ಎಲ್ಲಾ ಸಚಿವರ ರಾಜೀನಾಮೆ ಬೆನ್ನಲ್ಲೇ ಒಡಿಶಾಗೆ ಹೊಸ ಮಂತ್ರಿಮಂಡಲ
ಭುಬನೇಶ್ವರ್, ಜೂನ್ 5: ಸಿಎಂ ಆಜ್ಞೆಯ ಮೇರೆಗೆ ಸಂಪುಟದ ಎಲ್ಲಾ ಸಚಿವರೂ ರಾಜೀನಾಮೆ ನೀಡಿದ್ದ ಒಡಿಶಾದ ಬಿಜೆಡಿ ಸರಕಾರದಲ್ಲಿ ಹೊಸ ಮಂತ್ರಿಮಂಡಲ ಅಸ್ತಿತ್ವಕ್ಕೆ ಬಂದಿದೆ. ನವೀನ್ ಪಟ್ನಾಯಕ್ ನೇತೃತ್ವದ ಒಡಿಶಾ ಸರಕಾರದಲ್ಲಿ ನೂತನ ಸಚಿವ ಸಂಪುಟದಲ್ಲಿ ಹೊಸಬರಿಗೆ ಮಣೆ ಹಾಕಲಾಗಿದೆ. ಭಾನುವಾರ ಲೋಕ ಸೇವಾ ಭವನದಲ್ಲಿ ನಡೆದ ಸಮಾರಂಭದಲ್ಲಿ 21 ಮಂದಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹಿಂದಿನ ಸಂಪುಟದಲ್ಲಿ ಸಚಿವರಾಗಿದ್ದ ಕೆಲವರು ಸ್ಥಾನ ಉಳಿಸಿಕೊಂಡಿದ್ದಾರೆ. ಇನ್ನೂ ಕೆಲವರು ಮೊದಲ ಬಾರಿಗೆ ಮಂತ್ರಿಭಾಗ್ಯ ಪಡೆದಿದ್ದಾರೆ. ಪ್ರಮಾಣವಚನ ಸ್ವೀಕರಿಸಿದ 21 ಸಚಿವರ ಪೈಕಿ 13 ಸಂಪುಟ ದರ್ಜೆಯವರಾದರೆ ಇನ್ನುಳಿದವರು ರಾಜ್ಯ ಖಾತೆ ಪಡೆದಿದ್ದಾರೆ.
ಯಾಕೆ ಈ ದಿಢೀರ್ ಬದಲಾವಣೆ?
ಒಡಿಶಾದಲ್ಲಿ ಇನ್ನೆರಡು ವರ್ಷದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ. ಈಗಾಗಲೇ ಸತತವಾಗಿ ಐದು ಬಾರಿ ಸಿಎಂ ಆಗಿ ಸಾಧನೆ ಮಾಡಿರುವ ನವೀನ್ ಪಟ್ನಾಯಕ್ ಮುಂದಿನ ಚುನಾವಣೆಯಲ್ಲೂ ಗೆದ್ದು ದಾಖಲೆ ಬರೆಯುವ ತವಕದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಚುನಾವಣೆ ದೃಷ್ಟಿಯಿಂದ ಅವರು ತಮ್ಮ ಮಂತ್ರಿಮಂಡಲದಲ್ಲಿ ಅಮೂಲಾಗ್ರ ಬದಲಾವಣೆ ತರುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಇದೇ ಕಾರಣಕ್ಕೆ ಅವರು ಸಚಿವ ಸಂಪುಟ ಪುನಾರಚನೆಗೆ ಮುನ್ನ ತಮ್ಮ ಎಲ್ಲಾ ಸಚಿವರಿಗೂ ರಾಜೀನಾಮೆ ನೀಡುವಂತೆ ಸೂಚನೆ ನೀಡಿದ್ದರು. ಅದರಂತೆ ಎಲ್ಲಾ 20 ಮಂತ್ರಿಗಳು ನಿನ್ನೆ ಶನಿವಾರ ರಾಜೀನಾಮೆ ನೀಡಿದ್ದರು. ಇದೀಗ ಹೊಸದಾಗಿ ಮಂತ್ರಿಮಂಡಲ ರಚಿಸಿದ್ದಾರೆ.
ಮಂತ್ರಿ ಸ್ಥಾನ ಕಳೆದುಕೊಂಡವರಿಗೆ ಪಕ್ಷ ಸಂಘಟನೆಯಲ್ಲಿ ಜವಾಬ್ದಾರಿ ಕೊಡಲಾಗುತ್ತಿದೆ ಎಂದು ಒಡಿಶಾದ ಕೆಲ ಮಾಧ್ಯಮಗಳು ಹೇಳುತ್ತಿವೆ. ಈ ಬೆಳವಣಿಗೆಯು ಬಿಜು ಜನತಾ ದಳದಲ್ಲಿ ನವೀನ್ ಪಟ್ನಾಯಕ್ ಮಾತು ಬಿಟ್ಟರೆ ಬೇರೇನೂ ನಡೆಯಲ್ಲ ಎಂಬುದು ಇದು ಸ್ಪಷ್ಟವಾಗಿ ಸಾರುತ್ತಿದೆ.

ನವೀನ್ ಪಟ್ನಾಯಕ್ ಸಂಪುಟದ ನೂತನ ಸಚಿವರಿವರು:
ಸಂಪುಟ ದರ್ಜೆ:
ಜಗನ್ನಾಥ ಸರಕ
ನಿರಂಜನ್ ಪೂಜಾರಿ
ರಣೇಂದ್ರ ಪ್ರತಾಪ್ ಸ್ವೇನ್
ಪ್ರಮೀಳಾ ಮಲಿಕ್
ಉಷಾ ದೇವಿ
ಪ್ರಫುಲ್ಲಾ ಕುಮಾರ್ ಮಲ್ಲಿಕ್
ಪ್ರತಾಪ್ ಕೇಶರಿ ದೇಬ್
ಅತಾನು ಸಬ್ಯಸಾಚಿ ನಾಯಕ್
ಪ್ರದೀಪ್ ಕುಮಾರ್ ಅಮಾತ್ಯ
ನಬ ಕಿಶೋರ್ ದಾಸ್
ಅಶೋಕ್ ಚಂದ್ರ ಪಾಂಡ
ತುಕುನಿ ಸಾಹು
ರಾಜೇಂದ್ರ ಧೋಲಾಕಿಯಾ
ರಾಜ್ಯ ಖಾತೆ ಸಚಿವರು
ಸಮೀರ್ ರಂಜನ್ ದಾಸ್
ಅಶ್ವಿನಿ ಕುಮಾರ್ ಪಾತ್ರ
ಪ್ರೀತಿರಂಜನ್ ಘದಾಯ್
ಶ್ರೀಕಾಂತ್ ಸಾಹು
ತುಷಾರಕಾಂತಿ ಬೆಹೆರಾ
ರೋಹಿತ್ ಪೂಜಾರಿ
ರೀಟಾ ಸಾಹು
ಬಸಂತಿ ಹೇಮಬ್ರಮ್
(ಒನ್ಇಂಡಿಯಾ ಸುದ್ದಿ)












Click it and Unblock the Notifications