ಎಬಿಪಿ ನ್ಯೂಸ್ ಸಮೀಕ್ಷೆ : ಎಂಪಿಯಲ್ಲಿ ಬೀರಲಿದೆ ಕಾಂಗ್ರೆಸ್ ಗೆಲುವಿನ ನಗೆ?
ಭೋಪಾಲ್, ಡಿಸೆಂಬರ್ 06 : ಕಳೆದ ಹದಿನೈದು ವರ್ಷಗಳಿಂದ ಅಧಿಕಾರದ ಬರದಿಂದ ಬರಗೆಟ್ಟಿದ್ದ ಕಾಂಗ್ರೆಸ್ ಪಕ್ಷಕ್ಕೆ ಈ ಬಾರಿ ಮಧ್ಯಪ್ರದೇಶದಲ್ಲಿ ಅಧಿಕಾರದ ಆಸೆ ಚಿಗುರಲಿರುವುದು ಚುನಾವಣೋತ್ತರ ಸಮೀಕ್ಷೆಯಲ್ಲಿ ಕಂಡುಬಂದಿದೆ.
ಬಿಳಿ ಪೈಜಾಮಾ ಜುಬ್ಬಾ ತೊಟ್ಟು ಮಧ್ಯ ಪ್ರದೇಶದ ಉದ್ದಗಲಕ್ಕೂ ಓಡಾಡಿದ್ದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಕೊನೆಗೂ ತಮ್ಮ ಗುಳಿಕೆನ್ನೆಯ ನಗು ಬೀರಿದರೆ ಅಚ್ಚರಿಯಿಲ್ಲ. ಶುಕ್ರವಾರ ಹೊರಬಿದ್ದಿರುವ ಚುನಾವಣೋತ್ತರ ಸಮೀಕ್ಷೆ ಕಾಂಗ್ರೆಸ್ಸಿಗೆ ಆಶಾಕಿರಣ ಮೂಡಿಸಿದೆ.
230 ವಿಧಾನಸಭೆ ಕ್ಷೇತ್ರಗಳಿರುವ ಮಧ್ಯ ಪ್ರದೇಶದಲ್ಲಿ ಅಂತಿಮ ಫಲಿತಾಂಶ ಏನಾಗಲಿದೆ ಎಂಬುದು ಡಿಸೆಂಬರ್ 11ರಂದು ಮಂಗಳವಾರ ಗೊತ್ತಾಗಲಿದೆ. ಒಂದು ವೇಳೆ ಚುನಾವಣೋತ್ತರ ಸಮೀಕ್ಷೆ ನಿಜವಾದರೆ, ಭಾರತೀಯ ಜನತಾ ಪಕ್ಷಕ್ಕೆ ಭಾರೀ ಹೊಡೆತ ಬೀಳುವುದಂತೂ ಗ್ಯಾರಂಟಿ. ಬಿಜೆಪಿಯ ಎಲ್ಲ ಲೆಕ್ಕಾಚಾರಗಳು ಉಲ್ಟಾಪುಲ್ಟಾ ಆಗಲಿವೆ.
ಎಬಿಪಿ ನ್ಯೂಸ್ ಸಿಎಸ್ಡಿಎಸ್ ಜೊತೆ ಜಂಟಿಯಾಗಿ ನಡೆಸಿರುವ ಸಮೀಕ್ಷೆಯ ಪ್ರಕಾರ, ಕಾಂಗ್ರೆಸ್ 126 ಸ್ಥಾನಗಳಲ್ಲಿ ಜಯಭೇರಿ ಬಾರಿಸಿ ಭಾರತೀಯ ಜನತಾ ಪಕ್ಷಕ್ಕೆ ಮುಖಭಂಗ ತರಿಸುವುದಂತೂ ಗ್ಯಾರಂಟಿ. ಇಲ್ಲಿ ಬಹುಮತಕ್ಕೆ ಬೇಕಿರುವುದು 116 ಸ್ಥಾನಗಳು ಮಾತ್ರ. ಹದಿನೈದು ವರ್ಷಗಳ ಸುದೀರ್ಘ ಅವಧಿಯ ನಂತರ ಕಮಲದ ದಳಗಳು ಮಧ್ಯಪ್ರದೇಶದಲ್ಲಿ ಮುದುಡಲಿವೆ.

ಬೀರಲಿದೆಯಾ ಕಾಂಗ್ರೆಸ್ ಗೆಲುವಿನ ನಗೆ?
ಎಬಿಪಿ ನ್ಯೂಸ್ - ಸಿಎಸ್ ಡಿಎಸ್ ಚುನಾವಣೋತ್ತರ ಸಮೀಕ್ಷೆಯಂತೆ 126 ಸೀಟು ಗೆಲ್ಲಲಿರುವ ಕಾಂಗ್ರೆಸ್ ಅತೀದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ. ಶೇ.43ರಷ್ಟು ಮತಗಳನ್ನು ಪಡೆದು ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರಿಗೆ ಮುಟ್ಟಿ ನೋಡಿಕೊಳ್ಳುವಂಥ ಹೊಡೆತ ನೀಡಲಿದೆ. ಬಿಜೆಪಿ ಶೇ.40ರಷ್ಟು ಮತಗಳನ್ನು ಮಾತ್ರ ಪಡೆಯಲಿದ್ದು 94 ಸ್ಥಾನಗಳಲ್ಲಿ ಜಯ ಗಳಿಸಲಿದೆ. ಕಾಂಗ್ರೆಸ್ಸಿನೊಂದಿಗೆ ಮೈತ್ರಿ ಬೆಳೆಸಲು ಹಿಂದೇಟು ಹಾಕಿದ್ದ ಬಹುಜನ ಸಮಾಜ ಪಕ್ಷ ಕೇವಲ ಶೇ.5ರಷ್ಟು ಮತ ಪಡೆಯಲಿದೆ ಮತ್ತು ಶೇ.12ರಷ್ಟು ಮತಗಳು ಇತರ ಪಕ್ಷಗಳ ಪಾಲಾಗಲಿವೆ.

ಜನರು ಮೊದಲೇ ನಿರ್ಧರಿಸಿದ್ದರಾ?
ಮಧ್ಯ ಪ್ರದೇಶದ ಚುನಾವಣಾ ದಿನಾಂಕ ಪ್ರಕಟವಾಗಿ ಎಲ್ಲ ರಾಜಕೀಯ ಪಕ್ಷಗಳು ಪ್ರಚಾರಕ್ಕೆ ಕಾಲು ಹಾಕುವ ಮುನ್ನವೇ ಯಾವ ಪಕ್ಷ ಅಧಿಕಾರಕ್ಕೆ ಬರಬೇಕೆಂದು ರಾಜ್ಯದ ಜನರು ಹೆಚ್ಚೂಕಡಿಮೆ ನಿರ್ಧರಿಸಿದ್ದರು. ಜನತಾ ಜನಾರ್ಧನ ಮೊದಲೇ ನಿರ್ಧರಿಸಿದ ಮೇಲೆ ಯಾರು ಎಷ್ಟು ಬೊಂಬಡಾ ಹೊಡೆದುಕೊಂಡರೂ ಅಷ್ಟೇ. ಸಮೀಕ್ಷೆಯ ಪ್ರಕಾರ, ಸೂಕ್ತ ಅಭ್ಯರ್ಥಿಗಳನ್ನು ಆರಿಸುವಲ್ಲಿಯೂ ಭಾರತೀಯ ಜನತಾ ಪಕ್ಷ ತುಸು ಎಡವಿದೆ. ಇಲ್ಲಿ ಅಮಿತ್ ಶಾ ಅವರ ಸ್ಟ್ರಾಟಜಿ ಹೆಚ್ಚು ಕೆಲಸ ಮಾಡಿದಂತಿಲ್ಲ. ಅಲ್ಲದೆ, ಅಭ್ಯರ್ಥಿ ಯಾರೇ ಆಗಿದ್ದರೂ ಯಾವ ಪಕ್ಷ ಅಧಿಕಾರದಲ್ಲಿ ಇರಬೇಕು ಎಂಬುದು ಜನ ನಿರ್ಧರಿಸಿಯಾಗಿತ್ತು.

ಈ ಬಾರಿ ಕಾಂಗ್ರೆಸ್ಸಿಗೆ ಕೊಟ್ಟು ನೋಡೋಣ!
ಹೆಚ್ಚುತ್ತಿರುವ ಬೆಲೆ ಏರಿಕೆ, ಹಣದುಬ್ಬರ, ನಿರುದ್ಯೋಗ ಸಮಸ್ಯೆಯಿಂದಾಗಿ ಭಾರತೀಯ ಜನತಾ ಪಕ್ಷದ ಜನಪ್ರಿಯತೆ ತುಸು ಇಳಿಮುಖವಾಗುತ್ತಲೇ ಸಾಗಿತ್ತು. ನೀರಾವರಿ ಸಮಸ್ಯೆ, ರೈತರ ಆತ್ಮಹತ್ಯೆಗಳು, ಏರುಮುಖವಾಗಿದ್ದ ಅಪರಾಧ, ಕುಂದುತ್ತಿದ್ದ ಅಭಿವೃದ್ಧಿ, ಭ್ರಷ್ಟಾಚಾರ, ಕಿತ್ತುತಿನ್ನುವ ಬಡತನ ಈ ಚುನಾವಣೆಯಲ್ಲಿ ಚರ್ಚೆಯ ಪ್ರಮುಖ ಅಂಶಗಳಾಗಿದ್ದವು. ಸತತ ಮೂರು ಅವಧಿಗೆ ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ಕೊಟ್ಟಿದ್ದೇವೆ, ಈ ಬಾರಿ ಕಾಂಗ್ರೆಸ್ಸಿಗೆ ಅಧಿಕಾರ ಕೊಟ್ಟು ನೋಡೋಣ ಅಂತ ಜನರು ನಿರ್ಧರಿಸಿದ್ದರಲ್ಲಿ ಅಚ್ಚರಿಯಿಲ್ಲ. ಮತ ಹಾಕಿದ ಐವರಲ್ಲಿ ಮೂವರು ಅಧಿಕಾರ ಬದಲಾಗಬೇಕು ಎಂದಿದ್ದರೆ, ಇಬ್ಬರು ಮಾತ್ರ ಬಿಜೆಪಿಗೆ ಅಧಿಕಾರ ಕೊಡೋಣ ಎಂದಿದ್ದರು.

ಆಂತರಿಕ ಮನಸ್ತಾಪ ಮೆಟ್ಟಿನಿಂತ ಕಾಂಗ್ರೆಸ್
ಹಿರಿಯ ನಾಯಕರಾದ ಕಮಲ್ ನಾಥ್ ಬದಲು ಜ್ಯೋತಿರಾಧಿತ್ಯ ಸಿಂಧಿಯಾರನ್ನು ಭವಿಷ್ಯದ ಮುಖ್ಯಮಂತ್ರಿಯನ್ನಾಗಿ ಜನ ನೋಡಿದ್ದರಲ್ಲಿ ಅಚ್ಚರಿಯಿಲ್ಲ. ಅವರು ರಾಹುಲ್ ಗಾಂಧಿ ಅವರು ಜತೆಜತೆಯಾಗಿ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ರಾಜ್ಯ ಸುತ್ತಿದ್ದಾರೆ. ಅಲ್ಲದೆ, ಆಂತರಿಕ ಮನಸ್ತಾಪಗಳು ಎದುರಾದಾಗ ಸಮಿತಿಯನ್ನು ರಚಿಸಿ ಅದಕ್ಕೆ ಕಾಂಗ್ರೆಸ್ ಹೈಕಮಾಂಡ್ ಪರಿಹಾರ ಕಂಡುಕೊಂಡಿದೆ. ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಅವರನ್ನು ಎಲ್ಲ ಪ್ರಚಾರಗಳಲ್ಲಿ ಹೊರಗಿಟ್ಟಿದ್ದು ಕಾಂಗ್ರೆಸ್ಸಿಗೆ ಪಾಸಿಟಿವ್ ಆಗಿ ಪರಿಣಮಿಸಿರಲೂ ಸಾಕು.

ಅಂತಿಮ ಫಲಿತಾಂಶ ಬರುವವರೆಗೆ...
ಅಂತಿಮ ಫಲಿತಾಂಶ ಬರುವವರೆಗೆ ಇವೆಲ್ಲ ಕೇವಲ ತಾತ್ಕಾಲಿಕ ಅಂಕಿಸಂಖ್ಯೆಗಳು ಮತ್ತು ಸಂಭ್ರಮಾಚರಣೆಗಳು. ಡಿಸೆಂಬರ್ 11ರಂದು ಏನು ಬೇಕಾದರೂ ಆಗಬಹುದು. ಏಕೆಂದರೆ, ಚುನಾವಣೋತ್ತರ ಸಮೀಕ್ಷೆ ನಡೆಸಿದ ಹಲವಾರು ಸಂಸ್ಥೆಗಳ ಫಲಿತಾಂಶ ಮಧ್ಯ ಪ್ರದೇಶಕ್ಕೆ ಸಂಬಂಧಿಸಿದಂತೆ ಒಂದಕ್ಕಿಂತ ಮತ್ತೊಂದು ವಿಭಿನ್ನವಾಗಿದೆ. ಏಕೆಂದರೆ, ರಿಪಬ್ಲಿಕ್ - ಜನ್ ಕಿ ಬಾತ್ ಮತ್ತು ಟೈಮ್ಸ್ ನೌ - ಸಿಎನ್ಎಕ್ಸ್ ಪ್ರತ್ಯೇಕವಾಗಿ ನಡೆಸಿದ ಸಮೀಕ್ಷೆಯಲ್ಲಿ ಭಾರತೀಯ ಜನತಾ ಪಕ್ಷವೇ ಅಧಿಕಾರ ಹಿಡಿಯಲಿದೆ ಎಂದು ಹೇಳಿವೆ. ನ್ಯೂಸ್ ಎಕ್ಸ್ ನೇತಾ, ರಿಪಬ್ಲಿಕ್ - ಸಿವೋಟರ್ ಸಮೀಕ್ಷೆಗಳು ಇವುಗಳಿಗಿಂತ ವಿಭಿನ್ನವಾಗಿವೆ. ಆದುದರಿಂದ ಯಾವುದೇ ತೀರ್ಮಾನಕ್ಕೆ ಬರುವ ಬದಲು ಡಿಸೆಂಬರ್ 11ರವರೆಗೆ ಕಾಯುವುದು ಒಳಿತು. ತಕ್ಕಡಿ ಎತ್ತ ಬೇಕಾದರೂ ತೂಗಬಹುದು. ಅಂತಿಮವಾಗಿ ಕಾಂಗ್ರೆಸ್ ಮುದುಡಿ, ಕಮಲ ಮತ್ತೆ ಅರಳಿದರೂ ಅಚ್ಚರಿಯಿಲ್ಲ.

ಅತಂತ್ರ ಸ್ಥಿತಿ ನಿರ್ಮಾಣವಾದರೆ?
ಒಂದು ವೇಳೆ ಅತಂತ್ರ ಸ್ಥಿತಿ ನಿರ್ಮಾಣವಾದರೆ, ಯಾವ ಪಕ್ಷ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮುತ್ತದೆ ಎಂಬುದು ಅತ್ಯಂತ ಮುಖ್ಯವಾಗುತ್ತದೆ. ಕಾಂಗ್ರೆಸ್ ಪಕ್ಷದ ಜೊತೆ ಬಹುಜನ ಸಮಾಜ ಪಕ್ಷ ಕೈಜೋಡಿಸಿದರೆ ಭಾರತೀಯ ಜನತಾ ಪಕ್ಷಕ್ಕೆ ನಿರಾಸೆ ಕಟ್ಟಿಟ್ಟಬುತ್ತಿ. ಇತರ ಪಕ್ಷಗಳು ಹತ್ತಕ್ಕಿಂತ ಹೆಚ್ಚು ಸ್ಥಾನ ಗಳಿಸಿ ಭಾರತೀಯ ಜನತಾ ಪಕ್ಷ ನೂರರ ಆಸುಪಾಸು ಸ್ಥಾನಗಳನ್ನು ಗಳಿಸಿದರೆ ಅಮಿತ್ ಶಾ ಮತ್ತೆ ಏನು ಚಮತ್ಕಾರ ಮಾಡುತ್ತಾರೋ? ಬಲ್ಲವರಾರು? ಇಲ್ಲಿ ಕರ್ನಾಟಕದಂತೆ ಬಿಜೆಪಿ ಮತ್ತು ಕಾಂಗ್ರೆಸ್ ಹೊರತುಪಡಿಸಿದರೆ ಜೆಡಿಎಸ್ ನಂಥ ಮತ್ತೊಂದು ಪಕ್ಷ ಇರದಿರುವುದರಿಂದ ಪಕ್ಷೇತರರು ನಿರ್ಣಾಯಕವಾಗುವುದರಲ್ಲಿ ಅನುಮಾನವೇ ಇಲ್ಲ.












Click it and Unblock the Notifications