ಕೆಕೆಆರ್ಟಿಸಿ ಬಸ್ ತಗೊಂಡು ಊರಿಗೆ ಹೊರಟವ ಅರೆಸ್ಟ್!
ಬೀದರ್, ಜೂನ್ 05: 'ಶಕ್ತಿ' ಯೋಜನೆಯಡಿ ಸರ್ಕಾರಿ ಬಸ್ನಲ್ಲಿ ಮಹಿಳೆಯರು ಉಚಿತವಾಗಿ ಸಂಚಾರ ನಡೆಸಲು ಅವಕಾಶ ನೀಡಲಾಗಿದೆ. ಪುರುಷರಿಗೂ ಏನಾದರೂ ರಿಯಾಯಿತಿ ಕೊಡಿ ಎಂದು ಚರ್ಚೆಗಳು ಆರಂಭವಾಗಿವೆ. ಇಂತಹ ಸಮಯದಲ್ಲಿ ಕೆಕೆಆರ್ಟಿಸಿ ಬಸ್ ತೆಗೆದುಕೊಂಡು ಊರಿಗೆ ಹೊರಟಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೋಮವಾರ ಬೀದರ್ ನ ಔರಾದ್ನಲ್ಲಿ ಯಶಪ್ಪ ಸೂರ್ಯವಂಶಿ ಎನ್ನುವ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಸುಮಾರು ಹೊತ್ತು ಊರಿಗೆ ತೆರಳು ಬಸ್ಗಾಗಿ ಕಾದ ಈತ ಬಸ್, ಬಾರದೇ ಇದ್ದಾಗ ಔರಾದ್ ನಿಲ್ದಾಣದಲ್ಲಿ ನಿಂತಿದ್ದ ಬಸ್ ತೆಗೆದುಕೊಂಡು ಊರಿಗೆ ಹೊರಟಿದ್ದ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ (ಕೆಕೆಆರ್ಟಿಸಿ) ಬಸ್ ಚಲಾಯಿಸಿಕೊಂಡು ಹೋಗಿ ವಾಹನವೊಂದಕ್ಕೆ ಡಿಕ್ಕಿ ಹೊಡೆದಿದ್ದು, ಬಳಿಕ ರಸ್ತೆಯ ಡಿವೈಡರ್ ಮೇಲೆ ಹತ್ತಿಸಿದ್ದಾನೆ. ಈ ಘಟನೆಯಿಂದ ಯಾರೂ ಸಹ ಗಾಯಗೊಂಡಿಲ್ಲ. ಬಸ್ ಅಪಘಾತದ ಬಳಿಕ ಪರಾರಿಯಾಗುತ್ತಿದ್ದ ಯಶಪ್ಪ ಸೂರ್ಯವಂಶಿಯನ್ನು ಪೊಲೀಸರು ಹಿಡಿದರು.
ಕುಡಿದ ಅಮಲಿನಲ್ಲಿ ಕೃತ್ಯ; ಇಟ್ಟಿಗೆ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಯಶಪ್ಪ ಸೂರ್ಯವಂಶಿ ಸೋಮವಾರ ಊರಿಗೆ ತೆರಳಲು ಔರಾದ್ ನಿಲ್ದಾಣಕ್ಕೆ ಬಂದಿದ್ದ. ಎಷ್ಟು ಹೊತ್ತು ಕಳೆದರೂ ಬಸ್ ಬಂದಿರಲಿಲ್ಲ. ಮದ್ಯಪಾನ ಮಾಡಿದ್ದ ಆತ ಊರಿಗೆ ಬಸ್ ತೆಗೆದುಕೊಂಡು ಹೋಗುತ್ತೇನೆ ಎಂದು ಹೇಳುತ್ತಿದ್ದ. ಆದರೆ ಪ್ರಯಾಣಿಕರು ಅದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ.

ಚಾಲಕ ಮತ್ತು ನಿರ್ವಾಹಕ ಬಸ್ ಒಂದನ್ನು ಬಿಟ್ಟು ಎಂಟ್ರಿ ಮಾಡಿಸಲು ನಿಲ್ದಾಣದ ಒಳ ಹೋದಾಗ ಓಡಿ ಹೋಗಿ ಬಸ್ ಹತ್ತಿ ಅದನ್ನು ಚಲಾಯಿಸಿಕೊಂಡು ಮುಂದೆ ಸಾಗಿದ್ದಾನೆ ಯಶಪ್ಪ ಸೂರ್ಯವಂಶಿ. ಆಗ ಬಸ್ನಲ್ಲಿದ್ದ ಪ್ರಯಾಣಿಕರು ಗಾಬರಿಯಾದರು.
ಕುಡಿದ ಮತ್ತಿನಲ್ಲಿದ್ದ ಯಶಪ್ಪ ಸೂರ್ಯವಂಶಿ ಮೊದಲು ವಾಹನವೊಂದಕ್ಕೆ ಬಸ್ ಡಿಕ್ಕಿ ಹೊಡೆಸಿದ್ದಾನೆ. ಬಳಿಕ ರಸ್ತೆಯ ಡಿವೈಡರ್ಗೆ ಬಸ್ ಡಿಕ್ಕಿ ಹೊಡೆದಿದೆ. ಆಗ ಓಡಲು ಪ್ರಯತ್ನ ನಡೆಸಿದ ಆತನನ್ನು ಪೊಲೀಸರು ಜನರ ಸಹಾಯದಿಂದ ಹಿಡಿದರು, ಬಳಿಕ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಣೆ ಮಾಡುತ್ತಿದ್ದಾರೆ.
ಬಸ್ ಕಳ್ಳತನವಾಗಿತ್ತು; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವಿಭಾಗದಲ್ಲಿ ಇಂತಹ ವಿಚಿತ್ರ ಘಟನೆಗಳು ಆಗಾಗ ನಡೆಯುತ್ತವೆ. ಇದೇ ವರ್ಷದ ಫೆಬ್ರವರಿಯಲ್ಲಿ ಕಲಬುರಗಿಯ ಚಿಂಚೋಳಿ ಬಸ್ ನಿಲ್ದಾಣದಿಂದ ಕೆಕೆಆರ್ಟಿಸಿ ಬಸ್ ಕಳ್ಳತನವಾಗಿತ್ತು. ಬಸ್ ಕದ್ದಿದ್ದವರು ಸುಮಾರು 80 ಕಿ. ಮೀ. ಅದನ್ನು ಓಡಿಸಿಕೊಂಡು ಹೋಗಿದ್ದರು. ರಾತ್ರಿ ಪಾಳಿ ಮುಗಿಸಿ ಚಾಲಕ, ನಿರ್ವಾಹಕ ಮಲಗಿದ ಮೇಲೆ ಬಸ್ ಅನ್ನು ಕಳ್ಳತನ ಮಾಡಲಾಗಿತ್ತು.
ಬಸ್ ಕಳ್ಳತನದ ವಿಚಾರ ತಿಳಿಯುತ್ತಿದ್ದಂತೆಯೇ ಪೊಲೀಸರು ಹುಡುಕಾಟ ಆರಂಭಿಸಿದ್ದರು. ತೆಲಂಗಾಣ ರಾಜ್ಯದ ತಾಂಡೂರು ಸಮೀಪದ ಭೂಕೈಲಾಸ ಎಂಬಲ್ಲಿ ಬಸ್ ಬಿಟ್ಟು ಆರೋಪಿಗಳು ಪರಾರಿಯಾಗಿದ್ದರು. ಡೀಸೆಲ್ ಖಾಲಿ ಆಗುತ ತನಕ ಅವರು ಬಸ್ ಓಡಿಸಿದ್ದರು.












Click it and Unblock the Notifications