ಸಿಎಎಗೆ ವಿರೋಧ: ಬಿಜೆಪಿ ತೊರೆದ ಅಲ್ಪಸಂಖ್ಯಾತ ಘಟಕದ ಸದಸ್ಯರು
ಭೋಪಾಲ್, ಜನವರಿ 13: ಸಿಎಎ ಮತ್ತು ಎನ್ಆರ್ಸಿಗೆ ವ್ಯಾಪಕ ವಿರೋಧವಾಗುತ್ತಿರುವುದರಿಂದ ಅವುಗಳ ಕುರಿತು ತಿಳಿವಳಿಕೆ ಮೂಡಿಸಲು ಹೆಣಗಾಡುತ್ತಿರುವ ಬಿಜೆಪಿಗೆ ಆಘಾತ ಎದುರಾಗಿದೆ. ಈ ನಡೆಗಳಿಗೆ ಪಕ್ಷದೊಳಗೇ ವಿರೋಧ ವ್ಯಕ್ತವಾಗಿದೆ. ವಿವಾದಾತ್ಮಕ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಮಧ್ಯಪ್ರದೇಶದ ಭೋಪಾಲ್ನ ಅಲ್ಪಸಂಖ್ಯಾತ ಘಟಕದ 48ಕ್ಕೂ ಹೆಚ್ಚು ಸದಸ್ಯರು ರಾಜೀನಾಮೆ ಸಲ್ಲಿಸಿದ್ದಾರೆ.
Recommended Video
ಪಕ್ಷದೊಳಗೆ ತಾರತಮ್ಯ ನಡೆಸಲಾಗುತ್ತಿದೆ ಮತ್ತು ಸಮುದಾಯವೊಂದರ ವಿರುದ್ಧ ಪಕ್ಷದ ಸದಸ್ಯರು ಅವಹೇಳನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕೂಡ ಅವರು ಆರೋಪಿಸಿದ್ದಾರೆ.
ಪಕ್ಷ ತೊರೆದ ಮುಖಂಡರು ರಾಜ್ಯ ಅಲ್ಪಸಂಖ್ಯಾತ ಘಟಕದ ಮುಖ್ಯಸ್ಥರಿಗೆ ಪತ್ರ ಬರೆದಿದ್ದು, ಅಲ್ಪಸಂಖ್ಯಾತರನ್ನು ಒಳಗೊಂಡಂತೆ ಯಾರ ವಿರುದ್ಧವೂ ತಾರತಮ್ಯ ಎಸಗದೆ ಎಲ್ಲರನ್ನೂ ಜತೆಯಲ್ಲಿ ಕರೆದೊಯ್ಯಬೇಕೆಂಬ ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಅಟಲ್ ಬಿಹಾರ್ ವಾಜಪೇಯಿ ಅವರ ತತ್ವಗಳನ್ನು ಪಕ್ಷದ ಯಾರೊಬ್ಬರೂ ಪಾಲಿಸುತ್ತಿಲ್ಲ ಎಂದು ಆರೋಪಿಸಿದ್ದಾರೆ.

'ಸರ್ಕಾರವೊಂದು ಸಂಸತ್ನಲ್ಲಿ ಕಾನೂನನ್ನು ಅಂಗೀಕರಿಸಿ ಬಳಿಕ ಅದಕ್ಕೆ ಬೆಂಬಲ ನೀಡಿ ಎಂದು ಮನೆಯಿಂದ ಮನೆಗೆ ತೆರಳಿ ಕೋರುತ್ತಿರುವುದನ್ನು ಎಲ್ಲಾದರೂ ಕಂಡಿದ್ದೀರಾ?' ಎಂದು ಭೋಪಾಲ್ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಆದಿಲ್ ಖಾನ್ ಪ್ರಶ್ನಿಸಿದ್ದಾರೆ.
ಪಕ್ಷದೊಳಗೆ ಯಾವ ಪ್ರಜಾಪ್ರಭುತ್ವವೂ ಉಳಿದಿಲ್ಲ. ಇಡೀ ಪಕ್ಷವನ್ನು ಇಬ್ಬರು ಮೂವರು ವ್ಯಕ್ತಿಗಳು ಹೈಜಾಕ್ ಮಾಡಿದ್ದಾರೆ ಎಂದೂ ಅವರು ಆರೋಪಿಸಿದ್ದಾರೆ.












Click it and Unblock the Notifications