Job cuts: ಡಿಸಿಎಂ ಸಲಹೆಗೆ ತಲೆದೂಗಿದ ಬೆಂಗಳೂರಿನ ಐಟಿ ಮುಖ್ಯಸ್ಥರು
ಬೆಂಗಳೂರು, ಏಪ್ರಿಲ್ 17: ಕೊರೊನಾವೈರಸ್ ಹೊಡೆತಕ್ಕೆ ಸಿಲುಕಿ ನಲುಗಿರುವ ಐಟಿ ಬಿಟಿ ಸಂಸ್ಥೆಗಳಿಗೆ ಬೇಕಾದ ಅಗತ್ಯ ನೆರವು ನೀಡಲು ಸರ್ಕಾರ ಬದ್ಧವಾಗಿದೆ. ಕೇಂದ್ರ ಸರ್ಕಾರ ನೀಡಿರುವ ಮಾರ್ಗಸೂಚಿಯಂತೆ ಕಚೇರಿಗಳು ಕಾರ್ಯ ನಿರ್ವಹಿಸಬೇಕಾಗುತ್ತದೆ ಎಂದು ಡಿಸಿಎಂ ಡಾ. ಅಶ್ವಥ ನಾರಾಯಣ ಅವರು ಐಟಿ-ಬಿಟಿ ಮುಖ್ಯಸ್ಥರ ಜೊತೆ ನಡೆದ ವಿಡಿಯೋ ಸಭೆಯ ನಂತರ ಹೇಳಿದರು.
ಐಟಿ ಕ್ಷೇತ್ರದಲ್ಲಿ ಉದ್ಯೋಗ ಕಡಿತ ಹೆಚ್ಚಾಗುತ್ತಿರುವ ಬಗ್ಗೆ ಕೂಡಾ ಸಭೆಯಲ್ಲಿ ಚರ್ಚೆ ಮಾಡಲಾಯಿತು. ಈ ಬಗ್ಗೆ ಡಿಸಿಎಂ ಅಶ್ವಥ್ ನೀಡಿದ ಸಲಹೆಗೆ ಐಟಿ ಸಂಸ್ಥೆ ಮುಖ್ಯಸ್ಥರು ತಲೆದೂಗಿದರು.
"ಯಾವುದೇ ಹೊಸ ಪ್ರಾಜೆಕ್ಟ್ ಸಿಗುತ್ತಿಲ್ಲ, ಸಂಸ್ಥೆಯ ಆದಾಯ ಕುಸಿದಿದೆ ಎಂಬ ಕಾರಣಕ್ಕೆ ಮುನ್ಸೂಚನೆ ನೀಡದೆ ಸಂಸ್ಥೆ ಬಾಗಿಲು ಮುಚ್ಚುವುದು, ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವುದು ಸರಿಯಲ್ಲ, ಇಂಥ ಸಂದರ್ಭದಲ್ಲಿ ಹೊಸ ಕೆಲಸ ಹುಡುಕಿಕೊಳ್ಳುವುದು ಕಷ್ಟವಾಗಲಿದೆ. ಉದ್ಯೋಗ ಕಡಿತದ ಬದಲು ಸಂಬಳ ಕಡಿತ ಮಾಡಿ, ಅಥವಾ ಬೇರೆ ಮಾರ್ಗ ಕಂಡುಕೊಳ್ಳಿ ಎಂದು ಅಶ್ವಥ ನಾರಾಯಣ ಸಲಹೆ ನೀಡಿದರು.

ಈ ಸಭೆಯಲ್ಲಿ ಲಾಕ್ಡೌನ್ ಅವಧಿಯಲ್ಲಿ ವರ್ಕ್ ಫ್ರಂ ಹೋಂ ಹೇಗೆ ಅನುಕೂಲವಾಗಿದೆ, ಲಾಕ್ಡೌನ್ ವಿನಾಯಿತಿ ನೀಡಿದರೆ ಸಿಬ್ಬಂದಿಗೆ, ವಾಹನಕ್ಕೆ ಪಾಸ್ ವ್ಯವಸ್ಥೆ ಹೇಗೆ, ಸೋಂಕು ಸ್ಕ್ರೀನಿಂಗ್ ಹೇಗೆ, ವರ್ಕ್ ಪ್ಲೇಸ್ ಸೋಂಕು ನಿವಾರಣೆ, ಇಂಟರ್ನೆಟ್ ವ್ಯವಸ್ಥೆ ಮುಂತಾದ ವಿಷಯಗಳ ಬಗ್ಗೆ ಚರ್ಚಿಸಲಾಯಿತು.
ಸಂಕಷ್ಟದ ಸಂದರ್ಭದಲ್ಲಿ ಐಟಿ ಉದ್ಯಮಕ್ಕೆ ಸಹಕಾರ ನೀಡಿದ ಯಡಿಯೂರಪ್ಪ ಸರ್ಕಾರದ ನೆರವನ್ನು ಐಟಿ -ಬಿಟಿ ಕಂಪನಿ ಮುಖ್ಯಸ್ಥರು ಸ್ಮರಿಸಿದರು. ನಮ್ಮ ಐಟಿ ಬಿಟಿ ಕಂಪನಿಗಳು ಉತ್ತಮ ಸೇವೆ ಒದಗಿಸಿ, ಚೆನ್ನಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಸಚಿವರು ಹೇಳಿದರು.
Interacted with leaders from the IT&BT sectors via a video call. A range of topics from implementing safety measures, facilitating transport, tax refunds to the utilisation of technology to mitigate the effects of #COVID19 were deliberated upon.
— Dr. Ashwathnarayan C. N. (@drashwathcn) April 17, 2020
Please watch - pic.twitter.com/UhiGpqxEOH
ಈ ಸಭೆಯಲ್ಲಿ ಬಯೋಕಾನ್ ಮುಖ್ಯಸ್ಥೆ ಕಿರಣ್ ಮಜುಂದಾರ್, ವಿಜಿಐಟಿಯ ಕ್ರಿಸ್ ಗೋಪಾಲಕೃಷ್ಣನ್, ಏಬಲ್ ಇಂಡಿಯಾದ ಶ್ರೀಕುಮಾರ್ ಸೂರ್ಯನಾರಾಯಣಣ್, ಬಿಎಸ್ಎನ್ಎಲ್ ನ ಪ್ರಕಾಶ್ ಗೋಪಾಲನಿ, ಆಕ್ಸಲ್ ಇಂಡಿಯಾದ ಪ್ರಶಾಂತ್ ಮುಂತಾದವರು ಪಾಲ್ಗೊಂಡಿದ್ದರು.
ಮಾರ್ಚ್ 23ರಿಂದ ಏಪ್ರಿಲ್ 14ರ ತನಕ ಮೊದಲ ಅವಧಿಯಲ್ಲಿ 21 ದಿನಗಳ ಲಾಕ್ಡೌನ್ ಅವಧಿಯನ್ನು ದೇಶ ಎದುರಿಸಿದೆ. ಈಗ ಮೇ 3ರ ತನಕ 19 ದಿನಗಳ ಲಾಕ್ಡೌನ್ ವಿಸ್ತರಣೆಯಾಗಿದೆ. ಜೊತೆಗೆ ಏಪ್ರಿಲ್ 20ರ ತನಕ ರೆಡ್ ಅಲರ್ಟ್ ಇರುವ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ತೀವ್ರವಾಗಿ ಅವಲೋಕನಕ್ಕೆ ಕರೆ ನೀಡಲಾಗಿದೆ. ಪರಿಸ್ಥಿತಿ ಸುಧಾರಿಸಿದರೆ ಮಾತ್ರ ಹೊಸ ಮಾರ್ಗಸೂಚಿಯ ಅನ್ವಯ ವಿನಾಯಿತಿ ನೀಡಲಾಗುತ್ತದೆ ಎಂದು ಮೋದಿ ಎಚ್ಚರಿಸಿದರು. ಮೋದಿ ಹೇಳಿದಂತೆ ಏಪ್ರಿಲ್ 15ರಂದು ಗೃಹ ಸಚಿವಾಲಯ ಮಾರ್ಗಸೂಚಿಯಲ್ಲಿ ಬದಲಾವಣೆಗಳಿಲ್ಲ.












Click it and Unblock the Notifications