ಸ್ಫೋಟಕ ಮಾಹಿತಿ: ಬಿಜೆಪಿ ಸೋಲಿಸಲು ಬಿಜೆಪಿಯವರಿಂದಲೇ ಶತಯತ್ನ!
Recommended Video

ಭೋಪಾಲ್, ಡಿಸೆಂಬರ್ 03: ಮಧ್ಯಪ್ರದೇಶದಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಸ್ವತಃ ಬಿಜೆಪಿ ಮುಖಂಡರು, ಕಾರ್ಯಕರ್ತರೇ ಕಾಂಗ್ರೆಸ್ಸಿಗೆ ನೆರವು ನೀಡುತ್ತಿದ್ದಾರೆ! ಹೌದು, ಇಂಥದೊಂದು ಸ್ಫೋಟಕ ಮಾಹಿತಿಯನ್ನು ಬಿಜೆಪಿಯ ಮೂಲಗಳೇ ತಿಳಿಸಿವೆ.
ಬಿಜೆಪಿಯಲ್ಲಿ ಆಂತರಿಕ ಭಿನ್ನಾಭಿಪ್ರಾಯಗಳಿದ್ದು, ಅವನ್ನು ಸರಿಪಡಿಸಿಕೊಳ್ಳಲು ನೋಡುವ ಬದಲು, ಬಹಿರಂಗವಾಗಿಯೇ ಕಾಂಗ್ರೆಸ್ಸಿಗೆ ನೆರವು ನೀಡಿ, ಆ ಮೂಲಕ ಬಿಜೆಪಿಗೆ ಪಾಠ ಕಲಿಸಬೇಕು ಎಂಬ ಧೋರಣೆಯಲ್ಲಿ ಕೆಲವು ನಾಯಕರು ಮತ್ತು ಕಾರ್ಯಕರ್ತರು ಇರುವುದು ಕಂಡುಬರುತ್ತಿದೆ.
ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಸಂಪುಟದಲ್ಲಿ ಮಂತ್ರಿಗಳಾಗಿದ್ದ ಕೆಲವೂ ಇದೇ ದಾರಿ ಹಿಡಿದಿರುವುದು ಬಿಜೆಪಿ ವಲಯಲದಲ್ಲಿ ಆತಂಕ ಸೃಷ್ಟಿಸಿದೆ!

ಬಹಿರಂಗವಾಗಿಯೇ ನೆರವು!
ಟಿಕೆಟ್ ಸಿಗದ ನಾಯಕರು ಮತ್ತು ಅವರ ಬೆಂಬಲಿಗ ಕಾರ್ಯಕರ್ತರು ಬೇಸರ ಮಾಡಿಕೊಂಡು ಮನೆಯಲ್ಲಿ ಕೂರುವುದು ಅಥವಾ ಪಕ್ಷಕ್ಕೆ ರಾಜೀನಾಮೆ ನೀಡುವುದು ಹಳೇ ಮಾತು. ಆದರೆ ಇದೀಗ ಕಾಲಬದಲಾಗಿದೆ. ಟಿಕೆಟ್ ವಂಚಿತ ನಾಯಕರು ಮತ್ತು ಅವರ ಬೆಂಬಲಿಗರು ಪಕ್ಷದಲ್ಲೇ ಇದ್ದುಕೊಂಡು ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿರುವುದು ಇತ್ತೀಚಿನ ಟ್ರೆಂಡ್ ಆಗಿಬಿಟ್ಟಿದೆ ಎಂಬುದು ರಾಜಕೀಯ ಪಂಡಿತರ ಅಭಿಪ್ರಾಯ. ಬಿಜೆಪಿಯ ಕೆಲವು ನಾಯಕರು ಮತ್ತು ಬೆಂಬಲಿಗರು ಮನೆಯಲ್ಲಿ ಕೂರದೆ, ಬಹಿರಂಗವಾಗಿಯೇ ಕಾಂಗ್ರೆಸ್ಸಿಗೆ ಬೆಂಬಲ ನೀಡಿದ್ದು ಗಮನಕ್ಕೆ ಬಂದಿದೆ. 'ಬಿಜೆಪಿಗೆ ಮತಹಾಕಬೇಡಿ, ಕಾಂಗ್ರೆಸ್ಸಿಗೇ ಮತ ನೀಡಿ' ಎಂದು ಬಿಜೆಪಿಯವರೇ ಹೇಳುತ್ತಿರುವುದು ಮತದಾರನಲ್ಲಿ ಗೊಂದಲ ಸೃಷ್ಟಿಸಿತ್ತು!

ಭ್ರಮನಿರಸನಗೊಂಡ ಶಿವರಾಜ್ ಸಿಂಗ್!
ಚುನಾವಣೆ ದಿನಾಂಕ ನಿಗದಿಯಾದ ಲಾಗಾಯ್ತೂ ಸಾಕಷ್ಟು ಲವಲವಿಕೆಯಲ್ಲೇ ಇದ್ದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಸತತ ನಾಲ್ಕನೇ ಬಾರಿ ಅಧಿಕಾರದ ಚುಕ್ಕಾಣಿ ಹಿಡಿಯುವ ಕನಸಿನಲ್ಲಿದ್ದರು. ಆದರೆ ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಅವರೂ ಪೇಲವವಾದರು. ಸ್ಥಳೀಯ ಮಟ್ಟದಲ್ಲಿ ಪಕ್ಷದಲ್ಲಿ ಗುರುತಿಸಿಕೊಂಡವರೇ ತಮ್ಮ ವಿರುದ್ಧ ಷಡ್ಯಂತ್ರ ಮಾಡುತ್ತಿರುವುದು ಅವರ ಗಮನಕ್ಕೆ ಬರುತ್ತಿದ್ದಂತೆಯೇ ಅವರ ಸಾಕಷ್ಟು ಜರ್ಜರಿತರಾದರು.

ಲೋಕಸಭೆ ಚುನಾವಣೆ ಮೇಲೆ ಪರಿಣಾಮ?
ಮಧ್ಯಪ್ರದೇಶದಲ್ಲಿ ಒಟ್ಟು 29 ಲೋಕಸಭಾ ಕ್ಷೇತ್ರಗಳಿದ್ದು, ಈ ರಾಜ್ಯ ಬಿಜೆಪಿಗೆ ಮಹತ್ವದ್ದಾಗಿದೆ. ಕಾಂಗ್ರೆಸ್ ಕಳೆದ ಬಾರಿ(2014) ಎರಡೇ ಕ್ಷೇತ್ರಗಳಲ್ಲಿ ಜಯಗಳಿಸಿದ್ದರಿಂದ ಈ ವರ್ಷ ಪರಿಣಾಮಕಾರಿ ಕಾರ್ಯತಂತ್ರ ರೂಪಿಸಲೇಬೇಕು. ಅದಕ್ಕೆ ಪೂರಕ ಎಂಬಂತೆ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಆಂತರಿಕ ವಲಯದಲ್ಲಿ ಆರಂಭವಾದ ಭಿನ್ನಾಭಿಪ್ರಾಯ ಕಾಂಗ್ರೆಸ್ಸಿಗೆ ವರದಾನವಾಗಬಹುದು. ಇದು ವಿಧಾನಸಭೆ ಮತ್ತು ಲೋಕಸಭೆ ಎರಡೂ ಚುನಾವಣೆಗಳ ಮೇಲೆ ಪರಿಣಾಮ ಬೀರಿದರೆ ಅಚ್ಚರಿಯಿಲ್ಲ!

ದಾಖಲೆಯ ಮತದಾನ!
ಮಧ್ಯಪ್ರದೇಶದ ಒಟ್ತು 230 ಕ್ಷೇತ್ರಗಳಿಗೆ ನವೆಂಬರ್ 28 ರಂದು ಮತದಾನ ನಡೆದಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. ರಾಜ್ಯದಲ್ಲಿ ಶೇ.74 ರಷ್ಟು ಮತದಾನ ದಾಖಲಾಗಿರುವುದು ಆಡಳಿತಾರೂಢ ಬಿಜೆಪಿಗೆ ಆತಂಕವನ್ನುಂಟು ಮಾಡಿದೆ. ರಾಜಕೀಯ ಪಂಡಿತರ ಪ್ರಕಾರ ಮತದಾನದ ಪ್ರಮಾಣ ಹೆಚ್ಚಿದಷ್ಟೂ ಆಡಳಿತಾರೂಢ ಸರ್ಕಾರಕ್ಕೆ ನಷ್ಟವೇ ಹೆಚ್ಚು. ಆಡಳಿತ ವಿರೋಧಿ ಅಲೆ ಇದ್ದಾಗ ಜನ ರೊಚ್ಚಿಗೆದ್ದು ಮತಚಲಾಯಿಸುತ್ತಾರೆ ಎಂಬುದು ತರ್ಕ.












Click it and Unblock the Notifications