ಕೊಲೆ ಯತ್ನ ಕೇಸಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಪುತ್ರನ ಬಂಧನ
ಭೋಪಾಲ್, ಜೂನ್ 19: ಕೇಂದ್ರ ಸಚಿವ ಪ್ರಹ್ಲಾದ್ ಪಟೇಲ್ ಪುತ್ರ ಪ್ರಬಲ್ ಪಟೇಲ್ ಹಾಗೂ 6 ಜನ ಸಹಚರರನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆ ಯತ್ನ, ಹಲ್ಲೆ, ಗಾಳಿಯಲ್ಲಿ ಗುಂಡು ಹಾರಿಸಿದ ಘಟನೆಗೆ ಸಂಬಂಧಿಸಿದಂತೆ ಪ್ರಬಲ್ ವಿರುದ್ಧ ಮಧ್ಯಪ್ರದೇಶ ಪೊಲೀಸರು ಎಫ್ಐಆರ್ ಹಾಕಿದ್ದರು.
ನರಸಿಂಗಪುರ್ ಜಿಲ್ಲೆಯ ಗೋಟೆಗಾವ್ನಲ್ಲಿ ಸೋಮವಾರ ಮಧ್ಯರಾತ್ರಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 20 ಮಂದಿ ಮೇಲೆ ಪ್ರಕರಣ ದಾಖಲಾಗಿತ್ತು. 50 ವರ್ಷದ ಹೋಂ ಗಾರ್ಡ್ಈಶ್ವರ್ ರಾಯ್ ಹಾಗೂ ಅವರ ಪುತ್ರನ ಮೇಲೆ ಪ್ರಬಲ್ ಪಟೇಲ್ ಮತ್ತು ಸಹಚರರು ಹಲ್ಲೆ ನಡೆಸಿದ್ದರು.
ಈಶ್ವರ್ ರಾಯ್ಹಾಗೂ ಪುತ್ರನ ಮೇಲೆ ಗಾಳಿಯಲ್ಲಿ ಗುಂಡು ಹಾರಿಸಿದ ಆರೋಪವೂ ಪ್ರಬಲ್ ವಿರುದ್ಧವಿದೆ. ಘಟನೆಯಲ್ಲಿ ಈಶ್ವರ್ರಾಯ್ ಗಂಭೀರವಾಗಿ ಗಾಯಗೊಂಡಿದೆ, ಸಚಿವರ ಅಳಿಯ ಮೊನು ಪಟೇಲ್ ಅವರು ಈ ಗಲಭೆಯಲ್ಲಿ ಭಾಗವಾಗಿದ್ದು, ಸದ್ಯ ನಾಪತ್ತೆಯಾಗಿದ್ದಾರೆ.

ಮೋನು ಪಟೇಲ್ ಅವರು ಮಧ್ಯಪ್ರದೇಶ ಬಿಜೆಪಿ ನಾಯಕ ಮಾಜಿ ಸಚಿವ ಜಲಮ್ಸಿಂಗ್ ಪಟೇಲ್ ಪುತ್ರರಾಗಿದ್ದು, ಅವರ ಜೊತೆಗೆ ಇನ್ನಿಬ್ಬರು ನಾಪತ್ತೆಯಾಗಿದ್ದಾರೆ ಎಂದು ನರಸಿಂಗಪುರ್ ಜಿಲ್ಲಾ ಎಸ್ಪಿ ಗುರುಕರಣ್ ಸಿಂಗ್ ಹೇಳಿದ್ದಾರೆ.
ಮದುವೆ ಮನೆಗೆ ಹೋಗಿದ್ದ ಈಶ್ವರ್ ರಾಯ್ ಹಾಗೂ ಅವರ ಪುತ್ರ ಹಿಂತಿರುಗಿ ಮನೆಗೆ ಹೋಗುವಾಗ ಪ್ರಬಲ್ ಪಟೇಲ್ ಹಾಗೂ ಸಹಚರರ ಜೊತೆ ಜಗಳವಾಡಿಕೊಂಡಿದ್ದಾರೆ. ಪ್ರಬಲ್ ಪಟೇಲ್ ಮತ್ತು ಸಹಚರರು ಆತನ ಮೇಲೆ ರಾಡ್, ಬ್ಯಾಟ್ನಿಂದ ಹಲ್ಲೆ ನಡೆಸಿದ್ದರು.
ವಾಜಪೇಯಿ ಅಧಿಕಾರ ಅವಧಿಯಲ್ಲಿ ಸಚಿವರಾಗಿದ್ದ ಪ್ರಹ್ಲಾದ್ ಪಟೇಲ್ ಅವರು ಮೋದಿ ಸರ್ಕಾರ್ 2.0ದಲ್ಲಿ ಸಂಸ್ಕೃತಿ, ಪ್ರವಾಸೋದ್ಯಮ ಖಾತೆ ರಾಜ್ಯ ಸಚಿವರಾಗಿದ್ದಾರೆ.












Click it and Unblock the Notifications