ಕರ್ನಾಟಕದಲ್ಲೇ ಮೊದಲು; ಬೀದರ್ನಲ್ಲಿ ಬೇಟಿ ಸರ್ಕಲ್
ಬೀದರ್, ಜನವರಿ 28: 'ಬೇಟಿ ಬಚಾವೋ ಬೇಡಿ ಪಡಾವೋ' ಜಾಗೃತಿ ಕಾರ್ಯಕ್ರಮದ ಅಂಗವಾಗಿ ಬೀದರ್ನಲ್ಲಿ ಹೆಣ್ಣು ಮಗು ವೃತ್ತ (ಬೇಟಿ ಸರ್ಕಲ್) ನಿರ್ಮಾಣ ಮಾಡಲಾಗಿದೆ. ಕರ್ನಾಟಕದ ಮೊದಲ ಬೇಟಿ ಸರ್ಕಲ್ ಇದಾಗಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಕಾರದಿಂದ ಬೀದರ್ ನಗರಸಭೆ ಶರಣ ಉದ್ಯಾನದ ಸಮೀಪ ಬೇಟಿ ಸರ್ಕಲ್ ನಿರ್ಮಾಣ ಮಾಡಿದೆ. ಸುಮಾರು 10 ಲಕ್ಷ ರೂ. ವೆಚ್ಚದಲ್ಲಿ ಇದನ್ನು ನಿರ್ಮಿಸಲಾಗಿದೆ.
ಹೆಣ್ಣು ಮಗುವಿನ ಬಗ್ಗೆ ಪ್ರತಿಯೊಬ್ಬರು ಅಭಿಮಾನ ಹೊಂದಬೇಕು ಎಂಬ ಆಶಯವನ್ನು ಮುಂದಿಟ್ಟುಕೊಂಡು ತಾಯಿ ಹೆಣ್ಣು ಮಗುವನ್ನು ಎತ್ತಿಕೊಂಡಿರುವ ಪುತ್ಥಳಿಯನ್ನು ವೃತ್ತದಲ್ಲಿ ನಿರ್ಮಾಣ ಮಾಡಲಾಗಿದೆ.

2018ರಲ್ಲಿ ಜಿಲ್ಲಾಧಿಕಾರಿಯಾಗಿದ್ದ ಎಚ್. ಆರ್. ಮಹಾದೇವ ಅವರು ಮಕ್ಕಳ ಹಕ್ಕು ಸಂರಕ್ಷಣಾ ಸಮಿತಿ ಸಭೆ ನಡೆಸುವ ಸಂದರ್ಭದಲ್ಲಿ 'ಹೆಣ್ಣು ಮಗು ವೃತ್ತ' ನಿರ್ಮಾಣ ಮಾಡುವ ಪ್ರಸ್ತಾವನೆ ಮಾಡಿದ್ದರು.
ನಗರಸಭೆ ಅಧಿಕಾರಿಗಳಿಗೆ ಈ ಕುರಿತು ನಿರ್ದೇಶನ ನೀಡಿದ್ದರು. ಈಗ ಹೆಣ್ಣು ಮಗು ಸರ್ಕಲ್ ನಿರ್ಮಾಣಗೊಂಡಿದೆ. ವೃತ್ತದ ಸುತ್ತಲೂ ಹೆಣ್ಣು ಮಗು ಉಳಿಸಿ ಹೆಣ್ಣು ಮಗುವನ್ನು ಓದಿಸಿ ಎಂಬ ಸಂದೇಶಗಳಿವೆ.
ಬೇಟಿ ಸರ್ಕಲ್ ಬಗ್ಗೆ ಮಾತನಾಡಿದ ಜಿಲ್ಲಾಧಿಕಾರಿ ಆರ್. ರಾಮಚಂದ್ರನ್, "ಹೆಣ್ಣು ಭ್ರೂಣ ಹತ್ಯೆ ನಿಲ್ಲಬೇಕಿದೆ. ಹೆಣ್ಣು ಮಗು ನಮಗೆ ಹೊರೆ ಎಂಬ ಕಳಂಕ ತೊರೆಯಬೇಕಿದೆ. ಸಮಾಜದಲ್ಲಿ ಹೆಣ್ಣಿಗೆ ಗೌರವ ಇದೆ ಎನ್ನುವುದು ಮನವರಿಕೆ ಮಾಡಲು ವೃತ್ತ ನಿರ್ಮಿಸಲಾಗಿದೆ" ಎಂದು ಹೇಳಿದ್ದಾರೆ.
ಕರ್ನಾಟಕದ ಯಾವುದೇ ಜಿಲ್ಲೆಯಲ್ಲಿಯೂ ಹೆಣ್ಣು ಮಗುವ ವೃತ್ತವಿಲ್ಲ. ಬೀದರ್ನಲ್ಲಿ ನಿರ್ಮಾಣ ಮಾಡಲಾಗಿದ್ದು, ರಾಜ್ಯದಲ್ಲೇ ಇದು ಮೊದಲು. ಬೀದರ್ ಜಿಲ್ಲಾ ಉಸ್ತುವಾರಿ ಸಚಿವ ಪ್ರಭು ಚವಾಣ್ ಗಣರಾಜ್ಯೋತ್ಸವದ ದಿನ ಈ ವೃತ್ತವನ್ನು ಲೋಕಾರ್ಪಣೆ ಮಾಡಿದ್ದಾರೆ.












Click it and Unblock the Notifications