒಸಿ ಅಧಿವೇಶನವನ್ನು ಆಯೋಜಿಸುವ ಅವಕಾಶ ತನ್ನದಾಗಿಸಿಕೊಂಡಿತು. 2023ರ ಅಕ್ಟೋಬರ್ನಲ್ಲಿ ಮುಂಬೈನಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. ಇದು 2036ರಲ್ಲಿ ಒಲಿಂಪಿಕ್ ಕ್ರೀಡಾಕೂಟವನ್ನು ಆಯೋಜಿಸುವ ಅವಕಾಶ ಪಡೆದುಕೊಳ್ಳುವ ಭಾರತೀಯರ ಭರವಸೆಯನ್ನು ಹೆಚ್ಚಿಸಿದೆ.
ಯುಎಸ್ಐಎಸ್ಪಿಎಫ್ ಅಧ್ಯಕ್ಷ ಜಾನ್ ಚೇಂಬರ್ಸ್ ಮಾತನಾಡಿ, "ಜೀವನದಲ್ಲಿ ಯಶಸ್ವಿಯಾದ ಜನರು ಇತರರಿಗೆ ಯಶಸ್ವಿಯಾಗಲು ಸಹಾಯ ಮಾಡುವುದು ಬಹಳ ಮುಖ್ಯ. ರಿಲಯನ್ಸ್ ಫೌಂಡೇಷನ್ನಲ್ಲಿ ಕಲೆ, ಕ್ರೀಡೆ, ಸಂಸ್ಕೃತಿ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಅನುಕರಣೀಯ ಕೆಲಸ ಮಾಡಿರುವ ನೀತಾ ಎಂ.ಅಂಬಾನಿ ಅವರು ಪರೋಪಕಾರ ಗುಣಕ್ಕೆ ಉದಾಹರಣೆಯಾಗಿದ್ದಾರೆ," ಎಂದರು.












Click it and Unblock the Notifications