ಮಧ್ಯಪ್ರದೇಶದಲ್ಲಿ ಅವಳಿ ಮಕ್ಕಳ ಅಪಹರಿಸಿ, ಉತ್ತರಪ್ರದೇಶದಲ್ಲಿ ಹತ್ಯೆ
ಭೋಪಾಲ್/ಝಾನ್ಸಿ (ಮಧ್ಯಪ್ರದೇಶ), ಫೆಬ್ರವರಿ 25: ಅವಳಿ ಮಕ್ಕಳ ಅಪಹರಣ ಹಾಗೂ ಹತ್ಯೆ ಪ್ರಕರಣವು ಮಧ್ಯಪ್ರದೇಶದಲ್ಲಿ ಭಾರೀ ಚರ್ಚೆಗೆ ಹಾಗೂ ಸುದ್ದಿಗೆ ಕಾರಣವಾಗಿದೆ. ಐದು ವರ್ಷದ ಅವಳಿ ಮಕ್ಕಳಾದ ಪ್ರಿಯಾಂಶ್ ಹಾಗೂ ಶ್ರೇಯಾಂಶ್ ರಾವತ್ ರನ್ನು ಪಿಸ್ತೂಲ್ ತೋರಿಸಿ, ಮಧ್ಯಪ್ರದೇಶದ ಚಿತ್ರಕೂಟದಲ್ಲಿ ಶಾಲಾ ಬಸ್ ನಿಂದ ಅಪಹರಿಸಲಾಗಿತ್ತು.
ಕಳೆದ ಶನಿವಾರ ರಾತ್ರಿ ಉತ್ತರಪ್ರದೇಶದ ಬಂದ ಜಿಲ್ಲೆಯಲ್ಲಿನ ಬಬೇರು ಬಳಿಯಲ್ಲಿ ಯಮುನಾ ನದಿ ದಡದಲ್ಲಿ ಈ ಮಕ್ಕಳ ಶವಗಳು ಪತ್ತೆಯಾಗಿವೆ. ಈ ಮಕ್ಕಳು ಅಪಹರಣದ ನಂತರವೂ ಒಂಬತ್ತು ದಿನಗಳ ಕಾಲ ಜೀವಂತ ಇದ್ದವು. ಅದರಲ್ಲೂ ಚಿತ್ರಕೂಟದಲ್ಲೇ ಎರಡು ದಿನ ಇದ್ದವು. ಆದರೆ ಐನೂರು ಪೊಲೀಸರು ಇದ್ದ ತಂಡ, ಎಸ್ ಟಿಎಫ್- ಅದೂ ಮಧ್ಯಪ್ರದೇಶ ಹಾಗೂ ಉತ್ತರಪ್ರದೇಶ ರಾಜ್ಯದವರು ಒಟ್ಟಾಗಿ ಕಾರ್ಯಾಚರಣೆ ನಡೆಸಿದರೂ ಸರಿಯಾದ ವೇಳೆಯಲ್ಲಿ ಹುಡುಕಿ, ಕಾಪಾಡುವಲ್ಲಿ ವಿಫಲರಾಗಿದ್ದಾರೆ.
ಮಕ್ಕಳ ಸಾವಿನ ಸುದ್ದಿ ಹಬ್ಬುತ್ತಿದ್ದಂತೆ ಚಿತ್ರಕೂಟದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಮಕ್ಕಳಿಗೆ ಪಾಠ ಹೇಳಿಕೊಡುತ್ತಿದ್ದ ವ್ಯಕ್ತಿಯೂ ಸೇರಿದಂತೆ ಆರು ಮಂದಿಯನ್ನು ಬಂಧಿಸಲಾಗಿದೆ. ತಮ್ಮ ಮಕ್ಕಳನ್ನು ಹತ್ಯೆ ಮಾಡಿದ ಅಪರಾಧಿಗಳನ್ನು ನೇಣಿಗೆ ಹಾಕಬೇಕು ಎಂದು ಅವಳಿ ಮಕ್ಕಳ ತಂದೆ ಬ್ರಜೇಶ್ ರಾವತ್ ಆಗ್ರಹಿಸಿದ್ದಾರೆ. ಫೆಬ್ರವರಿ ಹತ್ತೊಂಬತ್ತನೇ ತಾರೀಕು ಅಪಹರಣಕಾರರಿಗೆ ರಾವತ್ ಇಪ್ಪತ್ತು ಲಕ್ಷ ನೀಡಿದ್ದಾರೆ ಹಾಗೂ ಆ ದಿನ ಮಧ್ಯಾಹ್ನ ಮಕ್ಕಳ ಜತೆ ಮಾತನಾಡಿದ್ದಾರೆ.

ಐಜಿ ಚಂಚಲ್ ಶೇಖರ್ ಮಾತನಾಡಿ, ಆರೋಪಿಗಳ ಪೈಕಿ ಒಬ್ಬಾತ- ಇಪ್ಪತ್ತಾರು ವರ್ಷದ ರಾಮ್ ಕೇಶ್ ಯಾದವ್ ಆ ಅವಳಿ ಮಕ್ಕಳಿಗೆ ಪಾಠ ಮಾಡುತ್ತಿದ್ದ. ಆ ಮಕ್ಕಳ ತಂದೆ ಬೇಕಾದಷ್ಟು ದುಡ್ಡು ಕೊಡುತ್ತಾರೆ ಎಂದು ಇತರರಿಗೆ ಆತನೇ ಹೇಳಿದ್ದಾನೆ. ಈ ಅಪರಾಧದ ಮಾಸ್ಟರ್ ಮೈಂಡ್ ಪದಮ್ ಶುಕ್ಲಾ, ಚಿತ್ರಕೂಟದವನು. ರಾಮ್ ಕೇಶ್, ಲಕ್ಕಿ ಸಿಂಗ್ ತೋಮರ್, ರಾಜು ದ್ವಿವೇದಿ, ವಿಕ್ರಮ್ ಜಿತ್ ಸಿಂಗ್ ಹಾಗೂ ಪಿಂಟೂ ಯಾದವ್ ಇತರ ಆರೋಪಿಗಳು ಎಂದಿದ್ದಾರೆ.
ಆ ಮಕ್ಕಳ ದೈನಂದಿನ ಚಟುವಟಿಕೆ ಮೇಲೆ ಕಣ್ಣಿಟ್ಟಿದ್ದ ಆರೋಪಿಗಳು, ಫೆಬ್ರವರಿ ಹನ್ನೆರಡನೇ ತಾರೀಕು ಅಪಹರಣ ಮಾಡಿದ್ದರು.












Click it and Unblock the Notifications