ಎರಡು ತಿಂಗಳಲ್ಲಿ ಬೀದರ್‌ಗೆ ಹೊಸ ವಿಶ್ವವಿದ್ಯಾಲಯ: ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ

ಬೀದರ್, ಅಕ್ಟೋಬರ್ 19: ಮುಂದಿನ ಒಂದೆರಡು ತಿಂಗಳಲ್ಲಿ ಬೀದರ್‌ನಲ್ಲಿ ಹೊಸ ವಿಶ್ವವಿದ್ಯಾಲಯ ಪ್ರಾರಂಭ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಬೀದರ್ ಜಿಲ್ಲೆಯ ಹುಮನಾಬಾದ್‌ನ ತೇರು ಮೈದಾನದಲ್ಲಿ 'ಜನಸಂಕಲ್ಪ ಯಾತ್ರೆ' ಉದ್ಘಾಟಿಸಿ ಮಾತನಾಡಿದ ಅವರು, "ಈಗಾಗಲೇ ಈ ಬಗ್ಗೆ ಬಜೆಟ್‌ನಲ್ಲಿ ಘೋಷಣೆ ಮಾಡಲಾಗಿದ್ದು, ಗಡಿ ಭಾಗದ ಗ್ರಾಮ ಪಂಚಾಯಿತಿ ಅಭಿವೃದ್ಧಿಗೆ ವಿಶೇಷ ಅನುದಾನವನ್ನು ಕೊಡುವ ತೀರ್ಮಾನ ಮಾಡಲಾಗಿದೆ. ಬೀದರ್ ಕೋಟೆ ಅಭಿವೃದ್ಧಿಗೆ 20 ಕೋಟಿ ನೀಡಲಾಗಿದೆ,'' ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಭಾಲ್ಕಿ ಮತ್ತು ಔರಾದ್ ತಾಲ್ಲೂಕುಗಳಿಗೆ 1500 ಕೋಟಿ ವೆಚ್ಚದಲ್ಲಿ ಏತ ನೀರಾವರಿ ಯೋಜನೆ ನೀಡಲಾಗಿದೆ. ಕಾರಂಜ ಯೋಜನೆಯಲ್ಲಿ ಕಾಲುವೆಗಳ ಆಧುನೀಕರಣ ಕಾರ್ಯ ಕೈಗೆತ್ತಿಕೊಳ್ಳಲಾಗಿದೆ. ಕಾರಂಜ ನೀರಾವರಿ ವ್ಯಾಪ್ತಿಯ ಕೊನೇ ಭಾಗಕ್ಕೆ ನೀರನ್ನು ಹರಿಸುವ ಸಂಕಲ್ಪ ನಮ್ಮ ಸರ್ಕಾರ ಮಾಡಿದೆ ಎಂದು ಸಿಎಂ ತಿಳಿದರು.

ಶಾಲಾ ಕೊಠಡಿಗಳು, ರಸ್ತೆಗಳು, ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗಿದೆ. 71 ಹೊಸ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು, 24 ಪಿ.ಹೆಚ್.ಸಿ ಗಳನ್ನು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಮಕ್ಕಳ ಪೌಷ್ಟಿಕ ಆಹಾರಕ್ಕೂ ಆದ್ಯತೆ ನೀಡುತ್ತಿದ್ದೇವೆ. ಈ ವರ್ಷ ಕಲ್ಯಾಣ ಕರ್ನಾಟಕಕ್ಕೆ 5 ಸಾವಿರ ಶಿಕ್ಷಕರ ನೇಮಕದ ಜತೆಗೆ ಒಟ್ಟು 14 ಸಾವಿರ ಸರ್ಕಾರಿ ನೌಕರಿಗೆ ನೇಮಕ ಮಾಡಲಾಗುತ್ತಿದೆ. 300 ಹೊಸ ಬಸ್ ಗಳ ಖರೀದಿಗೆ ಅನುದಾನ ನೀಡಲಾಗಿದೆ. ಇದರ ಜತೆಗೆ ಬೀದರ್ ಜಿಲ್ಲೆಗೆ ವಿಶೇಷ ಯೋಜನೆಗಳನ್ನು ರೂಪಿಸುತ್ತಿದ್ದೇವೆ ಎಂದರು.

ಮುಖ್ಯಮಂತ್ರಿಯಾದ ಕೇವಲ 4 ಗಂಟೆಗಳಲ್ಲಿ ರೈತ ವಿದ್ಯಾನಿಧಿ ಘೋಷಣೆ ಮಾಡಿದ್ದು, 6 ಲಕ್ಷ ಕೃಷಿ ಕೂಲಿ ಕಾರ್ಮಿಕ ಮಕ್ಕಳಿಗೂ ಈ ಸೌಲಭ್ಯ ವಿಸ್ತರಣೆ ಆಗಿದೆ. ಮೀನುಗಾರರು, ನೇಕಾರರು, ಆಟೋ-ಟ್ಯಾಕ್ಸಿ ಡ್ರೈವರ್ ಮಕ್ಕಳಿಗೂ ವಿದ್ಯಾನಿಧಿ ವಿಸ್ತರಣೆ ಮಾಡಲಾಗಿದೆ. ಅಲ್ಲದೇ ಈ ವರ್ಷ 4 ಸಾವಿರ ಹೆಚ್ಚುವರಿ ಅಂಗನವಾಡಿಗಳನ್ನು ಪ್ರಾರಂಭ ಮಾಡುತ್ತಿದ್ದೇವೆ. ಅದರಲ್ಲಿ 1200 ಕಲ್ಯಾಣ ಕರ್ನಾಟಕದಲ್ಲಿ ಶುರು ಮಾಡುತ್ತಿದ್ದೇವೆ. ದುಡಿಯುವ ವರ್ಗಕ್ಕೆ ಶಕ್ತಿ ತುಂಬುವ ಸಲುವಾಗಿ ಈ ಸೌಲಭ್ಯ ನೀಡುತ್ತಿದ್ದೇವೆ ಎಂದರು.

ಎಲ್ಲಾ ವರ್ಗಗಳ ಅಭಿವೃದ್ಧಿ

ಎಲ್ಲಾ ವರ್ಗಗಳ ಅಭಿವೃದ್ಧಿ

ಮರಾಠ ಜನಾಂಗ, ಬೋವಿ ಜನಾಂಗಕ್ಕೆ ಅಭಿವೃದ್ಧಿ ನಿಗಮ ಮಾಡಿದ್ದೇವೆ. ಎಲ್ಲ ವರ್ಗದ ಅಭಿವೃದ್ಧಿಯೇ ಈ ನಾಡಿನ ಅಭಿವೃದ್ಧಿ. ಇಂತಹ ಒಂದು ಅಭಿವೃದ್ಧಿ ಭಾರತೀಯ ಜನತಾ ಪಕ್ಷದ ಸರ್ಕಾರದಿಂದ ಮಾತ್ರ ಆಗುತ್ತಿದೆ. ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ಸಬ್ ಕೆ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬ ಮಾತುಗಳನ್ನು ಹೇಳಿದ್ದಾರೆ. ಅವರ ಈ ಮಂತ್ರವನ್ನು ನಾವು ಪರಿಪಾಲನೆ ಮಾಡುತ್ತಿದ್ದೇವೆ. ಕೃಷಿ ಸಮ್ಮಾನ್, ಆಯುಷ್ಮಾನ್ ಭಾರತ್, ಪ್ರಧಾನ ಮಂತ್ರಿ ಆವಾಸ್, ಉಜ್ವಲ್ ಯೋಜನೆ, ಪ್ರಧಾನ ಮಂತ್ರಿ ಸಡಕ್ ಯೋಜನೆ, ಮುದ್ರಾ ಯೋಜನೆಗಳನ್ನು ದೇಶದ ಸಮಗ್ರ ಅಭಿವೃದ್ಧಿಗೆ ನರೇಂದ್ರ ಮೋದಿಯವರು ಕೊಟ್ಟಿದ್ದಾರೆ ಎಂದರು.

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ರಾಂತಿ ಮತ್ತೆ ಆಗಬೇಕು

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ರಾಂತಿ ಮತ್ತೆ ಆಗಬೇಕು

ಇದು ಬಸವಣ್ಣನವರ ನಾಡು. ಇಲ್ಲಿಂದ ನಾವು ಅಧ್ಯಾತ್ಮಿಕ ವಿಚಾರ ಹಾಗೂ ಸತ್ಸಂಗವನ್ನು ತೆಗೆದುಕೊಂಡು ಹೋಗುತ್ತಿದ್ದೇವೆ. ವಚನಕಾರರ ವಿಚಾರಗಳು ನಮ್ಮ ಸರ್ಕಾರದ ಕಾರ್ಯಕ್ರಮಗಳು. ಇಷ್ಟು ವರ್ಷ ಯಾರು ಅಪಮಾನವನ್ನು ಸಹಿಸಿದ್ದಾರೆ, ಅವರಿಗೆ ಮಾನ ಮತ್ತು ಸನ್ಮಾನಗಳನ್ನು ಕೊಡುವುದೇ ನಮ್ಮ ಗುರಿ.

ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಕ್ರಾಂತಿಯನ್ನು ಕರ್ನಾಟಕದಲ್ಲಿ ಮತೊಮ್ಮೆ ತರಬೇಕು ಎಂದು ಆಡಳಿತ ಚುಕ್ಕಾಣಿ ಹಿಡಿದಿದ್ದು, ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡುವುದೇ ನಮ್ಮ ಸಂಕಲ್ಪ ಮತ್ತು ಗುರಿ. ಇದು ಯಶಸ್ವಿಯಾಗಲು ನಿಮ್ಮ ಆಶಿರ್ವಾದ ಎಲ್ಲ ಬಿಜೆಪಿ ಅಭ್ಯರ್ಥಿಗಳ ಮೇಲೆ ಇರಲಿ ಎಂದು ಮುಖ್ಯಮಂತ್ರಿಗಳು ಹೇಳಿದರು.

ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಮೋಸ ಮಾಡಿದೆ

ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಮೋಸ ಮಾಡಿದೆ

ಕಲ್ಯಾಣ ಕರ್ನಾಟಕಕ್ಕೆ ಕಾಂಗ್ರೆಸ್ ಮೋಸ ಮಾಡಿದೆ. ಹಲವರ ಹೋರಾಟದ ಫಲವಾಗಿ ಬಂದ 371ಜೆ ಲೋಕಸಭೆಯಲ್ಲಿ ಅನುಮೋದನೆ ಪಡೆದರೂ ಪುಸ್ತಕದಲ್ಲಿ ಮಾತ್ರ ಇತ್ತು. ಸುಮಾರು 5 ವರ್ಷಗಳ ಕಾಲ ಯಾವುದೇ ಅಭಿವೃದ್ಧಿ ಕಾರ್ಯಗಳು ಈ ಭಾಗದಲ್ಲಿ ಮಾಡಲಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಈ ಭಾಗಕ್ಕೆ 1500 ಕೋಟಿಗಳನ್ನು ಮಂಜೂರು ಮಾಡಿದರು. ಈ ವರ್ಷ ಕಲ್ಯಾಣ ಕರ್ನಾಟಕಕ್ಕೆ 3000 ಕೋಟಿಗಳನ್ನು ಮಂಜೂರು ಮಾಡಿದ್ದು, ಮುಂದಿನ ಬಜೆಟ್ ನಲ್ಲಿ 5000 ಕೋಟಿಯನ್ನು ಮೀಸಲಿಡಲಾಗುವುದು ಎಂದು ಈಗಾಗಲೇ ಘೋಷಣೆ ಮಾಡಿದೆ ಎಂದರು.

2014-2018 ವರೆಗಿನ ಕಾಂಗ್ರೆಸ್ ಸರ್ಕಾರದಲ್ಲಿ ಅತಿ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರ ರೈತರಿಗೆ ಕೇವಲ ದೌರ್ಭಾಗ್ಯಗಳನ್ನು ಮಾತ್ರ ಕೊಟ್ಟಿದೆ. ಇದನ್ನು ಗಮನಿಸಿದ್ರೆ ರಾಜ್ಯದಲ್ಲಿ ಯಾವುದೇ ರೈತ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡುವುದಿಲ್ಲ ಎಂದು ಸಿಎಂ ಹೇಳಿದರು.

ಆಗ ಕರ್ನಾಟಕ ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ ಎಟಿಎಂ ಆಗಿತ್ತು

ಆಗ ಕರ್ನಾಟಕ ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ ಎಟಿಎಂ ಆಗಿತ್ತು

ಕಾಂಗ್ರೆಸ್ ಅವರು ಮಾತೆತ್ತಿದರೆ ಸಾಮಾಜಿಕ ನ್ಯಾಯ ಎಂದು ಹೇಳುತ್ತಾರೆ. ಆದರೆ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗಕ್ಕೆ ಏನು ಮಾಡಿದ್ದಾರೆ? ಕಾಗಿನೆಲೆ ಅಭಿವೃದ್ಧಿಯನ್ನು ಯಡಿಯೂರಪ್ಪನವರು ಮಾಡಿದರು. ಕನಕದಾಸರು ಹುಟ್ಟಿದ ಊರಿನ ಸಮಗ್ರ ಅಭಿವೃದ್ಧಿಯನ್ನು ನಾವು ಮಾಡಿದ್ದೇವೆ, ಸಾಮಾಜಕ ನ್ಯಾಯವನ್ನು ಕೇವಲ ಮಾತುಗಳಲ್ಲಿ ತೋರಿಸದೇ ಕೆಲಸ ಮಾಡಿ ತೋರಿಸಿದ್ದೇವೆ. ಈ ಮೋಸದ ಆಟಕ್ಕೆ ಜನರೇ ಕೊನೆ ಹಾಡಬೇಕು. ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ಇದ್ದಾಗ ಇಲ್ಲಿನ ಹಣವನ್ನು ಲೂಟಿ ಮಾಡಿ ದಿಲ್ಲಿಯಲ್ಲಿ ಕಪ್ಪಕಾಣಿಕೆ ಸಲ್ಲಿಸುತ್ತಿದ್ದರು. ಆಗ ಕರ್ನಾಟಕ ಸರ್ಕಾರ ಕಾಂಗ್ರೆಸ್ ಪಕ್ಷಕ್ಕೆ ಎಟಿಎಂ ಆಗಿತ್ತು. ಇದನ್ನು ಆ ಪಕ್ಷದ ಜನರೇ ಮಾತನಾಡಿಕೊಳ್ಳುತ್ತಿದ್ದರು ಎಂದರು.

ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಾ ಇದೆ. ಕಾಂಗ್ರೆಸ್ ಪಕ್ಷ ರೈತರಿಗೆ ಕಷ್ಟ ಕಾಲದಲ್ಲಿ ಸಹಾಯ ಮಾಡದೇ ಒಂದೇ ಸುಳ್ಳನ್ನ ಹಲವಾರು ವರ್ಷಗಳಿಂದ ಹೇಳಿಕೊಂದು ಬಂದು ಅಧಿಕಾರ ಮಾಡುತ್ತಿದೆ ಎಂದರು.

ನಿಮ್ಮ ಉತ್ಸಾಹ, ಹುರುಪು ಹುಮ್ಮಸ್ಸು ಹಾಗೂ ಅಪಾರ ಸಂಖ್ಯೆಯಲ್ಲಿ ಸೇರಿರುವ ಯುವಕರನ್ನು ನೋಡಿದಾಗ ಈ ಜನ ಸಂಕಲ್ಪ ಯಾತ್ರೆ, ವಿಜಯ ಸಂಕಲ್ಪ ಯಾತ್ರೆ ಆಗುತ್ತದೆ. ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಲ್ಲಿ ಬಿಜೆಪಿ ಅತ್ಯಧಿಕ ಮತಗಳಿಂದ ವಿಜಯಶಾಲಿ ಆಗುತ್ತದೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+