ಆಪರೇಷನ್ ಗೆ ಹೆಸರಾದ ಬಿಜೆಪಿಗೆ, ಕಾಂಗ್ರೆಸ್ ಹಾಕಿದ ರಿವರ್ಸ್ ಸ್ವಿಂಗ್
"ಪಕ್ಷದ ನಂ.1 (ಮೋದಿ) ಮತ್ತು ನಂ.2 (ಅಮಿತ್ ಶಾ) ಒಮ್ಮೆ ಆದೇಶಿಸಿದರೆ ಸಾಕು 24 ಗಂಟೆಗಳಲ್ಲಿ ನಿಮ್ಮ ಸರ್ಕಾರ ಬೀಳುತ್ತದೆ" ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಅವರಿಗೆ ಅಲ್ಲಿನ ವಿಧಾನಸಭೆಯ ಪ್ರತಿಪಕ್ಷದ ನಾಯಕ, ಬಿಜೆಪಿ ಮುಖಂಡ ಗೋಪಾಲ್ ಭಾರ್ಗವ ಎಚ್ಚರಿಕೆ ನೀಡಿದ್ದರು.
ಆದರೆ ಅಲ್ಲಿ ಆಗಿದ್ದೇನು? ಹಲವು ರಾಜ್ಯಗಳಲ್ಲಿ ಆಪರೇಷನ್ ನಡೆಸುವ ಮೂಲಕ, ಗದ್ದುಗೇರಿದ್ದ ಬಿಜೆಪಿಗೆ, ಹಿಂದಿ ಭಾಷೆಯ ಮದರ್ ಲ್ಯಾಂಡ್ ಮಧ್ಯಪ್ರದೇಶದಲ್ಲಿ, ಭಾರೀ ಮುಖಭಂಗವಾಗಿದೆ. ಕಾರಣ, ಬಿಜೆಪಿಯ ಇಬ್ಬರು ಶಾಸಕರು, ಕಾಂಗ್ರೆಸ್ಸಿಗೆ ತಮ್ಮ ನಿಯತ್ತು ಬದಲಾಯಿಸಿರುವುದು.
'ನಂ 1, 2 ಆದೇಶಿಸಿದರೆ 24 ಗಂಟೆಯಲ್ಲಿ ಮಧ್ಯಪ್ರದೇಶ ಸರ್ಕಾರವೂ ಉಡೀಸ್!'
ಮಧ್ಯಪ್ರದೇಶ ಕ್ರಿಮಿನಲ್ ಲಾ - 2019 ತಿದ್ದುಪಡಿ ಮಸೂದೆಯ ಪರವಾಗಿ ಬಿಜೆಪಿಯ ಇಬ್ಬರು ಶಾಸಕರಾದ, ಮೇಹರ್ ಅಸೆಂಬ್ಲಿ ಕ್ಷೇತ್ರವನ್ನು ಪ್ರತಿನಿಧಿಸುವ ನಾರಾಯಣ ತ್ರಿಪಾಠಿ ಮತ್ತು ಬೇಹೋರಿ ಕ್ಷೇತ್ರದ ಶರದ್ ಕೋಲ್ ಮತಚಲಾಯಿಸುವ ಮೂಲಕ, ಬಿಜೆಪಿಗೆ ಶಾಕ್ ನೀಡಿದ್ದಾರೆ.
ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಪರ ಅಡ್ಡ ಮತದಾನ ಮಾಡಿದ ಬಿಜೆಪಿ ಶಾಸಕರು
"ತಮ್ಮತಮ್ಮ ಕ್ಷೇತ್ರದಲ್ಲಿನ ಅಭಿವೃದ್ದಿಯ ವಿಚಾರಕ್ಕೆ ಇಬ್ಬರು ಶಾಸಕರು ನಮ್ಮ ಸರಕಾರಕ್ಕೆ ಬೆಂಬಲ ನೀಡಿದ್ದು, ಇದೊಂದು ಘರ್ ವಾಪ್ಸಿ" ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಕಮಲ್ ನಾಥ್ ಹೇಳಿದ್ದಾರೆ. ಒಂದು ತಿಂಗಳ ಹಿಂದೆಯೇ ಈ ಪ್ಲ್ಯಾನ್ ನಡೆದಿತ್ತು.
ವಿಧಾನಸಭೆಯ ಶಾಸಕ ಆರಿಫ್ ಮಸೂದ್
ಭೋಪಾಲ್ ಸೆಂಟ್ರಲ್ ವಿಧಾನಸಭೆಯ ಶಾಸಕ ಆರಿಫ್ ಮಸೂದ್ ಅವರನ್ನು ಒಂದು ತಿಂಗಳ ಹಿಂದೆಯೇ, ಇಬ್ಬರು ಬಿಜೆಪಿ ಶಾಸಕರ ಬಳಿ ಕಮಲ್ ನಾಥ್ ಕಳುಹಿಸಿದ್ದರು. ತ್ರಿಪಾಠಿ ಪ್ರತಿನಿಧಿಸುವ ಮೇಹರ್ ಕ್ಷೇತ್ರ, ಸತ್ನಾ ಲೋಕಸಭಾ ವ್ಯಾಪ್ತಿಗೆ ಬರುತ್ತದೆ. ಅಲ್ಲಿನ ಬಿಜೆಪಿ ಸಂಸದ ಗಣೇಶ್ ಸಿಂಗ್ ಮತ್ತು ತ್ರಿಪಾಠಿಯ ನಡುವೆ ಹಲವು ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿದ್ದವು. ಜೊತೆಗೆ, ಮೇಹರ್ ನಗರವನ್ನು ಸತ್ನಾದಿಂದ ಬೇರ್ಪಡಿಸಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಲು ತ್ರಿಪಾಠಿ ಪ್ರಯತ್ನಿಸುತ್ತಿದ್ದರು. (ಚಿತ್ರದಲ್ಲಿ: ಆರಿಫ್ ಮಸೂದ್, ಕೃಪೆ: ಫೇಸ್ ಬುಕ್)
ಕಾಂಗ್ರೆಸ್ ಟಿಕೆಟ್ ನೀಡಲು ನಿರಾಕರಿಸಿತ್ತು
ಈ ಹಿಂದೆ ಕಾಂಗ್ರೆಸ್ ನಲ್ಲೇ ಇದ್ದ ತ್ರಿಪಾಠಿ, ಮಧ್ಯಪ್ರದೇಶ ಬಿಎಸ್ಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದರು. ಇನ್ನು ಶರದ್ ಕೋಲ್ ಕೂಡಾ ಕಾಂಗ್ರೆಸ್ಸಿನ ಮುಖಂಡರಾಗಿದ್ದವರು. ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಬೇಹೋರಿ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಇವರಿಗೆ ಟಿಕೆಟ್ ನೀಡಲು ನಿರಾಕರಿಸಿತ್ತು. ಆಗ, ಬಿಜೆಪಿ ಟಿಕೆಟಿನಿಂದ ಸ್ಪರ್ಧಿಸಿ ಕೋಲ್ ಜಯಶೀಲರಾಗಿದ್ದರು.
ಮುಖ್ಯಮಂತ್ರಿ ಕಮಲ್ ನಾಥ್
ಶರದ್ ಕೋಲ್ ಅವರ ತಂದೆ ಹಿರಿಯ ಕಾಂಗ್ರೆಸ್ ಮುಖಂಡರು. ಮುಖ್ಯಮಂತ್ರಿ ಕಮಲ್ ನಾಥ್, ಶರದ್ ಅವರ ತಂದೆಯ ಬಳಿ ಮಾತುಕತೆ ನಡೆಸಿ, ಮಗನನ್ನು ಘರ್ ವಾಪ್ಸಿ ಮಾಡಲು ಸಹಾಯ ಮಾಡಿ ಎಂದು ಕೇಳಿಕೊಂಡಿದ್ದರು. ಈ ಎಲ್ಲಾ ಗ್ರೌಂಡ್ ವರ್ಕ್ ನಡೆದ ನಂತರ ಆರಿಫ್ ಮಸೂದ್, ಕಾಂಗ್ರೆಸ್ಸಿಗೆ ಬೆಂಬಲಿಸಿದ ಇಬ್ಬರು ಬಿಜೆಪಿ ಶಾಸಕರ ಮನವೊಲಿಸುವಲ್ಲಿ ಯಶಸ್ವಿಯಾದರು ಎನ್ನುತ್ತವೆ ಮೂಲಗಳು.
ಮಧ್ಯಪ್ರದೇಶ ಸರಕಾರದ ಸಾರ್ವಜನಿಕ ಸಂಪರ್ಕ ಸಚಿವ ಪಿ ಸಿ ಶರ್ಮಾ
ಮಧ್ಯಪ್ರದೇಶ ಸರಕಾರದ ಸಾರ್ವಜನಿಕ ಸಂಪರ್ಕ ಸಚಿವ ಪಿ ಸಿ ಶರ್ಮಾ ಪ್ರಕಾರ, "ಸದ್ಯಕ್ಕೆ ಇಬ್ಬರು ಬಿಜೆಪಿ ಶಾಸಕರು ನಮಗೆ ಬೆಂಬಲ ನೀಡಿದ್ದಾರೆ. ಇನ್ನೂ ಹಲವು ಬಿಜಿಪಿ ಶಾಸಕರು ಮುಖ್ಯಮಂತ್ರಿ ಕಮಲ್ ನಾಥ್ ಅವರ ಸಂಪರ್ಕದಲ್ಲಿದ್ದಾರೆ. ಅವರೆಲ್ಲಾ ನಮ್ಮ ಪಕ್ಷಕ್ಕೆ ಸೇರಲು ಸಜ್ಜಾಗಿ ಕೂತಿದ್ದಾರೆ. ಮುಂದಿನ ಚುನಾವಣೆಯೊಳಗೆ ಅವರೆಲ್ಲಾ ಕಾಂಗ್ರೆಸ್ಸಿಗೆ ಸೇರಲಿದ್ದಾರೆ". (ಚಿತ್ರದಲ್ಲಿ ಪಿ ಸಿ ಶರ್ಮಾ, ಕೃಪೆ: ಫೇಸ್ ಬುಕ್)
ವಿಧೇಯಕ ಪರ 122 ಮತಗಳು ಬಿದ್ದು ಬಿಲ್ ಪಾಸ್ ಆಗಿತ್ತು.
230 ಬಲದ ಮಧ್ಯಪ್ರದೇಶ ಅಸೆಂಬ್ಲಿಯಲ್ಲಿ ಸರಳ ಬಹುಮತ ಪಡೆಯಲು ಬೇಕಾದ ಸಂಖ್ಯೆ 116. ಕಾಂಗ್ರೆಸ್ 114 ಸದಸ್ಯರನ್ನು ಹೊಂದಿದ್ದು, ನಾಲ್ವರು ಪಕ್ಷೇತರರು, ಬಿಎಸ್ಪಿಯ ಇಬ್ಬರು ಮತ್ತು ಎಸ್ಪಿಯ ಒಬ್ಬರು ಕಮಲ್ ನಾಥ್ ಗೆ ಬೆಂಬಲ ನೀಡಿದ್ದರು. ಇದರಲ್ಲಿ ಸ್ಪೀಕರ್ ಅವರನ್ನು ಹೊರತು ಪಡಿಸಿದರೆ ಒಟ್ಟು ಕಾಂಗ್ರೆಸ್ಸಿಗೆ ಸಿಗಬೇಕಾಗಿದ್ದ ಬೆಂಬಲ 120, ಆದರೆ ಇಬ್ಬರು ಬಿಜೆಪಿಯವರು ವಿಧೇಯಕಕ್ಕೆ ಬೆಂಬಲ ನೀಡಿದ್ದರಿಂದ ಪರವಾಗಿ 122 ಮತಗಳು ಬಿದ್ದು ಬಿಲ್ ಪಾಸ್ ಆಗಿತ್ತು. ಬಿಜೆಪಿ ಮುಖಭಂಗ ಅನುಭವಿಸಿತು.