ಕಾಂಗ್ರೆಸ್ ಬಿಟ್ಟು, ಬಿಜೆಪಿಗೆ ಹೋಗುವವರಿಗೆ ನಾನೇ ಕಾರು ಬಾಡಿಗೆ ಕೊಡುತ್ತೇನೆ: ಕಮಲ್ನಾಥ್
ಭೋಪಾಲ್, ಸೆ.19: ಕಾಂಗ್ರೆಸ್ ಪಕ್ಷ ತೊರೆಯುವುವವರನ್ನೂ ಯಾರೂ ತಡೆಯುವುದಿಲ್ಲ ಮತ್ತು ಯಾವುದೇ ಸದಸ್ಯರು ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರಲು ಬಯಸಿದರೆ ತಾನೇ ಅವರು ಹೋಗಲು ತನ್ನ ಕಾರನ್ನು ಬಾಡಿಗೆ ಕೊಡುತ್ತೇನೆ ಎಂದು ಮಧ್ಯಪ್ರದೇಶ ಕಾಂಗ್ರೆಸ್ ಮುಖ್ಯಸ್ಥ ಕಮಲ್ ನಾಥ್ ಭಾನುವಾರ ಹೇಳಿದ್ದಾರೆ.
ಗೋವಾದ 8 ಶಾಸಕರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ ನಾಲ್ಕು ದಿನಗಳ ನಂತರ ಕಮಲ್ ನಾಥ್ ಹೇಳಿಕೆ ಹೊರಬಿದ್ದಿದೆ.
'ಕಾಂಗ್ರೆಸ್ ಛೋಡೋ, ಬಿಜೆಪಿ ಕೋ ಜೋಡೋ': ಗೋವಾದಲ್ಲಿ 8 ಕಾಂಗ್ರೆಸ್ ಶಾಸಕರು ಬಿಜೆಪಿ ಸೇರ್ಪಡೆ
ಗೋವಾ ವಿಚಾರವಾಗಿ ನಿಮ್ಮ ಪ್ರಕಾರ ಕಾಂಗ್ರೆಸ್ ಕೊನೆಗೊಳ್ಳುತ್ತದೆ? ಎಂಬ ಪತ್ರಕರ್ತರ ಪ್ರಶ್ನೆಗೆ ಕಮಲ್ ನಾಥ್ ಉತ್ತರಿಸಿದ್ದು, ಯಾರಾದರೂ ಬಿಜೆಪಿ ಸೇರಲು ಬಯಸಿದರೆ ಹೋಗಿ. ನಾವು ಯಾರನ್ನೂ ತಡೆಯುವುದಿಲ್ಲ ಎಂದಿದ್ದಾರೆ.
"ನೀವು ಏನು ಯೋಚಿಸುತ್ತಿದ್ದೀರಿ..? ಕಾಂಗ್ರೆಸ್ ಮುಗಿಯುತ್ತದೆ ಎಂದೇ..? ಕೆಲವರು ಬಿಜೆಪಿಗೆ ಸೇರಲು ಬಯಸುತ್ತಾರೆ ಎಂದು ನೀವು ಹೇಳುತ್ತಿದ್ದೀರಿ. ಬಿಜೆಪಿಗೆ ಸೇರಲು ಬಯಸುವವರು ಹೋಗಬಹುದು. ನಾವು ಯಾರನ್ನೂ ತಡೆಯಲು ಬಯಸುವುದಿಲ್ಲ" ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಸುದ್ದಿಗಾರರಿಗೆ ತಿಳಿಸಿದರು.
ಇತ್ತ, ಕಾಂಗ್ರೆಸ್ನಿಂದ ಸಾಲು ಸಾಲು ನಿರ್ಗಮನ ನಡೆಯುತ್ತಿದೆ. ಅತ್ತ ರಾಹುಲ್ ಗಾಂಧಿ ನೇತೃತ್ವದಲ್ಲಿ ಭಾರತ್ ಜೋಡೋ ಯಾತ್ರೆ ನಡೆಯುತ್ತಿದೆ. ಬಿಜೆಪಿ ಇದಕ್ಕೆ ಮೊದಲು ಕಾಂಗ್ರೆಸ್ ಜೋಡೋ ಎಂದು ವ್ಯಂಗ್ಯವಾಡುತ್ತಿದೆ.
"ಕಾಂಗ್ರೆಸ್ ನಾಯಕರು ಮತ್ತು ಪದಾಧಿಕಾರಿಗಳು ಬಿಜೆಪಿಗೆ ಹೋಗಲು ಬಯಸಿದರೆ, ಅವರಿಗೆ ಹೋಗಿ ಬಿಜೆಪಿ ಸೇರಲು ನನ್ನ ಕಾರು ಬಾಡಿಗೆ ಕೊಡುತ್ತೇನೆ" ಎಂದು ಕಾಂಗ್ರೆಸ್ ಅನುಭವಿ ನಾಯಕ ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷ ಸಂಪೂರ್ಣ ಸಮರ್ಪಣಾ ಭಾವದಿಂದ ಕೆಲಸ ಮಾಡುತ್ತಿದೆ. ಕಾಂಗ್ರೆಸ್ನಿಂದ ಯಾವುದೇ ನಾಯಕನ ಮೇಲೆ ಒತ್ತಡವಿಲ್ಲ. ಯಾರನ್ನೂ ಸಮಾಧಾನಪಡಿಸುವುದರಲ್ಲಿ ನನಗೆ ನಂಬಿಕೆ ಇಲ್ಲ ಎಂದು ದೀರ್ಘಕಾಲದ ಗಾಂಧಿ ಕುಟುಂಬದ ನಿಷ್ಠಾವಂತ, 75 ವರ್ಷದ ಕಮಲ್ ನಾಥ್ ಹೇಳಿದ್ದಾರೆ.
ಕಮಲ್ ನಾಥ್ ಅವರ ಆಪ್ತರಾಗಿದ್ದ ಅರುಣೋದಯ ಚೌಬೆ ಅವರು ಇತ್ತೀಚೆಗೆ ಕಾಂಗ್ರೆಸ್ಗೆ ರಾಜೀನಾಮೆ ನೀಡಿದ್ದರು. ಬಿಜೆಪಿಯ ಜನರು ಅರುಣೋದಯ ಚೌಬೆ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಕಮಲ್ ನಾಥ್ ಹೇಳಿದ್ದಾರೆ.
"ನಮ್ಮ ಜನರನ್ನು ತಪ್ಪಾಗಿ ಸಿಲುಕಿಸಲಾಗುತ್ತಿದೆ. ಒತ್ತಡ ಮತ್ತು ಪ್ರಭಾವದ ರಾಜಕಾರಣ ಮಾಡಲಾಗುತ್ತಿದೆ. ಇಂತಹ ರಾಜಕೀಯದಿಂದ ನೀವು ಯಾರ ಹೃದಯ, ಮನಸ್ಸು ಮತ್ತು ಆತ್ಮವನ್ನು ಖರೀದಿಸಲು ಸಾಧ್ಯವಿಲ್ಲ" ಆರೋಪಿಸಿದ್ದಾರೆ.