ಹಿಜಾಬ್ ವಿವಾದ; ಬೀದರ್ನ ಬ್ರಿಮ್ಸ್ ವೈರಲ್ ವಿಡಿಯೋಗೆ ಸ್ಪಷ್ಟನೆ
ಬೀದರ್, ಫೆಬ್ರವರಿ 11; ಬೀದರ್ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಬ್ರಿಮ್ಸ್) ಸಿಬ್ಬಂದಿಗಳು ಹಿಜಾಬ್ ಧರಿಸಿದ್ದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ ಎಂಬ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಫೆಬ್ರವರಿ 10ರ ಗುರುವಾರ ನರ್ಸಿಂಗ್ ಪರೀಕ್ಷೆ ಇತ್ತು. ಆಗ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿಯರನ್ನು ಪರೀಕ್ಷಾ ಕೇಂದ್ರದ ಬಳಿ ಸಿಬ್ಬಂದಿ ತಡೆದಿದ್ದಾರೆ ಎಂಬ ವಿಡಿಯೋ ಎಲ್ಲೆಡೆ ಹರಿದಾಡುತ್ತಿದೆ.
ಹಿಜಾಬ್ ಧರಿಸಿದರೆ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆಯೇ ಎಂದು ಶಿಕ್ಷಕರಿಗೆ ಹೇಗೆ ತಿಳಿಯುತ್ತದೆ?: ಅಸ್ಸಾಂ ಸಿಎಂ
ಇನ್ನು ಈ ಕುರಿತು ಬ್ರಿಮ್ಸ್ ನಿರ್ದೇಶಕ ಚಂದ್ರಕಾಂತ ಚಿಲ್ಲರಗಿ ಪ್ರತಿಕ್ರಿಯೆ ನೀಡಿದ್ದು, "ಫೆಬ್ರವರಿ 10ರಂದು ಕರ್ನಾಟಕ ಹೈಕೋರ್ಟ್ ಹೊರಡಿಸಿದ ಮೌಖಿಕ ಆದೇಶವನ್ನು ಸಿಬ್ಬಂದಿ ಅನುಸರಿಸುತ್ತಿದ್ದಾರೆ" ಎಂದು ಹೇಳಿದ್ದಾರೆ.
ಹಿಜಾಬ್ ವಿವಾದ; ನವೆಂಬರ್ನಲ್ಲೇ ತಯಾರಿ ಆರಂಭ?
ಶುಕ್ರವಾರ ಬ್ರಿಮ್ಸ್ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದು, "ಬ್ರೀಮ್ಸ್ ಬೀದರ್ ವೈದ್ಯಕೀಯ ಶಿಕ್ಷಣ ಸಂಸ್ಥೆಯಲ್ಲಿ ನಡೆಯುತ್ತಿರುವ ಬಿಎಸ್ಸಿ ನರ್ಸಿಂಗ್ ಪರೀಕ್ಷೆ ಬರೆಯಲು ಎಲ್ಲಾ ವಿದ್ಯಾರ್ಥಿಗಳಿಗೆ ಅನುಮತಿ ನೀಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಮಾಹಿತಿಯು ಸುಳ್ಳಾಗಿರುತ್ತದೆ" ಎಂದು ಹೇಳಿದೆ.
ಹಿಜಾಬ್ ವಿವಾದ ಕುರಿತು ಮಧ್ಯಂತರ ಆದೇಶ ಪ್ರಕಟಿಸಿದ ಹೈಕೋರ್ಟ್
ಅದ್ನಾನ್ ಇಮ್ತಿಯಾಜ್ ಎಂಬುವವರು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಒಂದನ್ನು ಹಾಕಿದ್ದರು. ವಿಡಿಯೋದಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯರು ಪರೀಕ್ಷೆ ಹಾಲ್ಗೆ ಹೋಗದಂತೆ ತಡೆಯುತ್ತಿರುವುದು, ಕಾವಲು ಕಾಯುತ್ತಿರುವ ದೃಶ್ಯಗಳಿತ್ತು.
ಟ್ವಿಟರ್ನಲ್ಲಿ ವಿಡಿಯೋ ಟ್ರೆಂಡ್ ಆಗುತ್ತಿದ್ದಂತೆ ಬ್ರಿಮ್ಸ್ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆಗ ಹೈಕೋರ್ಟ ಮೌಖಿಕ ಆದೇಶ ಪಾಲಿಸಲಾಗಿದೆ ಎಂದು ಬ್ರಿಮ್ಸ್ ಹೇಳಿತ್ತು.
ಮಧ್ಯಂತರ ಆದೇಶ; ಹಿಜಾಬ್ ಧರಿಸಲು ಅನುಮತಿ ಕೋರಿರುವ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ 6 ಅರ್ಜಿಗಳ ವಿಚಾರಣೆ ಕರ್ನಾಟಕ ಹೈಕೋರ್ಟ್ ವಿಶೇಷ ಪೀಠದಲ್ಲಿ ಗುರುವಾರ ನಡೆದಿತ್ತು.
ಸುಮಾರು ಮೂರುವರೆ ಗಂಟೆಗಳ ವಿಚಾರಣೆ ಬಳಿಕ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಲಾಗಿತ್ತು ಮತ್ತು ಮಧ್ಯಂತರ ಆದೇಶವನ್ನು ಮುಖ್ಯ ನ್ಯಾಯಮೂರ್ತಿಗಳು ನೀಡಿದ್ದರು.
ನ್ಯಾಯಾಲಯದ ಮುಂದಿನ ತೀರ್ಮಾನ ಬರುವ ತನಕ ಧಾರ್ಮಿಕ ಗುರುತು ತೋರಿಸುವ ಬಟ್ಟೆಯನ್ನು ವಿದ್ಯಾರ್ಥಿಗಳು ಹಾಕುವಂತಿಲ್ಲ ಎಂದು ಮಧ್ಯಂತರ ಆದೇಶವನ್ನು ನೀಡಿದ್ದರು.
20 ಜನರ ಬಂಧನ; ಹಿಜಾಬ್ ಮತ್ತು ಕೇಸರಿ ಶಾಲು ವಿವಾದದ ಹಿನ್ನಲೆ ದಾಂಧಲೆ ನಡೆಸಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 20 ಜನರನ್ನು ಬಂಧಿಸಲಾಗಿದೆ. ಶುಕ್ರವಾರ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸರು ಪಥ ಸಂಚಲನ ನಡೆಸಿ ಜನರಿಗೆ ಆತ್ಮಸ್ಥೈರ್ಯ ತುಂಬಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಮುಂಭಾಗದಲ್ಲಿ ಮಂಗಳವಾರ ದಾಂಧಲೆ ನಡೆದಿತ್ತು. ವಿದ್ಯಾರ್ಥಿಗಳನ್ನು, ಜನರನ್ನು ಚದುರಿಸಲು ಪೊಲೀಸರು ಲಾಠಿ ಪ್ರಹಾರ ನಡೆಸಿದ್ದರು, ಅಶ್ರುವಾಯು ಪ್ರಯೋಗ ಮಾಡಿದ್ದರು.
ಈ ದಾಂಧಲೆ ಸಂಬಂಧ ಐದು ಜನರನ್ನು ಬಂಧಿಸಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಬಗ್ಗೆ ದಾವಣಗೆರೆ ಎಸ್ಪಿ ಸಿ. ಬಿ. ರಿಷ್ಯಂತ್ ಹೇಳಿಕೆ ನೀಡಿದ್ದು, "ಅಮಾಯಕರನ್ನು ಬಂಧಿಸುವುದಿಲ್ಲ, ಆರೋಪಿಗಳನ್ನು ಬಿಡುವುದಿಲ್ಲ" ಎಂದು ಹೇಳಿದ್ದಾರೆ.
"ಘಟನೆ ನಡೆದ ದಿನದ ವಿಡಿಯೋ, ಫೋಟೋಗಳಿವೆ. ಅವುಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಲಾಗುತ್ತದೆ" ಎಂದು ಸಿ. ಬಿ. ರಿಷ್ಯಂತ್ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ನಡೆದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಉಳಿದ ಆರೋಪಿಗಳಿಗಾಗಿ ಶೋಧನೆ ನಡೆಸಲಾಗುತ್ತಿದೆ. ಫೆಬ್ರವರಿ 12ರ ಬೆಳಗ್ಗೆ 6 ಗಂಟೆಯ ತನಕ ಸೆಕ್ಷನ್ 144 ಅಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಸೋಮವಾರದಿಂದ ಶಾಲೆಗಳನ್ನು ಆರಂಭಿಸಲು ಕರ್ನಾಟಕ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಕಾಲೇಜುಗಳನ್ನು ಆರಂಭಿಸುವ ಕುರಿತು ಇನ್ನೂ ತೀರ್ಮಾನ ಕೈಗೊಂಡಿಲ್ಲ.