ಮುಖ್ಯಮಂತ್ರಿಗಳಿಗೆ ಕ್ರೆಡಾಯ್ ಬಜೆಟ್ ಪೂರ್ವ ಅಹವಾಲು
ಬೆಂಗಳೂರು, ಫೆ.24: ಬಜೆಟ್ ಪೂರ್ವ ಚರ್ಚೆಗಾಗಿ ರಾಜ್ಯ ಸರ್ಕಾರವು ವಿವಿಧ ಕೈಗಾರಿಕಾ ಮಂಡಳಿಗಳಿಗೆ ನೀಡಿದ ಆಹ್ವಾನಕ್ಕೆ ಪ್ರತಿಯಾಗಿ ಕ್ರೆಡಾಯ್ ಕರ್ನಾಟಕವು ಇತ್ತೀಚೆಗೆ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಸರ್ಕಾರಕ್ಕೆ ಕೈಗಾರಿಕಾ ಮಂಡಳಿಯ ಬಜೆಟ್ ಪೂರ್ವ ಅಹವಾಲನ್ನು ಸಲ್ಲಿಸಿತು. ಈ ಸಭೆಯ ಅಧ್ಯಕ್ಷತೆಯನ್ನು ಗೌರವಾನ್ವಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಹಿಸಿದ್ದರು.
ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ ಕ್ರೆಡಾಯ್ ನಿಯೋಗದ ನೇತೃತ್ವವನ್ನು ನಾಗರಾಜ ರೆಡ್ಡಿ, ಅಧ್ಯಕ್ಷರು- ಕ್ರೆಡಾಯ್ ಕರ್ನಾಟಕ ವಹಿಸಿದ್ದರು. ಜತೆಗೆ ಸಿ.ಎನ್.ಗೋವಿಂದರಾಜು, ಅಧ್ಯಕ್ಷರು-ಕ್ರೆಡಾಯ್ ಬೆಂಗಳೂರು, ಸುರೇಶ್ ಹರಿ, ಕಾರ್ಯದರ್ಶಿಗಳು-ಕ್ರೆಡಾಯ್ ಬೆಂಗಳೂರು, ಅನಿಲ್ ನಾಯಕ್, ಸಿಇಒ-ಕ್ರೆಡಾಯ್ ಬೆಂಗಳೂರು ಹಾಗೂ ಕೆಲವು ಬಿಲ್ಡರ್ ಸದಸ್ಯರೂ ಜತೆಗಿದ್ದರು. ಸಭೆಯಲ್ಲಿ ಕಂದಾಯ-ಮುದ್ರಾಂಕದ ಐಜಿ ಸೇರಿದಂತೆ ರಾಜ್ಯ ಕಂದಾಯ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಸುರೇಶ್ ಹರಿ ಅವರ ಪ್ರಕಾರ, ಮುಖ್ಯಮಂತ್ರಿಗಳಿಗೆ ಸಲ್ಲಿಸಿದ ಮುಖ್ಯ ಅಹವಾಲು, ಜಂಟಿ ಅಭಿವೃದ್ಧಿ ಒಪ್ಪಂದಗಳ ಮೇಲೆ ವಿಧಿಸಲಾಗುತ್ತಿರುವ ಮುದ್ರಾಂಕ ಶುಲ್ಕದ ಕುರಿತಾಗಿತ್ತು. "ಅಂದು ಮುದ್ರಾಂಕ ಶುಲ್ಕಕ್ಕೆ ಗರಿಷ್ಠ ಮಿತಿ ಇತ್ತು. ಈಗ ಯಾವುದೇ ಗರಿಷ್ಠ ಮಿತಿ ಇಲ್ಲದೆ ಈ ವಿಭಾಗದ ಮೇಲೆ ಹೇರಲಾಗುತ್ತಿರುವ ಅಧಿಕ ಮುದ್ರಾಂಕ ಶುಲ್ಕದಿಂದಾಗಿ ಪ್ರೊಜೆಕ್ಟ್ ಗಳನ್ನು ಜಂಟಿ ಅಭಿವದ್ಧಿ ಮಾಡುವುದು ಹೆಚ್ಚೆಚ್ಚು ಕಷ್ಟವಾಗುತ್ತಿದೆ. ಗರಿಷ್ಠ ಮಿತಿಯನ್ನು ಮರಳಿ ತರುವಂತೆ ನಾವು ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆವು. ಇದರಿಂದಾಗಿ ಲಭ್ಯವಿರುವ ಸಂಪನ್ಮೂಲಗಳೊಂದಿಗೆ ಹೆಚ್ಚು ಪ್ರೊಜೆಕ್ಟ್ ಗಳನ್ನು ಮಾಡಬಹುದಾಗಿದೆ'' ಎಂದು ಅವರು ವಿವರಿಸಿದರು.
ಬಜೆಟ್ ಪೂರ್ವ ಅಹವಾಲು
ಬಹು ನೋಂದಣಿಯ ವೇಳೆ ಮೋಸಗೊಳಿಸುವ ಸಂಗತಿಗಳಿಂದ ಗ್ರಾಹಕರನ್ನು ರಕ್ಷಿಸುವ ಸಂಬಂಧ ಸೂಕ್ತ ತಪಾಸಣೆ ಹಾಗೂ ಸಮತೋಲನವಾಗಬೇಕು ಎಂದೂ ಕ್ರೆಡಾಯ್ ನಿಯೋಗವು ಮುಖ್ಯಮಂತ್ರಿ ಅವರಲ್ಲಿ ಮನವಿ ಸಲ್ಲಿಸಿತು. "ಗ್ರಾಹಕರು ಹಾಗೂ ಅಧಿಕಾರಿಗಳಿಬ್ಬರ ಸೌಲಭ್ಯಕ್ಕಾಗಿ ಹಾಗೂ ಪರಸ್ಪರ ಉತ್ತಮ ಸಮನ್ವಯಕ್ಕಾಗಿ ಉಪ ನೋಂದಣಾಧಿಕಾರಿಗಳ ಕಚೇರಿಯನ್ನು ಆಧುನೀಕರಣಗೊಳಿಸಲು ನಾವು ಮನವಿ ಮಾಡಿದ್ದೇವೆ. ಒಟ್ಟಾರೆಯಾಗಿ, ಖರೀದಿದಾರರು ಭರಿಸಬೇಕಾಗುವ, ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ವಿಧಿಸಲಾಗುತ್ತಿರುವ ಬಹು ತೆರಿಗೆ ಪದ್ಧತಿಯತ್ತ ಗಮನ ಹರಿಸುವಂತೆ ನಾವು ಗೌರವಾನ್ವಿತ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದೆವು'' ಎಂದು ಸುರೇಶ್ ಹರಿ ಹೇಳಿದರು.
ರಿಯಲ್ ಎಸ್ಟೇಟ್ ಉದ್ಯಮಕ್ಕೆ ಸಂಬಂಧಿಸಿದ ವಿಷಯಗಳನ್ನು ಚರ್ಚಿಸಲು ವಿವಿಧ ಇಲಾಖೆಗಳ ಜತೆ ದುಂಡು ಮೇಜಿನ ಸಭೆ ನಡೆಸುವಂತೆಯೂ ಗೌರವಾನ್ವಿತ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಲಾಯಿತು. "ನಮ್ಮ ಅಹವಾಲುಗಳನ್ನು ಆಲಿಸಿದ ಮುಖ್ಯಮಂತ್ರಿಗಳು ಈ ವಿಷಯಗಳ ಬಗ್ಗೆ ಗಮನಹಿಸುವೆ ಹಾಗೂ ಸಾಧ್ಯವಾದಷ್ಟು ಪ್ರಯತ್ನಿಸುವೆ ಎಂದು ಭರವಸೆ ನೀಡಿದರು'' ಎಂದು ಅವರು ಮಾಹಿತಿ ನೀಡಿದರು. (ಒನ್ಇಂಡಿಯಾ ಬಿಜಿನೆಸ್)












Click it and Unblock the Notifications