ಕರಿಯನನ್ನು ಕರಿಯ ಅನ್ನದೇ ಬಿಳಿಯ ಅನ್ನೋಕಾಗುತ್ತಾ: ಎಚ್ಡಿಕೆ ವಿರುದ್ದ ಮತ್ತೆ ನಾಲಿಗೆ ಹರಿಬಿಟ್ಟ ಶಾಸಕ ಜಮೀರ್
ಬೀದರ್, ಏಪ್ರಿಲ್ 7: ಸೈದ್ದಾಂತಿಕವಾಗಿ ಹೋರಾಟ ಮಾಡುವುದನ್ನು ಬಿಟ್ಟು ನಮ್ಮ ರಾಜಕಾರಣಿಗಳ ಮಾತಿನ ದಾಟಿ ಹೊಲಸಾಗುತ್ತಾ ಸಾಗುತ್ತಿದೆ ಎನ್ನುವುದಕ್ಕೆ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಮತ್ತೊಂದು ಉದಾಹರಣೆಯನ್ನು ನೀಡಿದ್ದಾರೆ.
ಕೆಲವು ದಿನಗಳ ಹಿಂದೆ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು 'ಕರಿಯ' ಎಂದು ಸಂಬೋಧಿಸಿ ಜೆಡಿಎಸ್ ನಾಯಕರ ಮತ್ತು ಕಾರ್ಯಕರ್ತರ ಭಾರೀ ಟೀಕೆಗೆ ಒಳಗಾಗಿದ್ದ ಜಮೀರ್ ಇಂದು ಮತ್ತೆ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದ ಜಮೀರ್, "ಅವರು ಇರೋದೇ ಕಪ್ಪು, ಬೆಳ್ಳಗೆ ಇದ್ದವರನ್ನು ಕರಿಯ ಅಂದಿದ್ದರೆ ತಪ್ಪು, ಅವರು ಕಪ್ಪು ಇರೋದರಿಂದಲೇ ಅವರನ್ನು ಕರಿಯ ಎಂದು ಕರೆದೆ. ಇದು ತಪ್ಪು ಎಂದಾದರೆ ನನ್ನ ಮೇಲೆ ದೂರು ನೀಡಲಿ"ಎಂದು ಜಮೀರ್ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಂಡರು.

"ಎರಡು ಬಾರಿ ನನ್ನ ನಿವಾಸದ ಮುಂದೆ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ನನ್ನನ್ನು ಕುಳ್ಳ ಎಂದು ಕರೆಯುತ್ತಾರೆ, ನನಗೆ ದೇವರು ಹೈಟ್ ಕೊಟ್ಟಿಲ್ಲ, ಹಾಗಾಗಿ ನನ್ನನ್ನು ಹಾಗೇ ಕರೆದರೆ ನನಗೆ ಬೇಸರವಿಲ್ಲ"ಎಂದು ಜಮೀರ್ ಅಹ್ಮದ್ ಹೇಳಿದರು.
"ಕುಮಾರಸ್ವಾಮಿಯವರು ವಿದೇಶದವರ ತರ ಇದ್ದರೆ, ನನ್ನ ಹೇಳಿಕೆ ತಪ್ಪಾಗುತ್ತಿತ್ತು. ಭಗವಂತ ಅವರನ್ನು ಹುಟ್ಟಿದಾಗಲೇ ಕರ್ರಗೆ ಮಾಡಿ ಭೂಮಿಗೆ ಕಳುಹಿಸಿದ್ದಾರೆ, ಹಾಗಾಗಿ ಅವರು ಕಪ್ಪಗೆ ಇದ್ದಾರೆ. ಹಾಗಾಗಿ ನನ್ನ ಹೇಳಿಕೆ ಹೇಗೆ ತಪ್ಪಾಗುತ್ತದೆ"ಎಂದು ಜಮೀರ್ ಹೇಳಿದರು.
ಬಸವಕಲ್ಯಾಣದಲ್ಲಿ ಜೆಡಿಎಸ್ ಅಭ್ಯರ್ಥಿ ಕಣಕ್ಕಿಳಿದ ಬಗ್ಗೆ ಮಾತನಾಡಿದ ಜಮೀರ್, "ನಾನು ಮತ್ತೆಮತ್ತೆ ಹೇಳುತ್ತಿದ್ದೇನೆ, ಕುಮಾರಸ್ವಾಮಿಯವರು ಯಾವುದೇ ಲಾಭವಿಲ್ಲದೇ ಯಾವುದೇ ಕೆಲಸವನ್ನು ಮಾಡುವವರಲ್ಲ"ಎಂದು ಜಮೀರ್ ಹೇಳುವ ಮೂಲಕ, ಅಭ್ಯರ್ಥಿ ಕಣಕ್ಕಿಳಿಸಲು ಹತ್ತು ಕೋಟಿ ಪಡೆದಿದ್ದಾರೆ ಎನ್ನುವ ಮಾತಿನ ಮೇಲೆ ಮತ್ತೆ ಜಮೀರ್ ನಿಂತಿದ್ದಾರೆ.












Click it and Unblock the Notifications