ಹಿಜಾಬ್ ವಿವಾದ: ನಾನೇಕೆ ಕ್ಷಮೆ ಕೇಳಬೇಕು?; ಡಿಕೆಶಿಗೆ ಜಮೀರ್ ಅಹ್ಮದ್ ಡಿಚ್ಚಿ
ಹುಬ್ಬಳ್ಳಿ, ಫೆಬ್ರವರಿ 14: ರಾಜ್ಯದಲ್ಲಿ ಹಿಜಾಬ್ ವಿವಾದ ಹೊತ್ತಿ ಉರಿಯುತ್ತಿರುವ ಸಮಯದಲ್ಲೇ ರಾಜಕೀಯ ನಾಯಕರ ಹೇಳಿಕೆಗಳು ಬೆಂಕಿಗೆ ತುಪ್ಪ ಸುರಿದಂತೆ ಆಗುತ್ತಿವೆ. ನಿನ್ನೆಯಷ್ಟೇ ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆಯಿಂದ ವಿವಾದ ಎದ್ದಿದೆ.
ಹಿಜಾಬ್ ಕುರಿತ ಹೇಳಿಕೆಗೆ ಕ್ಷಮೆ ಕೋರುವಂತೆ ಹೇಳಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆದೇಶಕ್ಕೆ ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್, "ಹಿಜಾಬ್ ಬಗ್ಗೆ ನಾನು ಮಾತನಾಡುತ್ತೇನೆ, ನಾನು ಕ್ಷಮೆ ಕೇಳುವಂತಹ ಯಾವುದೇ ಹೇಳಿಕೆ ನೀಡಿಲ್ಲ. ನಾನೇಕೆ ಕ್ಷಮೆಯಾಚಿಸಬೇಕು?," ಎಂದು ತಿರುಗೇಟು ನೀಡಿದ್ದಾರೆ.
"ಹಿಜಾಬ್ ಹಾಕಬೇಕು ಎಂದು ನಾನು ಹೇಳಿಕೆ ನೀಡಿದ್ದೆ. ನನ್ನ ಹೇಳಿಕೆಯನ್ನು ಮಾಧ್ಯಮದವರು ತಿರುಚಿದ್ದಾರೆ. ಹೆಲ್ಮೆಟ್ ರೀತಿ ಹಿಜಾಬ್ ಹಾಕಬೇಕು ಎಂದು ಹೇಳಿದ್ದೆ. ಹೆಲ್ಮೆಟ್ ಹೇಗೆ ಸೇಫ್ಟಿ ಕೊಡುತ್ತದೋ ಹಾಗೇ ಹಿಜಾಬ್ ನೀಡುತ್ತದೆ. ಹೆಲ್ಮೆಟ್ ಕಡ್ಡಾಯವಿದ್ದರೂ ಕೆಲ ಬೈಕ್ ಸವಾರರು ಹಾಕಲ್ಲ. ಅದೇ ರೀತಿ ಬಹಳ ಜನ ಹಿಜಾಬ್ ಕೂಡ ಹಾಕುವುದಿಲ್ಲ," ಎಂದು ಹುಬ್ಬಳ್ಳಿಯಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಹೇಳಿದ್ದಾರೆ.

ಇದಕ್ಕೂ ಮೊದಲು ಬೆಂಗಳೂರಿನಲ್ಲಿ ಮಾತನಾಡಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಜಮೀರ್ ಅಹ್ಮದ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ನಾನು ಹಿಜಾಬ್ ಕುರಿತು ಮಾತನಾಡಬಾರದು ಎಂದು ಮೊದಲೇ ಹೇಳಿದ್ದೆ. ಆದರೂ ಕೆಲವರು ಮಾತನಾಡಿದ್ದಾರೆ, ಜಮೀರ್ ತಮ್ಮ ಹೇಳಿಕೆಯನ್ನು ವಾಪಸ್ ಪಡೆಯಲು ಹೇಳುತ್ತೇನೆ," ಎಂದು ಹೇಳಿದ್ದರು.
ಹಿಜಾಬ್ ಧರಿಸದಿದ್ದರೆ ಅತ್ಯಾಚಾರ ಪ್ರಕರಣಗಳು ಹೆಚ್ಚಾಗುತ್ತವೆ ಎಂಬ ಜಮೀರ್ ಅಹ್ಮದ್ ಹೇಳಿಕೆ ತೀವ್ರ ಟೀಕೆ, ಖಂಡನೆಗೆ ಗುರಿಯಾಗಿದೆ. ವಿವಾದ ಭುಗಿಲೆದ್ದ ಬಳಿಕವೂ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ತಮ್ಮ ಹೇಳಿಕೆ ಬಗ್ಗೆ ಸಮರ್ಥನೆ ಮಾಡಿಕೊಂಡಿದ್ದಾರೆ.
ಇನ್ನು ಶಿಗ್ಗಾಂವಿ ತಾಲೂಕಿನ ಹುಲಗೂರು ಗ್ರಾಮದ ಖಾದ್ರಿ ದರ್ಗಾದಲ್ಲಿ ಮಾತನಾಡಿದ ಜಮೀರ್ ಅಹ್ಮದ್, "ಹಿಜಾಬ್ ಧರಿಸುವುದು ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ. ಅಷ್ಟು ದಿನಗಳಿಂದ ಇಲ್ಲದಿರುವುದು ಈಗ ಯಾಕೆ ವಿವಾದ ಆಗುತ್ತಿದೆ?, ಹಿಜಾಬ್ ಹಾಕುವುದು ಹೆಣ್ಣುಮಕ್ಕಳ ರಕ್ಷಣೆಗೋಸ್ಕರ, ಅವರ ಬ್ಯೂಟಿ ಕಾಪಾಡಿಕೊಳ್ಳುವುದಕ್ಕೋಸ್ಕರ," ಎಂದು ಹೇಳಿದರು.

ಹಿಜಾಬ್ಗೆ ಹೆಲ್ಮೆಟ್ ಕಡ್ಡಾಯದ ಉದಾಹರಣೆ ನೀಡಿದ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್, "ಮುಂಚೆ ಅರ್ಧ ಹೆಲ್ಮೇಟ್ ಇತ್ತು. ಈಗ ಫುಲ್ ಹೆಲ್ಮೆಟ್ ಕಡ್ಡಾಯ ಮಾಡಿದ್ದಾರೆ. ಆಕ್ಸಿಡೆಂಟ್ ಆಗಬಾರದು ಅಂತ ಸೇಫ್ಟಿಗಾಗಿ ಇದನ್ನು ಮಾಡಿದ್ದಾರೆ. ಅದೇ ರೀತಿ ಸೇಫ್ಟಿಗಾಗಿ ಅಂತ ಹಿಜಾಬ್ ಮಾಡಿದ್ದಾರೆ. ಹಿಜಾಬ್ ವಿವಾದವನ್ನು ಎಲ್ಲರೂ ಮಾಡಿಲ್ಲ. ಆರು ಜನ ಮಕ್ಕಳು ಮಾತ್ರ ಮಾಡಿದ್ದಾರೆ," ಎಂದು ತಿಳಿಸಿದರು.
ಪ್ರತಾಪ ಸಿಂಹ ಹೇಳಿಕೆಗೆ ತಿರುಗೇಟು
ಕೇಸರಿ ಶಾಲು ಧರಿಸುವುದು ಯಾವಾಗ ಆರಂಭ ಆಗಿದೆ? ಮಕ್ಕಳನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಮಕ್ಕಳಲ್ಲಿ ಜಾತಿ ಬೀಜ ಬಿತ್ತುತ್ತಿದ್ದಾರೆ. ಇದು ಮಕ್ಕಳಿಗೆ ಗೊತ್ತಾಗುತ್ತಿಲ್ಲ ಎಂದು ಪ್ರತಿಕ್ರಿಯಿಸಿದರು.
ಸಂಸದ ಪ್ರತಾಪ ಸಿಂಹ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಜಮೀರ್ ಅಹ್ಮದ್, "ಅವರ ಹೇಳಿಕೆ ನೋಡಿದ್ದೇನೆ. ನಮ್ಮಲ್ಲಿ ದಿನಕ್ಕೆ ಐದು ಬಾರಿ ನಮಾಜ್ ಮಾಡಲು ಅವಕಾಶವಿದೆ. ನಮಾಜ್ ಮಾಡಲು ಎಲ್ಲಿ ಅವಕಾಶ ಸಿಗುತ್ತದೋ ಅಲ್ಲಿ ನಮಾಜ್ ಮಾಡಬಹುದು. ಮನೆಯಲ್ಲಿ ಅವಕಾಶ ಸಿಕ್ಕರೂ ನಮಾಜ್ ಮಾಡಬಹುದು," ಎಂದು ತಿರುಗೇಟು ಕೊಟ್ಟರು.
ವಿವಾದದ ಹಿನ್ನೆಲೆ
ಭಾನುವಾರ(ಫೆ.13)ದಂದು ಜಮೀರ್ ಅಹ್ಮದ್ ಖಾನ್ ಹುಬ್ಬಳ್ಳಿಯಲ್ಲಿ ಮಾತನಾಡುತ್ತಾ, "ಮಹಿಳೆಯರು ಹಿಜಾಬ್ ಹಾಕದಿದ್ದರೆ ಅತ್ಯಾಚಾರವಾಗುತ್ತದೆ," ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವಿವಿಧ ರಾಜಕೀಯ ನಾಯಕರು ವಿರೋಧ ವ್ಯಕ್ತಪಡಿಸಿದ್ದರು.
"ಹಿಜಾಬ್ ಅಂದ್ರೆ ಮುಸಲ್ಮಾನರಲ್ಲಿ ಗೋಶಾಪರದ ಅಂತ ಹೇಳುತ್ತೇವೆ. ಅವರ ಮನೆಯಲ್ಲಿ ಹೆಣ್ಣುಮಕ್ಕಳಿದ್ದಾರೋ ಇಲ್ಲವೋ ಗೊತ್ತಿಲ್ಲ. ಅವರ ಮನೆಯಲ್ಲಿ ಹೆಣ್ಣುಮಕ್ಕಳು ಇದ್ದಿದ್ದರೆ ಗೊತ್ತಾಗುತ್ತಿತ್ತು. ಹೆಣ್ಣುಮಕ್ಕಳು ತಮ್ಮ ರಕ್ಷಣೆಗಾಗಿ ಹಿಜಾಬ್ ಧರಿಸುತ್ತಾರೆ. ಹೆಣ್ಣುಮಕ್ಕಳು ದೊಡ್ಡವರಾದ ಮೇಲೆ ದೇಹರಚನೆ ಕಾಣಿಸಬಾರದು. ದೇಹರಚನೆ ಹೊರಗೆ ಕಾಣಿಸಬಾರದು ಎಂದು ಹಿಜಾಬ್ ಬಳಸುತ್ತಾರೆ. ಭಾರತದಲ್ಲಿ ಅತ್ಯಾಚಾರ ಪ್ರಕರಣ ಹೆಚ್ಚಾಗಿರುವುದು ಹಿಜಾಬ್ ಹಾಕದಿರುವ ಕಾರಣದಿಂದ," ಎಂದು ಜಮೀರ್ ಅಹ್ಮದ್ ಹೇಳಿಕೆ ನೀಡಿದ್ದರು.












Click it and Unblock the Notifications